Latest Videos

ಅಣ್ಣತಮ್ಮಂದಿರ ದೃಷ್ಟಿ ಈಗ ಚನ್ನಪಟ್ಟಣದ ಮೇಲೆ!

By Kannadaprabha NewsFirst Published Jun 16, 2024, 1:01 PM IST
Highlights

ಅಣ್ಣತಮ್ಮಂದಿರ ವಕ್ರದೃಷ್ಟಿ ಇದೀಗ ಚನ್ನಪಟ್ಟಣದ ಮೇಲೆ ಬಿದ್ದಿದೆ. ಇಲ್ಲಿನ ಜನ ಬುದ್ಧಿವಂತರಿದ್ದು, ಅವರನ್ನು ಹೆದರಿಸಿ, ಬೆದರಿಸಲು ಆಗುವುದಿಲ್ಲ. ಕ್ಷೇತ್ರದ ಜನ ಎಚ್ಚರಿಕೆಯಿಂದ ಇದ್ದು, ಅಣ್ಣತಮ್ಮಂದಿರಿಂದ ಕ್ಷೇತ್ರವನ್ನು ಉಳಿಸಿಕೊಳ್ಳಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಡಿ.ಕೆ.ಸಹೋದರರ ವಿರುದ್ಧ ವಾಗ್ಗಾಳಿ ಮಾಡಿದರು.

ಚನ್ನಪಟ್ಟಣ: ಅಣ್ಣತಮ್ಮಂದಿರ ವಕ್ರದೃಷ್ಟಿ ಇದೀಗ ಚನ್ನಪಟ್ಟಣದ ಮೇಲೆ ಬಿದ್ದಿದೆ. ಇಲ್ಲಿನ ಜನ ಬುದ್ಧಿವಂತರಿದ್ದು, ಅವರನ್ನು ಹೆದರಿಸಿ, ಬೆದರಿಸಲು ಆಗುವುದಿಲ್ಲ. ಕ್ಷೇತ್ರದ ಜನ ಎಚ್ಚರಿಕೆಯಿಂದ ಇದ್ದು, ಅಣ್ಣತಮ್ಮಂದಿರಿಂದ ಕ್ಷೇತ್ರವನ್ನು ಉಳಿಸಿಕೊಳ್ಳಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಡಿ.ಕೆ.ಸಹೋದರರ ವಿರುದ್ಧ ವಾಗ್ಗಾಳಿ ಮಾಡಿದರು.

ಕ್ಷೇತ್ರಕ್ಕೆಸಲ್ಲಿಸಿರುವ ಅವರು, ತಮ್ಮ ಶಾಸಕ ಸ್ಥಾನದ ಕೊನೆ ದಿನದಂದು ಕ್ಷೇತ್ರದಲ್ಲಿ 320 ಕೋಟಿ ರು. ಅಂದಾಜು ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಇಲ್ಲಿನ ಜನರಿಗೆ ಮಂಡ್ಯದ ಗುಣವಿದೆ. ಯಾವುದಕ್ಕೂ ಬಗ್ಗುವುದಿಲ್ಲ ಎಂದು ಗೊತ್ತಿದೆ. ಆದರೆ, ಕ್ಷೇತ್ರದ ಜನ ದುರಹಂಕಾರಿಗಳು, ದೌರ್ಜನ್ಯ ತೋರುವವರ ಬಗ್ಗೆ ಎಚ್ಚರಿಕೆಯಿಂದ ತೀರ್ಮಾನ ತೆಗೆದುಕೊಳ್ಳಿ ಎಂದು ಮನವಿ ಮಾಡಿದರು.

ಈ ಕ್ಷೇತ್ರದಲ್ಲಿ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಅವರು ದುರಂಕಾರದಲ್ಲಿದ್ದರು. ನಾವು ಬಹಳ ದುಡಿಮೆ ಮಾಡಿದ್ದೇವೆ, ಕೂಲಿ ಕೇಳಲು ಬಂದಿದ್ದೇವೆ ಎಂದು ಹೇಳುತ್ತಿದ್ದರು. ಅವರು ಯಾವ ಕೆಲಸ ಮಾಡಿದರೋ ಗೊತ್ತಿಲ್ಲ. ಆ ಕುರಿತು ಯಾವುದೇ ಸಾಕ್ಷಿಗುಡ್ಡೆ ಇಲ್ಲ. ಅವರು ಏನಾದರೂ ಕೆಲಸ ಮಾಡಿದ್ದರೆ ಅದು ಕನಕಪುರಕ್ಕೆ ಮಾತ್ರ. ರಾಮನಗರ, ಮಾಗಡಿ, ಚನ್ನಪಟ್ಟಣದಲ್ಲಿ ಅವರ ಸಾಕ್ಷಿಗುಡ್ಡೆ ಏನಿಲ್ಲ ಎಂದು ಕುಟಿಕಿದರು.

ಅನಿವಾರ್ಯವಾಗಿ ಮಂಡ್ಯದಿಂದ ಸ್ಪರ್ಧೆ:

ಅನಿವಾರ್ಯ ಕಾರಣಕ್ಕೆ ನಾನು ಮಂಡ್ಯಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಯಿತು. ನಮ್ಮ ಪಕ್ಷ ಹಾಗೂ ನನ್ನ ಜನರ ಹಿತಕಾಯಲು ರಾಷ್ಟ್ರರಾಜಕಾರಣಕ್ಕೆ ಹೋಗಬೇಕಾಯಿತು. ನನ್ನ ದೇಹ ಇಡೀ ದೇಶ ಸುತ್ತುತ್ತಿದ್ದರೂ ನನ್ನ ಹೃದಯ ಮಾತ್ರ ಇಲ್ಲೇ ಇರುತ್ತದೆ. ಹಾಸನ ನನಗೆ ಜನ್ಮ ನೀಡಿದ ಭೂಮಿಯಾದರೆ, ನನಗೆ ರಾಜಕೀಯವಾಗಿ ಜನ್ಮ ನೀಡಿದ್ದು ರಾಮನಗರ ಜಿಲ್ಲೆ. ಎರಡು ಬಾರಿ ಪ್ರಚಾರಕ್ಕೆ ಬಾರದಿದ್ದರೂ ಚನ್ನಪಟ್ಟಣದ ಜನ ನನ್ನನ್ನು ಗೆಲ್ಲಿಸಿದ್ದೀರಿ, ಇದೀಗ ನಾನು ಕ್ಷೇತ್ರ ಬಿಟ್ಟು ಹೋಗುತ್ತಿರುವುದು ನಿಮಗೆ ಬೇಸರವಾಗಿದೆ. ಕಾರ್ಯಕರ್ತರ ಹಿತಕ್ಕಾಗಿ ಈ ಸತ್ವಪರೀಕ್ಷೆಯನ್ನು ನಾನು ಎದುರಿಸಬೇಕಾಗಿದೆ. ನನ್ನ ಜನ ಇದನ್ನು ಅರ್ಥಮಾಡಿಕೊಳ್ಳಿ ಎಂದು ಹೇಳಿದರು.

ನನ್ನ ವೇಗಕ್ಕೆ ಅಧಿಕಾರಿಗಳು ಸ್ಪಂದಿಸಲಿಲ್ಲ:

ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಾಗೂ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ಮಂಜೂರು ಮಾಡಿಸಿದೆ. ಯಾವುದೇ ಸರ್ಕಾರವಿದ್ದರೂ ಅನುದಾನ ತರಲು ನನಗೆ ಸಮಸ್ಯೆಯಾಗಿರಲಿಲ್ಲ. ಆದರೆ, ಕೆಲ ಅಧಿಕಾರಿಗಳು ನನ್ನ ವೇಗಕ್ಕೆ ತಕ್ಕಂತೆ ಕೆಲಸ ಮಾಡಲಿಲ್ಲ. ಅಧಿಕಾರಿಗಳ ವರ್ತನೆ ಬಗ್ಗೆ ನನಗೆ ಇಂದಿಗೂ ಬೇಸರವಿದೆ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕೃಷಿ ಸಚಿವನಾಗಬೇಕೆಂದು ಬಯಸಿದ್ದ ಜನ:

ಲೋಕಸಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಜನ ನಾನು ಕೇಂದ್ರದಲ್ಲಿ ಕೃಷಿ ಸಚಿವನಾಗಬೇಕು ಎಂದು ಬಯಸಿದ್ದರು. ಹೋದಲ್ಲೆಲ್ಲಾ ಕೃಷಿ ಸಚಿವ ಎಂದೇ ಹೇಳುತ್ತಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಮಾಜಿ ಪಿಎಂ ಎಚ್.ಡಿ.ದೇವೇಗೌಡರ ಕುರಿತು ಹೊಂದಿರುವ ಗೌರವದ ಕಾರಣಕ್ಕೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ನಾನು ಕೈಗಾರಿಕಾ ಸಚಿವನಾಗಿದ್ದರೂ ರೈತರ ಸಮಸ್ಯೆ ಪರಿಹರಿಸಲು ಆದ್ಯತೆ ನೀಡುತ್ತೇನೆ ಎಂದರು.

ಮೈತ್ರಿಗೆ ಅಭೂತಪೂರ್ವ ಬೆಂಬಲ:

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಗೆ ಜನ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಮೊದಲ ಹಂತದಲ್ಲಿ ನಡೆದಿದ್ದ ೧೪ ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ೧೨ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ನಮ್ಮ ಸ್ವಯಂಕೃತ ಅಪರಾಧದಿಂದ ೨ ಕ್ಷೇತ್ರ ಕಳೆದುಕೊಳ್ಳುವಂತಾಯಿತು. ನೀವು ನೀಡಿದ ಬೆಂಬಲದಿಂದ ನಾನು ಇಂದು ಕೇಂದ್ರ ಸರ್ಕಾರದಲ್ಲಿ ಎರಡು ಬೃಹತ್ ಖಾತೆಗಳನ್ನು ಪಡೆಯುವಂತಾಗಿದೆ. ದೊರೆತ ಅವಕಾಶವನ್ನು ಬಳಸಿಕೊಂಡು ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಸ್ಮಾರ್ಟ್‌ಸಿಟಿ ಯೋಜನೆಯನ್ನು ಜಾರಿಗೆ ತಂದು ರಾಮನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಯ ಪಟ್ಟಣಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಪ್ರಧಾನಿ ಮೋದಿ ೩ಕೋಟಿ ಮನೆಗಳನ್ನು ನಿರ್ಮಿಸುವ ಯೋಜನೆ ಪ್ರಕಟಿಸಿದ್ದು, ಅದರಲ್ಲಿ ರಾಜ್ಯಕ್ಕೆ ಹೆಚ್ಚಿನ ಮನೆಗಳು ದೊರೆಯುವಂತೆ ನೋಡಿಕೊಳ್ಳುತ್ತೆನೆ. ನಾನು ಮಂತ್ರಿಯಾಗಿರುವುದು ನನ್ನ ವೈಯಕ್ತಿಕ ಆಸೆಗಾಗಿ ಅಲ್ಲ. ನನಗೆ ಸಿಕ್ಕಿರುವ ಅವಕಾಶದಲ್ಲಿ ರಾಜ್ಯಕ್ಕೆ ಕೈಗಾರಿಕೆಗಳನ್ನು ತಂದು ಯುವಕರ ನಿರುದ್ಯೋಗ ಸಮಸ್ಯೆ ಪರಿಹರಿಸಲು ಶ್ರಮಿಸುತ್ತೇನೆ ಎಂದು ಹೇಳಿದರು.

ಅಭಿವೃದ್ಧಿಗೆ ಶ್ರಮಿಸುವೆ:

ಚನ್ನಪಟ್ಟಣದ ಅಭಿವೃದ್ಧಿಗೆ ನನ್ನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ದೇವೇಗೌಡರು ಕಟ್ಟಿದ ಇಗ್ಗಲೂರು ಬ್ಯಾರೇಜ್‌ನಿಂದ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಯೋಗೇಶ್ವರ್ ಮಾಡಿದ್ದಾರೆ. ನಾನು ಅದನ್ನು ವಿಸ್ತರಿಸಿ ೧೨೭ ಕೆರೆಗಳನ್ನು ತುಂಬಿಸಿದೆ. ಸತ್ತೇಗಾಲ ಯೋಜನೆಯನ್ನು ಜಾರಿಗೆ ತಂದೆ. ಸೋಮವಾರದೊಳಗೆ ನಾನು ಲೋಕಸಭಾ ಸ್ಥಾನ, ಇಲ್ಲ ಶಾಸಕ ಸ್ಥಾನ ಉಳಿಸಿಕೊಳ್ಳಬೇಕಿತ್ತು. ಹೀಗಾಗಿ ಶನಿವಾರ ರಾಜೀನಾಮೆ ಸಲ್ಲಿಸಿ ಸಂಜೆಯ ಬಳಿಕ ರಾಜೀನಾಮೆ ಅಂಗೀಕರಿಸುವಂತೆ ಸ್ಪೀಕರ್‌ಗೆ ಮನವಿ ಮಾಡಿದ್ದೇನೆ. ಮುಂದೆಯೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಚನ್ನಪಟ್ಟಣ ತಾಲೂಕು ಆಸ್ಪತ್ರೆಗೆ ಸಿಟಿಸ್ಕ್ಯಾನ್, ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಯಂತ್ರ ಅಳವಡಿಸುವ ಕೆಲಸ ಮಾಡುತ್ತೇನೆ. ಚನ್ನಪಟ್ಟಣ ತಾಲೂಕು ಆಸ್ಪತ್ರೆಯಲ್ಲಿ ಇನ್ನೂ 100 ಹಾಸಿಗೆಯನ್ನು ಹೆಚ್ಚಿಸುತ್ತೇನೆ ಎಂದರು. ಇನ್ನು ೧೫ ದಿನಗಳಲ್ಲಿ ಸಂಸದ ಡಾ.ಮಂಜುನಾಥ್ ಮತ್ತು ಯೋಗೇಶ್ವರ್ ಜತೆಗೆ ಪ್ರತಿ ಹಳ್ಳಿಯಲ್ಲಿ ಪ್ರವಾಸ ಮಾಡಿ ಚನ್ನಪಟ್ಟಣದ ಅಭಿವೃದ್ಧಿಯ ನೀಲನಕ್ಷೆ ತಯಾರಿಸುತ್ತೇವೆ ಎಂದು ಭರವಸೆ ನೀಡಿದರು.

click me!