Karnataka Politics : ಕನಕಗಿರಿ ಕದನಕ್ಕೆ ಟಿಕೆಟ್‌ ಗೆಲ್ಲುವ ಕಲಿ ಯಾರು?

By Kannadaprabha NewsFirst Published Dec 2, 2022, 5:39 AM IST
Highlights

ವಿಧಾನಸಭಾ ಸಾರ್ವತ್ರಿಕ ಚುನಾವಣೆ ಐದು ತಿಂಗಳು ಬಾಕಿ ಇರುವಾಗಲೇ ಜಿಲ್ಲೆಯ ಏಕೈಕ ಮೀಸಲು ಕನಕಗಿರಿ ಕ್ಷೇತ್ರದಲ್ಲಿ ರಾಜಕೀಯ ಕಣ ದಿನೇ ದಿನೇ ರಂಗೇರಿದೆ.

ಎ.ಜಿ. ಕಾರಟಗಿ/ ಎಂ. ಪ್ರಹ್ಲಾದ

  ಕಾರಟಗಿ/ಕನಕಗಿರಿ (ಡಿ.02) :  ವಿಧಾನಸಭಾ ಸಾರ್ವತ್ರಿಕ ಚುನಾವಣೆ ಐದು ತಿಂಗಳು ಬಾಕಿ ಇರುವಾಗಲೇ ಜಿಲ್ಲೆಯ ಏಕೈಕ ಮೀಸಲು ಕನಕಗಿರಿ ಕ್ಷೇತ್ರದಲ್ಲಿ ರಾಜಕೀಯ ಕಣ ದಿನೇ ದಿನೇ ರಂಗೇರಿದೆ.

ಸಂಸದ ಸಂಗಣ್ಣ ಕರಡಿ, ಮಾಜಿ ಸಚಿವ ನಾಗಪ್ಪ ಸಾಲೋಣಿ ಸಹ ಹಾಲಿ ಶಾಸಕ ಬಸವರಾಜ ದಢೇಸೂಗೂರು ಅವರಿಗೆ ಬಿಜೆಪಿ ಟಿಕೆಟ್‌ ನೀಡುವುದು ಖಚಿತ ಎನ್ನುವುದನ್ನು ಇತ್ತೀಚೆಗೆ ಬಹಿರಂಗಗೊಳಿಸಿದ್ದಾರೆ.

ಈ ಬೆಳವಣಿಗೆಗಳ ಮಧ್ಯೆಯಿಂದ (BJP)  ನಾ ಮುಂದು ತಾ ಮುಂದು ಎನ್ನುವಂತೆ ಅನೇಕ ಆಕಾಂಕ್ಷಿಗಳು ಕ್ಷೇತ್ರಕ್ಕೆ ಲಗ್ಗೆ ಇಡುತ್ತಲೇ ಇದ್ದಾರೆ. ಜಿ. ಗಾಯತ್ರಿ ತಿಮ್ಮಾರೆಡ್ಡಿಗೌಡ ಗಿಲ್ಲೇಸೂಗೂರು, ಪಿ.ವಿ. ರಾಜಗೋಪಾಲ, ಈಶಪ್ಪ ಹಿರೇಮನಿ, ಡಿ.ಎಂ. ಧರ್ಮಣ್ಣ, ಜೆ. ಮೀಥಲೇಶ್ವರ, ಪುಷ್ಪಾಂಜಲಿ ಗುನ್ನಾಳ, ಅಮರೇಶ ರೈತನಗರ, ಸಂದೀಪಕುಮಾರ ಗಂಗಾವತಿ ಎಂಬವರು ಆಕಾಂಕ್ಷಿಗಳಾಗಿದ್ದಾರೆ.

ಹಾಲಿ ಶಾಸಕ (MLA)  ದಢೇಸೂಗೂರು ಅವರ ಅಭಿವೃದ್ಧಿ ಕಾರ್ಯಗಳಿಗಿಂತ ಅನ್ಯ ವಿಷಯಗಳಿಗೆ ಹೆಚ್ಚು ಪ್ರಚಾರದಲ್ಲಿದ್ದಾರೆ. ಓರ್ವ ಮೇಡಂ ಕ್ಷೇತ್ರದಲ್ಲಷ್ಟೇ ಅಲ್ಲ ರಾಜಧಾನಿ ಬೆಂಗಳೂರು ವರೆಗೆ ಹೋಗಿ ಶಾಸಕರ ಮಾನ ಹರಾಜು ಹಾಕಿಬಂದರು. ಪಿಎಸ್‌ಐ ಹಗರಣ ಸುತ್ತಿಕೊಂಡಿತ್ತು. ಇಂಥ ಅವಘಡಗಳು ಮಾಧ್ಯಮಗಳಿಗೆ ಮತ್ತು ಕಳೆದ ಬಾರಿ ಇವರ ವಿರುದ್ಧ ಪರಾಭವಗೊಂಡಿದ್ದ ಮಾಜಿ ಸಚಿವ ಶಿವರಾಜ ತಂಗಡಗಿ ಅವರ ಟೀಕೆಗೆ ದೊಡ್ಡ ಆಹಾರವಾಗಿದ್ದವು.

ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸಿದಲ್ಲಿ ಇನ್ನುಳಿದ ಆಕಾಂಕ್ಷಿಗಳ ಹೆಸರು ಮುಂಚೂಣಿಗೆ ಬರುವ ಸಾಧ್ಯತೆ ಇದೆ.

ಸಿದ್ದು-ಖರ್ಗೆ ಆಪ್ತರು:

2008 ಹಾಗೂ 2013ರಲ್ಲಿ ಸತತ ಎರಡು ಬಾರಿ ಗೆಲುವು ಸಾಧಿಸಿದ ಶಿವರಾಜ ತಂಗಡಗಿ ಕಳೆದ ಬಾರಿ ಪರಾಭವಗೊಂಡಿದ್ದರೂ ಈಗ ಟಿಕೆಟ್‌ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಮುಕುಂದರಾವ್‌ ಭವಾನಿಮಠ ಸಹ ಯಿಂದ ಅರ್ಜಿ ಸಲ್ಲಿಸಿರುವುದು ವಿಶೇಷ. ತಂಗಡಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರೆ, ಭವಾನಿಮಠ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರು. ಹಾಗಾಗಿ ಕಾಂಗ್ರೆಸ್‌ ಟಿಕೆಟ್‌ ಕುತೂಹಲ ಕೆರಳಿಸಿದೆ.

ಈ ಆಪ್ತತೆಯ ಕಾರಣದಿಂದ ಇತ್ತೀಚೆಗೆ ಸಿದ್ದರಾಮಯ್ಯ ಅವರು ಈ ಬಾರಿ ತಂಗಡಗಿ ಅವರನ್ನು ಗೆಲ್ಲಿಸಿ ಎಂದು ಜನತೆಯಲ್ಲಿ ಮನವಿ ಮಾಡಿದ್ದಾರೆ. ಈ ನಡೆಯನ್ನು ಪ್ರಶ್ನಿಸಿ ಭವಾನಿಮಠ ಸಿದ್ದರಾಮಯ್ಯ ವಿರುದ್ಧ ಎಐಸಿಸಿಗೆ ದೂರು ನೀಡಿದ್ದಾರೆ. ಅಚ್ಚರಿಯೆಂದರೆ ತಂಗಡಗಿ-ಭವಾನಿಮಠ ಆಪ್ತ ಸ್ನೇಹಿತರು.

ತಂಗಡಗಿ ಸೋಲುಂಡರೂ ಮನೆಯಲ್ಲಿ ಕೂಡ್ರದೇ ಓರ್ವ ಕ್ರೀಯಾಶೀಲ ಪ್ರತಿಪಕ್ಷದ ನಾಯಕನಂತೆ ಜನತೆಯ ಮಧ್ಯೆ ನಿಂತಿದ್ದಾರೆ. ಆಡಳಿತರೂಢ ಶಾಸಕರ ಅನೇಕ ವೈಫಲ್ಯಗಳು ಸೇರಿದಂತೆ ಅನೇಕ ವಿಷಯಗಳ ಕುರಿತು ಜನತೆಯೊಂದಿಗೆ ವಿರೋಧ ಪಕ್ಷದ ನಾಯಕರು ದಿಟ್ಟಹೋರಾಟ ನಡೆಸುತ್ತಿದ್ದಾರೆ.

ಹಿಂದೆಯೂ ತಮ್ಮ ಅಧಿಕಾರವಧಿಯಲ್ಲಿ ಸಾಕಷ್ಟುಕೆಲಸ ಮಾಡಿದ್ದರು. ಆದರೆ ಸಣ್ಣ ನೀರಾವರಿ ಇಲಾಖೆಯಲ್ಲಿನ ಹಗರಣ, ಕೊಲೆ ಪ್ರಕರಣ ಇತ್ಯಾದಿಗಳು ಸುತ್ತಿಕೊಂಡು ಕಳೆದ ಬಾರಿ ಸೋಲುಂಡರು ಎನ್ನುವ ವಿಶ್ಲೇಷಣೆ ಇದೆ. ಅದು ಈಗ ಮತ್ತೆ ಮುನ್ನೆಲೆಗೆ ಬಂದರೆ ಭವಾನಿಮಠ ನಗೆ ಬೀರಲಿದ್ದಾರೆ ಎನ್ನುವ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೆಳಿ ಬರುತ್ತಿವೆ.

ಪ್ರಸ್ತುತ ಶಾಸಕ ಬಸವರಾಜ ದಢೇಸೂಗೂರು ಮತ್ತು ಮಾಜಿ ಸಚಿವ ಶಿವರಾಜ ತಂಗಡಗಿ ನಡುವೆ ನೇರ ಪೈಪೋಟಿ ಎನ್ನುವಂತೆ ತೋರುತ್ತಿದೆ. ಬಿಜೆಪಿ ಟಿಕೆಟ್‌ ಘೋಷಣೆ ಬಳಿಕ ಕ್ಷೇತ್ರದ ರಾಜಕೀಯ ಲೆಕ್ಕಾಚಾರದ ಅಂತಿಮ ಸತ್ಯ ಕಾಣಲಿದೆ.

ಆಟಕ್ಕುಂಟು..:

ಜೆಡಿಎಸ್‌ ಮತ್ತು ಆಮ್‌ ಆದ್ಮಿ ಪಾರ್ಟಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿವೆ. ಜೆಡಿಎಸ್‌ನ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಕ್ಷೇತ್ರಕ್ಕೆ ಅಶೋಕ ಉಮಲೂಟಿ ಅವರ ಹೆಸರನ್ನು ಘೋಷಿಸಲಾಗಿದೆ. ಆದರೂ ನಿರೀಕ್ಷಿತ ಜನಬೆಂಬಲ ಪಕ್ಷಕ್ಕೆ ದೊರೆಯುತ್ತಿಲ್ಲ.

ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ

1978ರಲ್ಲಿ ಕ್ಷೇತ್ರ ಪುನರ್‌ ವಿಂಗಡನೆಯಲ್ಲಿ ಕನಕಗಿರಿ ಕ್ಷೇತ್ರ ಉದಯವಾಯಿತು. 2008ರಲ್ಲಿ ಕ್ಷೇತ್ರ ಜಿಲ್ಲೆಯ ಏಕೈಕ ಎಸ್ಸಿ ಮೀಸಲು ಹೊಂದಿದೆ. 1978ರಿಂದ ಇಲ್ಲಿಯವರೆಗೆ ಕ್ಷೇತ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಆಡಳಿತ ನಡೆಸಿದ ಸ್ಥಳೀಯರೆಂದರೆ ಮಾಜಿ ಸಚಿವ ನಾಗಪ್ಪ ಸಾಲೋಣಿ ಒಬ್ಬರೆ. ಮಿಕ್ಕೆಲ್ಲರೂ ಕ್ಷೇತ್ರಕ್ಕೆ ವಲಸಿಗರೇ. ಕ್ಷೇತ್ರದಲ್ಲಿ ಇದುವರೆಗೆ ಅತಿ ಹೆಚ್ಚು ಬಾರಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಒಮ್ಮೆ ಜನತಾದಳ, ಎರಡು ಬಾರಿ ಬಿಜೆಪಿ ಗೆಲುವು ಸಾಧಿಸಿದೆ.

click me!