ಜಾಣರು ಮತ್ಸರದ ಭಾವನೆಗೆ ನೀರೆರೆಯೋದಿಲ್ಲ, ಅದ್ಯಾಕೆ ನೋಡಿ

By Suvarna NewsFirst Published Mar 24, 2023, 4:24 PM IST
Highlights

ಅನೇಕರನ್ನು ನೋಡಿರಬಹುದು. ಎಲ್ಲರಲ್ಲೂ ಸ್ನೇಹ ಭಾವ ಹೊಂದಿರುತ್ತಾರೆ. ಯಾರ ಬಗ್ಗೆಯೂ ಅಸೂಯೆ ಪಡುವುದಿಲ್ಲ. ಎಂಥದ್ದೇ ಸ್ಥಿತಿಯಲ್ಲೂ ಅವರು ಇತರರೊಂದಿಗೆ ಕೆಟ್ಟ ಸ್ಪರ್ಧೆಗೆ ಬೀಳುವುದಿಲ್ಲ. ಬಾಹ್ಯ ಆಡಂಬರಕ್ಕೆ ಮರುಳಾಗಿ ಸಂಬಂಧ ಹಾಳುಮಾಡಿಕೊಳ್ಳುವುದಿಲ್ಲ. ಇವರನ್ನು ಸ್ಮಾರ್ಟ್‌ ಎನ್ನಬಹುದು. ಇವರು ತಮ್ಮ ಬಳಿ ಮತ್ಸರದ ಭಾವನೆ ಸುಳಿಯಲು ಬಿಡುವುದಿಲ್ಲ.
 

ಸ್ನೇಹಿತರು, ನೆರೆಯವರು, ನೆಂಟರಿಷ್ಟರು, ಓರಗೆಯವರನ್ನು ನೋಡಿದಾಗ ಅವರ ಡ್ರೆಸ್‌, ಆಭರಣಗಳು, ಅವರ ವೈಭವ ಗಮನ ಸೆಳೆಯುತ್ತವೆ. ಬರೀ ಗಮನ ಸೆಳೆದು ಮೆಚ್ಚುಗೆ ಮಾತುಗಳಲ್ಲಿ ಮುಗಿದುಹೋದರೆ ಓಕೆ, ಆದರೆ ಅದು ಮುಂದುವರಿದು ಹೊಟ್ಟೆಯಲ್ಲಿ ಏನೋ ಒಂದು ಸಂಕಟ, ಉರಿ ಹಚ್ಚಿದರೆ ಅಲ್ಲಿಗೆ ನಿಮ್ಮಲ್ಲೊಂದು ಕೆಟ್ಟ ಭಾವನೆ ಮೂಡಿತು ಎಂದರ್ಥ. ಈ ಹೊಟ್ಟೆಯುರಿಯನ್ನೇ ನಾವು ಅಸೂಯೆ, ಮತ್ಸರ ಎನ್ನುತ್ತೇವೆ. ಅಸೂಯೆಯನ್ನು 'ಹಸಿರು ಕಣ್ಣಿನ ಭೂತʼ ಎಂದು ಇಂಗ್ಲಿಷ್‌ ನುಡಿಗಟ್ಟು ಹೇಳುತ್ತದೆ. ಅಂದರೆ, ಇದು ಆತ್ಮ ಮತ್ತು ಮನಸ್ಸುಗಳನ್ನು ಹಾಳುಮಾಡಿ ದೈನಂದಿನ ಜೀವನಕ್ಕೆ ಧಕ್ಕೆ ತರುತ್ತದೆ. ಅಸೂಯೆಯನ್ನು ಭೂತದ ರಾಯಭಾರಿ ಎಂದೂ ಹೇಳಲಾಗುತ್ತದೆ. ಈ ಗುಣದಿಂದ ಏನೆಂದರೆ ಏನೂ ಒಳ್ಳೆಯದಾಗುವುದಿಲ್ಲ. ಬದಲಿಗೆ, ಇದು ಮನುಷ್ಯನನ್ನು ಹುಚ್ಚನನ್ನಾಗಿ ಮಾಡಿ ಬಿಡುತ್ತದೆ. ಆದರೂ ಹಲವು ಜನ ಮತ್ಸರದ ಭಾವನೆಯಿಂದ ಈಚೆ ಬರಲು ಸಾಧ್ಯವಾಗದೆ ಒದ್ದಾಡುತ್ತಾರೆ. ನಮ್ಮ ಭಾರತೀಯ ಸಂಸ್ಕೃತಿ ಅಸೂಯೆಯನ್ನು ಅರಿಷಡ್ವರ್ಗಗಳಲ್ಲಿ ಸೇರಿಸಿದೆ. ಈ ಭಾವನೆಯನ್ನು ಮನುಷ್ಯನ ವೈರಿ ಎಂಬುದಾಗಿ ಪರಿಗಣಿಸಿದೆ. ಇದು ಖಂಡಿತವಾಗಿ ನಮ್ಮೊಳಗೆ ಇರುತ್ತದೆ, ಗಮನವಿಟ್ಟು ನಿಯಂತ್ರಿಸದೆ ಹೋದರೆ ಇದರ ಬಲೆಯಲ್ಲಿ ಸಿಲುಕುತ್ತೇವೆ. ಕೆಲವರನ್ನು ನೋಡಿರಬಹುದು, ಅವರು ಯಾವುದೇ ಕಾರಣಕ್ಕೂ ಮತ್ಸರದ ಭಾವನೆಗೆ ಒಳಗಾಗುವುದಿಲ್ಲ. ಇಂಥವರನ್ನು ಸ್ಮಾರ್ಟ್‌ ಎನ್ನಬಹುದು. ಅಸೂಯೆಯ ಭಾವನೆಯನ್ನು ಇವರು ತಮ್ಮ ಬಳಿ ಸುಳಿಯಲುಬಿಡುವುದಿಲ್ಲ. ಅವರಿಗೆ ಅಸೂಯೆಯಿಂದಾಗುವ ಪ್ರಮಾದಗಳ ಬಗ್ಗೆ ಅರಿವಿರುತ್ತದೆ. 

•    ಸಂಬಂಧಗಳನ್ನು (Relation) ಕ್ಷುಲ್ಲಕಗೊಳಿಸುತ್ತದೆ ಎನ್ನುವ ಅರಿವು
ಅಭದ್ರತೆಯ (Insecurity) ಭಾವನೆಯಿಂದ ಅಸೂಯೆ (Jealously) ಬುದ್ಧಿ ಮೊಳಕೆಯೊಡುತ್ತದೆ ಎನ್ನಲಾಗಿದೆ. ಆದರೆ, ಅದು ಹೇಗೆ ಹುಟ್ಟಿದರೂ ಸರಿ, ಎಲ್ಲ ರೀತಿಯ ಸಂಬಂಧಗಳನ್ನು ಹಾಳು ಮಾಡಬಲ್ಲದು. ಅದೆಷ್ಟೇ ರೋಮ್ಯಾಂಟಿಕ್‌, ಮಾದರಿಯ ಪ್ರೀತಿಯಾಗಿರಲಿ. ಅಲ್ಲೊಂದು ಅಸೂಯೆ ಹುಟ್ಟಿದರೆ ಸಾಕು. ಸ್ಮಾರ್ಟ್‌ ಜನರು (Smart People) ಇದನ್ನರಿತು ಇತರರೊಂದಿಗೆ ಸ್ಪರ್ಧೆಗೆ ಬಿದ್ದವರಂತೆ ವರ್ತಿಸುವುದಿಲ್ಲ. ಅವರಂತೆಯೇ ತಾವೂ ಮಾಡಲು ಯತ್ನಿಸುವುದಿಲ್ಲ. 

Health Tips: ವೃದ್ಧಾಪ್ಯದಲ್ಲಿ ಕಾಡೋ ಒಂಟಿತನದ ಸಮಸ್ಯೆಯಿಂದ ಹೊರ ಬರೋದು ಹೇಗೆ?

•    ಕೆಟ್ಟ ಭಾವನೆಯೇ (Bad Feelings) ಅಂತಿಮ
ಎಂದಾದರೊಮ್ಮೆ ಮತ್ಸರ ಮೂಡಿದಾಗ ನಿಮ್ಮಲ್ಲಿ ಅಂತಿಮವಾಗಿ ಉಳಿಯುವುದು ಯಾವ ಭಾವನೆ? ಖುಷಿಯೋ, ದುಃಖವೋ, ಏನೋ ಒಂದು ರೀತಿಯ ಅಸಮಾಧಾನವೋ? ಅಸೂಯೆ ಎಂದಿಗೂ ನಮ್ಮಲ್ಲಿ ಉತ್ತಮ, ಉದಾತ್ತ ಭಾವನೆ ಮೂಡಿಸುವುದಿಲ್ಲ. ಇನ್ನಷ್ಟು ಒತ್ತಡವನ್ನೇ (Stress) ಸೃಷ್ಟಿಸುತ್ತದೆ. ಜಾಣರು ಇದನ್ನರಿತು ಅಸೂಯೆಗೆ ತಮ್ಮ ಸಮಯವನ್ನು ಬಲಿಕೊಡುವುದಿಲ್ಲ. 

•    ಸಂತಸ (Happiness) ಎಲ್ಲಿಂದ ಬರಲು ಸಾಧ್ಯ?
ಬುದ್ಧಿವಂತ (Intelligent) ಜನ ಮತ್ಸರದ ಭಾವನೆಗೆ ಪ್ರೋತ್ಸಾಹ ನೀಡುವುದಿಲ್ಲ, ಯಾವುದೇ ಸಂತೋಷ, ತೃಪ್ತಿ ತಮ್ಮೊಳಗಿಂದ ಬರಬೇಕು, ಆಂತರಿಕವಾಗಿ ಮೂಡಬೇಕು ಎನ್ನುವುದು ಅವರ ಅರಿವಿಗಿರುತ್ತದೆ. ಮಟೀರಿಯಲ್‌ (Material) ವಸ್ತು, ಸಂಬಂಧ ಅಥವಾ ಯಾವುದೇ ಬಾಹ್ಯ ಕಾರಣದಿಂದ ಸಂತಸ ಹೊಂದಲು ಸಾಧ್ಯವಿಲ್ಲ ಎನ್ನುವುದನ್ನು ತಿಳಿದಿರುತ್ತಾರೆ. ಹೀಗಾಗಿ, ಇತರರನ್ನು ಅನುಸರಿಸಲು ಹೋಗುವುದಿಲ್ಲ. ಮತ್ತೊಬ್ಬರೊಂದಿಗೆ ಹೋಲಿಕೆ (Compare) ಮಾಡಿಕೊಂಡು ಕುಗ್ಗುವುದಿಲ್ಲ. 

•    ಕೃತಜ್ಞತೆಯ (Gratitude) ಗುಣಕ್ಕೆ ಕಡಿವಾಣ
ಅಸೂಯೆಯು ಕೃತಜ್ಞತೆಯ ಭಾವನೆಯನ್ನು ಹೆಚ್ಚಿಸುವುದಿಲ್ಲ. ಜೀವನದಲ್ಲಿ ತಮಗೇನು ದೊರೆತಿದೆಯೋ ಅದರ ಬಗ್ಗೆ ಗೌರವ (Respect) ಇಲ್ಲದಂತೆ ಮಾಡಿಬಿಡುತ್ತದೆ. ಇದರಿಂದ ಮನುಷ್ಯ ಅಸುಖಿಯಾಗುತ್ತಾನೆ. ಸಂಬಂಧ ಎಷ್ಟೇ ಚೆನ್ನಾಗಿರಲಿ, ಎಷ್ಟೇ ವಸ್ತು, ಬಾಹ್ಯ ಸುಖ ಇರಲಿ, ಅವೆಲ್ಲದಕ್ಕೆ ಬೆಲೆ ಇಲ್ಲದಂತೆ ನೋಡುವ ಮನಸ್ಥಿತಿ ಸೃಷ್ಟಿಸುತ್ತದೆ. ಅಧ್ಯಯನಗಳ ಪ್ರಕಾರ, ಕೃತಜ್ಞತಾ ಭಾವ (Grateful) ಹೊಂದಿರುವವರು ಮಾನಸಿಕವಾಗಿ ಸದೃಢರಾಗಿರುತ್ತಾರೆ ಹಾಗೂ ಅವರ ಮಿದುಳು ಅತ್ಯುತ್ತಮ ಸ್ಥಿತಿಯಲ್ಲಿರುತ್ತದೆ.

Mental Health: ಕೆಲ್ಸ ಹೇಗಿದೆ ಅಂದ್ರೆ ಸ್ಟ್ರೆಸ್ ಅಂತ ಹೇಳೋದು ಬಿಟ್ಬಿಡಿ!

•    ವ್ಯಕ್ತಿತ್ವದ (Personality) ನಾಶ
ಅಸೂಯೆ ಮನಸ್ಥಿತಿಯಿಂದಾಗಿ ಕ್ರಮೇಣ ನಮ್ಮ ವ್ಯಕ್ತಿತ್ವ ನಾಶವಾಗುತ್ತದೆ. ಖುಷಿಯಾಗಿರಲು ಸಾಧ್ಯವಾಗುವುದಿಲ್ಲ. ಅಸೂಯೆ ಭಾವನೆಗೆ ಉತ್ತೇಜನ ನೀಡಿದರೆ ಧನಾತ್ಮಕ (Positive) ಮನಸ್ಥಿತಿ ದೂರವಾಗಿ, ಕೆಟ್ಟ ಸ್ಪರ್ಧಾತ್ಮಕ ಮನಸ್ಥಿತಿ ಹೊಂದುವಂತಾಗುತ್ತದೆ. ಮನದಲ್ಲಿ ಮತ್ಸರವಿದ್ದಾಗ ನಾವು ನಮ್ಮವರೊಂದಿಗೇ ಬೇರೆ ರೀತಿಯಲ್ಲಿ ವರ್ತಿಸುವುದನ್ನು ನೀವು ನೋಡಿರಬಹುದು. ಜಾಣರು ಇಂಥದ್ದರಿಂದ ದೂರವೇ ಇರುವ ನಿರ್ಲಿಪ್ತತೆ ರೂಢಿಸಿಕೊಳ್ಳುತ್ತಾರೆ.  
 

click me!