ಬರದ ನೆಲದಲ್ಲಿ ಸಿರಿಧಾನ್ಯ ಬೆಳೆದು ಕೈತುಂಬ ಆದಾಯ ಪಡೆದ ಚಿತ್ರದುರ್ಗದ ರೈತ!

By Suvarna NewsFirst Published Jan 28, 2020, 1:50 PM IST
Highlights

ಸಿರಿಧಾನ್ಯಕ್ಕಿಂದು ಬಹು ಬೇಡಿಕೆ. ಆ ಡಿಮ್ಯಾಂಡ್‌ನ ಜೊತೆಗೆ ತನ್ನೂರಿನ ಬರದ ನೆಲದಲ್ಲಿ ಇದು ಅದ್ಭುತವಾಗಿ ಬೆಳೆಯಬಲ್ಲದು ಎಂಬುದನ್ನು ಮನಗಂಡವರು ದಯಾನಂದ ಮೂರ್ತಿ. ಚಿತ್ರದುರ್ಗದ ದೇವರಮರಿಕುಂಟೆ ಗ್ರಾಮದಲ್ಲಿರುವ ಇವರ ಜಮೀನಿನಲ್ಲಿ ಸಿರಿಧಾನ್ಯಗಳಲ್ಲೊಂದಾದ ನವಣೆ ಕೃಷಿ ಯಶಸ್ವಿಯಾಗಿದೆ. ಜೊತೆಗೆ ಕೈ ತುಂಬ ಆದಾಯವೂ ಬಂದಿದೆ.

ಚಳ್ಳಕೆರೆ ವೀರೇಶ್‌

ನೋಡಿದಷ್ಟುಹಚ್ಚಹಸಿರು, ಎತ್ತ ಕಣ್ಣು ಹಾಯಿಸಿದರೂ ತೆನೆಕಟ್ಟಿದ ಸಿರಿಧಾನ್ಯದ ಗಿಡಗಳದ್ದೇ ಕಾರುಬಾರು. ಕಣ್ಣು ಹಾಯಿಸುವವರ ಕೈಬೀಸಿ ಕರೆಯುವಂತಿರುವ ನವಣೆ ಸಸಿಗಳು. ಇದನ್ನು ನೋಡಿದ ಇನ್ನೊಬ್ಬ ರೈತನಿಗೆ ಈ ಬೆಳೆಯನ್ನು ತಾನು ಬೆಳೆಯಬೇಕೆಂದು ಕ್ಷಣಕಾಲ ಅನಿಸಬಹುದು.

ಹುಣಸೆ, ಲಿಂಬು ಬೆಳೆದ ರಾಮದುರ್ಗ ರೈತನ ಕೈ ಸೇರಿತು ಕೋಟಿ ಸಂಪಾದನೆ.!

ಈ ದೃಶ್ಯ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ದೇವರಮರಿಕುಂಟೆ ಗ್ರಾಮಕ್ಕೆ ಹಾದುಹೋಗುವ ರಸ್ತೆಯಲ್ಲಿ ಕಾಣಸಿಗುತ್ತದೆ. ಸುಮಾರು ಐದೂವರೆ ಎಕರೆಯಲ್ಲಿ ಸಿರಿಧಾನ್ಯಗಳನ್ನು ಬೆಳೆಯಬೇಕೆಂದು ಆಸೆಪಟ್ಟು, ನವಣೆ ಬಿತ್ತನೆ ಮಾಡಿದ ಪ್ರಗತಿಪರ ರೈತ ಆರ್‌.ಎ.ದಯಾನಂದ ಮೂರ್ತಿ. ಈಗ ಈ ಕೃಷಿ ಮಾಡಿ ಕೈತುಂಬ ಆದಾಯ ಗಳಿಸಿದ್ದಾರೆ. ವಿವಿಧ ಸಂಘ ಸಂಸ್ಥೆ, ಕೃಷಿ ವಿಶ್ವ ವಿದ್ಯಾಲಯಗಳಿಂದ ಪ್ರಶಂಸೆ ಪಡೆದು ಬೆಳೆದ ನವಣೆಗೆ ಬೇಡಿಕೆಯನ್ನೂ ಹೆಚ್ಚಿಸಿಕೊಂಡಿದ್ದಾರೆ.

ಸ್ನೇಹಿತರ ಕೃಷಿಯೇ ಪ್ರೇರಣೆ

ದಯಾನಂದ ಮೂರ್ತಿ ಅವರು ಮೊದಲು ಶೇಂಗಾ ಬೆಳೆಯುತ್ತಿದ್ದರು. ಇಳುವರಿ ಕಡಿಮೆ ಇರುತ್ತಿತ್ತು. ಹೇಳಿಕೇಳಿ ಬರದ ನಾಡು. ಬೆಳೆಗೆ ನೀರುಣಿಸುವುದೇ ಸವಾಲಾಗಿತ್ತು. ಇಂಥಾ ಟೈಮ್‌ನಲ್ಲಿ ಈ ಊರುಗಳಲ್ಲಿ ಕೃಷಿ ಇಲಾಖೆ ಸಿರಿಧಾನ್ಯಗಳ ಬಗ್ಗೆ ಸಾಕಷ್ಟುಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿತ್ತು. ಜೊತೆಗೆ ಸಮೀಪದ ಊರಿನಲ್ಲಿದ್ದ ಇವರ ಮಿತ್ರರೊಬ್ಬರು ಈ ಸಿರಿಧಾನ್ಯ ಬೆಳೆದು ಯಶಸ್ವಿಯಾಗಿದ್ದರು. ಅವರ ಅನುಭವವನ್ನು ಕೇಳಿದ ದಯಾನಂದ ಅವರಿಗೂ ಸಿರಿಧಾನ್ಯ ಕೃಷಿ ಮಾಡುವ ಬಗ್ಗೆ ಆಸಕ್ತಿ ಬೆಳೆಯಿತು. ಜೊತೆಗೆ ಕೃಷಿ ವಿಜ್ಞಾನಿಗಳಾದ ರುದ್ರೇಗೌಡ, ಓಂಕಾರಪ್ಪ ಅವರಲ್ಲಿ ಈ ಬಗ್ಗೆ ಸಲಹೆ ಮಾರ್ಗದರ್ಶನ ಪಡೆದರು. ಸಬ್ಸಿಡಿ ಸಹಾಯದಿಂದ ತಮ್ಮ ಕೆಂಪು ಮಿಶ್ರಿತ ಐದೂವರೆ ಎಕರೆ ಜಮೀನಿನಲ್ಲಿ ನವಣೆ ಬಿತ್ತನೆ ಮಾಡಿದರು. ಸರಳ ನಿರ್ವಹಣೆಯ ಈ ಬೆಳೆ ಇದೀಗ ಇವರ ಕೈ ಹಿಡಿದಿದೆ. ಹಿಂದಿನ ವರ್ಷಗಳಿಂದ ಹೆಚ್ಚು ಆದಾಯವೂ ಸಿಕ್ಕಿದೆ.

ಬೆಳೆಗೆ ನೀರು, ಪೋಷಕಾಂಶ ಒದಗಿಸುವ ಬಯೋಚಾರ್‌ ತಯಾರಿಸೋದು ಹೇಗೆ?

ನಾಟಿ ಯಾವಾಗ?

ನವಣೆಗೆ ಬಿತ್ತನೆಗೆ ಜೂನ್‌, ಜುಲಾಯಿ ಸಕಾಲ. ಇವರು ಆಗಸ್ಟ್‌ನಲ್ಲಿ ಬಿತ್ತನೆ ಮಾಡಿದರೂ ಬೆಳೆ ಚೆನ್ನಾಗಿಯೇ ಬಂದಿದೆ. ಎಸ್‌ಐಎಸ್‌-2644 ತಳಿಯ ನವಣೆ ಬಿತ್ತಿದ್ದಾರೆ. ಇದಕ್ಕೆ ಕೆಜಿಗೆ 200 ರು. ದರವಿದೆ. ಮೂರು ತಿಂಗಳ ಬೆಳೆ ಇದು. ಮಳೆಗಾಲ ಪ್ರಾರಂಭಕ್ಕೂ ಮುನ್ನ ಒಣಭೂಮಿಯಲ್ಲೂ ಬಿತ್ತನೆ ಮಾಡಬಹುದಾಗಿದೆ. 30 ಸೆ.ಮೀ ಅಂತರದ ಸಾಲುಗಳಿಗೆ 4 ಸೆ.ಮೀಗೂ ಕಡಿಮೆ ಆಳ, ಬೀಜದಿಂದ ಬೀಜಕ್ಕೆ 5 ರಿಂದ 6 ಸೆಮೀ ಅಂತರವಿರುವಂತೆ ಬಿತ್ತನೆ ಮಾಡಲಾಗಿದೆ. ಕೊಟ್ಟಿಗೆ ಗೊಬ್ಬರ, ಜಿಪ್ಸಂ, ಜಿಂಕ್‌ ಇತ್ಯಾದಿ ಗೊಬ್ಬರ ಅಲ್ಪ ಪ್ರಮಾಣದಲ್ಲಿ ನೀಡಿದ್ದಾರೆ. ಇದರಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗುತ್ತದೆ ಅನ್ನುತ್ತಾರೆ ಮೂರ್ತಿ. ಸುಮಾರು 10 ಕೆ.ಜಿ. ನವಣೆ ಬೀಜ ಬಿತ್ತಿದ್ದಕ್ಕೆ ಪ್ರತಿಯಾಗಿ ಸುಮಾರು 40 ಕ್ವಿಂಟಾಲ್‌ ಸಿರಿಧಾನ್ಯ ದೊರಕಿದೆ. ಬಿತ್ತನೆ ಮಾಡುವ ಮುನ್ನವೇ ಗೊಬ್ಬರ ನೀಡಿದರೆ ಸಾಕು ಮತ್ತೆ ಯಾವುದೇ ಸಂದರ್ಭದಲ್ಲೂ ಗೊಬ್ಬರ, ಔಷಧಿ ನೀಡಬೇಕಿಲ್ಲ, ಬಿತ್ತನೆ ಮಾಡಿದ 20 ರಿಂದ ಒಂದು ತಿಂಗಳೊಳಗೆ ಒಂದು ಕಳೆ ತೆಗೆಸಿದ್ದು ಬಿಟ್ಟರೆ ಬೇರೆ ಯಾವುದೇ ಕಾರ್ಯ ಮಾಡಿಲ್ಲ. ಇವರು ಉತ್ತಮ ಗುಣಮಟ್ಟದ ನವಣೆ ಬಿತ್ತನೆ ಮಾಡಿರುವ ಕಾರಣ ಬೆಳೆದ ನವಣೆ ಬೀಜೋಪಾಚಾರಕ್ಕೆ ಯೋಗ್ಯವಾಗಿದೆ. ಹೀಗಾಗಿ ಬೇಡಿಕೆ ಹೆಚ್ಚಿದೆ. ನವಣೆ ಒಂದು ಕೆ.ಜಿಗೆ 80 ರಿಂದ 100 ರೂವರೆಗೂ ನೀಡಿ ಇವರಿಂದ ಖರೀದಿಸಿದ್ದಾರೆ.

ಪುತ್ತೂರಿನಲ್ಲಿ ಶ್ರೀಗಂಧಕ್ಕಿಂತಲೂ ಲಾಭದಾಯಕ ಈ ಅಗರ್‌ವುಡ್!

ಬೇಸಾಯಕ್ಕೆ ಇವರು ವ್ಯಯಿಸಿದ್ದು ಕೇವಲ 15 ಸಾವಿರದಿಂದ 20 ಸಾವಿರ ರುಪಾಯಿ. ಒಂದು ಬೆಳೆಯಲ್ಲೇ 3 ಲಕ್ಷದಷ್ಟುಲಾಭ ಸಿಕ್ಕಿದೆ.

click me!