ಭಟ್ಕಳದ ಮೊಹಮದ್ ದಾರುಣ ಸಾವು; ಸ್ಕೂಟರ್‌ನಲ್ಲಿ ಹೋಗುತ್ತಿದ್ದವನಿಗೆ ಡಿಕ್ಕಿ ಹೊಡೆದ ಲಾರಿ!

Published : Oct 16, 2025, 06:58 PM IST
Bhatkal Mohammad death

ಸಾರಾಂಶ

ಭಟ್ಕಳ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸಾಗುತ್ತಿದ್ದ ಮೊಹಮ್ಮದ್ ಎಂಬ ಯುವಕನಿಗೆ ಹಿಂಬದಿಯಿಂದ ಬಂದ ಕೇರಳ ಮೂಲದ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿ ರಭಸಕ್ಕೆ ಕೆಳಬಿದ್ದ ಮೊಹಮ್ಮದ್ ಮೇಲೆ ಲಾರಿ ಹರಿದಿದ್ದು, ಸ್ಥಳದಲ್ಲಿಯೇ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಪೊಲೀಸರಿಂದ ಚಾಲಕ ಬಂಧನ.

ಕಾರವಾರ/ಭಟ್ಕಳ (ಅ. 16): ರಾಷ್ಟ್ರೀಯ ಹೆದ್ದಾರಿ-66 ರ ಮೇಲೆ ನಿರ್ಲಕ್ಷ್ಯ ಮತ್ತು ಅತಿವೇಗದ ಚಾಲನೆಯಿಂದ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳದ ತೆಂಗಿನಗುಂಡಿ ಕ್ರಾಸ್ ಬಳಿ ನಡೆದಿದೆ. ಈ ಘಟನೆ ಭಟ್ಕಳ ತಾಲೂಕಿನಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಮೃತ ಯುವಕನನ್ನು ಭಟ್ಕಳದ ಪಿರದೋಸನಗರ ನಿವಾಸಿ, ಮಹ್ಮದ್ (18) ಎಂದು ಗುರುತಿಸಲಾಗಿದೆ. ಈತ ಅಲಿ ಪಬ್ಲಿಕ್ ಶಾಲೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯಾಗಿದ್ದನು. ತರುಣ ವಯಸ್ಸಿನಲ್ಲಿ ಮಹ್ಮದ್ ರಸ್ತೆ ಅಪಘಾತಕ್ಕೆ ಬಲಿಯಾಗಿರುವುದು ಕುಟುಂಬಸ್ಥರ ಹಾಗೂ ಶಾಲಾ ಸ್ನೇಹಿತರ ದುಃಖಕ್ಕೆ ಕಾರಣವಾಗಿದೆ.

ತೆಂಗಿನಗುಂಡಿ ಕ್ರಾಸ್ ಬಳಿ ಭೀಕರತೆ:

ಬುಧವಾರ (ಅ. 16) ತೆಂಗಿನಗುಂಡಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಈ ಅಪಘಾತ ಸಂಭವಿಸಿದೆ. ಕುಂದಾಪುರ ಕಡೆಯಿಂದ ಭಟ್ಕಳದತ್ತ ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಬರುತ್ತಿದ್ದ ಕೇರಳ ಮೂಲದ ಲಾರಿಯೊಂದು ರಸ್ತೆಯ ಮೇಲೆ ಮುಂದೆ ಸಾಗುತ್ತಿದ್ದ ಮಹ್ಮದ್ ಚಲಾಯಿಸುತ್ತಿದ್ದ ಸ್ಕೂಟರ್‌ಗೆ ಹಿಂದಿನಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಹ್ಮದ್ ಸ್ಕೂಟರ್ ಸಮೇತ ರಸ್ತೆಯ ಬದಿಗೆ ಬಿದ್ದಿದ್ದಾನೆ. ಈ ವೇಳೆ ಲಾರಿಯನ್ನು ನಿಯಂತ್ರಿಸಲು ವಿಫಲನಾದ ಚಾಲಕ, ಲಾರಿಯ ಹಿಂಬದಿಯ ಚಕ್ರವನ್ನು ಯುವಕನ ತಲೆಯ ಮೇಲೆಯೇ ಹತ್ತಿಸಿ ಮುಂದೆ ಸಾಗಿದ್ದಾನೆ.

ಅಪಘಾತದ ತೀವ್ರತೆಗೆ ಮಹ್ಮದ್‌ನ ತಲೆಗೆ ಗಂಭೀರ ಪೆಟ್ಟಾಗಿದ್ದು, ಸ್ಥಳದಲ್ಲೇ ಆತ ಸಾವನ್ನಪ್ಪಿದ್ದಾನೆ. ರಸ್ತೆಯ ಮೇಲೆ ರಕ್ತದ ಮಡುವಿನಲ್ಲಿ ಯುವಕನ ಮೃತದೇಹ ಬಿದ್ದಿದ್ದ ದೃಶ್ಯ ಸ್ಥಳೀಯರಲ್ಲಿ ಆಘಾತ ಮತ್ತು ಆಕ್ರೋಶ ಮೂಡಿಸಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆರೋಪಿ ಲಾರಿ ಚಾಲಕನ ಬಂಧನ:

ಘಟನೆ ನಡೆದ ಕೂಡಲೇ ಭಟ್ಕಳ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ನಿರ್ಲಕ್ಷ್ಯದಿಂದ ಅಪಘಾತಕ್ಕೆ ಕಾರಣನಾದ ಲಾರಿ ಚಾಲಕ, ಕೇರಳ ಮೂಲದ ಅಭಿಲಾಶ್ ಕುಮಾರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಅಪಘಾತಕ್ಕೆ ಕಾರಣವಾದ ಲಾರಿಯನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಮೃತ ಮಹ್ಮದ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. 

ಲಾರಿ ಚಾಲಕ ಅಭಿಲಾಶ್ ಕುಮಾರ ವಿರುದ್ಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಸ್ತೆ ಸುರಕ್ಷತಾ ನಿಯಮಗಳ ಉಲ್ಲಂಘನೆ ಮತ್ತು ಅತಿವೇಗದ ಚಾಲನೆಯಿಂದ ಅಮಾಯಕ ಯುವಕನ ಜೀವ ಬಲಿಯಾಗಿದೆ. ಹೆದ್ದಾರಿಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಗಮನ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ