Asianet Suvarna News Asianet Suvarna News

Indo China border tensions ಹಿಂದೂ ಮಹಾಸಾಗರದಲ್ಲಿ ಚೀನಾ ಬಂದರು ನಿರ್ಮಾಣ, ಹೆಚ್ಚಿತು ಭಾರತದ ಆತಂಕ!

  • ಸಮುದ್ರದತ್ತ ಹೊರಳಿದೆ ಚೀನಾದ ಆಕ್ರಮಣಕಾರಿ ಪ್ರವೃತ್ತಿ
  • ಪ್ರಾಬಲ್ಯವನ್ನು ಪ್ರದರ್ಶಿಸಲು ಚೀನಾದ ಮತ್ತೊಂದು ಸಂಘಟಿತ ಪ್ರಯತ್ನ
  • ಸಾಗರದ ಮೇಲೆ ಚೀನಾ ಏಕಸ್ವಾಮ್ಯ ತಡೆಯಲು ಭಾರತದ ಕೌಂಟರ್
  • ಹಿಂದೂ ಮಹಾಸಾಗರ ಬಿಕ್ಕಟ್ಟು ಹಾಗೂ ಭಾರತ ಆತಂಕದ ಕುರಿತು ಗಿರೀಶ್ ಲಿಂಗಣ್ಣ ಲೇಖನ
Indo China border tensions security situation in Indian Ocean Region added to existing challenges
Author
Bengaluru, First Published Dec 30, 2021, 6:12 PM IST

2021ರ ಅಮೆರಿಕದ ರಕ್ಷಣಾ ವಾರ್ಷಿಕ ವರದಿಯ ಪ್ರಕಾರ, ಚೀನಾ(China) ತನ್ನ ಪೀಪಲ್ಸ್ ಲಿಬರೇಶನ್ ಆರ್ಮಿ(PLA) ನೇವಿಯನ್ನು ವಿಶ್ವದ ಅತಿದೊಡ್ಡ ನೌಕಾಪಡೆಯಾಗಿ ನಿರ್ಮಿಸಿದೆ. ತನ್ನ ಪ್ರಾಬಲ್ಯವನ್ನು ಪ್ರದರ್ಶಿಸಲು ಚೀನಾದ ಮತ್ತೊಂದು ಸಂಘಟಿತ ಪ್ರಯತ್ನವೆಂದು ಈ ಬೆಳವಣಿಗೆಯನ್ನು ತಳ್ಳಿಹಾಕಬಹುದಿತ್ತು. ಆದರೆ ಇದು ಅಷ್ಟು ಸರಳವಲ್ಲ. ನೌಕಾಪಡೆಯ(Navy) ಮೂಲಕ, ಕಳೆದ ಎರಡು ದಶಕಗಳಲ್ಲಿ ಹಿಂದೂ ಮಹಾಸಾಗರ(Hindu Mahasagar) ಪ್ರದೇಶದಲ್ಲಿ ತನ್ನ ಆಸಕ್ತಿಯನ್ನು ಚೀನಾ ಮಹತ್ತರವಾಗಿ ಹೆಚ್ಚಿಸಿದೆ. ನೀಲಿ ಜಲದಲ್ಲಿ ಬೀಜಿಂಗ್‌ನ ಹೆಜ್ಜೆಗುರುತುಗಳ ಜಾಡನ್ನು ಹಿಡಿಯಲು ಅಮೆರಿಕ ಮತ್ತು ಭಾರತ ಒಂದಾಗಿವೆ. ಆದರೆ, ಅದಕ್ಕಾಗಿ ಇನ್ನೂ ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕಾಗಿದೆ.

ಹಿಂದೂ ಮಹಾಸಾಗರ ಪ್ರದೇಶ (IOR) ಭಾರತಕ್ಕೆ(India) ಮಾತ್ರವಲ್ಲ, ಆಸ್ಟ್ರೇಲಿಯಾ(Australia), ಜಪಾನ್(Japan) ಮತ್ತು ಅಮೆರಿಕಕ್ಕೂ(America) ವ್ಯಾಪಾರ ಮತ್ತು ವಾಣಿಜ್ಯ ಉದ್ದೇಶದ ಸಮುದ್ರ ಮಾರ್ಗವಾಗಿದೆ. IORನಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿ ನೇವಿ (PLAN) ಯ ಸಾಮರ್ಥ್ಯ ವೃದ್ಧಿಸುತ್ತಿರುವುದು ಇಂಡೋ-ಪೆಸಿಫಿಕ್(indo pacific) ಶಕ್ತಿಗಳ ಮೇಲೂ ಪರಿಣಾಮ ಬೀರುತ್ತದೆ. ಇತ್ತೀಚಿನ ವರ್ಷಗಳಲ್ಲಿ, ತನ್ನ ನೌಕಾಪಡೆಯ ಸಾಮರ್ಥ್ಯಗಳ ಬಗ್ಗೆ ಅನಗತ್ಯವಾಗಿ ಚಿಂತಿಸದೇ ಇದ್ದ ಭಾರತ, ಬೀಜಿಂಗ್‌ನ(beijing) ಬೆದರಿಕೆ ತಂತ್ರಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಸಜ್ಜಾಗಿದೆ. ಆದರೂ, ಇದು ಚೀನಾದ ಪ್ರಮಾಣವನ್ನು ಯಾವುದೇ ರೀತಿಯಲ್ಲೂ ಸಮೀಪಿಸುವುದಿಲ್ಲ.

ಅರಬ್ಬೀ ಸಮುದ್ರದಲ್ಲಿ ಅಬ್ಬರಿಸಿ ಬೊಬ್ಬಿರಿದ ಭಾರತ; ಚೀನಾಕ್ಕೆ ಠಕ್ಕರ್

ಚೀನಾವು ಹಿಂದೂ ಮಹಾಸಾಗರದ ಅತಿ ಹೆಚ್ಚು ಬಳಕೆದಾರ ದೇಶವಾಗಿದೆ. ಇಂಡೋನೇಷ್ಯಾ, ಮಲೇಷ್ಯಾ ಮತ್ತು ಸಿಂಗಾಪುರದ ನಡುವಿರುವ ಹಿಂದೂ ಮಹಾಸಾಗರ ಮತ್ತು ಮಲಕ್ಕಾ ಜಲಸಂಧಿಯ ಮೂಲಕವೇ ಚೀನಾದ 80% ತೈಲ ಆಮದು ಆಗುತ್ತಿದೆ ಎಂದು ಹೇಳಲಾಗುತ್ತದೆ. ಇದು ದಕ್ಷಿಣ ಚೀನಾ ಸಮುದ್ರದ ಮೂಲಕ ಪೆಸಿಫಿಕ್ ಮಹಾಸಾಗರದೊಂದಿಗೆ ಹಿಂದೂ ಮಹಾಸಾಗರವನ್ನು ಸಂಪರ್ಕಿಸುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಚೀನಾ ಆಮದು ಮಾಡುವ ತೈಲದ ಸಾಗಣೆಯನ್ನು ಇತರ ದೇಶಗಳು ನಿಯಂತ್ರಿಸುತ್ತವೆ. ಇದರ ಜೊತೆಗೆ, ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಯುರೋಪ್‌ನೊಂದಿಗೆ ಚೀನಾದ ವ್ಯಾಪಾರದ ಸುಮಾರು 90ರಿಂದ 95% ಹಿಂದೂ ಮಹಾಸಾಗರದ ಮೂಲಕವೇ ಹಾದುಹೋಗುತ್ತದೆ. ಇದಲ್ಲದೆ, ದಕ್ಷಿಣ ಚೀನಾ ಸಮುದ್ರವು ಸಂಪೂರ್ಣವಾಗಿ ತನಗೇ ಸೇರಿದ್ದೆಂದು ಚೀನಾ ಪದೇ ಪದೇ ಘೋಷಿಸುತ್ತಿದೆ. ಭಾರತಕ್ಕೂ ಈ ಸಮುದ್ರ ಮಾರ್ಗವು ಹೆಚ್ಚು ಮಹತ್ವದ್ದಾಗಿದೆ. ಏಕೆಂದರೆ ಇಂಡೋ-ಪೆಸಿಫಿಕ್ ಪ್ರದೇಶದೊಂದಿಗಿನ ಅದರ ವ್ಯಾಪಾರದ ಸುಮಾರು 55% ಈ ನೀರಿನ ಮೂಲಕವೇ ಹಾದುಹೋಗುತ್ತದೆ.

ಹಿಂದೂ ಮಹಾಸಾಗರದಲ್ಲಿ ಡ್ರೋಣ್ ಮೂಲಕ ಚೀನಾ ಬೇಹುಗಾರಿಕೆ

ಚೀನಾದಂತೆಯೇ, ಭಾರತಕ್ಕೂ ಐಒಆರ್ ಮುಖ್ಯವಾಗಿದೆ. ಏಕೆಂದರೆ ತೈಲ ಆಮದುಗಳ ಮೇಲೆ ಹೆಚ್ಚು ಅವಲಂಬಿತವಾಗಿರುವ ಭಾರತವು ಹಿಂದೂ ಮಹಾಸಾಗರದ ಮೂಲಕ ತನ್ನ ಆವಶ್ಯಕತೆಗಳಲ್ಲಿ ಕನಿಷ್ಠ 80% ಅನ್ನು ಪಡೆಯುತ್ತಿದೆ. ಚೀನಾದಂತೆಯೇ, ಭಾರತದ ವ್ಯಾಪಾರವೂ- ಒಟ್ಟು ವ್ಯಾಪಾರದ ಸುಮಾರು 65% - ಹಿಂದೂ ಮಹಾಸಾಗರದ ಮೂಲಕವೇ ಆಗುತ್ತದೆ. ಭಾರತವು ತನ್ನ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಲು ಹೆಚ್ಚು ಎಚ್ಚರಿಕೆ ವಹಿಸಬೇಕೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. 2015ರವರೆಗೂ, ಭಾರತವು ಈ ಪ್ರದೇಶದಲ್ಲಿ ತನ್ನ ಅಸ್ತಿತ್ವವನ್ನು ಬಹಿರಂಗವಾಗಿ ಪ್ರತಿಪಾದಿಸುತ್ತಿರಲಿಲ್ಲ. ಆದರೆ ಈಗ ಎರಡು ಡಜನ್‌ಗಿಂತ ಕಡಿಮೆಯಿಲ್ಲದ ದೇಶಗಳನ್ನು ಒಳಗೊಂಡಿರುವ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತವೂ ಗಂಭೀರವಾಗಿ ತೊಡಗಿಸಿಕೊಂಡಿದೆ. ಶಕ್ತಿಯ ಸಮೀಕರಣವನ್ನು ಕ್ರೋಡೀಕರಿಸಲು ಹಿಂದೂ ಮಹಾಸಾಗರದಲ್ಲಿ ಬಾಹ್ಯ ಪಾಲುದಾರ ಶಕ್ತಿಗಳೊಂದಿಗೆ ಹೆಚ್ಚಿನ ಸಹಕಾರಕ್ಕಾಗಿ ಐಒಆರ್-ಪ್ರದೇಶದಲ್ಲಿರುವ ಮೂರು ದೇಶಗಳಾದ ಸೀಶೆಲ್ಸ್, ಮಾರಿಷಸ್ ಮತ್ತು ಶ್ರೀಲಂಕಾ ಭೇಟಿಗಳ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದರು. PLAN ನ ಅನಗತ್ಯ ಆಕ್ರಮಣಶೀಲತೆಯ ಕಾರಣದಿಂದ ಹಿಂದೂ ಮಹಾಸಾಗರವು ಪ್ರಮುಖ ಭೌಗೋಳಿಕ ರಾಜಕೀಯ ಸಮರ್ಥನೆಗಳ ಕೇಂದ್ರವಾಗಿ ಮಾರ್ಪಟ್ಟಿದೆ. 

ಹಿಂದೂ ಮಹಾಸಾಗರದಲ್ಲಿ 120 ಯುದ್ಧನೌಕೆಗಳ ಠಿಕಾಣಿ!

ಬೀಜಿಂಗ್, ಎಂದಿನಂತೆ, ಐಒಆರ್ನಲ್ಲಿ ರಹಸ್ಯವಾಗಿ ಕಾರ್ಯನಿರ್ವಹಿಸುತ್ತದೆ. ಭಾರತ, ಚೀನಾ ಮತ್ತು ಇತರ ದೇಶಗಳಲ್ಲಿನ ರಕ್ಷಣಾ ವಿಶ್ಲೇಷಕರ ಪ್ರಕಾರ, ಚೀನಾ ತನ್ನ ಹಿತಾಸಕ್ತಿಗಳನ್ನು ಕಾಪಾಡಲು ಹಿಂದೂ ಮಹಾಸಾಗರದಲ್ಲಿ ನೌಕಾಪಡೆ ಅಥವಾ ಸೇನಾಶಕ್ತಿಯನ್ನು ಆಲೋಚಿಸುತ್ತಿರಬಹುದು. ಇದು ಸಮುದ್ರದ ಮೇಲೆ ಸಂಪೂರ್ಣ ನಿಂತ್ರಣವನ್ನು ಸಾಧಿಸುವ ಮಟ್ಟಕ್ಕೆ ಹೋಗದಿರಬಹುದು. ಆದರೆ ಚೀನೀ ಸಮುದ್ರ ಮಾರ್ಗಗಳನ್ನು ಇದು ಇತರ ದೇಶಗಳು ಸಂವಹನಕ್ಕಾಗಿ ಬಳಸುವುದಕ್ಕೆ ಗಂಭೀರ ಅಡಚಣೆಯನ್ನು ಉಂಟುಮಾಡಬಹುದು. ಚೀನಾದ ಉದಯೋನ್ಮುಖ ನೀಲಿ ಆರ್ಥಿಕತೆ ಈ ಪ್ರದೇಶದ ದೇಶಗಳಿಗೆ ಕಾಣಿಸುವುದಿಲ್ಲ ಎಂದಲ್ಲ. 

ಐಒಆರ್ನಲ್ಲಿ ಬೀಜಿಂಗ್‌ನ ಚಟುವಟಿಕೆಗಳನ್ನು ಗಮನಿಸಲು ಭಾರತ, ಅಮೆರಿಕ, ಇತರ ದೇಶಗಳಿಗೆ ಇರುವ ಕಾರಣವೇನು? ಚೀನಾದ ಆರ್ಥಿಕತೆಯು ಸಮುದ್ರದ ಮೇಲೆ ಅವಲಂಬಿತವಾಗಿರುವ ಕಾರಣಕ್ಕಾಗಿಯೇ ಜಾಗತಿಕ ಸಮುದ್ರ ಶಕ್ತಿಯಾಗುವುದು ಚೀನಾದ ಧ್ಯೇಯವಾಗಿದೆಯೇ? ಉತ್ತರಗಳನ್ನು ಅನ್ವೇಷಿಸುವಾಗ, ಚೀನಾ ಮಾತ್ರವಲ್ಲದೆ ಏಷ್ಯಾದ ಅನೇಕ ದೇಶಗಳ ಆರ್ಥಿಕ ಚಟುವಟಿಕೆಗಳಿಗೆ ಹಿಂದೂ ಮಹಾಸಾಗರದ ಸಂವಹನ (ಎಸ್‌ಎಲ್‌ಒಸಿ) ಗಳು ಪ್ರಮುಖವಾಗಿವೆ ಎಂಬುದನ್ನು ನೆನಪಿನಲ್ಲಿಡಬೇಕು.

ಚೀನಾಗೆ ಕದನ ಕಣ ಹಿಮಾಲಯವಲ್ಲ, ಸಮುದ್ರ! ಏನೀ ರಹಸ್ಯ?

ಚೀನಾದ ಪ್ರಯತ್ನಗಳನ್ನು ಅಮೆರಿಕ ಮತ್ತು ಭಾರತದ ನೌಕಾಪಡೆಗಳು ಜಂಟಿಯಾಗಿ ವಿಫಲಗೊಳಿಸಬಹುದು. ಇದನ್ನು ಅರಿತಿರುವ ಚೀನಾ ಬಂದರು ನಿರ್ಮಾಣದಲ್ಲಿ ನಿರತವಾಗಿದೆ. ಪಾಕಿಸ್ತಾನದ ಗ್ವಾದರ್ ಬಂದರು ಮತ್ತು ಕರಾಚಿ ಬಂದರು, ಶ್ರೀಲಂಕಾದ ಹಂಬಂತೋಟ ಬಂದರು, ಮ್ಯಾನ್ಮಾರ್‌ನ ಕ್ಯೌಕ್ಫ್ಯು ಬಂದರು ಮತ್ತು ಬಾಂಗ್ಲಾದೇಶದ ಚಿತ್ತಗಾಂಗ್ ಬಂದರು- ಇವು ಆ ಈ ಬಂದರುಗಳು. ಪ್ರತಿ ಬಂದರಿನಲ್ಲಿ, ಚೀನಾದ ಪಾತ್ರವು ವಿಭಿನ್ನವಾಗಿದೆ. ಆದರೆ, ಸಾಕಷ್ಟು ತಂತ್ರಗಾರಿಕೆಯಿಂದ ಕೂಡಿದೆ.

ಗ್ವಾದರ್ ಬಂದರು ಕಾಮಗಾರಿಯನ್ನು ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. $1 ಶತಕೋಟಿ ವೆಚ್ಚದ ಈ ಬಂದರನ್ನು ವ್ಯಾಪಾರಕ್ಕಾಗಿ ಮಾತ್ರ ಬಳಸುವುದು ಗುರಿ ಎಂದು ಹೇಳಲಾಗಿದೆ. ಪಾಕಿಸ್ತಾನದ ಹಿಂದುಳಿದ ಪ್ರದೇಶವಾಗಿರುವ ಗ್ವಾದರ್, ಚೀನಾದಿಂದ ಸುಮಾರು 1,800 ಕಿ.ಮೀ. ದೂರದಲ್ಲಿದೆ. ಹಾಗಾಗಿ ಇಲ್ಲಿಂದ ವ್ಯಾಪಾರ ಮಾಡಲಿದ್ದೇವೆ ಎಂಬ ಚೀನಾದ ಸಮರ್ಥನೆಗೆ ಬೆಲೆ ಕೊಡುವವರು ಯಾರೂ ಇಲ್ಲ. ಇದು ಚೀನಾದ ಸೇನಾ ಬಲವನ್ನು ಹೆಚ್ಚಿಸುವುದಲ್ಲದೆ ಬೇರೇನೂ ಅಲ್ಲ. ಈ ಬಂದರು ವಾಣಿಜ್ಯ ಮತ್ತು ಮಿಲಿಟರಿ ಕಾರ್ಯಾಚರಣೆ - ಎರಡೂ ರೀತಿಯಿಂದ ಕಾರ್ಯನಿರ್ವಹಿಸಬಹುದು. PLAN ನ ಹಡಗುಗಳು ಹಲವು ವರ್ಷಗಳ ಕಾಲ ಕರಾಚಿ ಬಂದರಿಗೆ ಆಗಾಗ ಬರುತ್ತಲೇ ಇದ್ದವು. ಚೀನಾ ಮತ್ತು ಪಾಕಿಸ್ತಾನದ ನೌಕಾಪಡೆಗಳು 2020ರಲ್ಲಿ - ಸೀ ಗಾರ್ಡಿಯನ್ಸ್ - ಕವಾಯತುಗಳನ್ನು ನಡೆಸಿದ್ದವು. ಎರಡೂ ದೇಶಗಳು ಜಂಟಿಯಾಗಿ ಕರಾಚಿ ಕರಾವಳಿಯನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿವೆ. 

ಭಾರತ ಜಲಸೀಮೆಗೆ ಪ್ರವೇಶ ಮಾಡಿದ್ದ ಚೀನಾದ ಹಡಗು

ಚೀನಾವು ಶ್ರೀಲಂಕಾದ ಹಂಬಂತೋಟ ಬಂದರಿನಲ್ಲಿ ವ್ಯೂಹಾತ್ಮಕವಾಗಿ ಹೂಡಿಕೆ ಮಾಡಿದೆ ಮತ್ತು ನಿರ್ಮಿಸಿದೆ. ಹಂಬಂತೋಟ ಇಂಟರ್‌ನ್ಯಾಶನಲ್ ಪೋರ್ಟ್ ಗ್ರೂಪ್ (ಎಚ್ಐಪಿಜಿ) ಶ್ರೀಲಂಕಾ ಬಂದರು ಪ್ರಾಧಿಕಾರ ಮತ್ತು ಚೀನಾದ ಸರ್ಕಾರಿ ಸ್ವಾಮ್ಯದ ಚೀನಾ ಮರ್ಚೆಂಟ್ಸ್ ಪೋರ್ಟ್ ಹೋಲ್ಡಿಂಗ್ಸ್ ನಡುವಿನ ಜಂಟಿ ಉದ್ಯಮವಾಗಿದೆ. ಶ್ರೀಲಂಕಾ ಈ ಬಂದರನ್ನು 99 ವರ್ಷಗಳ ಕಾಲ ಚೀನಾಕ್ಕೆ ಗುತ್ತಿಗೆ ನೀಡಿದೆ ಮತ್ತು ಇದು 2022ರಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆ.

ಬಂಗಾಳ ಕೊಲ್ಲಿಯ ಕರಾವಳಿಯಲ್ಲಿ ಆಳವಾದ ಕ್ಯೌಕ್ಫ್ಯು ಬಂದರನ್ನು ನಿರ್ಮಿಸುವ ಒಪ್ಪಂದಕ್ಕೆ 2020ರಲ್ಲಿ ಸಹಿ ಹಾಕಲಾಯಿತು. ಕಾರ್ಯರೂಪಕ್ಕೆ ಬಂದ ಮೇಲೆ, ವಿಶಾಖಪಟ್ಟಣಂನಲ್ಲಿ ಭಾರತೀಯ ನೌಕಾಪಡೆಯಿಂದ ನಿರ್ಮಾಣವಾಗುತ್ತಿರುವ ಜಲಾಂತರ್ಗಾಮಿ ನೆಲೆಯಿಂದ ಈ ಬಂದರು ತುಂಬಾ ದೂರದಲ್ಲೇನೂ ಇರುವುದಿಲ್ಲ. ಅದಕ್ಕಿಂತ ಹೆಚ್ಚಾಗಿ, ಬಾಂಗ್ಲಾದೇಶದ ಚಿತ್ತಗಾಂಗ್ ಬಂದರಿನ ಅಭಿವೃದ್ಧಿಗೆ ಚೀನಾ ಹೂಡಿಕೆ ಮಾಡುತ್ತಿದೆ. ಈ ಎಲ್ಲ ಐದು ಬಂದರುಗಳು ಭಾರತದ ಸೌಕರ್ಯಗಳಿಗೆ ತುಂಬಾ ಹತ್ತಿರದಲ್ಲಿವೆ. ಐಒಆರ್ ಹಾಗೂ ಬಂಗಾಳಕೊಲ್ಲಿಯ ಮೇಲೆ ಚೀನಾ ತನ್ನ ನಿಯಂತ್ರಣವನ್ನು ಕ್ರಮೇಣ ಹೆಚ್ಚಿಸಿಕೊಳ್ಳುತ್ತಿದೆ. 

ಪರಮಾಣು ಸ್ಥಾಪನೆಗಳನ್ನು ಹೊಂದಿರುವ ತನ್ನ ದೀರ್ಘವಾದ, ಸರಂಧ್ರ ಕರಾವಳಿಯ ಬಗ್ಗೆ ಚಿಂತಿಸಲು ಭಾರತಕ್ಕೆ ಹಲವು ಕಾರಣಗಳಿವೆ. 2008ರಲ್ಲಿ ಮುಂಬೈ ಮೇಲೆ ದಾಳಿ ಮಾಡಲು ಸಮುದ್ರ ಮಾರ್ಗವಾಗಿಯೇ ಭಯೋತ್ಪಾದಕರು ನುಸುಳಿ ಬಂದರೆಂಬುದನ್ನು ನಾವು ಹೇಗೆ ಮರೆಯಲು ಸಾಧ್ಯ? ಕರಾವಳಿಯ ಮೂಲಕ ಭಾರತಕ್ಕೆ ಮಾನವ ಕಳ್ಳಸಾಗಣೆ, ಅಕ್ರಮ ಮೀನುಗಾರಿಕೆ ಮತ್ತು ಮಾದಕವಸ್ತು ಮುಂತಾದವುಗಳ ಕಳ್ಳಸಾಗಾಣಿಕೆ ಗಂಭೀರ ಸವಾಲಾಗಿ ಪರಿಣಮಿಸಿದೆ.

ಭಾರತವು ಈಗ ನೌಕಾಪಡೆಯ 200 ಯುದ್ಧನೌಕೆಗಳ ಅಗತ್ಯವನ್ನು ತಕ್ಷಣವೇ ಪೂರೈಸುತ್ತದೆ. ಸಾಗರದ ಮೇಲೆ ಏಕಸ್ವಾಮ್ಯ ಸಾಧಿಸುವ ಚೀನಾದ ಮಹತ್ವಾಕಾಂಕ್ಷೆಗಳನ್ನು ತಡೆಯುವಲ್ಲಿ ಭೌಗೋಳಿಕ ರಾಜಕೀಯ ನಿರ್ಧಾರಗಳು ಬಹಳ ಮುಖ್ಯವಾಗಿವೆ. ಕ್ವಾಡ್ ದೇಶಗಳು - ಅಮೆರಿಕ, ಆಸ್ಟ್ರೇಲಿಯಾ, ಭಾರತ ಮತ್ತು ಜಪಾನ್ - ದಕ್ಷಿಣ ಚೀನಾ ಸಮುದ್ರ, ಪೆಸಿಫಿಕ್ ಕರಾವಳಿ ಮತ್ತು ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ಗಸ್ತು ತಿರುಗುವ ಸಂದರ್ಭದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಚೀನಾದ ಮೇಲೆ ನಿಗಾ ಇಡಲು ಕ್ವಾಡ್ ದೇಶಗಳು ಆಗ್ನೇಯ ಏಷ್ಯಾದ ದೇಶಗಳಲ್ಲಿಯೂ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಬೇಕು. ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಸಾಮೂಹಿಕ ಸಹಕಾರದಲ್ಲಿ ಸಮುದ್ರ ತಾಲೀಮು ನಡೆಸುವುದು ಮತ್ತು ಕರಾವಳಿಯಲ್ಲಿ ಜಂಟಿ ವಿಶೇಷ ಆರ್ಥಿಕ ವಲಯಗಳ ಮೂಲಕ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವುದು ಸೂಕ್ತವಾಗಿದೆ. ಭಾರತವು 2015ರಲ್ಲಿ ಐಒಆರ್ ದ್ವೀಪಗಳಿಗೆ ತನ್ನ ಕಡಲ ರಾಜತಾಂತ್ರಿಕತೆ, "ಈ ಪ್ರದೇಶದಲ್ಲಿ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ" (SAGAR) ಉಪಕ್ರಮದೊಂದಿಗೆ ಸೂಕ್ತವಾಗಿಯೇ ಕಾರ್ಯಪ್ರವೃತ್ತವಾಗಿದೆ. ಮಾಲ್ಡೀವ್ಸ್, ಮಾರಿಷಸ್, ಸೀಶೆಲ್ಸ್ ಮತ್ತು ಮಡಗಾಸ್ಕರ್‌ನಂತಹ ಸಣ್ಣ ದ್ವೀಪಗಳ ನಡುವೆ ಮುಕ್ತ ವ್ಯಾಪಾರವನ್ನು ಉತ್ತೇಜಿಸುವ ಮೂಲಕ ಇದನ್ನು ಮತ್ತಷ್ಟು ಬಲಪಡಿಸಬೇಕಾಗಿದೆ. 

ನಿಸ್ಸಂದೇಹವಾಗಿ, ಐಒಆರ್ ನಲ್ಲಿ ತನ್ನ ಪ್ರಾಬಲ್ಯವನ್ನು ಪ್ರದರ್ಶಿಸುವಲ್ಲಿ ಚೀನಾ ಅನೇಕ ಪ್ರಯೋಜನಗಳನ್ನು ಹೊಂದಿದೆ. ಆದರೆ ಅಗತ್ಯವಾದ ವಾಯುಶಕ್ತಿಯ ಭದ್ರತೆಯನ್ನು PLAN ಹೊಂದಿಲ್ಲ ಎಂಬುದು ಸತ್ಯ. ಭಾರತ ಮತ್ತು ಅಮೆರಿಕದ ನಡುವೆ ಬೆಳೆಯುತ್ತಿರುವ ಸಂಬಂಧವು ಅವುಗಳ ಸಾಮಾನ್ಯ ಶತ್ರುವಾಗಿರುವ ಚೀನಾಕ್ಕೆ ಗಂಭೀರವಾದ ಭೌಗೋಳಿಕ ರಾಜಕೀಯ ಅಡಚಣೆಯನ್ನು ಒಡ್ಡುತ್ತಿದೆ. ಶಾಂತಿ, ವ್ಯಾಪಾರ ಮತ್ತು ವ್ಯವಹಾರಕ್ಕೆ ಅಡ್ಡಿಪಡಿಸುವ ಚೀನಾದ ಬೆದರಿಕೆಯ ತಂತ್ರಗಳನ್ನು ತಡೆಯಲು ಎರಡೂ ದೇಶಗಳು ತಮ್ಮ ರಾಜತಾಂತ್ರಿಕ ವಿಧಾನವನ್ನು ಹೆಚ್ಚಿಸಬೇಕಾಗಿದೆ. 

ಗಿರೀಶ್ ಲಿಂಗಣ್ಣ
ವ್ಯವಸ್ಥಾಪಕ ನಿರ್ದೇಶಕರು
ಎ. ಡಿ. ಡಿ. ಇಂಜಿನಿಯರಿಂಗ್ ಇಂಡಿಯಾ
(ಇಂಡೋ -ಜರ್ಮನ್ ಸಂಸ್ಥೆ )

Follow Us:
Download App:
  • android
  • ios