ರಫೆಲ್ ಡೀಲ್ ವಿರುದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಮಾವೇಶ ಮುಂದೂಡಲಾಗಿದೆ. ಆದರೆ ನಿಗಧಿಯಂತೆ ರಾಹುಲ್ ಸಂವಾದ ಕಾರ್ಯಕ್ರಮ ನಡೆಯಲಿದೆ.
ಬೆಂಗಳೂರು(ಅ.12): ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಅ.13ರಂದು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ಸಮಾವೇಶ ಮುಂದೂಡಲಾಗಿದೆ.
ಆದರೆ, ದೇಶಕ್ಕೆ ಎಚ್ಎಎಲ್ ಕೊಡುಗೆ ಬಗ್ಗೆ ಸಂಸ್ಥೆಯ ನಿವೃತ್ತ ನೌಕರರು, ಅಧಿಕಾರಿಗಳು ಹಾಗೂ ಗಣ್ಯರೊಂದಿಗೆ ರಾಹುಲ್ ಗಾಂಧಿ ನಡೆಸಲಿರುವ ಸಂವಾದ ನಿಗದಿಯಂತೆ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿಯು ಒಂದು ಲಕ್ಷ ಜನರನ್ನು ಸೇರಿಸಿ ರಾಹುಲ್ ನೇತೃತ್ವದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲು ಉದ್ದೇಶಿಸಿತ್ತು. ಆದರೆ, ರಾಹುಲ್ ಗಾಂಧಿ ಅವರು ಬೇರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಈ ಸಮಾವೇಶವನ್ನು ಮುಂದೂಡಲಾಗಿದೆ. ಶೀಘ್ರದಲ್ಲೇ ಮತ್ತೊಂದು ದಿನ ನಿಗದಿ ಪಡಿಸಿ ಸಮಾವೇಶ ನಡೆಸಲಾಗುವುದು ಎಂದರು.
ಇನ್ನು ಎಚ್ಎಎಲ್ ಕೊಡುಗೆ ಬಗ್ಗೆ ರಾಹುಲ್ ಗಾಂಧಿ ಅವರು ಸಂಸ್ಥೆಯ ನಿವೃತ್ತ ನೌಕರರು, ಅಧಿಕಾರಿಗಳು ಹಾಗೂ ಗಣ್ಯರೊಂದಿಗಿನ ಸಂವಾದ ನಿಗದಿಯಂತೆ ಅ.13ರಂದೇ ನಡೆಯಲಿದೆ. ಸಂವಾದ ರದ್ದಾಗಿಲ್ಲ. ಈ ಸಂವಾದವನ್ನು ಕಾಂಗ್ರೆಸ್ ಆಯೋಜಿಸಿಲ್ಲ. ಬದಲಾಗಿ, ಖಾಸಗಿ ಸಂಘಟನೆಗಳು ಆಯೋಜಿಸಿವೆ ಎಂದರು.
ಅನುಮತಿ ಕೇಳಿಯೇ ಇಲ್ಲ:
ಆದರೆ, ರಾಹುಲ್ ಸಂವಾದಕ್ಕೆ ಎಚ್ಎಎಲ್ ಅವಕಾಶ ನಿರಾಕರಿಸಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಂವಾದವನ್ನು ಕೆಪಿಸಿಸಿ ಆಯೋಜಿಸಿಲ್ಲ. ಖಾಸಗಿ ಸಂಘಟನೆಗಳು ಆಯೋಜಿಸಿರುವುದು. ಇನ್ನು ಅನುಮತಿ ಕೇಳಿದ್ದರೆ ಅವಕಾಶ ನಿರಾಕರಿಸುವ ಪ್ರಶ್ನೆ ಬರುತ್ತದೆ. ಕೆಪಿಸಿಸಿ ಇಂತಹ ಯಾವುದೇ ಅನುಮತಿ ನೀಡುವಂತೆ ಎಚ್ಎಎಲ್ ಅನ್ನು ಕೋರಿಲ್ಲ ಎಂದು ಸ್ಪಷ್ಟಪಡಿಸಿದರು.
ಎಚ್ಎಎಲ್ನಂತಹ ದೇಶಕ್ಕೆ ದೊಡ್ಡ ಕೊಡುಗೆ ಕೊಟ್ಟಿರುವ ಸಂಸ್ಥೆಗೆ ಸಾಮರ್ಥ್ಯವಿಲ್ಲ ಎಂಬಂತಹ ಹೇಳಿಕೆಯನ್ನು ರಕ್ಷಣಾ ಸಚಿವರೇ ನೀಡುತ್ತಾರೆ. ಅಂದರೆ, ಯಾರು ಈ ಸಂಸ್ಥೆಯನ್ನು ಕಾಪಾಡಬೇಕೋ ಅವರೇ ಈ ಸಂಸ್ಥೆಯ ವಿರುದ್ಧ ನಿಂತು ನಟ್ಟು ಬೋಲ್ಟುತಯಾರಿಸಲು ಬರದ ರಿಲಯನ್ಸ್ ಸಂಸ್ಥೆ ಪರವಾಗಿ ನಿಲುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಎಚ್ಎಎಲ್ ಪರವಾಗಿ ಪ್ರತಿಭಟನೆ ನಡೆಸುವ ಹಾಗೂ ಸಂಸ್ಥೆಯ ಜತೆ ನಿಲ್ಲುವ ಅವಶ್ಯಕತೆ ಇದೆ ಎಂದು ಅವರು ಪ್ರತಿಪಾದಿಸಿದರು.