ಡಿಕೆ ಶಿವಕುಮಾರ್‌ಗೆ ಕೆಪಿಸಿಸಿ ಒಲಿಯಲು ಈ ಲೆಕ್ಕಾಚಾರವೇ ಕಾರಣ..!

By Suvarna NewsFirst Published Mar 7, 2020, 5:45 PM IST
Highlights

ಕಾಂಗ್ರೆಸ್ ಹೈಕಮಾಂಡ್ ಡಿಕೆ ಶಿವಕುಮಾರ್‌ ಅವರನ್ನ ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಬುಧವಾರ ಅಧಿಕೃತ ಆದೇಶ ಹೊರಡಿಸಿದೆ. ಡಿಕೆಶಿಗೆ ಕೆಪಿಸಿಸಿ ಸಾರಥ್ಯ ಕೊಟ್ಟಿರುವುದಕ್ಕೆ ಈ ಲೆಕ್ಕಾಚಾರವೇ ಕಾರಣ. ಇದರ ಹಿಂದೆ 40 ವರ್ಷಗಳ ಇತಿಹಾಸ ಇದೆ. ಅದು ಈ ಕೆಳಗಿನಂತಿದೆ ನೋಡಿ.

ಬೆಂಗಳೂರು, (ಮಾ.07): ಕೊನೆಗೂ ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಡಿ.ಕೆ ಶಿವಕುಮಾರ್‌ಗೆ ಕೆಪಿಸಿಸಿ ಸಾರಥಿ ಪಟ್ಟ ನೀಡಬೇಕು ಎನ್ನೋ ಮಾತು ಬರಿಯ ಮಾತಲ್ಲ. ಅದರ ಹಿಂದಿದೆ ಒಂದು ಸಾಮಾಜಿಕ, ಚುನಾವಣಾ ಲೆಕ್ಕಾಚಾರ. ಚುನಾವಣಾ ಶಾಸ್ತ್ರಜ್ಞರು ಹೌದೌದು ಎನ್ನುವಂತಿರೋ ಲೆಕ್ಕಾಚಾರ ಹೀಗಿದೆ ನೋಡಿ.

ಕಾಂಗ್ರೆಸ್ ಮೇಲ್ವರ್ಗದ ನಾಯಕರಿಗೆ ಚುನಾವಣಾ ಚುಕ್ಕಾಣಿ ಕೊಟ್ಟಾಗೆಲ್ಲ ದೊಡ್ಡ ಮಟ್ಟದಲ್ಲಿ ಮತ ಗಳಿಕೆಯ ಪ್ರಮಾಣ ಶೇ. 40ಕ್ಕಿಂತ ಹೆಚ್ಚು. ಹಿಂದುಳಿದ ವರ್ಗದ ನಾಯಕರಿಗೆ ಕಾಂಗ್ರೆಸ್ ಚುಕ್ಕಾಣಿ ಕೊಟ್ಟಾಗೆಲ್ಲಾ ಮತ ಗಳಿಕೆಯ ಪ್ರಮಾಣ ಶೇ. 35 ರಿಂದ 38 ಪರ್ಸೆಂಟ್ ಮಾತ್ರ. ಈ ಲೆಕ್ಕಾಚಾರಕ್ಕೆ 40 ವರ್ಷಗಳ ಇತಿಹಾಸ ಇರೋದು ಇಂಟ್ರೆಸ್ಟಿಂಗ್.

1989ರಲ್ಲಿ ಲಿಂಗಾಯತ ಸಮುದಾಯದ ವೀರೇಂದ್ರ ಪಾಟೀಲರ ನೇತೃತ್ವದಲ್ಲಿ ಚುನಾವಣೆ ನಡೆದಾಗ ಕಾಂಗ್ರೆಸ್ ಗಳಿಸಿದ್ದು ಶೇ. 44 ರಷ್ಟು ಮತಗಳಿಂದ 178 ಕ್ಷೇತ್ರಗಳಲ್ಲಿ ಗೆಲುವು. ಇಂದಿರಾಗಾಂಧಿ ನಿರ್ಗಮನದ ನಂತರ ಕರ್ನಾಟಕದಲ್ಲಿ ಶುರುವಾದ ಜಾತಿ ಆಧಾರಿತ ಚುನಾವಣಾ ಫಲಿತಾಂಶಕ್ಕೆ ಇದೇ ಚುನಾವಣೆಯೇ ಬುನಾದಿಯಾಯ್ತು.

ಕೊನೆಗೂ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ನೇಮಕ

1994ರಲ್ಲಿ ಹಿಂದುಳಿದ ವರ್ಗಗಳ ನಾಯಕ ವೀರಪ್ಪ ಮೊಯ್ಲಿ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದ್ದು ಶೇ. 26 ರಷ್ಟು ಮತಗಳಿಂದ 34 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತು. ಜನತಾದಳ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಇದಕ್ಕೆ ಮುಖ್ಯ ಕಾರಣವಾಗಿದ್ದು ಮಾತ್ರ ಎಸ್. ಬಂಗಾರಪ್ಪ ಅವರ ಕರ್ನಾಟಕ ಕಾಂಗ್ರೆಸ್ ಪಕ್ಷದ ಸ್ಪರ್ಧೆ.

1999ರಲ್ಲಿ ಒಕ್ಕಲಿಗ ಸಮುದಾಯದ ಎಸ್.ಎಂ. ಕೃಷ್ಣ ನೇತೃತ್ವದಲ್ಲಿ ಚುನಾವಣೆ ನಡೆದಾಗ ಕಾಂಗ್ರೆಸ್ ಶೆ. 42 ರಷ್ಟು ಮತಗಳಿಸಿ 136 ಕ್ಷೇತ್ರಗಳಲ್ಲಿ ಜಯ ಸಾಧಿಸಿತು. ಈ ಚುನಾವಣೆಯಲ್ಲಿ ಜೆಡಿಎಸ್ ಧೂಳೀಪಟವಾಯ್ತು. ದೇವೇಗೌಡರಾದಿಯಾಗಿ ಕುಟುಂಬದ ಎಲ್ಲರೂ ಸೋಲು ಕಂಡ ಚುನಾವಣೆ ಇದಾಗಿತ್ತು. ಸಿದ್ದರಾಮಯ್ಯ ಸಹ ಸೋತಿದ್ದರು.

2004ರಲ್ಲಿ ಒಕ್ಕಲಿಗ ಸಮುದಾಯದ ಎಸ್.ಎಂ. ಕೃಷ್ಣ ಮತ್ತು ಹಿಂದುಳಿದ ವರ್ಗಗಳ ಜನಾರ್ಧನ ಪೂಜಾರಿ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಶೇ. 35 ರಷ್ಟು ಮತಗಳು ಮಾತ್ರ ಕಾಂಗ್ರೆಸ್ ಪಾಲಾಯಿತು. ಗೆದ್ದಿದ್ದು ಕೇವಲ 65 ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ. ಈ ಚುನಾವಣೆಯಲ್ಲಿ ಜೆಡಿಎಸ್ ಗಣನೀಯ ಅಂದ್ರೆ 58 ಸ್ಥಾನಗಳಲ್ಲಿ ಗೆದ್ದು ಕಿಂಗ್ ಮೇಕರ್ ಆಗಿ ಹೋಯಿತು.

2008ರಲ್ಲಿ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಚುನಾವಣೆ ಎದುರಿಸಿದಾಗ ಕಾಂಗ್ರೆಸ್ ಮತ ಗಳಿಕೆ ಶೇ. 35 ಆದರೂ 80 ಕ್ಷೇತ್ರಗಳಿಗೆ ಗೆಲುವು ವಿಸ್ತರಿಸಿಕೊಂಡಿತು. ಜೆಡಿಎಸ್ 28 ಕ್ಷೇತ್ರಗಳಿಗೆ ಕುಗ್ಗಿ, 110 ಸ್ಥಾನಗಳನ್ನು ಗಳಿಸಿದ ಬಿಎಸ್ವೈ ನೇತೃತ್ವದ ಬಿಜೆಪಿ ಪಕ್ಷೇತರರ ನೆರವಿನೊಂದಿಗೆ ಅಧಿಕಾರ ಹಿಡಿಯಿತು.

ನಾನಾ-ನೀನಾ, ಡಿಕೆಶಿ VS ಸಿದ್ದು; ಕನಕಪುರ ಬಂಡೆ ಗೆದ್ದು ಬೀಗಿದ್ದು ಹೇಗೆ?

2013ರಲ್ಲಿ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 124 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ಹಿಡಿಯಿತು. ಆದರೆ, ಗಳಿಸಿದ ಶೇಕಡವಾರು ಮತಗಳು ಶೇ. 36 ಮಾತ್ರ. ಯಡಿಯೂರಪ್ಪನವರ ಕೆಜೆಪಿ ಮತ್ತು ರಾಮುಲು ಅವರ ಬಿಎಸ್ಆರ್ ಕಾಂಗ್ರೆಸ್ ಸ್ಪರ್ಧೆಯಿಂದಾಗಿ ಶೇಕಡವಾರು ಮತಗಳು ಕಡಿಮೆಯಾದರೂ ಸೀಟು ಗಳಿಕೆಯಲ್ಲಿ ಕಾಂಗ್ರೆಸ್ ಮುಂಚೂಣಿಗೆ ಬಂದಿತು.

2018ರಲ್ಲಿ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ನೇತೃತ್ವದಲ್ಲಿ ಚುನಾವಣೆ ನಡೆದಾಗ ಕಾಂಗ್ರೆಸ್ ಎರಡು ಪರ್ಸೆಂಟ್ ಹೆಚ್ಚು ಅಂದ್ರೆ ಶೇ. 38ರಷ್ಟು ಮತ ಗಳಿಸಿದರೂ ಗೆದ್ದ ಕ್ಷೇತ್ರಗಳು 80 ಮಾತ್ರ. ಕೆಜೆಪಿ ಮತ್ತು ರಾಮುಲು ಪಕ್ಷಗಳು ಕಣದಲ್ಲಿರಲಿಲ್ಲ ಎಂಬುದನ್ನು ಗಮನಿಸಬೇಕು.

1989 ಇಂದಿರಾಗಾಂಧಿಯವರ ಪ್ರಭಾವ ಇಲ್ಲದೆ ನಡೆದ ಕರ್ನಾಟಕದ ಮೊದಲ ಚುನಾವಣೆ. ಅಲ್ಲಿಂದ ಇಲ್ಲಿಯವರೆಗೂ ಮೇಲ್ವರ್ಗದವರಿಗೆ ಕಾಂಗ್ರೆಸ್ ನಾಯಕತ್ವ ನೀಡಿದಾಗೆಲ್ಲ ಮತ ಗಳಿಕೆ ಶೇ. 40 ದಾಟಿದೆ. ಈ ಕಾರಣಕ್ಕೆ ಪ್ರಭಾವಿಯೂ ಆಗಿರುವ ಒಕ್ಕಲಿಗ ಸಮುದಾಯದ ಡಿ.ಕೆ. ಶಿವಕುಮಾರ್ಗೆ ನಾಯಕತ್ವ ನೀಡಿ ಎಂಬುದು ಡಿಕೆ ಪರ ಬ್ಯಾಟಿಂಗ್ ಮಾಡುತ್ತಿರುವವರ ವಾದ. ಲಿಂಗಾಯತ ಸಮುದಾಯದವರು ಸಿಎಂ ಇರುವಾಗ ವಿರೋಧ ಪಕ್ಷದ ಲಿಂಗಾಯತ ನಾಯಕರ ಜೊತೆ ಸಮುದಾಯ ನಿಲ್ಲುವುದಿಲ್ಲ ಎಂದು ಸಮರ್ಥನೆ ನಡೆದಿದೆ.

ಭವಿಷ್ಯ ನುಡಿದ ಸ್ವಾಮೀಜಿ, ಕೆಪಿಸಿಸಿ ಜತೆಗೆ ಡಿಕೆಶಿಗೆ ಸಿಎಂ ಪಟ್ಟ!

1972ರಲ್ಲಿ ದೇವರಾಜ ಅರಸು ನೇತೃತ್ವದಲ್ಲಿ ಕಾಂಗ್ರೆಸ್ ಶೇ. 52 ರಷ್ಟು ಮತಗಳ ಮೂಲಕ 164 ಸೀಟುಗಳನ್ನು ಗೆದ್ದಿತ್ತು. 1978ರಲ್ಲಿ ಅದೇ ಅರಸು ಅವರ ನೇತೃತ್ವದಲ್ಲಿ ಶೇ. 47 ರಷ್ಟು ಮತಗಳ ಮೂಲಕ 152 ಸೀಟುಗಳನ್ನು ಗೆದ್ದಿತ್ತು. ದೇವರಾಜ ಅರಸು ಅವರ ನಾಯಕತ್ವದ ಖದರ್ ಜಾತಿಗಳನ್ನು ಮೀರಿತ್ತು. ಜೊತೆಗೆ ಸತತ 16 ವರ್ಷ ಲಿಂಗಾಯತ ಮುಖ್ಯಮಂತ್ರಿಗಳು ಕರ್ನಾಟಕ ಆಳಿದ್ದು ಉಳಿದ ಸಣ್ಣ ಸಣ್ಣ ಜಾತಿಗಳು ಒಗ್ಗೂಡಲು ಕಾರಣವಾಗಿತ್ತು.

 ಆದರೆ 1989ರ ನಂತರ ಕಾಂಗ್ರೆಸ್ ಹೆಚ್ಚು ಮತ ಗಳಿಸಿರುವುದು ಮೇಲ್ವರ್ಗದ ನಾಯಕರು ಸಾರಥಿಯಾದಾಗಲೇ ಎಂಬುದನ್ನು ಅಂಕಿ ಸಂಖ್ಯೆಗಳು ಪುಷ್ಟೀಕರಿಸುತ್ತಿವೆ. ಕಾಂಗ್ರೆಸ್ ಹೈಕಮಾಂಡ್ ಯಾವುದಕ್ಕೆ ಮಣೆ ಹಾಕುವುದೋ ಕಾದು ನೋಡಬೇಕು...?

click me!