ನಾಲ್ಕು ಪಟ್ಟು ವಿದ್ಯುತ್ ಬಿಲ್‌ಗೆ ನೇಕಾರರು ಹೈರಾಣು..!

By Kannadaprabha NewsFirst Published Dec 5, 2023, 12:02 PM IST
Highlights

ವಿದ್ಯುತ್ ಬಿಲ್ ಏರಿಕೆ ತಡೆದು ವಾಸ್ತವಿಕತೆಯ ನಿಟ್ಟಿನಲ್ಲಿ ಪಾರದರ್ಶಕವಾಗಿ ಪರಿಶೀಲಿಸಿ ಮೊದಲಿದ್ದಂತೆ ವಿದ್ಯುತ್ ದರ ನಿಗದಿಪಡಿಸಬೇಕು. ಇಲ್ಲವಾದಲ್ಲಿ ಮತ್ತೆ ಹೋರಾಟದ ಅನಿವಾರ್ಯ:  ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ 

ಶಿವಾನಂದ ಪಿ.ಮಹಾಬಲಶೆಟ್ಟಿ

ರಬಕವಿ-ಬನಹಟ್ಟಿ(ಡಿ.05):  ಸಂಕಷ್ಟದಲ್ಲಿರುವ ರಾಜ್ಯದ ನೇಕಾರರಿಗೆ ಕಾಂಗ್ರೆಸ್ ಸರ್ಕಾರದ ಆದೇಶ ಒಂದು ಕಡೆ ಸಂತೋಷ ತಂದರೆ ಮತ್ತೊಂದೆಡೆ ಆಘಾತ ನೀಡಿದೆ. ಉಚಿತ್ ವಿದ್ಯುತ್ ಘೋಷಣೆಯಿಂದ ಸಂತಸದಲ್ಲಿದ್ದ ನೇಕಾರರು ನಾಲ್ಕು ಪಟ್ಟು ವಿದ್ಯುತ್ ಬಿಲ್ ನೋಡಿ ಶಾಕ್ ಆಗಿದ್ದಾರೆ.

ರಾಜ್ಯ ಸರ್ಕಾರ ಕಳೆದ ಬಜೆಟ್‌ನಲ್ಲಿ ರಾಜ್ಯದ ಎಲ್ಲ ನೇಕಾರರಿಗೆ ೧೦ ಎಚ್‌ಪಿವರೆಗಿನ ಮಗ್ಗಗಳಿಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿತ್ತು. ಈ ಆದೇಶ ಅಕ್ಟೋಬರ್ ತಿಂಗಳಲ್ಲಿ ಜಾರಿಯಾದ ಹಿನ್ನೆಲೆ ಹಿಂದಿನ ಏಪ್ರಿಲ್‌ನಿಂದ ಬಿಲ್ ಕಟ್ಟುವಂತೆ ಸರ್ಕಾರ ಆದೇಶ ನೀಡಿತ್ತು. ಈಗ ಕಳೆದ ಏಪ್ರಿಲ್‌ನಿಂದಲೇ ಉಚಿತ ವಿದ್ಯುತ್ ನೀಡಲು ಸರ್ಕಾರ ಮುಂದಾಗಿರುವುದು ನೇಕಾರರ ಮೊಗದಲ್ಲಿ ಸಂತಸ ಮೂಡಿದೆ. ಆದರೆ, ಇದರ ಬೆನ್ನಲ್ಲೆ ೧೦ ರಿಂದ ೨೦ಎಚ್‌ಪಿ ವರೆಗೆ ಸಂಪರ್ಕ ಹೊಂದಿರುವ ನೇಕಾರರಿಗೆ ವಿದ್ಯುತ್ ಶುಲ್ಕ ನಾಲ್ಕು ಪಟ್ಟು ವಿಧಿಸಿ ಶಾಕ್ ನೀಡಿದೆ. ಒಂದು ಕೈಯಿಂದ ಕೊಟ್ಟು, ಮತ್ತೊಂದು ಕೈಯಿಂದ ಕಸಿದುಕೊಳ್ಳುವ ಸರ್ಕಾರದ ಈ ಆದೇಶ ನೇಕಾರರಿಗೆ ಆಘಾತ ಮೂಡಿಸಿದೆ.

ಸೋಲಿನ ಹೊಣೆ ಯಾರು ಹೊರಬೇಕಿಲ್ಲ: ಸಚಿವ ಸತೀಶ ಜಾರಕಿಹೊಳಿ

ನಾಲ್ಕು ಪಟ್ಟು ದರ ಏರಿಕೆ:

೧೦ ರಿಂದ ೨೦ ಎಚ್‌ಪಿವರೆಗೆ ವಿದ್ಯುತ್ ಬಳಸುತ್ತಿರುವ ನೇಕಾರರಿಗೆ ನಾಲ್ಕು ಪಟ್ಟು ಶುಲ್ಕ ವಿಧಿಸುವ ಮೂಲಕ ಹೆಸ್ಕಾಂ ಶಾಕ್ ನೀಡಿದೆ. ಈ ಮೊದಲು ಪ್ರತಿ ಯುನಿಟ್‌ಗೆ ₹೧.೨೫ ದರ ಇತ್ತು. ಈಗ ಅದು ನಾಲ್ಕು ಪಟ್ಟು ಹೆಚ್ಚಳವಾಗಿದೆ. ಇದರಿಂದ 20 ಎಚ್‌ಪಿ ವರೆಗೆ ವಿದ್ಯುತ್ ಸಂಪರ್ಕ ಹೊಂದಿರುವ ನೇಕಾರರು ಸಂಕಷ್ಟ ಎದುರಾಗಿದ್ದು, ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

೫೦೦ ಯುನಿಟ್‌ಗಳ ನಂತರ ಬಳಸಿದ ಪ್ರತಿ ಯುನಿಟ್‌ಗೆ ಈ ಮೊದಲು ₹೧.೨೫ ಆಗುತ್ತಿತ್ತು. ಸದ್ಯ ₹೭ ರಿಂದ 8 ಕ್ಕೆ ಹೆಚ್ಚಳ ಮಾಡಲಾಗಿದೆ. ಸರ್ಕಾರದ ಈ ಕ್ರಮ ಕಿರುಬಾಯಿಗೆ ಹಿಡಿ ಕಡಬು ತುರುಕಿದಂತಾಗಿದ್ದು, ಜವಳಿ ಉದ್ಯಮದ ಉಳಿವಿಗೆ ಮಾರಕವಾಗಿದೆ. ಈ ಕುರಿತು ಬಿಲ್ ಪರಿಷ್ಕರಣೆಯಾಗಿ ಈ ಮೊದಲಿನಂತೆ ಎಲ್ಲ ಯುನಿಟ್‌ಗೂ ₹೧.೨೫ ದಂತೆ ಶುಲ್ಕ ವಿಧಿಸಬೇಕೆಂಬುದು ನೇಕಾರರ ಒಕ್ಕೊರಲಿನ ಒತ್ತಾಯವಾಗಿದೆ.

ಸರ್ಕಾರ ಜವಳಿ ಉದ್ಯಮದ ಉಳಿವಿಗೆ ಮತ್ತು ನೇಕಾರರ ಅಭಿವೃದ್ಧಿಗೆ ಮುಂದಾಗಬೇಕು. ಆದರೆ, ಈ ರೀತಿ ಅವೈಜ್ಞಾನಿಕ ಆದೇಶಗಳಿಂದ ನೇಕಾರರ ಅವನತಿಗೆ ಕಾರಣವಾಗಬಾರದು. ವಿದ್ಯುತ್ ಬಿಲ್ ಏರಿಕೆ ತಡೆದು ವಾಸ್ತವಿಕತೆಯ ನಿಟ್ಟಿನಲ್ಲಿ ಪಾರದರ್ಶಕವಾಗಿ ಪರಿಶೀಲಿಸಿ ಮೊದಲಿದ್ದಂತೆ ವಿದ್ಯುತ್ ದರ ನಿಗದಿಪಡಿಸಬೇಕು. ಇಲ್ಲವಾದಲ್ಲಿ ಮತ್ತೆ ಹೋರಾಟದ ಅನಿವಾರ್ಯ ಎಂದು ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಒತ್ತಾಯಿಸಿದ್ದಾರೆ.

ಸೋಲಿನ ಹೊಣೆ ಯಾರು ಹೊರಬೇಕಿಲ್ಲ: ಸಚಿವ ಸತೀಶ ಜಾರಕಿಹೊಳಿ

20 ಮಗ್ಗ ಇದ್ದ ಮಾಲೀಕರು ಹೈರಾಣ:

ಪ್ರತಿ ಒಂದು ಎಚ್‌ಪಿಗೆ ಒಂದು ಮಗ್ಗ ನಡೆಸಲು ಸಾಧ್ಯ. ಹೀಗಾಗಿ ೧೦ ಎಚ್‌ಪಿವರೆಗಿನ ೧೦ ಮಗ್ಗಗಳ ಮಾಲೀಕರಿಗೆ ಶೂನ್ಯ ವಿದ್ಯುತ್ ಬಿಲ್ ಆಗಿದ್ದರೆ, ೨೦ ಎಚ್‌ಪಿ ಹೊಂದಿರುವ ೨೦ ಮಗ್ಗಗಳ ಮಾಲೀಕರು ನಾಲ್ಕು ಪಟ್ಟು ಬಿಲ್ ಕಟ್ಟುವುದು ಅಸಾಧ್ಯವಾದುದು. ಸರ್ಕಾರದ ಈ ಆದೇಶ ಉದ್ಯಮದ ಮೇಲೆ ನೇರ ಗದಾಪ್ರಹಾರ ಮಾಡಿದಂತಾಗಿದೆ ಎಂಬುದು ನೇಕಾರರ ಆರೋಪವಾಗಿದೆ.

ಸರ್ಕಾರದ ಆದೇಶದ ವಿಳಂಬದಿಂದ ಬಾಕಿ ಇರುವ ನೇಕಾರರ ವಿದ್ಯುತ್ ಶುಲ್ಕವನ್ನು ಸರ್ಕಾರವೇ ಭರಿಸಬೇಕು. ೨೦ ಎಚ್‌ಪಿವರೆಗೆ ಬಿಲ್ ನಾಲ್ಕು ಪಟ್ಟು ಹೆಚ್ಚಿಸಿದ್ದು ಅವೈಜ್ಞಾನಿಕವಾಗಿದೆ. ಈ ಆದೇಶ ಪುನಃ ಪರಿಶೀಲಿಸಿ ಮೊದಲಿನಂತೆ ಪ್ರತಿ ಯುನಿಟ್‌ಗೆ ₹೧.೨೫ ದರ ವಿಧಿಸಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂದು ಕರ್ನಾಟಕ ರಾಜ್ಯ ನೇಕಾರರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ತಿಳಿಸಿದ್ದಾರೆ. 

click me!