
ಬೆಂಗಳೂರು: ರೈಲ್ವೆ ಹಳಿಗಳ ಬಲವರ್ಧನೆ ಹಾಗೂ ಸುರಕ್ಷಿತ ಎಂಜಿನಿಯರಿಂಗ್ ಮತ್ತು ಅಗತ್ಯ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಜುಲೈ 2026ರ ನಿರ್ದಿಷ್ಟ ದಿನಾಂಕಗಳಲ್ಲಿ ಬೆಂಗಳೂರು ಮತ್ತು ಚೆನ್ನೈ ನಡುವೆ ಸಂಚರಿಸುವ ಹಲವು ಪ್ರಮುಖ ರೈಲು ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂದು ದಕ್ಷಿಣ ಮತ್ತು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಕೆಲವು ರೈಲುಗಳ ಸಂಚಾರವನ್ನು ಮಧ್ಯದಲ್ಲೇ ಮೊಟಕುಗೊಳಿಸಲಾಗುತ್ತಿದ್ದು, ಇನ್ನು ಕೆಲವು ರೈಲುಗಳ ಪ್ರಯಾಣದ ಆರಂಭಿಕ ನಿಲ್ದಾಣಗಳನ್ನು ಬದಲಾಯಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರು ಮುಂಚಿತವಾಗಿಯೇ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳಲು ರೈಲ್ವೆ ಇಲಾಖೆ ಕೋರಿದೆ.
ದಿನಾಂಕ 14.07.2026 ರಂದು ಮಾತ್ರ ಅನ್ವಯಿಸುವಂತೆ: ರೈಲು ಸಂಖ್ಯೆ 66550 (ಕೆಎಸ್ಆರ್ ಬೆಂಗಳೂರು - ಜೋಲಾರ್ಪೆಟ್ಟೆ ಮೆಮು ರೈಲು): ಈ ರೈಲು ಸೋಮನಾಯಕನಪಟ್ಟಿ ಮತ್ತು ಜೋಲಾರ್ಪೇಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಅಂದರೆ, ಈ ರೈಲು ಜೋಲಾರ್ಪೇಟೆ ನಿಲ್ದಾಣದ ಬದಲಿಗೆ ಸೋಮನಾಯಕನಪಟ್ಟಿ ನಿಲ್ದಾಣದಲ್ಲೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.
ರೈಲು ಸಂಖ್ಯೆ 66549 (ಜೋಲಾರ್ಪೆಟ್ಟೆ - ಕೆಎಸ್ಆರ್ ಬೆಂಗಳೂರು ಮೆಮು ರೈಲು): ಈ ರೈಲು ಸಹ ಜೋಲಾರ್ಪೇಟೆ ಮತ್ತು ಸೋಮನಾಯಕನಪಟ್ಟಿ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಹೀಗಾಗಿ, ಈ ರೈಲು ಜೋಲಾರ್ಪೇಟೆಯಿಂದ ಹೊರಡುವ ಬದಲಿಗೆ ಸೋಮನಾಯಕನಪಟ್ಟಿ ನಿಲ್ದಾಣದಿಂದಲೇ ತನ್ನ ಸಂಚಾರವನ್ನು ಆರಂಭಿಸಲಿದೆ.
ಅನ್ವಯವಾಗುವ ದಿನಾಂಕಗಳು: ಜುಲೈ 10, 12, 15, 17, 19 ಮತ್ತು 22, 2026 , ರೈಲು ಸಂಖ್ಯೆ 16552 (ಅಶೋಕಪುರಂ - ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್ಪ್ರೆಸ್): ಈ ರೈಲು ಕಾಟ್ಪಾಡಿ ಮತ್ತು ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ. ನಿಗದಿತ ದಿನಾಂಕಗಳಂದು ಈ ರೈಲು ಚೆನ್ನೈ ತಲುಪದೆ, ಕಾಟ್ಪಾಡಿ ನಿಲ್ದಾಣದಲ್ಲೇ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸಲಿದೆ.
ರೈಲು ಸಂಖ್ಯೆ 12607 (ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ - ಕೆಎಸ್ಆರ್ ಬೆಂಗಳೂರು ಲಾಲ್ಬಾಗ್ ಎಕ್ಸ್ಪ್ರೆಸ್): ಅತ್ಯಂತ ಜನನಿಬಿಡವಾಗಿರುವ ಈ ರೈಲು ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಮತ್ತು ಕಾಟ್ಪಾಡಿ ನಡುವೆ ಭಾಗಶಃ ರದ್ದಾಗಲಿದೆ. ಪರಿಣಾಮವಾಗಿ, ಈ ರೈಲು ಚೆನ್ನೈ ಸೆಂಟ್ರಲ್ ಬದಲಿಗೆ ನಿಗದಿತ ದಿನಗಳಂದು ಸಂಜೆ 5:30 ಕ್ಕೆ ಕಾಟ್ಪಾಡಿ ನಿಲ್ದಾಣದಿಂದಲೇ ಬೆಂಗಳೂರಿನತ್ತ ತನ್ನ ಪ್ರಯಾಣವನ್ನು ಆರಂಭಿಸಲಿದೆ.
ರಾಷ್ಟ್ರೀಯ ರೈಲು ವಿಚಾರಣಾ ವ್ಯವಸ್ಥೆ (NTES) ಬಳಸಿ: ಕಾಮಗಾರಿಗಳ ಕಾರಣದಿಂದಾಗಿ ರೈಲುಗಳ ವೇಳಾಪಟ್ಟಿ ಮತ್ತು ಸಂಚಾರದಲ್ಲಿ ಕೊನೆಯ ಕ್ಷಣದ ಬದಲಾವಣೆಗಳಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರಯಾಣಿಕರು ನಿಲ್ದಾಣಕ್ಕೆ ಬರುವ ಮುನ್ನ ಅಧಿಕೃತ ಆನ್ಲೈನ್ ಪೋರ್ಟಲ್ ಅಥವಾ ಮೊಬೈಲ್ ಆಪ್ ಆದ NTES (National Train Enquiry System) ಮೂಲಕ ರೈಲುಗಳ ನೈಜ-ಸಮಯದ (Real-time) ಸ್ಥಿತಿಗತಿಯನ್ನು ಪರಿಶೀಲಿಸಿಕೊಳ್ಳಲು ದಕ್ಷಿಣ ರೈಲ್ವೆ ಪ್ರಕಟಣೆಯಲ್ಲಿ ವಿನಂತಿಸಿದೆ.