
ಬೆಳಗಾವಿ (ಏ.21): ತಾಯಿಯೇ ಜೀವದ ಮೂಲ ಎಂದು ಹೇಳಿಕೊಳ್ಳುವ ಸಮಾಜದಲ್ಲೇ ಇಬ್ಬರು ಪುತ್ರರು ತಮ್ಮ ತಾಯಿಯ ಅಂತ್ಯಕ್ರಿಯೆಗೂ ಬಾರದೆ ಅಮಾನವೀಯವಾಗಿ ವರ್ತಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬೆಳಗಾವಿಯ ಶಾಹು ನಗರದ ಅಂಜನಾ ಧಾಮೋನೆ ಎಂಬ ವೃದ್ಧೆ ಏ.15ರಂದು ನಿಧನರಾಗಿದ್ದರು. ಆಕೆಗೆ ಇಬ್ಬರು ಪುತ್ರರು. ಕಷ್ಟದಲ್ಲಿ ಸಾಕಿ ಸಲುಹಿ ದೊಡ್ಡವರನ್ನಾಗಿ ಬೆಳೆಸಿದ್ದ ತಾಯಿ. ಆದರೆ ತಾಯಿ ಮಾತ್ರ ತನ್ನ ಕೊನೆ ದಿನಗಳನ್ನ ಒಂಟಿಯಾಗಿ ಕಳೆದಿರುವುದು ದುರಂತ.
ಆ ತಾಯಿಗೆ ಇಬ್ಬರು ಗಂಡು ಮಕ್ಕಳಿದ್ದರೂ ಜೀವನದ ಕೊನೆಯ ದಿನಗಳನ್ನು ಒಂಟಿಯಾಗಿಯೇ ಕಳೆದಿದ್ದರು. ವೃದ್ಧೆಯ ನಿಧನದ ವಿಷಯವನ್ನು ಸ್ಥಳೀಯರು ತಕ್ಷಣವೇ ಮಕ್ಕಳಿಗೆ ತಿಳಿಸಿದ್ದಾರೆ. ಆದರೆ, ಪುತ್ರರು ಯಾವುದೇ ದುಃಖ ವ್ಯಕ್ತಪಡಿಸದೇ ನೀವೇ ಅಂತ್ಯಕ್ರಿಯೆ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ. ಇವರೆಂತಹ ಮಕ್ಕಳು! ಹೆತ್ತ ತಾಯಿಯ ಅಂತ್ಯಕ್ರಿಯೆಗೂ ಬಾರದದ ಮಕ್ಕಳ ಬಗ್ಗೆ ಬೇಸರ ವ್ಯಕ್ತಪಡಿಸಿ ನಗರದ ಸಮಾಜ ಸೇವಕರೇ ವೃದ್ಧೆಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.