ಟಿಪ್ಪು ಎಂದಿಗೂ ಧರ್ಮಾಂಧನಾಗಿಲ್ಲ; ಉರಿಗೌಡ, ನಂಜೇಗೌಡ ಪಾತ್ರಗಳಿಂದ ಇತಿಹಾಸ ತಿರುಚುವ ಯತ್ನ: ಚಂದ್ರಶೇಖರ್ ತಾಳ್ಯ

By Kannadaprabha NewsFirst Published Mar 12, 2023, 10:32 AM IST
Highlights

ನಾಡಿನ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯ ಅತ್ಯಂತ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದ್ದು ಉರಿಗೌಡ, ನಂಜೇಗೌಡ ಪಾತ್ರಗಳಿಂದ ಇತಿಹಾಸ ತಿರುಚುವ ಯತ್ನ ಮಾಡಲಾಗುತ್ತಿದೆ ಎಂದು ಕವಿ ಹಾಗೂ ವಿಮರ್ಶಕ ಚಂದ್ರಶೇಖರ ತಾಳ್ಯ ಅಭಿಪ್ರಾಯಪಟ್ಟರು.

ಚಿತ್ರದುರ್ಗ (ಮಾ.12) : ನಾಡಿನ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯ ಅತ್ಯಂತ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದ್ದು ಉರಿಗೌಡ, ನಂಜೇಗೌಡ ಪಾತ್ರಗಳಿಂದ ಇತಿಹಾಸ ತಿರುಚುವ ಯತ್ನ ಮಾಡಲಾಗುತ್ತಿದೆ ಎಂದು ಕವಿ ಹಾಗೂ ವಿಮರ್ಶಕ ಚಂದ್ರಶೇಖರ ತಾಳ್ಯ ಅಭಿಪ್ರಾಯಪಟ್ಟರು.

ಬಂಡಾಯ ಸಾಹಿತ್ಯ ಸಂಘಟನೆಗೆ 44 ವರ್ಷ ಸಂದ ಹಿನ್ನೆಲೆಯಲ್ಲಿ ಪತ್ರಕರ್ತರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಮಕಾಲೀನ ಸಾಹಿತ್ಯ ಮತ್ತು ಸಾಂಸ್ಕೃತಿಕ ತಲ್ಲಣಗಳು ಕುರಿತ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಅವರು ಟಿಪ್ಪುವಿನ ವ್ಯಕ್ತಿತ್ವ ಹಾಗೂ ರಾಜನಾಗಿ ಆತ ಇಟ್ಟು ನಡೆಗಳ ಈಗ ಕೆಟ್ಟದಾಗಿ ವಿಮರ್ಶೆ ಮಾಡುವ ಪರಿಪಾಟಲು ಆರಂಭವಾಗಿದೆ. ಟಿಪ್ಪು(Tippu sultana) ಎಂದಿಗೂ ಧರ್ಮಾಂಧನಾಗಿರಲಿಲ್ಲ. ಒಬ್ಬ ರಾಜನನ್ನು ಕಂಡರೆ ಮತ್ತೊಬ್ಬ ರಾಜನಿಗೆ ಆಗುತ್ತಿರಲಿಲ್ಲವೆಂಬುದು ಆ ಕಾಲಘಟ್ಟದಲ್ಲಿ ರುಜುವಾತಾಗಿದೆ. ಸೋಮನಾಥ ದೇವಾಲಯವನ್ನು ಘಜ್ನಿ ಮಹಮ್ಮದ್‌ ಲೂಟಿ ಮಾಡಿದನೆಂಬುದರಲ್ಲಿ ಸತ್ಯಾಂಶವಿಲ್ಲ. ರಾಜ ಚೋಳ ಲೂಟಿ ಮಾಡಿದ್ದ. ಅಂದು ವ್ಯಾಪಕವಾಗಿದ್ದ ಸಾಮ್ರಾಜ್ಯ ವಿಸ್ತರಣೆಯ ತುಡಿತದಿಂದ ಇಂತಹ ಅವಘಡಗಳು ಸಂಭವಿಸಿರಬಹುದು. ಟಿಪ್ಪುವಿನಿಂದಲೂ ಇಂತಹ ಕೆಲ ಕೆಲಸಗಳು ನಡೆದಿರಬಹುದು. ಆದರೆ ಟಿಪ್ಪು ಒಳ್ಳೆಯ ಆಡಳಿತ ಕೊಡಲಿಲ್ಲ, ಸ್ವಾತಂತ್ರ್ಯ ಹೋರಾಟ ಮಾಡಲಿಲ್ಲವೆಂದು ಹೇಳುತ್ತಾ ಉರಿಗೌಡ, ನಂಜೇಗೌಡ ಪಾತ್ರಗಳನ್ನು ಸೃಷ್ಟಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಯಾವ ಧರ್ಮದ ತಿರುಳು ಕೊಲ್ಲು ಎಂದು ಹೇಳಿಲ್ಲ. ವಚನಕಾರರ ಕಾಲದಲ್ಲಿಯೂ ದಯವೇ ಧರ್ಮದ ಮೂಲವೆಂಬ ನಿಜಾಚರಣೆಗಳು ಇದ್ದವು. ಧರ್ಮದ ಗ್ರಹಿಕೆಯಲ್ಲಿ ಲೋಪ ಗಳು ಆಗಬಾರದು. ಭಾರತೀಯ ತತ್ವಶಾಸ್ತ್ರದಲ್ಲಿ ಧರ್ಮ, ಜಾತಿಯ ಉಲ್ಲೇಖವಿಲ್ಲ. ದೇವರನ್ನೂ ಹೊರಗಿಟ್ಟು ಚಿಂತನೆಗಳನ್ನು ನಡೆಸಲಾಗಿದೆ. ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕು, ಯಾವುದನ್ನು ಗೌಣವಾಗಿಸಬೇಕೆಂಬ ಆಲೋಚನೆಗಳ ಕ್ರಮದಲ್ಲಿ ವ್ಯತ್ಯಾಸಗಳಾಗಿವೆ ಎಂದರು.

ಟಿಪ್ಪು ಸುಲ್ತಾನ್ ನೈಜ ಇತಿಹಾಸ ತಿರುಚಿದ ಗಿರೀಶ್‌ ಕಾರ್ನಾಡ್‌ : ಅಡ್ಡಂಡ ಕಾರ್ಯಪ್ಪ ಆರೋಪ

ಬಂಡಾಯ ಸಾಹಿತ್ಯ ಸಂಘಟನೆ ಹುಟ್ಟಿದಂದಿನಿಂದಲೂ ದಲಿತ, ರೈತ ಚಳವಳಿಗಳಿಗೆ ದನಿಯಾಗಿದೆ. ಬದಲಾದ ಸನ್ನಿವೇಶ ಅನೇಕ ಬಿಕ್ಕಟ್ಟು ಎದುರಿಸುತ್ತಿದೆ. ಸಂಕಟಗಳ ನಡುವೆಯೇ ಮಲಗಿರುವವರ ಎದ್ದೇಳಿಸುವ ಕೆಲಸ ಆಗಬೇಕು. ನಿದ್ರಾವಸ್ಥೆಯಿಂದ ಹೊರಬರಬೇಕು.ರೋಹಿತ… ಚಕ್ರತೀರ್ಥ ಸಮಿತಿ ಪಠ್ಯ ತಿರುಚುವಿಕೆಗೆ ಮುಂದಾದಾಗ ಎಲ್ಲರೂ ವಿರೋಧಿಸಿದ್ದೆವು. ಪಠ್ಯ ಪರಿಷ್ಕರಣೆ ದೊಡ್ಡ ವಿಚಾರ ಅಲ್ಲ. ಅನೇಕ ಸಲ ಆಗಿದೆ. ಯಾವ ಮಾನದಂಡ ಅನುಸರಿಸುತ್ತಿದ್ದೇವೆ ಎಂಬುದು ಮುಖ್ಯವಾಗುತ್ತದೆ.ಬರಗೂರು ರಾಮಚಂದ್ರಪ್ಪ ಕೂಡಾ ಮಕ್ಕಳು, ಸಮಾಜವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪರಿಷ್ಕರಣೆ ಮಾಡಿದ್ದರು.

ಇತಿಹಾಸ ತಿರುಚುವ ಪ್ರಯತ್ನಗಳು ಒಂದೆಡೆ ನಡೆದರೆ ಮತ್ತೊಂದೆಡೆ ಆಹಾರ ರಾಜಕಾರಣವೂ ಕೆಲ ಕಾಲ ವಿಜೃಂಭಿಸಿತು. ಯಾರು, ಯಾವ ಆಹಾರ ತಿನ್ನಬೇಕೆಂಬುದ ನಿಯಂತ್ರಿಸುವ ಹುನ್ನಾರಗಳು ನಡೆದವು. ಇಂತಹ ತಲ್ಲಣಗಳಿಗೆ ಕಾಲಘಟ್ಟವೇ ಉತ್ತರಿಸಿದೆ. ನೀನು ತಿನ್ನುವ ಆಹಾರ ಹೇಗಿರಬೇಕೆಂಬುದ ಯಾರೋ ನಿರ್ಧರಿಸುತ್ತಾರೆಂದರೆ ಸರ್ವ ಸಮ್ಮತವೇ ಎಂದು ತಾಳ್ಯ ಪ್ರಶ್ನಿಸಿದರು.

ವಿಮರ್ಶಕ ಡಾ.ಲೋಕೇಶ ಅಗಸನಕಟ್ಟೆಮಾತನಾಡಿ ಸಾಂಸ್ಕೃತಿಕ ಯಜಮಾನಿಕೆ ಎಲ್ಲಕಾಲದಲ್ಲಿಯೂ ಇದೆ. ಪ್ರಭುತ್ವ ಹೇಳುವುದೆಲ್ಲ ಸತ್ಯ ಎಂಬಷ್ಟರ ಮಟ್ಟಿಗೆ ಕಾಲಗಳು ಬದಲಾವಣೆ ಆಗಿದ್ದು ಇತರರ ಅಭಿಪ್ರಾಯಗಳ ಪರಿಶೀಲಿಸುವ ಇಲ್ಲವೇ ಸ್ವೀಕರಿಸುವ ಸಹನೆಗಳು ಕಾಣಿಸುತ್ತಿಲ್ಲವೆಂದು ವಿಷಾದಿಸಿದರು.

ಪಂಪ ಪ್ರಶಸ್ತಿಗೆ ಈ ಬಾರಿ ಆಯ್ಕೆ ಮಾಡಲಾದ ಹೆಸರುಗಳ ಕೇಳಿದರೆ ಅಚ್ಚರಿ ಎನಿಸುತ್ತದೆ. ಸಾಹಿತ್ಯವಲಯದಲ್ಲಿ ಹೆಚ್ಚು ಸುಳಿದಾಡ , ಬಹಳಷ್ಟುಜನ ಹೆಸರು ಕೇಳದ

ಬಾಬು ಕೃಷ್ಣಮೂರ್ತಿ, ಎಸ….ಆರ್‌ .ರಾಮಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ. ಪಂಪನ ಸಾಹಿತ್ಯದ ಬಗ್ಗೆ ಬಹಳಷ್ಟುಅಧ್ಯಯನ ಮಾಡಿ ಇಂಗ್ಲೀಷ್‌ ಕೊಂಡೊಯ್ಯುವ ಕೆಲಸ ಮಾಡಿದ್ದ ವಿವೇಕ ರೈ ಅಂತವರನ್ನು ಪ್ರಶಸ್ತಿಯಿಂದ ಕಡೆಗಣಿಸಲಾಯಿತೆಂದು ಲೋಕೇಶ ಅಗಸನಕಟ್ಟೆಹೇಳಿದರು.

ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಡಾಯ ಸಾಹಿತ್ಯ ಸಂಘಟನೆ ಜಿಲ್ಲಾ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ದಿಲ… ಶಾದ್‌ ಉನ್ನೀಸಾ, ರೈತ ಸಂಘದ ತಾಲೂಕು ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ರೈತ ಸಂಘದ ರಾಜ್ಯಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ ಮಾತನಾಡಿದರು.

ಗೌನಹಳ್ಳಿ ಗೋವಿಂದಪ್ಪ ನಿರೂಪಿಸಿದರು. ಎಂ.ಎನ್‌.ಅಹೋಪಲಪತಿ ಸ್ವಾಗತಿಸಿದರು.

ನಿವೃತ್ತ ಪ್ರಾಚಾರ್ಯರುಗಳಾದ ಜೆ.ಯಾದವರೆಡ್ಡಿ, ಸಂಗೇನಹಳ್ಳಿ ಅಶೋಕ್‌ ಕುಮಾರ್‌, ಶಿವಲಿಂಗಪ್ಪ, ಪೊ›.ಲಿಂಗಪ್ಪ, ಆರ್ಥಿಕ ಚಿಂತಕ ಡಾ.ಜಿ.ಎನ್‌.ಮಲ್ಲಿಕಾರ್ಜುನಪ್ಪ, ಜಿ.ಎಸ್‌.ಉಜ್ಜಿನಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಡಿ.ಗೋಪಾಲಸ್ವಾಮಿ ನಾಯಕ ಇದ್ದರು.

Addanda Cariappa: ಟಿಪ್ಪು ಸುಲ್ತಾನನ ಕ್ರೌರ್ಯ ಹೇಳಿದರೆ ಅದು ಕೋಮುವಾದವಾ?: ಅಡ್ಡಂಡ ಕಾರ್ಯಪ್ಪ

ಸೂಕ್ತ ಕಾಲಘಟ್ಟದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಜನ್ಮ ತಾಳಿತು. ಲೇಖಕನು ಸಾಮಾಜಿಕ ಜವಾಬ್ದಾರಿ ಹೊರಬೇಕೆಂಬ ಗಟ್ಟಿನಿಲುವುಗಳ ಸಂಘಟನೆ ಪ್ರತಿಪಾದಿಸಿತು. ಲೇಖಕ, ಸಾಹಿತಿಗಳಿಗೆ ಎಲ್ಲ ಕಾಲಕ್ಕೂ ಸವಾಲುಗಳಿದ್ದವು. ಎಲ್ಲ ಸಮುದಾಯಗಳನ್ನು ಒಟ್ಟಿಗೆ ಸೇರಿಸಬೇಕು, ಸಮಾನವಾಗಿ ಕಾಣಬೇಕು ಎಂಬ ಆಶಯ ಬಂಡಾಯ ಸಾಹಿತ್ಯ ಸಂಘಟನೆಗೆ ಇತ್ತು.

- ಚಂದ್ರಶೇಖರ ತಾಳ್ಯ, ಕವಿ, ವಿಮರ್ಶಕ

click me!