ಮಂಗಳೂರಲ್ಲಿ ಬಾಂಬ್ ಪತ್ತೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ | ತಪ್ಪಿತಸ್ಥರನ್ನು ಬಂಧಿಸಿ|ಕಾಂಗ್ರೆಸ್ ಪಕ್ಷ ಸತ್ತು ಹೋಗಿದ್ರಿಂದ ಸಿದ್ದರಾಮಯ್ಯಗೆ ಎಲ್ಲವೂ ಸತ್ತಂತೆ ಕಾಣ್ತಿದೆ|
ಹುಬ್ಬಳ್ಳಿ[ಜ.22]: ಈಚೆಗೆ ಮಂಗಳೂರು ಗಲಭೆಯಲ್ಲಿ ಪಾಲ್ಗೊಂಡಿದ್ದವರ ಪ್ರೇರಣೆಯಿಂದಲೇ ಅಲ್ಲಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವ ಶಂಕೆಯಿದ್ದು, ಈ ಬಗ್ಗೆ ಹೆಚ್ಚಿನ ತನಿಖೆಯಾಗಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಮಂಗಳವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿರುವುದು ಆತಂಕಕಾರಿ ವಿಷಯ. ಈ ಕುರಿತು ಸಮಗ್ರ ತನಿಖೆ ನಡೆಯುತ್ತಿದೆ. ಮಂಗಳೂರು ಗಲಭೆಯಲ್ಲಿ ಪಾಲ್ಗೊಂಡವರ ಪ್ರೇರಣೆಯಿಂದಲೇ ಈ ಘಟನೆ ಆಗಿರುವ ಸಾಧ್ಯತೆಯಿದೆ. ಸಮಗ್ರ ತನಿಖೆಯಾಗಿ ತಪ್ಪಿತಸ್ಥರನ್ನ ಬಂಧಿಸಬೇಕು. ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಮಂಗಳೂರು ಏರ್ಪೋರ್ಟ್ನಲ್ಲಿ ಸಜೀವ ಬಾಂಬ್ ಪತ್ತೆ!
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಪೊಲೀಸರ ಬಗ್ಗೆ ಅನುಮಾನ ವ್ಯಕ್ತಪಡಿಸುವ ರೀತಿಯ ಹೇಳಿಕೆ ನೀಡಿರುವುದು, ಯಾರೋ ಪೊಲೀಸರೇ ಇಟ್ಟಿರಬೇಕು ಎಂದು ಆರೋಪ ಮಾಡುವುದು ಸರಿಯಲ್ಲ. ಅವರ ಹೇಳಿಕೆ ಬೇಜವಾಬ್ದಾರಿತನದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದ ಜೋಶಿ, ಯಾರು ಬಾಂಬ್ ಇಟ್ಟಿದ್ದಾರೆ ಎಂದು ಕುಮಾರಸ್ವಾಮಿ ಅವರಿಗೆ ಗೊತ್ತಿದ್ದರೆ ಕೂಡಲೇ ದೂರು ದಾಖಲಿಸಲಿ ಎಂದು ಆಗ್ರಹಿಸಿದರು.
ಮಂಗಳೂರಿನಲ್ಲಿ ಒಂದಲ್ಲ 3 ಕಡೆ ಬಾಂಬ್: ವಿಮಾನ ಸ್ಥಗಿತಗೊಳಿಸಿ ತಪಾಸಣೆ!
ಭಯೋತ್ಪಾದನೆ ವಿರುದ್ಧವಾಗಿ ಇಡೀ ಜಗತ್ತಿನಲ್ಲಿ ಪಾಕಿಸ್ತಾನವನ್ನು ಏಕಾಂಗಿ ಮಾಡಲು ನಾವು ಹೊರಟಿದ್ದೇವೆ. ಅದಕ್ಕಾಗಿ ಜಾಗತಿಕ ವೇದಿಕೆ ನಿರ್ಮಾಣವಾಗಿದೆ. ಕುಮಾರಸ್ವಾಮಿ ಅವರ ಈ ರೀತಿಯ ಹೇಳಿಕೆ ಪಾಕ್ಗೆ ಸಹಕಾರಿ ಆಗುತ್ತದೆ. ಇಂತಹ ಕುಕೃತ್ಯವನ್ನು ನಿಮ್ಮವರೇ ಮಾಡಿದ್ದಾರೆ ಅಂತಾ ಕುಮಾರಸ್ವಾಮಿ ಹೇಳಿದರೆ ಜಾಗತೀಕ ವೇದಿಕೆಗಳ ಮುಂದೆ ನಾವು ಏನು ಹೇಳೋಣ. ಘಟನೆಗೆ ಸಂಬಂಧಿಸಿ ಮುಂದಿನ ದಿನಗಳಲ್ಲಿ ಭಯೋತ್ಪಾದಕರೂ ಸಿಕ್ಕಿಬಿದ್ದರೂ ಪಾಕಿಸ್ತಾನ ಭಾರತದ ವಿಪಕ್ಷಗಳ ನಾಯಕರು ನೀಡಿದ ಹೇಳಿಕೆಯನ್ನು ದಾಳವಾಗಿ ಬಳಸುತ್ತದೆ. ಹೀಗಾಗಿ ಹೇಳಿಕೆ ನೀಡುವಾಗ ಜವಾಬ್ದಾರಿ ಇರಲಿ ಎಂದು ಹೇಳಿದರು. ಎಚ್ಡಿಕೆ ಈ ಹೇಳಿಕೆಗೆ ಕ್ಷಮೆಯಾಚಿಸಬೇಕು. ಇಲ್ಲದೇ ಹೋದರೆ ಅವರು ಪಾಕ್ ಪರವಾಗಿದ್ದಾರೆ ಎಂದು ತಿಳಿಯಬೇಕಾಗುತ್ತದೆ ಎಂದರು
ಕಾಂಗ್ರೆಸ್ ಪಕ್ಷ ಸತ್ತು ಹೋಗಿದ್ರಿಂದ ಸಿದ್ದರಾಮಯ್ಯಗೆ ಎಲ್ಲವೂ ಸತ್ತಂತೆ ಕಾಣ್ತಿದೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರವನ್ನು ‘ಡೆಡ್ ಸರ್ಕಾರ’ ಎಂದು ಕರೆದಿರುವುದಕ್ಕೆ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷ ಸತ್ತು ಹೋಗಿದ್ದರಿಂದ ಅವರಿಗೆ ಎಲ್ಲವೂ ಹಾಗೇ ಕಾಣುತ್ತಿದೆ. ಯಾರು ಸತ್ತು ಹೋಗಿರುತ್ತಾರೆಯೋ ಅವರಿಗೆ ಎಲ್ಲವೂ ಹಾಗೆಯೇ ಕಾಣುತ್ತದೆ ಎಂದರು. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಜಾರ್ಖಂಡ ಮತ್ತು ಇತರ ರಾಜ್ಯಗಳಲ್ಲಿ ಕಾಂಗ್ರೆಸ್ ಜ್ಯೂನಿಯರ್ ಪಕ್ಷಗಳೊ ಂದಿಗೆ ಸೇರಿ ಸರ್ಕಾರ ಮಾಡುತ್ತಿದೆ. ಅವರ ಪಕ್ಷ ಕೋಮಾಗೆ ಹೋಗಿದ್ದರಿಂದ ಎಲ್ಲ ಹಾಗೆಯೇ ಕಾಣುತ್ತಿದೆ ಎಂದು ಟೀಕಿಸಿದರು.ಹೋರಾಟಗಾರ ಎಸ್.ಆರ್. ಹಿರೇಮಠ ಮೇಲೆ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯ ಮದವರ ಪ್ರಶ್ನೆಗೆ ಯಾರೇ ಆಗಲಿ ಆ ರೀತಿಯ ದೈಹಿಕ ಹಲ್ಲೆ ಮಾಡಬಾರದು. ಕಾನೂ ನು ರೀತಿ ಏನಿದೆಯೋ ಅದನ್ನು ನೋಡಬೇಕು ಅದು ಬಿಟ್ಟು ಹಲ್ಲೆಗೆ ಮುಂದಾಗುವುದು ಸರಿಯಲ್ಲ ಎಂದರು.
ಅಗತ್ಯ ಭದ್ರತೆಗೆ ಸೂಚನೆ ಹುಬ್ಬಳ್ಳಿ ವಿಮಾನ ನಿಲ್ದಾಣದ ಭದ್ರತೆ ಕುರಿತಂತೆ ಪತ್ರಿಕೆಗಳಲ್ಲಿ ಬಂದಿದ್ದನ್ನು ಗಮನಿಸಿದ್ದೇವೆ. ಯಾವುದೆ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಭದ್ರತೆ ಬಗ್ಗೆ ಪುನರ್ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಈಗಾಗಲೇ ಸೂಚಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.