ಹುಣಸೂರಲ್ಲಿ ಅನರ್ಹ ಶಾಸಕ ಹೇಳಿದ್ದೇ ಫೈನಲ್ ಎಂದ್ರು ಸೋಮಣ್ಣ

Published : Oct 18, 2019, 02:07 PM IST
ಹುಣಸೂರಲ್ಲಿ ಅನರ್ಹ ಶಾಸಕ ಹೇಳಿದ್ದೇ ಫೈನಲ್ ಎಂದ್ರು ಸೋಮಣ್ಣ

ಸಾರಾಂಶ

ಹುಣಸೂರಿನಲ್ಲಿ ಅನರ್ಹ ಶಾಸಕ ವಿಶ್ವನಾಥ್ ಹೇಳಿದ್ದೇ ಫೈನಲ್ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಹೇಳಿದ್ದಾರೆ. ನಮ್ಮ ಸರ್ಕಾರ ವಿಶ್ವನಾಥ್‌ರಿಂದಾಗಿಯೇ ಅಸ್ತಿತ್ವಕ್ಕೆ ಬಂದಿದೆ, ಅವರನ್ನು ನೋಯಿಸುವ ಕೆಲಸ ಮಾಡಲ್ಲ ಎಂದಿದ್ದಾರೆ.

ಮೈಸೂರು(ಅ.18): ಹುಣಸೂರು ಉಪಚುನಾವಣೆಗೆ ಅನರ್ಹ ಶಾಸಕ ಅಡಗೂರು ವಿಶ್ವನಾಥ್‌ರದ್ದೇ ಫೈನಲ್‌, ಅವರಾದ್ರೂ ನಿಲ್ಲಬಹುದು ಅಥವಾ ಅವರು ಸೂಚಿಸುವ ಅಭ್ಯರ್ಥಿಯೇ ಅಂತಿಮ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಹೇಳಿದ್ದಾರೆ.

ಕೊಡಗಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಹುಣಸೂರು ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿ, ನಮ್ಮ ಸರ್ಕಾರ ವಿಶ್ವನಾಥ್‌ರಿಂದಾಗಿಯೇ ಅಸ್ತಿತ್ವಕ್ಕೆ ಬಂದಿದೆ, ಅವರನ್ನು ನೋಯಿಸುವ ಕೆಲಸ ಮಾಡಲ್ಲ, ಆ ಬಗ್ಗೆ ಗೊಂದಲವೂ ಇಲ್ಲ, ಅವರು ತೀರ್ಮಾನ ಕೈಗೊಳ್ಳಲು ಸ್ವತಂತ್ರರಿದ್ದಾರೆ, ಹೇಳಿ ಕೇಳಿ ಅವರು ಹಿರಿಯ ರಾಜಕಾರಣಿಯಾಗಿದ್ದು, ಈಗಾಗಲೇ ಮುಖ್ಯಮಂತ್ರಿಗಳು ಎಲ್ಲ ಅನರ್ಹ ಕ್ಷೇತ್ರದ ಶಾಸಕರಿಗೆ ಭರವಸೆ ನೀಡಿರುವಂತೆ ಹುಣಸೂರಿನಲ್ಲೂ ವಿಶ್ವನಾಥರದ್ದೇ ತೀರ್ಮಾನ ಎಂದಿದ್ದಾರೆ.

ಹುಣಸೂರು ಜಿಲ್ಲೆ ಬಗ್ಗೆ ಮಾತಾಡಲ್ಲ:

ಹುಣಸೂರನ್ನು ದೇವರಾಜ ಅರಸು ಜಿಲ್ಲೆ ಮಾಡುವ ಬಗ್ಗೆ ವಿಶ್ವನಾಥ್‌ ಪ್ರಸ್ತಾಪದ ಬಗ್ಗೆ ಅಭಿಪ್ರಾಯ ಕೇಳಿದಾಗ, ಆ ಬಗ್ಗೆ ನನಗೆ ಅಷ್ಟಾಗಿ ಗೊತ್ತಿಲ್ಲ, ಗೊಂದಲವನ್ನೂ ಸೃಷ್ಟಿಮಾಡಲ್ಲ, ವಿಶ್ವನಾಥರು ಅನುಭವಿ ಮತ್ತು ಹಿರಿಯ ರಾಜಕಾರಣಿಯಾಗಿದ್ದು, ಈ ಬಗ್ಗೆ ಚರ್ಚೆ ನಡೆದಿದೆ ಆದರೆ ಹುಣಸೂರು ಜಿಲ್ಲೆ ಬಗ್ಗೆ ಏನೂ ಮಾತಾಡಲ್ಲವೆಂದು ನುಣುಚಿಕೊಂಡಿದ್ದಾರೆ.

ನನ್ನನ್ನು ಕೊಂಡುಕೊಂಡ ಭೂಪನನ್ನು ನೋಡಬೇಕಿದೆ ಎಂದ್ರು ವಿಶ್ವನಾಥ್‌

ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿನ ಬಡವರ ಮನೆ ನಿರ್ಮಾಣದಲ್ಲಿ ಸಾಕಷ್ಟುವ್ಯತ್ಯಾಸ ಕಂಡುಬಂದಿದ್ದು, ಕೆಲವೆಡೆ ಬೋಗಸ್‌ ಆಗಿರುವ ಬಗ್ಗೆ ಮಾತಿ ಇದ್ದು, ಇನ್ನು ಹದಿನೈದು ದಿನಗಳಲ್ಲಿ ಸಮಗ್ರ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ವಸತಿ ಸಚಿವ ಸೋಮಣ್ಣ ತಿಳಿಸಿದ್ದಾರೆ.

ತಾಲೂಕಿನಲ್ಲಿ ನೂರಾರು ಮಂದಿ ಮನೆಕಟ್ಟಿಕೊಂಡಿದ್ದರೂ, ಸಾಕಷ್ಟುಮಂದಿಗೆ ಹಣ ಬಿಡುಗಡೆಯಾಗದೇ ಸಂಕಷ್ಟದಲ್ಲಿರುವ ಬಗ್ಗೆ ಸಚಿವರ ಗಮನ ಸೆಳೆದಾಗ ಹಿಂದಿನ ಸರ್ಕಾರ 14 ಲಕ್ಷ ಮನೆ ನಿರ್ಮಾಣಕ್ಕೆ 5200 ಕೋಟಿ ರು. ಅನುದಾನ ನೀಡಿದ್ದು, ಸಾಕಷ್ಟುಕಡೆ ಮನೆ ನಿರ್ಮಾಣ ನನೆಗುದಿಗೆ ಬಿದ್ದಿದೆ, ತಾವು ಹಲವೆಡೆ ಪರಿಶೀಲಿಸಿದಾಗ ಸಾಕಷ್ಟುಬೋಗಸ್‌ ಪ್ರಕರಣಗಳು ಕಂಡುಬಂದಿದ್ದರಿಂದ ಅನುದಾನ ತಡೆ ಹಿಡಿಯಲಾಗಿದೆ ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯೋಗಾ ನಂದಕುಮಾರ್‌, ಮುಖಂಡ ಜಾಬಗೆರೆ ರಮೇಶ್‌, ಹನಗೋಡು ಮಂಜುನಾಥ್‌, ಮಹದೇವ ಹೆಗ್ಗಡೆ, ಉಪಭಾಗಾಧಿಕಾರಿ ವೀಣಾ, ತಹಸೀಲ್ದಾರ್‌ ಐ.ಇ.ಬಸವರಾಜು, ಇಒ ಗಿರೀಶ್‌ ಮೊದಲಾದವರು ಇದ್ದರು.

ಎಲ್ರನ್ನೂ ಕೊಂಡ್ಕೊಳ್ಳೋಕೆ ಸಾರಾ ಮಹೇಶ್ ಏನು ಟಾಟಾ ಬಿರ್ಲಾನಾ..? ವಿಶ್ವನಾಥ್ ವ್ಯಂಗ್ಯ

PREV
click me!

Recommended Stories

ಮೈಸೂರಿನ ಪುಟ್ಟ ರಾಜಕುಮಾರನ ಹುಟ್ಟುಹಬ್ಬ: ವಿಶೇಷ ಫೋಟೊಗಳನ್ನು ಶೇರ್ ಮಾಡಿದ ಮಹಾರಾಣಿ
Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!