ಉತ್ತರ ಭಾರತದ ಜಲಪ್ರಳಯ, ನದಿ ಎಂದಿಗೂ ತನ್ನ ದಾರಿ ಮರೆಯುವುದಿಲ್ಲ; ಯಮುನೆಯ ಹಳೇ ಫೋಟೋ ವೈರಲ್

Published : Jul 15, 2023, 11:48 AM ISTUpdated : Jul 15, 2023, 11:53 AM IST
ಉತ್ತರ ಭಾರತದ ಜಲಪ್ರಳಯ, ನದಿ ಎಂದಿಗೂ ತನ್ನ ದಾರಿ ಮರೆಯುವುದಿಲ್ಲ; ಯಮುನೆಯ ಹಳೇ ಫೋಟೋ ವೈರಲ್

ಸಾರಾಂಶ

ಪ್ರಕೃತಿಯೇ ಹಾಗೆ..ಪ್ರೀತಿಸಿದರೆ ಬಾಚಿ ಅಪ್ಪುವ ದೇವತೆ, ಮುನಿಸಿಕೊಂಡರೆ ರೌದ್ರಾವತಾರ ತಾಳಿ ಎತ್ತಿ ಎಸೆಯುವ ಭೀಕರತೆ. ಉತ್ತರಭಾರತದ ಜಲಪ್ರಳಯ ಇದಕ್ಕೆ ಅಕ್ಷರಶಃ ಸಾಕ್ಷಿಯಾಗಿದೆ. ಮನುಷ್ಯ ತೊರೆ, ಹೊಳೆ, ನದಿಯ ಒಡಲನ್ನೆಲ್ಲಾ ಬಗೆಬಗೆದು ಮನೆ, ಕಟ್ಟಡ, ರಸ್ತೆ ನಿರ್ಮಿಸಿದ. ನಿಸರ್ಗವೀಗ ಜಲದಿಗ್ಬಂಧನ ಮಾಡಿದೆ. ಮುಚ್ಚಿ ಹೋಗಿದ್ದ ನದಿ ತನ್ನ ಜಾಗಕ್ಕೇ ಮರಳಿ ಬಂದಿದೆ. ಜನರು ದಿಕ್ಕಾಪಾಲಾಗಿದ್ದಾರೆ.

ಮಳೆ ಸಣ್ಣಗೆ ಸುರಿಯತ್ತಿದ್ದರೆ ಸ್ವರ್ಗ. ಅದೇ ಬಿರುಗಾಳಿ, ಚಂಡಮಾರುತವಾಗಿ ಭೀಕರ ಸ್ವರೂಪ ತಾಳಿದರೆ ನರಕ. ಧರೆ ಕುಸಿಯುತ್ತದೆ, ಮನೆ ಉರುಳುತ್ತದೆ, ಮನೆ, ಕಟ್ಟಡ ಎಲ್ಲವೂ ನೆಲಸಮವಾಗುತ್ತದೆ. ಪ್ರಾಣಿ, ಮನುಷ್ಯ ಎಲ್ಲರೂ ದಿಕ್ಕಾಪಾಲಾಗಿ ಓಡುವ ಪರಿಸ್ಥಿತಿ. ಸದ್ಯ ಉತ್ತರಭಾರತದ ಪರಿಸ್ಥಿತಿಯೂ ಹಾಗೆಯೇ ಇದೆ. ನಿರಂತರ ಮಳೆಗೆ ಉತ್ತರ ಭಾರತ ಅಕ್ಷರಶ ಸುಸ್ತಾಗಿದೆ. ಮಳೆ ಬಿಟ್ಟು ಬಿಡದಂತೆ ಅಬ್ಬರಿಸುತ್ತಿದೆ. ಉತ್ತರ ಭಾರತ ಈಗ ಜಲಭಾರತವಾಗಿದೆ. ಕಂಡಲ್ಲೆಲ್ಲ ನೀರು. ಅದ್ರಲ್ಲೂ, ಪಂಚಾಬ್, ಹರಿಯಾಣ, ದೆಹಲಿ, ಹಿಮಾಚಲ ಪ್ರದೇಶ, ಮತ್ತು ಉತ್ತರಾಖಂಡ ರಾಜ್ಯಗಳು ನಿರಂತರ ಮಳೆಗೆ ಅತ್ಯಂತ ಸಂಕಷ್ಟದ ಸುಳಿಗೆ ಸಿಲುಕಿವೆ. ದೆಹಲಿಯ ರಸ್ತೆಗಳು, ಅಂಡರ್‌ಪಾಸ್‌ಗಳು, ಮಾರುಕಟ್ಟೆ ಮತ್ತು ಆಸ್ಪತ್ರೆಗಳಲ್ಲಿ ಪ್ರವಾಹ ತಾಂಡವವಾಡುತ್ತಿದೆ. 

ಉತ್ತರ ಭಾರತದ ಐದು ರಾಜ್ಯಗಳಲ್ಲಿ  ಪರಿಸ್ಥಿತಿ ಹೇಗಾಗಿದೆ ಎಂದ್ರೆ, ನದಿ, ಹಳ್ಳಕೊಳ್ಳಗಳೆಲ್ಲ ಒಂದಾಗಿವೆ. ಈ ರಾಜ್ಯಗಳಲ್ಲಿ ಅನೇಕ ಗ್ರಾಮಗಳು ದ್ವೀಪಗಳಾಗಿವೆ. ದೇಶದ ರಾಜಧಾನಿ ದೆಹಲಿ  ಸುತ್ತ ಮುತ್ತ ನಿರಂತರ ಮಳೆ (Rain) ಸುರಿಯುತ್ತಿದೆ. ಇದರ ಪರಿಣಾಮ ಯಮುನಾ ನದಿ (Yamuna river) ದೊಡ್ಡ ಪ್ರಮಾಣದಲ್ಲಿ ಉಕ್ಕಿ ಹಿರಿಯುತ್ತಿದೆ. ದೆಹಲಿ, ಹರ್ಯಾಣ ಸೇರಿದಂತೆ ಉತ್ತರ ಭಾರತದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಯಮುನಾ ನದಿ ಅಪಾಯದ ಮಟ್ಟ ಮೀರಿದೆ. 207.55 ಮೀಟರ್ ಎತ್ತರದಿಂದ ಹರಿಯುತ್ತಿರುವ ಯಮುನಾ ನದಿ ಬರೋಬ್ಬರಿ 45 ವರ್ಷದ ದಾಖಲೆಯನ್ನು ಮುರಿದಿದೆ. ಆದರೆ ಹಲವು ಪ್ರದೇಶಗಳು ಮುಳುಗಡೆಯಾಗಿದ್ದರೆ, ನದಿ ಪಾತ್ರ ಪ್ರದೇಶಗಳಲ್ಲಿ 144 ಸಕ್ಷೆನ್ ಜಾರಿ ಮಾಡಲಾಗಿದೆ.

ಕಣ್ಮರೆಯಾಗುತ್ತಾ ಭಾರತದ ಪ್ರಮುಖ ನಗರ? ಕೇಜ್ರಿವಾಲ್ ಮನೆ ಆವರಣಕ್ಕೆ ನುಗ್ಗಿದ ಯಮುನಾ ನೀರು!

ವರ್ಷಗಳ ಹಿಂದೆ ಇಲ್ಲಿಯೇ ಹೀಗೆಯೇ ಹರಿಯುತ್ತಿತ್ತು ಯಮುನಾ ನದಿ
ಇವೆಲ್ಲರ ಮಧ್ಯೆ ಇಂಟರ್‌ನೆಟ್‌ನಲ್ಲಿ ಯಮುನಾ ನದಿಯ ಹಳೆಯ ಪೋಟೋ ಮತ್ತು ಸದ್ಯದ ಪರಿಸ್ಥಿತಿಯ ಪೋಟೋ ವೈರಲ್ ಆಗ್ತಿದೆ. ಒಂದು ಫೋಟೋ ಹಲವಾರು ವರ್ಷಗಳ ಹಿಂದೆ ಕೆಂಪು ಕೋಟೆಯ ಹಿಂಭಾಗದ ಗೋಡೆಯ ಬಳಿ ಯಮುನಾ ನದಿಯು ಹೇಗೆ ಹರಿಯುತ್ತಿತ್ತು ಎಂಬುದನ್ನು ತೋರಿಸುತ್ತದೆ. ಇನ್ನೊಂದು ಚಿತ್ರದಲ್ಲಿ ಮನುಷ್ಯನು ನದಿಯನ್ನು ಆಕ್ರಮಿಸಿಕೊಂಡ ನಂತರ ಸದ್ಯದ ಪರಿಸ್ಥಿತಿ ಹೇಗಿದೆ ಎಂಬುದು ತಿಳಿದುಬರುತ್ತದೆ. ಸದ್ಯ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

ಟ್ವಿಟ್ಟರ್‌ನಲ್ಲಿ ಹರ್ಶ್ ವಾಟ್ಸ್ ಎಂಬ ಬಳಕೆದಾರರು ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಪ್ರವಾಹಕ್ಕೆ ಒಳಗಾದ ಕೆಂಪು ಕೋಟೆಯ ದೃಶ್ಯಗಳನ್ನು ಮತ್ತು ಮೊಘಲ್ ಯುಗದ ಪೋಟೋವನ್ನು ಶೇರ್ ಮಾಡಿದ್ದಾರೆ. ಶತಮಾನಗಳ ಹಿಂದೆ ಯಮುನಾ ನದಿಯು ಅಲ್ಲಿ ನೈಸರ್ಗಿಕವಾಗಿ ಹರಿಯುತ್ತಿದ್ದಾಗ ಅದೇ ಪ್ರದೇಶವನ್ನು ತೋರಿಸುತ್ತದೆ. 'ನದಿಯು ಎಂದಿಗೂ ತನ್ನ ದಾರಿಯನ್ನು. ಮರೆಯುವುದಿಲ್ಲ.ದಶಕಗಳು ಮತ್ತು ಶತಮಾನಗಳು ಕಳೆದರೂ, ನದಿಯು ತನ್ನ ಗಡಿಯನ್ನು ಮರಳಿ ವಶಪಡಿಸಿಕೊಳ್ಳಲು ಹಿಂತಿರುಗುತ್ತದೆ. ಯಮುನಾ  ಪ್ರವಾಹದ (Flood) ಮೂಲಕ ತನ್ನ ಪ್ರದೇಶವನ್ನು ಪುನಃ ಪಡೆದುಕೊಂಡಿದೆ' ಎಂದು ಟ್ವಿಟರ್ ಬಳಕೆದಾರರು ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಅಪಾಯದ ಮಟ್ಟ ಮೀರಿ 45 ವರ್ಷದ ದಾಖಲೆ ಮುರಿದ ಯಮುನಾ ನದಿ, ತುರ್ತು ಸಭೆ ಕರೆದ ಸಿಎಂ!

ಯಮುನಾ ತನ್ನ ಪ್ರದೇಶವನ್ನು ಪುನಃ ಪಡೆದುಕೊಳ್ಳಲು ಹಿಂದಿರುಗಿದೆ
ಪ್ರಕೃತಿಯು ಯಾವಾಗಲೂ ತನ್ನ ಹಾದಿಯನ್ನು ಪುನಃ ಪಡೆದುಕೊಳ್ಳಲು ಹಿಂತಿರುಗುತ್ತದೆ....#DelhiFloods2023 #Yamuna #RedFort," ಎಂದು ಇದೇ ರೀತಿಯ ಚಿತ್ರಗಳನ್ನು ಹಂಚಿಕೊಳ್ಳುವಾಗ ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ಹಲವಾರು ಇಂಟರ್ನೆಟ್ ಬಳಕೆದಾರರು ನದಿ ನೀರು ಪ್ರವೇಶಿಸಿದ ಪ್ರದೇಶಗಳು ಶತಮಾನಗಳಿಂದ ಯಮುನೆಯ ಪ್ರವಾಹ ಪ್ರದೇಶಗಳಾಗಿವೆ ಮತ್ತು ದಶಕಗಳ ನಂತರವೂ ಅದರ ಹಾದಿಯನ್ನು ನೆನಪಿಸಿಕೊಳ್ಳುತ್ತವೆ ಎಂದು ಸೂಚಿಸಿದರು.

'ನದಿಯ ಸ್ಥಿತಿಸ್ಥಾಪಕತ್ವವು ಅವಿಸ್ಮರಣೀಯವಾಗಿದೆ! ಕಾಲಾನಂತರದಲ್ಲಿ, ದಶಕಗಳ ಮತ್ತು ಶತಮಾನಗಳನ್ನು ವ್ಯಾಪಿಸಿರುವ, ಯಮುನಾವು ತನ್ನ ಪ್ರದೇಶವನ್ನು ಪುನಃ ಪಡೆದುಕೊಳ್ಳಲು ಹಿಂದಿರುಗುತ್ತದೆ, ಅದರ ಮಣಿಯದ ಶಕ್ತಿಯನ್ನು ನಮಗೆ ನೆನಪಿಸುತ್ತದೆ' ಎಂದು ಮೂರನೇ ಬಳಕೆದಾರರು ಹೇಳಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಪ್ರವಾಹದಿಂದ ಯಮುನಾ ನದಿ ಅಪಾಯದ ಮಟ್ಟಕ್ಕಿಂತ ಮೇಲಿದ್ದು,ನದಿಯ ನೀರು ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿಯವರ ಸ್ಮಾರಕವನ್ನು ಪ್ರವೇಶಿಸಿದೆ. ಇಂದ್ರಪ್ರಸ್ಥದಲ್ಲಿರುವ ದೆಹಲಿ ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆಯ ನಿಯಂತ್ರಕ ಕಚೇರಿ ಹಾನಿಗೊಳಗಾದ ನಂತರ ಉಕ್ಕಿ ಹರಿಯುತ್ತಿರುವ ಯಮುನಾ ನದಿಯ ಪ್ರವಾಹವು ಮಧ್ಯ ದೆಹಲಿಯ ಸುಪ್ರೀಂ ಕೋರ್ಟ್‌ನ ಪ್ರವೇಶದ್ವಾರವನ್ನು ತಲುಪಿದೆ. ರಾಷ್ಟ್ರ ರಾಜಧಾನಿಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಸುಮಾರು ಹದಿನಾರು ತಂಡಗಳನ್ನು ನಿಯೋಜಿಸಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತದ ಬೀಡಿಗೆ ಫಿದಾ ಆದ ರಷ್ಯನ್ನರು, ಒಂದು ಪ್ಯಾಕೆಟ್‌ ಇಷ್ಟು ದುಬಾರಿನಾ?
ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ