ಕಾರವಾರ ಬಂದರು ವಿಸ್ತರಣೆಗೆ ಸುಪ್ರೀಂ ತಾತ್ಕಾಲಿಕ ಬ್ರೇಕ್‌

Published : Mar 30, 2022, 04:08 AM ISTUpdated : Mar 30, 2022, 04:13 AM IST
ಕಾರವಾರ ಬಂದರು ವಿಸ್ತರಣೆಗೆ ಸುಪ್ರೀಂ ತಾತ್ಕಾಲಿಕ ಬ್ರೇಕ್‌

ಸಾರಾಂಶ

*   ದೇವದತ್‌ ಕಾಮತ್‌ ವಾದ, ವಿಚಾರಣೆಗೆ ಕೈಗೆತ್ತಿಕೊಂಡು ಸುಪ್ರಿಂ ಕೋರ್ಚ್‌ *  ಹೈಕೋರ್ಚ್‌ ತೀರ್ಪು ನೀಡುವಾಗ ಸುಸ್ಥಿರ ಅಭಿವೃದ್ಧಿಯನ್ನು ಮಾತ್ರ ಉಲ್ಲೇಖ *  ಸರ್ಕಾರದ ಉದ್ದೇಶಕ್ಕೆ ತಾತ್ಕಾಲಿಕ ಬ್ರೇಕ್‌ 

ಕಾರವಾರ(ಮಾ.30):  ಕಾರವಾರ(Karwar) ವಾಣಿಜ್ಯ ಬಂದರಿನ 2000 ಕೋಟಿ ವೆಚ್ಚದ ಎರಡನೇ ಹಂತದ ವಿಸ್ತರಣೆಯ ವಿಚಾರಣೆಯನ್ನು ಸುಪ್ರಿಂ ಕೋರ್ಚ್‌(Supreme Court) ಕೈಗೆತ್ತಿಕೊಂಡಿದ್ದು, ಮುಂದಿನ ನಿರ್ಮಾಣ ಚಟುವಟಿಕೆಗಳನ್ನು ಕೈಗೊಳ್ಳದೆ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿದೆ.

ಬಂದರು ನಿರ್ಮಾಣವನ್ನು ಗುತ್ತಿಗೆ ಪಡೆದಿರುವ ಡಿವಿಪಿ ಇನ್‌ಫ್ರಾ ಪ್ರಾಜೆಕ್ಟ್ ಪ್ರೈವೇಟ್‌ ಲಿಮಿಟೆಡ್‌ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮಣಿಂದರ್‌ ಸಿಂಗ್‌ ವಾದವನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ತಿರಸ್ಕರಿಸಿತು. ಯೋಜನೆಯಲ್ಲಿ(Project) ಉಂಟಾಗುವ ವಿಳಂಬವು ವೆಚ್ಚವನ್ನು ಹೆಚ್ಚಿಸಲಿದೆ ಎನ್ನುವ ವಾದವನ್ನು ತಳ್ಳಿಹಾಕಿ, ಕಡಲತೀರ ಮತ್ತು ಪರಿಸರವನ್ನು(Environment) ನಾಶಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.

Karwar: ಮೀನುಗಾರರ ವಾದಕ್ಕೆ ಪುಷ್ಠಿ: ಸಮುದ್ರತೀರದಲ್ಲಿ ಆಮೆಗಳ ನೂರಾರು ಮೊಟ್ಟೆ ಪತ್ತೆ!

ಬೈತ್ಕೋಲ್‌ ಬಂದರು ನಿರಾಶ್ರಿತರ ಯಾಂತ್ರೀಕೃತ ದೋಣಿ ಮೀನುಗಾರರ ಸಹಕಾರ ಸಂಘ ನಿಯಮಿತದ ಅರ್ಜಿಯ ವಿಚಾರಣೆ ನಡೆಸಿದ ಪೀಠ, ಕರ್ನಾಟಕ ಸರ್ಕಾರ(Government of Karnataka) ಹಾಗೂ ಇತರರಿಗೆ ನೋಟಿಸ್‌ ಜಾರಿ ಮಾಡಿದೆ. ಮುಂದಿನ ನಿರ್ಮಾಣ ಚಟುವಟಿಕೆ ನಡೆಸುವುದನ್ನು ತಡೆ ಹಿಡಿಯುವಂತೆ ನ್ಯಾಯಾಲಯವು ಮೌಖಿಕವಾಗಿ ಸೂಚಿಸಿತು.

ಹಿರಿಯ ವಕೀಲ ದೇವದತ್‌ ಕಾಮತ್‌ ಮತ್ತು ವಕೀಲ ಅಮಿತ್‌ ಪೈ ಅರ್ಜಿದಾರರ ಪರವಾಗಿ ವಾದಿಸಿ, ಯೋಜನೆಯ ವಿರುದ್ಧದ ತಮ್ಮ ಮನವಿಯನ್ನು ತಿರಸ್ಕರಿಸಿ, ಹೈಕೋರ್ಚ್‌ (ಜುಲೈ 29, 2021 ರ) ತೀರ್ಪಿನ ಸಿಂಧುತ್ವವನ್ನು ಪ್ರಶ್ನಿಸಿದರು.
ಜ.23. 2019 ರಂದು ರಾಜ್ಯ ಮಟ್ಟದ ಅಧಿಕಾರಿಗಳಿಂದ ನೀಡಲಾದ ಪರಿಸರ ಅನುಮತಿಯ ಆಧಾರದ ಮೇಲೆ ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ ಎಂದು ಯೋಜನೆ ಪರವಾದ ವಕೀಲರು ತಿಳಿಸಿದ್ದರು.

ಆದರೆ ಇದು ಸೆ. 14. 2006 ರ ಪರಿಸರ ಪರಿಣಾಮದ ಮೌಲ್ಯಮಾಪನ ಅಧಿಸೂಚನೆಯನ್ನು ಉಲ್ಲಂಘಿಸಿದಂತಾಗಿದೆ. ಕಾರವಾರ ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು, ವಾಣಿಜ್ಯ ಬಂದರಿನ 2ನೇ ಹಂತದ ವಿಸ್ತರಣೆಗೆ ರಾಜ್ಯ ಮಟ್ಟದ ಪ್ರಾಧಿಕಾರ ನೀಡಿರುವ ಪರಿಸರ ಅನುಮತಿ ಕಾನೂನು ಬಾಹಿರವಾಗಿದೆ. ಈ ವಿಸ್ತರಣೆಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮಾತ್ರ ಅವಕಾಶ ನೀಡಬೇಕು ಎಂದು ಅರ್ಜಿದಾರರ ಪರವಾಗಿ ವಾದಿಸಲಾಗಿತ್ತು.
ಕಾರವಾರವನ್ನು ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದೆಂದು ಪರಿಗಣಿಸಲು ಹೈಕೋರ್ಚ್‌(High Court) ವಿಫಲವಾಗಿದೆ ಮತ್ತು ಕರಾವಳಿ ಮತ್ತು ಕಡಲತೀರಗಳ ಸೌಂದರ್ಯವು ದೇಶಾದ್ಯಂತ ಜನರನ್ನು ಆಕರ್ಷಿಸುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Indo China border tensions ಹಿಂದೂ ಮಹಾಸಾಗರದಲ್ಲಿ ಚೀನಾ ಬಂದರು ನಿರ್ಮಾಣ, ಹೆಚ್ಚಿತು ಭಾರತದ ಆತಂಕ!

ಕಾರವಾರ ವಾಣಿಜ್ಯ ಬಂದರಿನ 2 ನೇ ಹಂತದ ವಿಸ್ತರಣೆ ಯೋಜನೆಯು ಕಡಲ ತೀರದಲ್ಲಿ ವಿಹರಿಸುವ ಜನರ ಹಕ್ಕಿನ ಮೇಲೆ ನೇರವಾಗಿ ಪ್ರತಿಕೂಲ ಪರಿಣಾಮ ಬೀರಲಿದೆ. ಇದು ಸಂವಿಧಾನದ ಅನುಚ್ಛೇದ 19(1)(ಡಿ) ಅಡಿಯಲ್ಲಿ ನೀಡಿದ ಹಕ್ಕಿನ ನೇರ ಉಲ್ಲಂಘನೆಯಾಗಿದೆ. ಪ್ರಸ್ತುತ ಪ್ರಕರಣದಲ್ಲಿ ಹೈಕೋರ್ಚ್‌ ಮೀನುಗಾರರ ಆಸ್ತಿಯ ಹಕ್ಕನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ, ಅಂದರೆ ಸಮುದ್ರ ತೀರದಲ್ಲಿರುವ ಮೀನುಗಾರರು(Fishermen) ಮತ್ತು ಅವರ ಜೀವನೋಪಾಯದ ಹಕ್ಕನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ, ಈ ಯೋಜನೆಯಿಂದ ಮೀನುಗಾರರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ಹೈಕೋರ್ಚ್‌ ತೀರ್ಪು ನೀಡುವಾಗ ಸುಸ್ಥಿರ ಅಭಿವೃದ್ಧಿಯನ್ನು ಮಾತ್ರ ಉಲ್ಲೇಖಿಸಿದೆ, ಆದರೆ ಯೋಜನೆ ಜಾರಿಯಿಂದ ಕಾರವಾರದ ಮೇಲೆ ಉಂಟಾಗುವ ಪರಿಸರ ಪರಿಣಾಮವನ್ನು ಪರಿಗಣಿಸಿಲ್ಲ ಎಂದು ತಿಳಿಸಲಾಗಿದೆ. ಇದರೊಂದಿಗೆ ಬಂದರು ವಿಸ್ತರಣೆಗೆ ಮುಂದಾಗಿದ್ದ ಸರ್ಕಾರದ ಉದ್ದೇಶಕ್ಕೆ ತಾತ್ಕಾಲಿಕ ಬ್ರೇಕ್‌ ಬಿದ್ದಂತಾಗಿದೆ.
 

PREV
Read more Articles on
click me!

Recommended Stories

Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ