ಶೃಂಗೇರಿ ಮಠದ 4 ಜಗದ್ಗುರುಗಳ ಕಾಲಾವಧಿಯಲ್ಲಿ ಸೇವೆ ಸಲ್ಲಿಸಿದ ವಿದ್ವಾನ್ ವಿನಾಯಕ ಉಡುಪ ದೈವಾಧೀನ

By Suvarna NewsFirst Published Jul 3, 2020, 11:09 AM IST
Highlights

ಶೃಂಗೇರಿ ಮಠದ ಪ್ರಖ್ಯಾತ  ಸಂಸ್ಕತ ವಿದ್ವಾಂಸ ವಿನಾಯಕ ಉಡುಪ(94) ಶುಕ್ರವಾರ(ಜು.03) ಮುಂಜಾನೆ 4 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಉಡುಪರು ಪತ್ನಿ ಹಾಗೂ ಆರು ಜನ ಮಕ್ಕಳನ್ನು ಅಗಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಶೃಂಗೇರಿ(ಜು.03): ಇಲ್ಲಿನ ಶಾರದಾ ಮಠದ 4 ಜಗದ್ಗುರಗಳ ಕಾಲಾವಧಿಯಲ್ಲಿ ಸೇವೆ ಸಲ್ಲಿಸಿದ್ದ, ರಾಷ್ಟ್ರಪ್ರಶಸ್ತಿ ವಿಜೇತ ವಿದ್ವಾಂಸ ವಿನಾಯಕ ಉಡುಪ(94) ಶುಕ್ರವಾರ(ಜು.03) ಮುಂಜಾನೆ 4 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಇವರು ಪತ್ನಿ, ನಾಲ್ಕು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. 

ಸಾವಿರಾರು ವಿದ್ಯಾರ್ಥಿಗಳಿಗೆ ವೇದ, ಉಪನಿಷತ್‌ಗಳನ್ನು ಕಲಿಸಿದ್ದ ಶೃಂಗೇರಿ ಶ್ರೀ ಮಠದ ಆಸ್ಥಾನ ವಿದ್ವಾಂಸರು ದೈವಾಧೀನರಾಗಿದ್ದಾರೆ. ಹಲವಾರು ಜೋತಿಷಿಗಳು ಇವರ ಬಳಿ ವಿದ್ಯಾಭ್ಯಾಸ ಮಾಡಿದ್ದರು. ಶ್ರೀ ವಿನಾಯಕ ಉಡುಪರಿಗೆ ವೇದ ಉಪನಿಷತ್‌ಗಳೆಲ್ಲಾ ಬಾಯಿಪಾಠವಾಗಿದ್ದವು. ಶೃಂಗೇರಿ ಪಾಠಶಾಲೆಯ ಅಧ್ಯಕ್ಷರಾಗಿ ಹಾಗೂ ಪುರೋಹಿತರಾಗಿ ಪ್ರಖ್ಯಾತಿ ಗಳಿಸಿದ್ದರು.

ಅಲಂಕಾರ, ತರ್ಕ, ಮೀಮಾಂಸ, ನ್ಯಾಯ ಹಾಗೂ ವೇದಾಂತದಲ್ಲಿ ವಿದ್ವಾಂಸ ವಿನಾಯಕ ಉಡುಪರು ಪ್ರಾವಿಣ್ಯತೆ ಗಳಿಸಿದ್ದರು. ಬಾಯಿ ಪಠಣದ ಮೂಲಕವೇ ಪುನರುಚ್ಚರಿಸುತ್ತಿದ್ದರು. ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರಿಂದ ಬಾದರಾಯಣ ವ್ಯಾಸ ಪುರಸ್ಕಾರಕ್ಕೂ ಭಾಜನರಾಗಿದ್ದರು. ವಿನಾಯಕ ಉಡುಪರ ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಮಂದಿ ಕಂಬನಿ ಮಿಡಿದಿದ್ದಾರೆ.

‘ಪ್ರತಿಜ್ಞೆ’ಗೂ ಮುನ್ನ ಮನೆಯಲ್ಲಿ ಡಿಕೆಶಿ ಪೂಜೆ, ಕೆಪಿಸಿಸಿ ಕಚೇರಿಯಲ್ಲಿ ಅರಳಿ ಮರಕ್ಕೂ ಪೂಜೆ

ಇಂದು ಶೃಂಗೇರಿ ಮಠದ ಆಸ್ಥಾನ ವಿದ್ವಾಂಸರಾದ ಶ್ರೀಯುತ ವಿನಾಯಕ ಉಡುಪರು ನಮ್ಮನ್ನಗಲಿ ಹೋದರೆಂದು ತಿಳಿದು ಬಹಳ ದುಃಖವಾಯಿತು. ಧಾರ್ಮಿಕ ವಿಷಯಗಳ ನಡೆದಾಡುವ ಕೋಶದಂತಿದ್ದ ಇವರ ಅಗಲುವಿಕೆ ಸಮಾಜಕ್ಕೆ ದೊಡ್ಡ ನಷ್ಟ. ಬಹಳ ದೊಡ್ಡ ಜ್ಞಾನಿಗಳಾಗಿದ್ದರೂ, ಅತ್ಯಂತ ಸರಳ ವ್ಯಕ್ತಿತ್ವದಿಂದ ಎಲ್ಲರಿಗೂ ಆದರ್ಶಪ್ರಾಯರಾಗಿದ್ದರು.ಅವರಿಗೆ ನಮ್ಮ ಅಶ್ರುಪೂರ್ಣ ಶ್ರದ್ಧಾಂಜಲಿ. - ಪದ್ಮನಾಭ ಅಡಿಗರು, ಸಂಸ್ಕೃತ ವಿದ್ವಾಂಸರು, ಶಿವಮೊಗ್ಗ

ವಿನಾಯಕ ಉಡುಪರನ್ನು ಕಳೆದುಕೊಂಡ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿ ದೇವರು ನೀಡಲಿ ಎಂದು ಹಾರೈಸುತ್ತೇನೆ. ಓಂ ಶಾಂತಿ -ಅಂಬುತೀರ್ಥ ರಾಘವೇಂದ್ರ, ಜೀವ ವಿಮಾ ಸಲಹೆಗಾರರು
 

click me!