ಅಮೆರಿಕದ ವಿಶೇಷ ವಿಮಾನದಿಂದ ಹಾವೇರಿ ಜಿಲ್ಲೆಯಲ್ಲಿ 3 ದಿನ ಮೋಡ ಬಿತ್ತನೆ: ಶಾಸಕರಿಂದಲೇ ವೆಚ್ಚ

Published : Jul 04, 2026, 07:20 AM IST
Cloud Seeding

ಸಾರಾಂಶ

ಹಾವೇರಿ ಜಿಲ್ಲೆಯಲ್ಲಿನ ಮಳೆ ಕೊರತೆ ನೀಗಿಸಲು ಶಾಸಕ ಪ್ರಕಾಶ ಕೋಳಿವಾಡ ನೇತೃತ್ವದಲ್ಲಿ ಮೋಡ ಬಿತ್ತನೆ ಮಾಡಲು ನಿರ್ಧರಿಸಲಾಗಿದೆ. ಜುಲೈ 7 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಾಚರಣೆಗೆ ಅಮೆರಿಕದಿಂದ ವಿಶೇಷ ವಿಮಾನ ತರಿಸಲಾಗುತ್ತಿದ್ದು, ಇದರ ಸಂಪೂರ್ಣ ವೆಚ್ಚವನ್ನು ಜಿಲ್ಲೆಯ ಶಾಸಕರೇ ಭರಿಸಲಿದ್ದಾರೆ.

ಹಾವೇರಿ: ಮಳೆ ಕೊರತೆಯ ಹಿನ್ನೆಲೆಯಲ್ಲಿ ರೈತರ ನೆರವಿಗೆ ಧಾವಿಸಿರುವ ರಾಣಿಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಅವರು ಜಿಲ್ಲಾದ್ಯಂತ ಮೋಡ ಬಿತ್ತನೆ ಮಾಡಲು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಜು.7ರಿಂದ ಸತತ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯ ನಡೆಸುವುದಾಗಿ ತಿಳಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋಡ ಬಿತ್ತನೆಗೆ ಕೇಂದ್ರ ಸರ್ಕಾರದಿಂದ ಪರವಾನಗಿ ಕೇಳಲಾಗಿತ್ತು. ಇಂದಷ್ಟೇ ಅವಕಾಶ ನೀಡಿರುವ ಮಾಹಿತಿ ಬಂದಿದೆ.

ಪೈಲಟ್‌ಗಳಿಗೆ ವಿಶೇಷ ತರಬೇತಿ

ಮೋಡ ಬಿತ್ತನೆ ಕಾರ್ಯಕ್ಕಾಗಿಯೇ ಅಮೆರಿಕದಲ್ಲಿ ವಿಶೇಷವಾಗಿ ಸಿದ್ಧಪಡಿಸಲಾದ ಅತ್ಯಾಧುನಿಕ ವಿಮಾನವನ್ನು ಬಳಸಲಾಗುತ್ತಿದ್ದು, ಸೋಮವಾರವೇ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದು ತಲುಪಲಿದೆ. ಈ ಕಾರ್ಯಾಚರಣೆಗಾಗಿ ಈಗಾಗಲೇ ಪೈಲಟ್‌ಗಳಿಗೆ ವಿಶೇಷ ತರಬೇತಿಯನ್ನು ಸಹ ನೀಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Haveri: ಕ್ಷುಲ್ಲಕ ಜಗಳಕ್ಕೆ ಬಲಿಯಾದ ಬೀದಿ ಬದಿ ವ್ಯಾಪಾರಿ! ಇದು ಒಂದು ಮೊಟ್ಟೆಯ ಕಥೆ!

ರಾಜ್ಯಾದ್ಯಂತ ಮೋಡ ಬಿತ್ತನೆ ಮಾಡಲು ರಾಜ್ಯ ಸರ್ಕಾರ ಟೆಂಡರ್‌ ಕರೆಯಬೇಕಿದೆ. ಅದಕ್ಕೆ ಸಮಯ ತಗಲುವುದರಿಂದ ಜಿಲ್ಲೆಯ 6 ಶಾಸಕರೇ ಸೇರಿ 8 ತಾಲೂಕುಗಳಲ್ಲಿ ಮೂರು ದಿನಗಳ ಕಾಲ ಮೋಡ ಬಿತ್ತನೆ ಕಾರ್ಯ ಮಾಡುತ್ತೇವೆ. ಒಂದು ತಾಸಿನ ಕಾರ್ಯಾಚರಣೆಗೆ ₹15 ಲಕ್ಷ ವೆಚ್ಚವಾಗಲಿದೆ. ಈ ಸಂಪೂರ್ಣ ವೆಚ್ಚವನ್ನು ನಾವೇ ಭರಿಸುತ್ತೇವೆ. ಜಿಲ್ಲೆಯ ರೈತರು ಮಳೆ ಕೊರತೆಯಿಂದಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ಅನುಕೂಲಕ್ಕಾಗಿ ಈ ನಿರ್ಧಾರ ಮಾಡಲಾಗಿದೆ. ಸೋಮವಾರ ವಿಮಾನ ಬರಲಿದ್ದು, ಆಕಾಶದಲ್ಲಿ ಮೋಡಗಳ ಲಭ್ಯತೆಯನ್ನು ಪರಿಶೀಲಿಸಿ, ಜು. 7ರಂದಲೇ ಮೋಡ ಬಿತ್ತನೆ ಆರಂಭಿಸಲಾಗುವುದು. ಮಳೆ ತರುವ ಮೋಡಗಳು ಸೂಕ್ತ ಪ್ರಮಾಣದಲ್ಲಿದ್ದಾಗ ಮಾತ್ರ ಬಿತ್ತನೆ ಪ್ರಕ್ರಿಯೆ ಯಶಸ್ವಿಯಾಗುವುದರಿಂದ, ಹವಾಮಾನದ ಮೇಲೆ ನಿಗಾ ಇಟ್ಟು ಕಾರ್ಯಾಚರಣೆ ನಡೆಸಲು ತಂಡ ಸಜ್ಜಾಗಿದೆ ಎಂದು ಪ್ರಕಾಶ ಕೋಳಿವಾಡ ತಿಳಿಸಿದರು.

ಇದನ್ನೂ ಓದಿ: ಕೈಕೊಟ್ಟ ಮಳೆ: 11 ಎಕ್ರೆ ಗೋವಿನಜೋಳದ ಬೆಳೆ ಟ್ರ‍್ಯಾಕ್ಟರ್‌ನಿಂದ ನಾಶ ಮಾಡಿದ ಹಾವೇರಿ ರೈತ

PREV
Read more Articles on
click me!

Recommended Stories

ನೆಂಟರಿಗೆ, ಆಪ್ತರಿಗೆ 30 ಬಾರ್‌ ಲೈಸೆನ್ಸ್ ಕೊಟ್ಟಿದ್ದ ಜಾರಕಿಹೊಳಿ ಭಾವ! - ಇ.ಡಿ. ದಾಳಿ ಬೆನ್ನಲ್ಲೇ ಲೋಕಾಯುಕ್ತರಿಂದ ಶಾಕ್
ಸಿಎಂ ಗೂಟ ಹೊಡೆದುಕೊಂಡು ಇರಲ್ಲ: ಅಧಿಕಾರಿಗಳಿಗೆ ನಿಖಿಲ್ ಕುಮಾರಸ್ವಾಮಿ ಖಡಕ್ ಎಚ್ಚರಿಕೆ