ಚುನಾವಣೆಯಲ್ಲಿ ಬಿಟ್ಟಿ ಭಾಗ್ಯಗಳ ಘೋಷಣೆ, ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂ ಛೀಮಾರಿ!

By Santosh NaikFirst Published Aug 11, 2022, 2:54 PM IST
Highlights

ವಿಚಾರಣೆಯ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್ ಹಣಕಾಸಿನ ಶಿಸ್ತಿನ ಅಗತ್ಯವನ್ನು ಒತ್ತಿಹೇಳಿತು ಮತ್ತು ಚುನಾವಣೆಗೆ ಮುಂಚಿತವಾಗಿ ಹಣ ಹಂಚುವ, ಉಚಿತವಾಗಿ ವಿದ್ಯುತ್‌, ನೀರು ನೀಡುವ ರಾಜಕೀಯ ಪಕ್ಷಗಳ ದುರಭ್ಯಾಸದ ಬಗ್ಗೆ ಕಿಡಿಕಾರಿದೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಚುನಾವಣಾ ಆಯೋಗಕ್ಕೂ ಛೀಮಾರಿ ಹಾಕಿದೆ.

ನವದೆಹಲಿ (ಆ.11): ಚುನಾವಣೆಯಲ್ಲಿ ಉಚಿತ ಯೋಜನೆಗಳ ಭರವಸೆಗಳನ್ನು ನಿಲ್ಲಿಸಬೇಕೆಂಬ ಬೇಡಿಕೆಯ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಸುಮಾರು 20 ನಿಮಿಷಗಳ ಕಾಲ ಮಂಗಳವಾರ ವಿಚಾರಣೆ ನಡೆಯಿತು. ವಿಚಾರಣೆ ವೇಳೆ ನ್ಯಾಯಾಲಯ ಚುನಾವಣಾ ಆಯೋಗಕ್ಕೆ ತೀವ್ರ ಛೀಮಾರಿ ಹಾಕಿದೆ. ನೀವು ಯಾವಾಗ ಅಫಿಡವಿಟ್ ಸಲ್ಲಿಸಿದ್ದೀರಿ ಎಂದು ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಆಯೋಗವನ್ನು ಪ್ರಶ್ನಿಸಿದರು. ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ನ್ಯಾಯಮೂರ್ತಿ ಕೃಷ್ಣ ಮುರಾರಿ ಅವರಿದ್ದ ಪೀಠವು ವಿಚಾರಣೆ ಇದರ ವಿಚಾರಣೆ ನಡೆಸಿತು. ಎಎಪಿ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್, ನ್ಯಾಯಾಲಯದ ಸಲಹೆಗಾರ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದರು. ಈ ವಿಷಯದ ಮುಂದಿನ ವಿಚಾರಣೆ ಈಗ ಆಗಸ್ಟ್ 17 ರಂದು ನಡೆಯಲಿದೆ. ಬಿಜೆಪಿ ನಾಯಕಿ ಅಶ್ವಿನಿ ಉಪಾಧ್ಯಾಯ ಈ ಕುರಿತಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಚುನಾವಣೆಯಲ್ಲಿ ಉಚಿತವಾಗಿ ಉಡುಗೊರೆ ಹಾಗೂ ಸೌಲಭ್ಯ ನೀಡುವುದಾಗಿ ಭರವಸೆ ನೀಡಿದ ಪಕ್ಷಗಳ ಮಾನ್ಯತೆ ರದ್ದುಗೊಳಿಸಬೇಕು ಎಂದು ಅವರು ಅಮ್ಮ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.

ವಿಚಾರಣೆಯ ವೇಳೆ ಯಾರು ಏನೆಲ್ಲಾ ಹೇಳಿದ್ರು?
ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ: ಭಾರತದಂತಹ ಬಡ ರಾಷ್ಟ್ರದಲ್ಲಿ ಈ ರೀತಿಯ ವರ್ತನೆ ಸರಿಯಲ್ಲ. ಚುನಾವಣೆ ಘೋಷಣೆಯ ವೇಳೆಗೆ ರಾಜಕೀಯ ಪಕ್ಷಕ್ಕೆ ಹಣ ಎಲ್ಲಿಂದ ಬರುತ್ತದೆ ಎಂದು ನೀವು ಯೋಚನೆ ಮಾಡೋದಿಲ್ಲವೇ? ಉಚಿತ ಚುನಾವಣಾ ಭರವಸೆಗಳಿಗೂ ಸಮಾಜ ಕಲ್ಯಾಣ ಯೋಜನೆಗಳಿಗೂ ವ್ಯತ್ಯಾಸವಿದೆ ಎನ್ನುವುದನ್ನು ಚುನಾವಣಾ ಆಯೋಗ ಅರ್ಥಮಾಡಿಕೊಳ್ಳಬೇಕು.

ಕಪಿಲ್ ಸಿಬಲ್: ಇದು ಸಂಕೀರ್ಣವಾದ ಸಮಸ್ಯೆಯಾಗಿದ್ದು, ಇದರ ಪೂರಣ ಮಾಹಿತಿಯನ್ನು ಕೇಳಬೇಕಾಗಿದೆ. ಇಲ್ಲಿ ನನ್ನ ಕಚೇರಿಯಲ್ಲಿ ಒಬ್ಬ ಮಹಿಳಾ ಉದ್ಯೋಗಿ ಕೆಲಸ ಮಾಡುತ್ತಿದ್ದಾರೆ. ನಿನ್ನೆ ಮೆಟ್ರೋದಲ್ಲಿ ಹೋಗಲು ಹಣವಿಲ್ಲ ಎಂದಿದ್ದರು, ನಾನು ಅದನ್ನು ನೀಡಿದ್ದೇನೆ. ದೆಹಲಿಯಲ್ಲಿ ಬಸ್ ಸೇವೆ ಉಚಿತವಾಗಿದೆ ಮತ್ತು ನಾನು ಪ್ರಯಾಣಕ್ಕಾಗಿ ಅದನ್ನೇ ಹೆಚ್ಚು ಬಳಸುತ್ತಿದ್ದೇನೆ ಎಂದು ಅವರು ಹೇಳಿದರು. ಇವು ಉಚಿತ ಯೋಜನೆಗಳೇ?

ತುಷಾರ್ ಮೆಹ್ತಾ:ಇದೊಂದು ರೀತಿಯ ಆರ್ಥಿಕ ವಿಪತ್ತು. ಉಚಿತ ಯೋಜನೆಗಳ ಕುರಿತು ಸುಪ್ರೀಂ ಕೋರ್ಟ್ ಕೆಲವು ಮಾರ್ಗಸೂಚಿಗಳನ್ನು ಮಾಡಲಿ. ಸಮಿತಿಯ ಸಲಹೆಯೂ ಉತ್ತಮವಾಗಿದೆ.

ಅಭಿಷೇಕ್ ಮನು ಸಿಂಘ್ವಿ: ಸಮಿತಿ ರಚನೆ ಅನಗತ್ಯ. ಚುನಾವಣೆಯ ಸಮಯದಲ್ಲಿ, ಕಲ್ಯಾಣ ಯೋಜನೆ ಮತದಾರರು ಮತ್ತು ಅಭ್ಯರ್ಥಿಗಳ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುತ್ತದೆ, ಇದರಿಂದಾಗಿ ಮತದಾರರು ತಮ್ಮ ಮತವನ್ನು ನಿರ್ಧರಿಸುವ ದಿಕ್ಕಿನಲ್ಲಿ ಸಾಗುತ್ತಾರೆ. ನ್ಯಾಯಾಲಯದ ಹಸ್ತಕ್ಷೇಪ ರಾಜಕೀಯವಾಗಲಿದೆ.

ಚುನಾವಣಾ ಅಯೋಗ: ಇನ್ನೊಂದೆಡೆ ಚುನಾವಣಾ ಆಯೋಗ ನಮ್ಮನ್ನು ಸಮಿತಿಗೆ ಸೇರಿಸಬೇಡಿ, ನಮ್ಮ ಮೇಲೆ ಒತ್ತಡ ಇರುತ್ತದೆ ಎಂದು ಹೇಳಿದೆ. ಇದಕ್ಕೂ ಮುನ್ನ ಚುನಾವಣಾ ಆಯೋಗವು ನ್ಯಾಯಾಲಯದಲ್ಲಿ ಉಚಿತ ಸರಕುಗಳು ಅಥವಾ ಅಕ್ರಮ ಉಚಿತ ಸರಕುಗಳ ಯಾವುದೇ ಸ್ಥಿರ ವ್ಯಾಖ್ಯಾನ ಅಥವಾ ಗುರುತು ಇಲ್ಲ ಎಂದು ಹೇಳಿದೆ. ದೇಶದ ಸಮಯ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಉಚಿತ ಸರಕುಗಳ ವ್ಯಾಖ್ಯಾನವು ಬದಲಾಗುತ್ತದೆ ಎಂದು ಆಯೋಗವು ತನ್ನ 12 ಪುಟಗಳ ಅಫಿಡವಿಟ್‌ನಲ್ಲಿ ಹೇಳಿದೆ. ಅಂತಹ ಪರಿಸ್ಥಿತಿಯಲ್ಲಿ, ನಾವು ತಜ್ಞರ ಸಮಿತಿಯಿಂದ ಹೊರಗಿಡಬೇಕು. ನಾವು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಸಮಿತಿಯಲ್ಲಿ ನಾವು ಉಳಿಯುವುದು ನಿರ್ಧಾರದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ.

ಭಾರತದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಯುಯು ಲಿಲಿತ್‌ ನೇಮಕ!

ಸುಪ್ರೀಂ ಕೋರ್ಟ್‌ ಪೀಠ: ಆಗಸ್ಟ್ 4 ರಂದು ವಿಚಾರಣೆಯ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್, ಆಯೋಗವು ಈ ವಿಷಯದ ಬಗ್ಗೆ ಮೊದಲ ಹೆಜ್ಜೆಗಳನ್ನು ತೆಗೆದುಕೊಂಡಿದ್ದರೆ, ಇಂದು ಅಂತಹ ಪರಿಸ್ಥಿತಿ ಸಂಭವಿಸುತ್ತಿರಲಿಲ್ಲ. ಯಾವುದೇ ಪಕ್ಷವು ಉಚಿತ ಯೋಜನೆಗಳ ಚುನಾವಣಾ ಗಿಮಿಕ್‌ಗಳನ್ನು ಬಿಡಲು ಬಯಸುವುದಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ತಜ್ಞರ ಸಮಿತಿಯನ್ನು ರಚಿಸುವ ಅವಶ್ಯಕತೆಯಿದೆ, ಏಕೆಂದರೆ ಯಾವುದೇ ಪಕ್ಷವು ಈ ಬಗ್ಗೆ ಚರ್ಚೆ ಮಾಡಲು ಬಯಸುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈ ವಿಚಾರದಲ್ಲಿ ಚುನಾವಣಾ ಆಯೋಗ ಗಂಭೀರವಾಗಿಲ್ಲ.

ಜನಸಂಖ್ಯಾ ನಿಯಂತ್ರಣಕ್ಕೆ ಕಾನೂನು ಅಗತ್ಯ, ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್!

ಚುನಾವಣೆ ವೇಳೆ ರಾಜಕೀಯ ಪಕ್ಷಗಳ ಉಚಿತ ಘೋಷಣೆಗಳು
1. ಪಂಜಾಬ್‌ ವಿಧಾನಸಭೆ ಚುನಾವಣೆ ವೇಳೆ, 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೆ ತಿಂಗಳಿಗೆ 1 ಸಾವಿರ ರೂಪಾಯಿ ನೀಡುವುದಾಗಿ ಆಪ್‌ ಭರವಸೆ ನೀಡಿತ್ತು.
2. ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿ ದಳ ಪ್ರತಿ ಮಹಿಳೆಗೆ ತಿಂಗಳಿಗೆ ತಲಾ 2 ಸಾವಿರ ರೂಪಾಯಿ ಸಹಾಯಧನ.
3. ಕಾಂಗ್ರೆಸ್‌ ಪಕ್ಷ ಕೂಡ ಪಂಜಾಬ್‌ನಲ್ಲಿ ಎಲ್ಲಾ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂಪಾಯಿ ನೀಡುವ ಘೋಷಣೆ ಮಾಡಿತ್ತು.
4. ಉತ್ತರ ಪ್ರದೇಶ ಚುನಾವಣೆಯ ವೇಳೆ ಕಾಂಗ್ರೆಸ್‌ ಪಕ್ಷ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಫೋನ್‌ ನೀಡುವುದಾಗಿ ಘೋಷಿಸಿತ್ತು.
5. ಉತ್ತರ ಪ್ರದೇಶ ಚುನಾವಣೆಯ ವೇಳೆ, ವಿದ್ಯಾರ್ಥಿಗಳಿಗೆ 2 ಕೋಟಿ ಟ್ಯಾಬ್ಲೆಟ್‌ ನೀಡುವುದಾಗಿ ಘೋಷಣೆ ಮಾಡಿತ್ತು.
6. ಗುಜರಾತ್‌ನಲ್ಲಿ ನಿರುದ್ಯೋಗಿ ಮಹಿಳೆಯರಿಗೆ ತಿಂಗಳಿಗೆ 3 ಸಾವಿರ ನೀಡುವುದಾಗಿ ಆಪ್‌ ಪ್ರಕಟಿಸಿದೆ. ತಿಂಗಳ ಭತ್ಯೆ ರೀತಿಯಲ್ಲಿ ಇದನ್ನು ನೀಡುವುದುದಾಗಿ ತಿಳಿಸಿದೆ. ಅದರ ನಡುವೆ ಪ್ರತಿ ಕುಟುಂಬಕ್ಕೆ 300 ಯುನಿಟ್‌ಗಳ ಉಚಿತ ವಿದ್ಯುತ್‌ ನೀಡುವುದಾಗಿ ಪ್ರಕಟಿಸಿದೆ.
7. ಬಿಹಾರದಲ್ಲಿ ಬಿಜೆಪಿ ರಾಜ್ಯದ ಪ್ರತಿಯೊಬ್ಬರಿಗೂ ಉಚಿತ ಕೊರೋನಾ ಲಸಿಕೆ ನೀಡುವುದಾಗಿ ಪ್ರಕಟಿಸಿತ್ತು.

click me!