
ಉಳ್ಳಾಲ (ದ.ಕ) (ಸೆ.8): ಕಿತ್ತಳೆ ಹಣ್ಣು ಮಾರಿ ಸರ್ಕಾರಿ ಶಾಲೆ ಕಟ್ಟಿದ ಅಕ್ಷರ ಸಂತ, ಪದ್ಮಶ್ರೀ ಪುರಸ್ಕೃತ, ‘ಕನ್ನಡಪ್ರಭ’ ವರ್ಷದ ವ್ಯಕ್ತಿ ಪ್ರಶಸ್ತಿ ಪುರಸ್ಕೃತ, ಹರೇಕಳ ಹಾಜಬ್ಬ ಅವರಿಗೆ ಮತಪಟ್ಟಿ ವಿಶೇಷ ಪರಿಷ್ಕರಣೆಯು (SIR) ಸಲುವಾಗಿ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.
2002ರ ಮತಪಟ್ಟಿ ಪರಿಷ್ಕರಣೆ ವೇಳೆ ಪಟ್ಟಿಯಲ್ಲಿ ಕೇವಲ ‘ಹಾಜಬ್ಬ’ ಎಂದು ನಮೂದಾಗಿತ್ತು. ಆದರೆ ಕಾಲಕ್ರಮೇಣ ಆಧಾರ್ ಕಾರ್ಡ್, ಪಡಿತರ ಚೀಟಿ, ಪಾಸ್ಪೋರ್ಟ್, ಮತದಾರರ ಗುರುತಿನ ಚೀಟಿಯಲ್ಲಿಲ್ಲಿ ‘ಹರೇಕಳ ಹಾಜಬ್ಬ’ ಎಂದು ಸೇರಿಸಲಾಗಿದೆ. ಹೀಗಾಗಿ 2002 ಮತ್ತು 2026ರಲ್ಲಿ ಹೆಸರು ಬದಲಾವಣೆಯಾಗಿದೆ ಎಂದು ಚುನಾವಣಾ ಆಯೋಗ ನೋಟಿಸ್ ಕೊಟ್ಟಿದೆ. ಬಳಿಕ ಅಧಿಕಾರಿಗಳು ವಾಪಸ್ ಪಡೆದಿದ್ದಾರೆ.
ಉಳ್ಳಾಲ ತಾಲೂಕು ಹರೇಕಳ ನ್ಯೂಪಡ್ಬು ಎಂಬಲ್ಲಿ ವಾಸವಿರುವ ಹಾಜಬ್ಬರು ವಾಸವಿದ್ದು, ಮೊದಲಿಗೆ ಸೆ.11ರಂದು ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಪಂಚಾಯ್ತಿಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಬಳಿಕ ಅಧಿಕಾರಿಗಳೇ ಹಾಜಬ್ಬರ ನಿವಾಸಕ್ಕೆ ಆಗಮಿಸಿ, ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.
‘ಕನ್ನಡಪ್ರಭ’ ಪತ್ರಿಕೆಯ ‘ವರ್ಷದ ವ್ಯಕ್ತಿ’ ಗೌರವ ದೊರೆತ ಬಳಿಕ ನನ್ನ ಹೆಸರು ‘ಹರೇಕಳ ಹಾಜಬ್ಬ’ ಎಂದು ಹೆಚ್ಚು ಪರಿಚಿತವಾಯಿತು. ಅದಕ್ಕೂ ಮೊದಲು ನಾನು ‘ಹಾಜಬ್ಬ’ ಎಂದೇ ಪರಿಚಿತನಾಗಿದ್ದೆ. ಬಳಿಕ ‘ಹರೇಕಳ ಹಾಜಬ್ಬ’ ಎಂಬ ಹೆಸರು ಜಗತ್ತಿನಾದ್ಯಂತ ಪರಿಚಯವಾಯಿತು. ಅಂತಹ ಹೆಸರಿನ ವಿಚಾರದಲ್ಲೇ ಇದೀಗ ಸಮಸ್ಯೆ ಎದುರಾಗಿದೆ.
- ಹರೇಕಳ ಹಾಜಬ್ಬ