ಮಂಗಳೂರಿನಲ್ಲಿ ಕ್ಷಿಪ್ರ ಕಾರ್ಯಪಡೆ ಘಟಕ

By Web DeskFirst Published Oct 8, 2018, 8:31 AM IST
Highlights

ಕ್ಷಿಪ್ರ ಕಾರ್ಯಪಡೆ (ಆರ್‌ಎಎಫ್‌)ಯ ತುಕಡಿಯ ಘಟಕವೊಂದು ಶೀಘ್ರವೇ ಮಂಗಳೂರಿನಲ್ಲಿ ಆರಂಭವಾಗಲಿದೆ. ಕರ್ನಾಟಕದಲ್ಲಿ ಆರ್‌ಎಎಫ್‌ನ ಘಟಕ ಸ್ಥಾಪನೆಯಾಗುತ್ತಿರುವುದು ಇದೇ ಮೊದಲಾಗಿದೆ.
 

ನವದೆಹಲಿ: ಗಲಭೆ, ದೊಂಬಿಯಂಥ ಸಮಯದಲ್ಲಿ, ಪರಿಸ್ಥಿತಿ ನಿರ್ವಹಣೆಗೆಂದು ಇರುವ ಕ್ಷಿಪ್ರ ಕಾರ್ಯಪಡೆ (ಆರ್‌ಎಎಫ್‌)ಯ ತುಕಡಿಯ ಘಟಕವೊಂದು ಶೀಘ್ರವೇ ಮಂಗಳೂರಿನಲ್ಲಿ ಆರಂಭವಾಗಲಿದೆ. ಕರ್ನಾಟಕದಲ್ಲಿ ಆರ್‌ಎಎಫ್‌ನ ಘಟಕ ಸ್ಥಾಪನೆಯಾಗುತ್ತಿರುವುದು ಇದೇ ಮೊದಲು.

ಕಳೆದ ಜನವರಿ ತಿಂಗಳಲ್ಲೇ ಕೇಂದ್ರ ಸರ್ಕಾರ, ದೇಶದಲ್ಲಿ ಹೊಸದಾಗಿ 5 ಆರ್‌ಎಎಫ್‌ ಬೆಟಾಲಿಯನ್‌ ಸ್ಥಾಪನೆಯ ಘೋಷಣೆ ಮಾಡಿತ್ತು. ಇದೀಗ ಆ ತುಕಡಿಗಳ ನೆಲೆ ಸ್ಥಾಪನೆಯಾಗುವ ಪ್ರದೇಶಗಳ ಹೆಸರನ್ನು ಘೋಷಿಸಿದೆ. ಈ ಪೈಕಿ ಕರ್ನಾಟಕದ ಮಂಗಳೂರು, ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯನ್ನು ಪ್ರತಿನಿಧಿಸುವ ಉತ್ತರಪ್ರದೇಶದ ವಾರಾಣಸಿ, ರಾಜಸ್ಥಾನದ ಜೈಪುರ, ಬಿಹಾರದ ಹಾಜಿಪುರ ಮತ್ತು ಹರ್ಯಾಣದ ನುಹ್‌ ಸೇರಿದೆ.

5 ಹೊಸ ತುಕಡಿಗಳಿಗೆ ಅಗತ್ಯವಾದ ಜಾಗ ಖರೀದಿ ಪ್ರಕ್ರಿಯೆ ಜಾರಿಯಲ್ಲಿದ್ದು, ಈಗಾಗಲೇ ಕಾರ್ಯಾಚರಣೆ ನಡೆಸುತ್ತಿರುವ ಆರ್‌ಎಎಫ್‌ ಸಿಬ್ಬಂದಿ, ಶೀಘ್ರವೇ ಹೊಸ ನೆಲೆಗೆ ವರ್ಗಾವಣೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏನಿದು ಆರ್‌ಎಎಫ್‌?

ಅರೆಸೇನಾಪಡೆಯ ಭಾಗವಾಗಿರುವ ಆರ್‌ಎಎಫ್‌ ಸಿಬ್ಬಂದಿ, ಗಲಭೆ ಮುಂತಾದ ಪ್ರಕರಣಗಳನ್ನು ನಿರ್ವಹಿಸುವುದಕ್ಕೆ ವಿಶೇಷ ತರಬೇತಿ ಹೊಂದಿದ್ದು, ನೀಲಿ ಸಮವಸ್ತ್ರದಲ್ಲಿರುತ್ತಾರೆ. ಇದುವರೆಗೆ ದೇಶದಲ್ಲಿ 10 ಆರ್‌ಎಎಫ್‌ ತುಕಡಿಗಳು ಇದ್ದು, ಹೊಸದಾಗಿ 5 ತುಕಡಿ ರಚನೆ ಮಾಡಲಾಗುತ್ತಿದೆ. ಪ್ರತಿ ತುಕಡಿ 1000 ಸಿಬ್ಬಂದಿಯನ್ನು ಒಳಗೊಂಡಿರಲಿದ್ದು, ಅವರು ಅತ್ಯಾಧುನಿಕ ತಾಂತ್ರಿಕ ಉಪಕರಣ, ಮಾರಕವಲ್ಲದ ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತಾರೆ.

click me!