ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ ಇಬ್ಬರು ನಾಯಕರ ಭೇಟಿ

By Kannadaprabha NewsFirst Published Nov 20, 2023, 9:07 AM IST
Highlights

  ರಾಜಕಾರಣದಲ್ಲಿ ಶಾಶ್ವತ ಶತ್ರುಗಳು ಇಲ್ಲ ಎನ್ನುವಂತೆ ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಕ್ಷೇತ್ರದ ಪ್ರಭಾವಿ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಅವರು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿರುವುದು ಕ್ಷೇತ್ರದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

  ಶಿಡ್ಲಘಟ್ಟ :  ರಾಜಕಾರಣದಲ್ಲಿ ಶಾಶ್ವತ ಶತ್ರುಗಳು ಇಲ್ಲ ಎನ್ನುವಂತೆ ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಕ್ಷೇತ್ರದ ಪ್ರಭಾವಿ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಅವರು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿರುವುದು ಕ್ಷೇತ್ರದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಸೀಕಲ್ ರಾಮಚಂದ್ರಗೌಡ ಅವರು ಬೆಂಗಳೂರಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಯವರನ್ನು ತಮ್ಮ ಬೀಗರಾದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರ ಸಮ್ಮುಖದಲ್ಲಿ ಭೇಟಿ ಮಾಡಿ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು ಎನ್ನಲಾಗಿದ್ದು, ಇದು ಕ್ಷೇತ್ರದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.

ಶಿಡ್ಲಘಟ್ಟದಲ್ಲಿ ಬಿಜೆಪಿ ಅಸ್ತಿತ್ವ

ಮುಂಬರುವ ಚುನಾವಣೆಯನ್ನು ಎದುರಿಸುವ ಹಾಗೂ ಉಭಯ ಪಕ್ಷಗಳ ಸಂಘಟನೆ, ಮೈತ್ರಿಯಿಂದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಆಗುವ ರಾಜಕೀಯ ವಿದ್ಯಮಾನಗಳ ಬಗ್ಗೆ ಅನೌಪಚಾರಿಕವಾಗಿ ಇಬ್ಬರ ನಡುವೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಅಲ್ಲದೇ ಕಾಂಗ್ರೆಸ್ ಭದ್ರಕೋಟೆ ಎಂದೆನಿಸಿದ್ದ ಶಿಡ್ಲಘಟ್ಟದಲ್ಲಿ ಜೆಡಿಎಸ್‌ ನ ಬಿ.ಎನ್.ರವಿಕುಮಾರ್ ಹಾಲಿ ಶಾಸಕರಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿದ್ದ ಸೀಕಲ್ ರಾಮಚಂದ್ರಗೌಡ ಅವರು ತೃತೀಯ ಸ್ಥಾನಗಳಿಸುವ ಮೂಲರ ಬಿಜೆಪಿಗೆ ಅಸ್ತಿತ್ವ ಕಲ್ಪಿಸಿ ಗಮನ ಸೆಳೆದಿದ್ದರು.

ಕ್ಷೇತ್ರದಲ್ಲಿ ನೆಲೆಯೂರಿದ ಸೀಕಲ್‌

ಸಾಮಾನ್ಯವಾಗಿ ಹೊರಗಿನಿಂದ ಬಂದ ಅಭ್ಯರ್ಥಿಗಳು ಸೋಲುಂಡರೆ ಚುನಾವಣೆ ನಂತರ ಗಂಟು ಮೂಟೆ ಕಟ್ಟಿಕೊಂಡು ಹೊರಡುತ್ತಾರೆನ್ನುವ ಮಾತುಗಳು ಸಾಮಾನ್ಯ. ಆದರೆ ರಾಮಚಂದ್ರಗೌಡರ ಚಟುವಟಿಕೆಗಳು ಶಿಡ್ಲಘಟ್ಟದಲ್ಲಿ ಗಟ್ಟಿಯಾಗಿ ಬೇರೂರುವಂತಿದೆ. ಅವರು ಶಿಡ್ಲಘಟ್ಟದಲ್ಲಿ ಟ್ರೈಲೈಫ್ ಹೆಲ್ತ್ ಕೇರ್ ಎಮರ್ಜೆನ್ಸಿ ಸೆಂಟರ್ ಅನ್ನು ಆರಂಭಿಸಲು ಸಿದ್ಧತೆ ನಡೆಸಿದ್ದಾರೆ.

ಸೀಕಲ್ ರಾಮಚಂದ್ರಗೌಡ ಅವರ ಸಂಬಂಧಿಯೂ ಆಗಿರುವ ಜೆಡಿಎಸ್ ನ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಅವರ ಪುತ್ರ ಹುಣಸೂರು ಕ್ಷೇತ್ರದ ಶಾಸಕ ಹರೀಶ್ ಅವರ ಮಗಳ ನಾಮಕರಣ ಮಹೋತ್ಸವ ಕಾರ್ಯಕ್ರಮವು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದ್ದು ಅಲ್ಲಿ ರಾಮಚಂದ್ರಗೌಡರು ಮತ್ತು ಕುಮಾರಸ್ವಾಮಿ ಭೇಟಿ ಹಾಗೂ ರಾಜಕೀಯ ವಿದ್ಯಮಾನಗಳ ಕುರಿತ ಮಾತುಕತೆ ಕ್ಷೇತ್ರದ ಜನತೆಯಲ್ಲಿ ಚರ್ಚೆಗೆ ಕಾರಣವಾಗಿದೆ.

click me!