‘ಲಾಕ್‌ಡೌನ್‌’ ಎಂಬ ಮನಸ್ಥಿತಿ!

By Kannadaprabha NewsFirst Published Jul 19, 2020, 8:55 AM IST
Highlights

ಚಿಕ್ಕ ಮಕ್ಕಳೂ ‘ಲಾಕ್‌ಡೌನ್‌’, ‘ಕ್ವಾರಂಟೈನ್‌’ ಪದಗಳನ್ನು ತಮ್ಮ ದಿನನಿತ್ಯದ ಸಂಭಾಷಣೆಯಲ್ಲಿ ಬಳಸುತ್ತಿದ್ದಾರೆ. ‘ಲಾಕ್‌ಡೌನ್‌’ ಮಾಡಿದರೆ ಎಷ್ಟುಕಷ್ಟ, ಎಷ್ಟುಒಳ್ಳೆಯದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ‘ಲಾಕ್‌ಡೌನ್‌’ ಎಂಬುದು ಎಷ್ಟುಪರಿಣಾಮಕಾರಿ ಎನ್ನುವುದನ್ನು ಯಾವುದು ನಿರ್ಧರಿಸುತ್ತದೆ ಎಂಬ ಅಂಶವೂ ಇಂಥ ಸಂದರ್ಭದಲ್ಲಿ ನಮಗೆ ಮುಖ್ಯವಾಗುತ್ತದೆ.

- ಡಾ ಕೆ.ಎಸ್‌. ಪವಿತ್ರ

ಚಿಕ್ಕ ಮಕ್ಕಳೂ ‘ಲಾಕ್‌ಡೌನ್‌’, ‘ಕ್ವಾರಂಟೈನ್‌’ ಪದಗಳನ್ನು ತಮ್ಮ ದಿನನಿತ್ಯದ ಸಂಭಾಷಣೆಯಲ್ಲಿ ಬಳಸುತ್ತಿದ್ದಾರೆ. ‘ಲಾಕ್‌ಡೌನ್‌’ ಮಾಡಿದರೆ ಎಷ್ಟುಕಷ್ಟ, ಎಷ್ಟುಒಳ್ಳೆಯದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ‘ಲಾಕ್‌ಡೌನ್‌’ ಎಂಬುದು ಎಷ್ಟುಪರಿಣಾಮಕಾರಿ ಎನ್ನುವುದನ್ನು ಯಾವುದು ನಿರ್ಧರಿಸುತ್ತದೆ ಎಂಬ ಅಂಶವೂ ಇಂಥ ಸಂದರ್ಭದಲ್ಲಿ ನಮಗೆ ಮುಖ್ಯವಾಗುತ್ತದೆ.

ಬಿಟೌನ್ ಬೆಡಗಿಯರ ಇಮ್ಯೂನಿಟಿ ಮಂತ್ರ, ಹೀಗ್ ಮಾಡಿ ಸ್ಟ್ರಾಂಗ್ ಆಗಿ

ಕೋವಿಡ್‌ನಂತಹ ಸೋಂಕುಗಳು ವ್ಯಾಪಕವಾಗಿ ಹರಡುತ್ತಿರುವುದು ಸಹಜವಾಗಿ ಆಡಳಿತ ವ್ಯವಸ್ಥೆಗಳಲ್ಲಿ ಆತಂಕ ಮೂಡಿಸುತ್ತದೆ. ಸೋಂಕನ್ನು ನಿಯಂತ್ರಿಸಲು, ಸಾವನ್ನು ಕಡಿಮೆ ಮಾಡಲು, ಆರೋಗ್ಯ ವ್ಯವಸ್ಥೆಯಲ್ಲಿ ಪರದಾಟ ತಲೆದೋರದಿರಲು ವಿವಿಧ ಕ್ರಮಗಳನ್ನು ಪ್ರತಿ ಆಡಳಿತ ವ್ಯವಸ್ಥೆ ಕೈಗೆತ್ತಿಕೊಳ್ಳುತ್ತದೆ. ಆಡಳಿತ ವ್ಯವಸ್ಥೆ ಹಾಗೆ ವಿಧಿಸುವ ಕ್ರಮ ಆಯಾ ‘ರಾಷ್ಟ್ರೀಯ ವ್ಯಕ್ತಿತ್ವ’ ವನ್ನು ಅವಲಂಬಿಸಿರುತ್ತದೆ ಎಂಬುದು ಸುಸ್ಪಷ್ಟ. ಸರಳವಾಗಿ ಅಮೇರಿಕೆ-ಚೀನಾ-ಭಾರತ-ಜಪಾನ್‌ಗಳನ್ನು ಗಮನಿಸಿದರೆ ಈ ‘ರಾಷ್ಟ್ರೀಯ ವ್ಯಕ್ತಿತ್ವದ’ ಮಹತ್ವ ಗೊತ್ತಾಗುತ್ತದೆ.

ಆಯಾ ದೇಶದ ಸಂಸ್ಕೃತಿ-ಇತಿಹಾಸಗಳು, ಜನರ ರೂಢಿಗತ ಧೋರಣೆಗಳು ಯಾವುದೇ ನಿರ್ಬಂಧ ಎಷ್ಟುಸ್ವೀಕೃತ ಅಥವಾ ಎಷ್ಟುತಿರಸ್ಕೃತ ಎಂಬುದನ್ನು ನಿರ್ಧರಿಸುತ್ತವೆ. ಮೊದಲು ಚೀನಾದತ್ತ ನೋಡೋಣ. ಚೀನಾದ ಸರ್ಕಾರ ‘ದಿಗ್ಭಂಧನ’ ಘೋಷಿಸಿದ ತಕ್ಷಣ ಜನರಲ್ಲಿ ‘ಅದು ಓಕೆ’ ಎಂಬ ಮನೋಭಾವ! ಏಕೆ? ಏಕೆಂದರೆ ಅವರ ಪ್ರಕಾರ ಉತ್ತಮ ‘ತಂದೆ-ತಾಯಿ’ ಮಾಡಬೇಕಾದ ಕೆಲಸ ಅದು. ನಿಮಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬನಿಗೆ ಜ್ವರ ಬಂದಿದೆ. ಆಗ ಏನು ಮಾಡಬೇಕೆಂದು ವೈದ್ಯರು ಹೇಳುತ್ತಾರೆ? ‘ಇನ್ನೊಬ್ಬರಿಂದ ದೂರವಿಡಿ, ಹೊರಗೆ ಆಡಲು ಬಿಡಬೇಡಿ, ಕೊಠಡಿಯಲ್ಲೇ ಪ್ರತ್ಯೇಕವಾಗಿಟ್ಟು ವಿಶ್ರಾಂತಿ ತೆಗೆದುಕೊಳ್ಳಲಿ’ ಎಂದಲ್ಲವೆ? ಚೀನೀಯರು ತಮ್ಮ ಸರ್ಕಾರದಿಂದಲೂ ಇದೇ ರೀತಿಯ ‘ಕಾಳಜಿ ತೆಗೆದುಕೊಳ್ಳುವಿಕೆ’ಯನ್ನು ನಿರೀಕ್ಷಿಸುತ್ತಾರೆ. ಚೀನೀ ಭಾಷೆಯಲ್ಲಿ ಬೇರೆ ಭಾಷೆಗಳಲ್ಲಿಲ್ಲದ ‘ಗ್ವಾಯ್‌’ ಎಂಬ ಪದವಿದೆ. ಅದರ ಅರ್ಥ ‘ತನ್ನ ತಂದೆ-ತಾಯಿಗಳ ಮಾತು ಕೇಳುವ ಮಗು’. ಚೀನಾದ ಜನರತ್ತ ನೋಡಿದರೆ ಅವರೆಲ್ಲರೂ ತುಂಬಾ ‘ಗ್ವಾಯ್‌’. ಚೀನೀಯರು ಸರ್ಕಾರವನ್ನು ‘ದೊಡ್ಡಣ್ಣ’ನಂತೆ, ‘ಅಪ್ಪ-ಅಮ್ಮ’ನಂತೆ ಭಾವಿಸುತ್ತಾರೆ. ಏನೇ ವಿಧಿಸಿದರೂ, ಅದು ನರಳುವಿಕೆಯನ್ನು ತಂದರೂ ದೊಡ್ಡಣ್ಣ ‘ಹೀಗೆ ಮಾಡಬೇಕು’ ಎಂದರೆ ಅವರು ಅದನ್ನು ಒಪ್ಪುತ್ತಾರೆ. ತಮ್ಮ ಸ್ವಾತಂತ್ರ್ಯ-ಖಾಸಗೀತನವನ್ನೂ ತ್ಯಾಗ ಮಾಡುವುದು ಅವರಿಗೆ ಸುಲಭ.

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು 10 ಐಡಿಯಾಗಳು!

ಜಪಾನ್‌ನಲ್ಲಿ ಜನ ತಾವೇ ಶಿಸ್ತನ್ನು ರೂಢಿಸಿಕೊಂಡಿರುವ ಮಕ್ಕಳಂತೆ. ಸಾದಾ ನೆಗಡಿ ಆದರೆ ಇಲ್ಲಿನ ಜನ ತಾವು ಮಾಸ್ಕ್‌ ಹಾಕಿಕೊಳ್ಳದೇ ಹೊರಗೆ ಕಾಲಿಡುವುದಿಲ್ಲ. ಮತ್ತೊಬ್ಬರಿಗೆ ಅದು ಹರಡಬಾರದು ಎನ್ನುವ ಪರಿಜ್ಞಾನ ಇವರಲ್ಲಿ ಹೆಚ್ಚು. ಹಾಗಾಗಿಯೇ ಸಾವುಗಳ ಸಂಖ್ಯೆ ಸಾವಿರಕ್ಕಿಂತ ಕಡಿಮೆ. ಟೋಕಿಯೋದಂತಹ ಜನನಿಬಿಡ ಪಟ್ಟಣಗಳಲ್ಲಿಯೂ ಒಂದಂಕಿಯಲ್ಲಿ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಜಪಾನ್‌ನ ಪರಿಣತರು ಮೂರು ‘ಸಿ’ ಗಳನ್ನು ವ್ಯಾಪಕವಾಗಿ ಜನರಿಗೆ ಪಾಲಿಸುವಂತೆ ಕರೆ ನೀಡಿದರು. ಛಿಟshಜ ಠಿಚಿಛಿh- ಮುಚ್ಚಿರುವ ಜಾಗಗಳು, ಛಿಡಿsತಿಜhಜ ಠಿಚಿಛಿh ಜನಜಂಗುಳಿಯಿರುವ ತಾಣಗಳು, ಛಿಟsh ಛಿsಟಿಣಚಿಛಿಣ hಣಣಟಿÃ- ಹತ್ತಿರ ಸಂಪರ್ಕ ಬರುವಂತಹ ಸನ್ನಿವೇಶಗಳು. ಇವು ಈಗಾಗಲೇ ಸಾದಾ ನೆಗಡಿಗೂ ಮಾಸ್ಕ್‌ ಧರಿಸುವ ಜನರಿಗೆ ಪಾಲಿಸುವುದು ಕಷ್ಟವಾಗಲೇ ಇಲ್ಲ. ಜಪಾನ್‌ನ ರಾಷ್ಟ್ರೀಯ ವ್ಯಕ್ತಿತ್ವ ಹೇಗೆಂದರೆ, ಬೇರೆಲ್ಲಾ ದೇಶಗಳು ಕಾಯಿಲೆ ಹೊರಗಿನಿಂದ ಬಂದಿದೆ ಎಂದು ಉಳಿದವರನ್ನು ದೂಷಿಸುವುದರಲ್ಲಿ ತೊಡಗಿದ್ದಾಗ, ಜಪಾನ್‌ ಅದರ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ಬದಲು ತನ್ನ ಮನೆಯ ಅಂಗಳದಲ್ಲಿ ‘ಕಾರ್‌ ಸುಟ್ಟು ಉರಿಯುತ್ತಿರುವ’ ರೀತಿಯಲ್ಲಿ ತನ್ನ ‘ಡೈಮಂಡ್‌ ಪ್ರಿನ್ಸೆಸ್‌’ ಹಡಗಿನ ಅನುಭವದಿಂದ ಪಾಠ ಕಲಿತು ಪ್ರಾಯೋಗಿಕವಾಗಿ ಎಚ್ಚರಿಕೆಯನ್ನು ತೋರಿಸಿತು. ಶಾಲೆಗಳನ್ನು ಬಲು ಬೇಗ ಮುಚ್ಚಿತು. ಹಾಗಾಗಿ ಜಪಾನ್‌ನಲ್ಲಿ ‘ಲಾಕ್‌ಡೌನ್‌’ ಪರಿಸ್ಥಿತಿಯ ಅಗತ್ಯ ಹೆಚ್ಚಿರಲೇ ಇಲ್ಲ.

ಈಗ ಅಮೇರಿಕಾ - ಭಾರತಗಳತ್ತ ನೋಡೋಣ. ತಮ್ಮ ಹಕ್ಕುಗಳನ್ನು ತಮ್ಮದೇ ಆರಾಮಕ್ಕಾಗಿ ಚೀನೀಯರು ಬಿಟ್ಟುಕೊಡಲು ಸಿದ್ಧರಿದ್ದಂತೆ ಅಮೇರಿಕಾದವರಾಗಲಿ, ಭಾರತೀಯರಿಗಾಗಲೀ ಸಾಧ್ಯವೇ ಇಲ್ಲ. ಚೀನಾದಲ್ಲಿ ಈಗಲೂ ಸೆಮಿ-ಲಾಕ್‌ಡೌನ್‌ ಜಾರಿಯಲ್ಲಿದೆ. ಎಲ್ಲಿಗೇ ಹೋಗಲಿ, ಎಲ್ಲರ ಬಳಿ ಒಂದು ಆ್ಯಪ್‌ ಇರುತ್ತದೆ. ಈ ಆ್ಯಪ್‌ನಲ್ಲಿ ನಿಮ್ಮ ಫೋನ್‌ ನಂಬರ್‌ ಹಾಕಿದರೆ ಪ್ರವೇಶದ್ವಾರದಲ್ಲಿರುವ ಗಾರ್ಡ್‌ಗೆ ಕಳೆದ 14 ದಿನಗಳಲ್ಲಿ ನೀವು ಎಲ್ಲೆಲ್ಲಿ ಹೋಗಿ ಬಂದಿದ್ದೀರೆಂಬ ಮಾಹಿತಿ ಸಿಕ್ಕುತ್ತದೆ. ಅಮೇರಿಕನ್ನರ ಪ್ರಕಾರ ಇದು ಖಾಸಗೀತನ- ‘ಪ್ರೈವೆಸಿ’ಯ ಮೇಲೆ ನಡೆದ ದಾಳಿ! ನಾವು ಭಾರತೀಯರೋ, ಕ್ವಾರಂಟೈನ್‌ ಮಾಡಿದರೆ ಎಂಬ ಭಯದಿಂದ ಮೊಬೈಲನ್ನೇ ಅಡಗಿಸಿಡುವ, ಅಥವಾ ಗಾರ್ಡ್‌ಗೇ ಲಂಚ ಕೊಟ್ಟು ಮಾಹಿತಿಯನ್ನೇ ಇಲ್ಲವಾಗಿಸುವ ಚಾಣಾಕ್ಷರು. ಆದರೆ ಚೀನೀಯರು ಈ ಬಗ್ಗೆ ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಗೊತ್ತೆ?. ‘ನಮಗೇನೂ ಹೀಗೆ ನಾನು ಕಳೆದ 14 ದಿನಗಳಲ್ಲಿ ಎಲ್ಲೆಲ್ಲಿ ಹೋಗಿದ್ದೇನೆಂಬುದು ಇತರರಿಗೆ ಗೊತ್ತಾಗುವ ಬಗ್ಗೆ ತೊಂದರೆಯಿಲ್ಲ. ಮಾಲ್‌ ಪ್ರವೇಶಿಸುವಾಗ ಬೇರೆಯವರೆಲ್ಲರೂ ‘ಸ್ಕ್ಯಾ‌ನ್‌’ ಆಗಿದ್ದಾರೆ ಎಂಬ ಭಾವವೂ ಸುರಕ್ಷತೆಯ ಭಾವವನ್ನೇ ಮೂಡಿಸುತ್ತದೆ’. ವೈಯಕ್ತಿಕ ಸ್ವಾತಂತ್ರ್ಯ, ಖಾಸಗಿತನ ಎಂಬ ಸಂಗತಿಗಳು ಕೊರೋನಾ ಸೋಂಕಿನಂತಹ ಸಮಯದಲ್ಲಿ ಕೇವಲ ‘ಅಮೂರ್ತ ಕಲ್ಪನೆ’ಗಳಾಗಿ, ಅರ್ಥಹೀನವಾಗಿಬಿಡುತ್ತವೆ ಎಂಬುದು ಒಬ್ಬ ವೈದ್ಯೆಯಾಗಿ ನನಗನ್ನಿಸುತ್ತದೆ.

ಪ್ರತಿನಿತ್ಯ ರೋಗಿಗಳನ್ನು ನೋಡುವಾಗ, ಸುತ್ತಮುತ್ತ ಜನರನ್ನು ನೋಡುವಾಗ ನನಗೆ ಎರಡು ವೈಪರೀತ್ಯಗಳು ಕಾಣುತ್ತವೆ. ಮೊದಲನೆಯದು ಕೊರೋನಾದಂತಹ ಸೋಂಕಿಗೆ ಹೆದರುವ ಮನಃಸ್ಥಿತಿ. ಆದರೆ ಹೀಗೆ ಹೆದರುವ ಮನಃಸ್ಥಿತಿಯಿಂದ ಹುಟ್ಟಬೇಕಾದ್ದು ಸ್ವಚ್ಛತೆ-ಮಾಸ್ಕ್‌ ಧರಿಸುವುದು ಮತ್ತು ಸರ್ಕಾರ- ಆಡಳಿತ ವ್ಯವಸ್ಥೆ ಮಾಡಿರುವ ಲಾಕ್‌ಡೌನ್‌ ನಿಯಮಗಳನ್ನು ಪಾಲಿಸುವ ಮನೋಭಾವ. ಆದರೆ ಹೀಗೆ ರೋಗ ಬಂದೀತೆಂದು ಹೆದರುವ ಜನರೂ ಹಾಗೆ ಹೆದರುತ್ತಲೇ ಹೊರಗೆ ಅರ್ಧರ್ಧ ಮಾಸ್ಕ್‌ ಧರಿಸಿ ಓಡಾಡುತ್ತಾರೆ. ಮತ್ತೊಂದು ವಿಪರೀತದ ಮನಃಸ್ಥಿತಿ ‘ಬಂದರೆ ಬರಲಿ, ಏನಾಗುತ್ತೋ ನೋಡೇ ಬಿಡೋಣ/ನಮಗೆಲ್ಲಾ ಬರೋದೇ ಇಲ್ಲ, ಅದೆಲ್ಲಾ ಇಲ್ಲಿ ಯಾಕೆ ಬರುತ್ತೆ/ ಬಂದ್ರೆ ಸ್ವಲ್ಪ ಜ್ವರ ತಾನೇ ನೋಡಿಕೊಂಡರಾಯಿತು’. ಪತ್ರಿಕೆಗಳಲ್ಲಿ ಕ್ವಾರಂಟೈನ್‌ಗೆ ತಪ್ಪು ವಿಳಾಸ ಕೊಟ್ಟವರ, ಲಂಚ ಕೊಟ್ಟು ಕ್ವಾರಂಟೈನ್‌ನಿಂದ ಪರಾರಿಯಾದ, ಸೀಲ್‌ಡೌನ್‌ ಮಾಡಿದಾಗ ರಾತ್ರೋರಾತ್ರಿ ನೆಂಟರ ಊರಿಗೆ ಪರಾರಿಯಾದ, ಇಂಥ ಪ್ರಕರಣಗಳು ವರದಿಯಾಗುತ್ತಲೇ ಇವೆ. ಮಾಲ್‌ಗಳು-ಅಂಗಡಿಗಳಲ್ಲೂ ಥರ್ಮಲ್‌ ಸ್ಕ್ಯಾ‌ನರ್‌ ಹಿಡಿದು ಪರೀಕ್ಷಿಸುವ ಗಾರ್ಡ್‌ಗಳು ಬರೆಯುವ ತಾಪಮಾನಗಳು 91, 81, 88 ಹೀಗಿರುತ್ತವೆ. ಇವು ಮನುಷ್ಯರು ಬದುಕಿರಲು ಸಾಧ್ಯವಿರದಷ್ಟು. ಮಾನವನ ದೇಹದ ಸಹಜ ತಾಪಮಾನ 98.6ಲಿಈ. ಇವೆಲ್ಲ ಏನು ತೋರಿಸುತ್ತವೆ?

ಕೊರೋನಾ ಪಾಸಿಟಿವ್‌ ಮಂದಿಯ ಜತೆ ಹೇಗಿರಬೇಕು?

ಸರ್ಕಾರ-ಆಡಳಿತ ವ್ಯವಸ್ಥೆಗಳು- ಜನರ ನಡವಳಿಕೆ -ಶಿಸ್ತು ಸ್ವೀಕರಿಸುವ ಮನೋಭಾವ ಇವೆಲ್ಲವೂ ಒಂದು ‘ವಿಷಚಕ್ರ’ವನ್ನು ಪ್ರವೇಶಿಸಿವೆ ಎಂಬುದನ್ನು! ಅಂದರೆ ಜನರು ಸಂಯಮದಿಂದ ಕೆಲಕಾಲ (ಸುಮಾರು 3 ತಿಂಗಳುಗಳ) ತಮ್ಮ ನಡವಳಿಕೆಯನ್ನು ನಿಯಂತ್ರಿಸಿಕೊಳ್ಳಬಲ್ಲ ಬುದ್ಧಿ ಕಲಿಯದಿರುವುದು, ಅದನ್ನು ಹೇಗೆ ಕಲಿಸಬೇಕೆಂಬ ಹತಾಶೆಯಿಂದ, ತನ್ನ ಜವಾಬ್ದಾರಿಯನ್ನು ಹೇಗಾದರೂ ನಿರ್ವಹಿಸಬೇಕೆಂಬ ಅನಿವಾರ್ಯತೆಯಿಂದ ಆಡಳಿತ ವ್ಯವಸ್ಥೆ ‘ಲಾಕ್‌ಡೌನ್‌’ ನಿರ್ಧಾರ ತೆಗೆದುಕೊಳ್ಳುವುದು, ಜನ ಕೇಳದಿರುವುದು, ಸೋಂಕು ಹೆಚ್ಚುವುದು, ಮತ್ತೆ ಲಾಕ್‌ಡೌನ್‌ ಹೀಗೆ ಈ ಚಕ್ರ ಸುತ್ತುತ್ತಲೇ ಇರುತ್ತದೆ.

ಈ ಚಕ್ರವನ್ನು ನಾವು ಮುರಿಯಬೇಕು ಎಂದಾದರೆ, ಮೊದಲು ನಾವು ವೈಯಕ್ತಿಕವಾಗಿ ನಮ್ಮ ನಮ್ಮ ಕುಟುಂಬಗಳಿಗೆ ಲಾಕ್‌ಡೌನ್‌ ವಿಧಿಸಿಕೊಳ್ಳಬೇಕು. ಮನರಂಜನೆ -ಹೊರಗಿನ ಅಹಾರ- ಸುತ್ತಾಟದ ಚಡಪಡಿಕೆಗಳನ್ನು ಸಂಯಮದಿಂದ ಹತ್ತಿಕ್ಕಬೇಕು. ಹಾಗೆ ಮಾಡಬೇಕಾದ್ದು ತಾತ್ಕಾಲಿಕವಾಗಿಯಷ್ಟೆ. ಮನಸ್ಸಿನ ರಂಜನೆಗೆ ಹೊಸ ವಿಧಾನಗಳನ್ನು ಮನೆಯಲ್ಲಿಯೇ ಹುಡುಕಿಕೊಳ್ಳಬೇಕು. ಪಾನಿಪೂರಿ ಅಂಗಡಿ ತೆರೆಯಲು ಸರ್ಕಾರ ಒಪ್ಪಿಗೆ ನೀಡಿದೆ ಎಂದರೆ ಪಾನಿಪೂರಿ ನಾವು ತಿನ್ನಲೇಬೇಕೆಂದು ಆದೇಶ ನೀಡಿದೆ ಎಂದು ಅರ್ಥವಲ್ಲ! ಟ್ರಾಫಿಕ್‌ ಸಿಗ್ನಲ್ಲಿನಲ್ಲಿ ಪೋಲಿಸ್‌ ಇದ್ದಾರೆಂದು ನಾವು ನಿಲ್ಲುವುದಲ್ಲ, ನಮಗೆ ಎದುರು ಬರುವ ವಾಹನದೊಂದಿಗೆ ಅಪಘಾತವಾಗಬಾರದೆಂಬ ಎಚ್ಚರದಿಂದ ಎಂಬ ಅರಿವು ನಮಗೆ ಬೇಕು. ‘ಲಾಕ್‌ಡೌನ್‌’ ಎಂಬುದು ಹೊಸ ಪದವಿರಬಹುದು, ಆದರೆ ‘ಶಿಸ್ತು’ ಎನ್ನುವುದು ಜೀವನಕ್ಕೆ ಎಂದಿಗೂ ಪರಿಚಿತವಾಗಿರುವಂತದ್ದೇ. ಮನಸ್ಸಿಗೆ ಸ್ವಲ್ಪ ಕಹಿ ಎನಿಸಿದರೂ ಆರೋಗ್ಯಕ್ಕೆ ಒಳ್ಳೆಯದಾಗುವಂತಹದ್ದೇ. ದಿಗ್ಬಂಧನದಲ್ಲಿಯೂ ಮನಸ್ಸನ್ನು ತೆರೆದು ಯೋಚನೆ ಮಾಡಿದ್ದಾದರೆ ಈ ಎಲ್ಲ ಅಂಶಗಳೂ ತನ್ನಿಂತಾನೇ ಹೊಳೆಯುತ್ತವೆ. ‘ಲಾಕ್‌ಡೌನ್‌’ ಪಾಲಿಸುವಂತೆ ಪ್ರೇರೇಪಿಸುತ್ತವೆ.

click me!