
ತುಮಕೂರು (ಏ.28): ಮದ್ಯಪಾನದ ವ್ಯಸನವು ಹೇಗೆ ರಕ್ತಸಂಬಂಧಗಳನ್ನೇ ಮರೆಸುತ್ತದೆ ಮತ್ತು ಸುಂದರ ಸಂಸಾರದಲ್ಲಿ ವಿಷವುಣ್ಣಿಸುತ್ತದೆ ಎಂಬುದಕ್ಕೆ ತುಮಕೂರು ಜಿಲ್ಲೆಯಲ್ಲಿ ನಡೆದ ಈ ಭೀಕರ ಘಟನೆಯೇ ಸಾಕ್ಷಿ. ಕೇವಲ ಕುಡಿತಕ್ಕೆ ಹಣ ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಅಣ್ಣನೊಬ್ಬ ತನ್ನ ಸ್ವಂತ ತಮ್ಮನನ್ನೇ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಧುಗಿರಿ ತಾಲೂಕಿನಲ್ಲಿ ವರದಿಯಾಗಿದೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ನಿಟ್ಟರಹಳ್ಳಿ ಗ್ರಾಮದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಗಂಗರಾಜು (36) ಕೊಲೆಯಾದ ದುರ್ದೈವಿ. ಅಣ್ಣ ನರಸಿಂಹಮೂರ್ತಿ ತನ್ನ ತಮ್ಮನನ್ನೇ ಬಲಿಪಡೆದ ಹಂತಕ ಅಣ್ಣ. ಕಳೆದ ಕೆಲವು ಕಾಲದಿಂದ ನರಸಿಂಹಮೂರ್ತಿ ಕುಡಿತದ ಚಟಕ್ಕೆ ಸಂಪೂರ್ಣವಾಗಿ ದಾಸನಾಗಿದ್ದನು ಎನ್ನಲಾಗಿದೆ.
ನಿನ್ನೆ ಸಂಜೆ ನರಸಿಂಹಮೂರ್ತಿ ಮದ್ಯ ಸೇವಿಸಲು ಹಣ ಬೇಕೆಂದು ತಮ್ಮ ಗಂಗರಾಜು ಬಳಿ ಕೇಳಿದ್ದಾನೆ. ಇದಕ್ಕೆ ಗಂಗರಾಜು ನಿರಾಕರಿಸಿದ್ದರಿಂದ ಇಬ್ಬರ ನಡುವೆ ಜೋರಾದ ಮಾತಿನ ಚಕಮಕಿ ಆರಂಭವಾಗಿದೆ. ಕುಡಿತದ ಅಮಲಿನಲ್ಲಿದ್ದ ನರಸಿಂಹಮೂರ್ತಿ, ತನಗೆ ಹಣ ಕೊಡದ ತಮ್ಮನ ಮೇಲೆ ತೀವ್ರ ಆಕ್ರೋಶಗೊಂಡು ಹಲ್ಲೆ ನಡೆಸಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿದಾಗ, ಗಂಗರಾಜನನ್ನು ಕೆಳಕ್ಕೆ ತಳ್ಳಿ ಆತನ ಎದೆಯ ಮೇಲೆ ಭಾರವಾದ ಕಲ್ಲನ್ನು ಎತ್ತಿಹಾಕಿದ್ದಾನೆ. ಕಲ್ಲಿನ ಏಟಿಗೆ ತೀವ್ರವಾಗಿ ಗಾಯಗೊಂಡ ಗಂಗರಾಜು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.
ತಮ್ಮನ ಕೊಲೆ ಕಂಡು ಆಘಾತಕ್ಕೊಳಗಾದ ಮತ್ತೊಬ್ಬ ಸಹೋದರ ಸುಬ್ರಹ್ಮಣ್ಯ ಅವರು ಕೂಡಲೇ ಕೊಡಗೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ನರಸಿಂಹಮೂರ್ತಿಯನ್ನು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅಶೋಕ್ ಕೆ.ವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಡಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಕುಡಿತದ ಚಟಕ್ಕೆ ಬಲಿಯಾದ ಅಣ್ಣನೊಬ್ಬ ತನ್ನ ರಕ್ತಸಂಬಂಧವನ್ನೇ ಬಲಿಪಡೆದಿರುವುದು ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ ಮತ್ತು ಬೇಸರ ಮೂಡಿಸಿದೆ.