'ರಾಜ್ಯ ಬಿಜೆಪಿಯ ಈ ಸಚಿವ ಜಾಮೀನಿನ ಮೇಲೆ ಹೊರಗಿದ್ದಾರೆ'

By Kannadaprabha NewsFirst Published Oct 30, 2020, 1:25 PM IST
Highlights

ಕರ್ನಾಟಕ ಸರ್ಕಾರದ ಈ ಸಚಿವ ಬೇಲ್‌ ಮೇಲೆ ಹೊರಗಿದ್ದಾರೆ ಎನ್ನುವ ವಿಚಾರವನ್ನು ಬಹಿರಂಗವಾಗಿ ಹೇಳಿದ್ದಾರೆ. 

ಶಿರಾ (ಅ.30) :  ಶಿರಾದ ಕಳ್ಳಂಬೆಳ್ಳದಲ್ಲಿ ಜಯಚಂದ್ರ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು. ಅವರ ಮೇಲೆ ಕ್ರಿಮಿನಲ್‌ ಕೇಸು ಇರುವುದರಿಂದ ಹೈಕೋರ್ಟ್‌ನಲ್ಲಿ ಜಾಮೀನು ತೆಗೆದುಕೊಂಡಿದ್ದಾರೆ ಎಂದರು.

ಅಶೋಕ್‌ ಸುಮ್‌ ಸುಮ್ಮನೆ ಜಾಮೀನು ತೆಗೆದುಕೊಂಡಿದ್ದಾರಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಹಿಂದೆ ತನ್ನ ಸ್ನೇಹಿತರಿಗೆ ಹಾಗೂ ನೆಂಟರಿಗೆ ಜಮೀನು ಹಂಚಿದ್ದಾರೆ. ಅದು ಕೇಸು ಆಗಿರುವುದರಿಂದ ನ್ಯಾಯಾಲಯದಲ್ಲಿ ಜಾಮೀನು ತೆಗೆದುಕೊಂಡಿದ್ದಾರೆ ಎಂದರು.

ಡಿಕೆ ಶಿವಕುಮಾರ್‌ ಯಾವುದೇ ರೀತಿಯ ಭ್ರಷ್ಟಾಚಾರ ಮಾಡಿಲ್ಲ. ಆದಾಯ ತೆರಿಗೆ ಇಲಾಖೆ ಬೇಕು ಅಂತಲೇ ರಾಜಕೀಯವಾಗಿ ದಾಳಿ ಮಾಡಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್‌ ಬಗ್ಗೆ ಮಾತನಾಡಲು ಆತನಿಗೆ ಯಾವ ನೈತಿಕ ಹಕ್ಕು ಇದೆ ಎಂದು ಪ್ರಶ್ನಿಸಿದರು.

'ಆರ್‌ಆರ್‌ ನಗರ ಹುಲಿಯನ್ನು ನಾವು ಗೆದ್ದೇ ಗೆಲ್ಲಿಸ್ತೀವಿ, ಕೈ ಕುತಂತ್ರವೆಲ್ಲಾ ಇಲ್ಲಿ ನಡೆಯಲ್ಲ' ..

ಬಿಜೆಪಿಯವರಿಗೆ ನಾನು ಧಮ್‌ ಇಲ್ಲ ಅಂದಿದ್ದು ಕುಸ್ತಿ ಮಾಡುವ ಧಮ್‌ ಅಲ್ಲ, ಕೇಂದ್ರದಿಂದ ಜಿಎಸ್‌ಟಿ ಹಣ, ನೆರೆ ಪರಿಹಾರದ ಹಣ ತರುವುದುಕ್ಕೆ ಧಮ್‌ ಬೇಕು ಅಂದಿದ್ದು ಎಂದರು.

ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಜಯಚಂದ್ರ ಗೆಲುವು ಸಾಧಿಸುತ್ತಾರೆ. ಯುವಕರು ಅತ್ಯಂತ ಉತ್ಸಾಹದಿಂದ ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲಾ ಜಾತಿಯ ಯುವಕರು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಬೇಕು ಎಂಬುದನ್ನು ಬಹಿರಂಗವಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಮುಖ್ಯಕಾರಣ ಮೋದಿ ಅವರು ನೀಡಿದ ಭರವಸೆಗಳಿಂದ ಯುವಜನತೆ ದೊಡ್ಡ ಆಶಾಗೋಪುರ ಕಟ್ಟಿದ್ದರು. ನಿರುದ್ಯೋಗ ಯುವಕ ಯುವತಿಯರು ಮೋದಿ ಮೇಲೆ ಭರವಸೆಯಿಟ್ಟು ಬೆಂಬಲ ನೀಡಿದರು. ಆದರೆ ಮೋದಿ ಅವರಿಂದ ಯುವಕರಿಗೆ ಭ್ರಮನಿರಸನವಾಗಿದೆ ಎಂದರು.

ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಹಾಗೂ 5 ವರ್ಷದಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಮಾಡುತ್ತೇನೆಂದು ಮೋದಿ ಹೇಳಿದ್ದರು. ಅದು ಆಗಲಿಲ್ಲ. ಉದ್ಯೋಗ ಕೊಡಿ ಎಂದು ಕೇಳಿದರೆ ಪಕೋಡ ಮಾರಿ ಎಂದು ಹೇಳುತ್ತಿದ್ದಾರೆ. ಟೀ ಮಾರಿ ಪ್ರಧಾನಿಯಾಗಿದ್ದೇವೆ, ನೀವು ಪಕೋಡ ಮಾರಿ ಎಂದಿದ್ದಾರೆ. ಇದು ಬೇಜವಾಬ್ದಾರಿ ಹೇಳಿಕೆಯಾಗಿದೆ ಎಂದರು.

ಕಳೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬರಲಿಲ್ಲ. ಯಡಿಯೂರಪ್ಪನವರಿಗೂ ಕೂಡ ಮೆಜಾರಿಟಿ ಕೊಡಲು ಆಗಲಿಲ್ಲ. ವಾಮಮಾರ್ಗದಿಂದ ಸಮ್ಮಿಶ್ರ ಸರ್ಕಾರವನ್ನು ಕೆಡವಿದರು ಎಂದು ಆರೋಪಿಸಿದರು.

ಇತಿಹಾಸದಲ್ಲಿ ಆಪರೇಷನ್‌ ಕಮಲ ಅಂತ ಪದ ಶುರುವಾಗಿದ್ದೇ ಯಡಿಯೂರಪ್ಪನವರಿಂದ ಅವರು ಆಪರೇಷನ್‌ ಕಮಲ ಪದದ ಜನಕ ಮಿಸ್ಟರ್‌ ಯಡಿಯೂರಪ್ಪ ಎಂದು ವ್ಯಂಗ್ಯವಾಡಿದರು.

ಈ ಸರ್ಕಾರ ಅನೈತಿಕವಾದ ಕೂಸು. ಜನರಿಂದ ಆಶೀರ್ವಾದದಿಂದ ಬಂದ ಸರ್ಕಾರವಲ್ಲ. ಹಣ ಖರ್ಚು ಮಾಡಿ ಆಸೆ ಆಮಿಷ ತೋರಿಸಿ ರಚನೆಯಾದ ಸರ್ಕಾರ ಎಂದರು.

ಶಾದಿಭಾಗ್ಯ, ಪಶುಭಾಗ್ಯ, ಇಂದಿರಾ ಕ್ಯಾಂಟೀನ್‌ ನಿಲ್ಲಿಸುತ್ತಿದ್ದಾರೆ. ಅನ್ನಭಾಗ್ಯ ಅಕ್ಕಿಯನ್ನು ಕಡಿತಗೊಳಿಸಿದ್ದಾರೆ. ಬಡವರ ಹೊಟ್ಟೆಮೇಲೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದ ಅವರು ಹಂದಿನೂ ತಿನ್ನದಂತಹ ರಾಗಿಯನ್ನು ಕೊಡುತ್ತಿದ್ದಾರೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ ಎಂದರು.

ಬಾದಾಮಿಗೆ ನೀರಿನ ಯೋಜನೆ ಮಾಡಲು ಒಂದು ವರ್ಷದಿಂದ ಪ್ರಯತ್ನ ಮಾಡಿದೆ. ಆದರೆ ದುಡ್ಡಿಲ್ಲ ದುಡ್ಡಿಲ್ಲ ಅಂತ ಹೇಳುತ್ತಿದ್ದಾರೆ. 10 ಪರ್ಸೆಂಟೇಜ್‌ ಕೊಟ್ಟರೆ ಯೋಜನೆಗಳಿಗೆ ಅನುದಾನ ನೀಡುತ್ತಿದ್ದಾರೆ ಎಂದರು.

ರಾಜ್ಯ ದೀವಾಳಿಯಾಗಿದೆ. ಉದ್ಯೋಗವಿಲ್ಲ, ಕೊರೋನಾ ತಡೆಗಟ್ಟಲು ವಿಫಲವಾಗಿದೆ ಎಂದು ದೂರಿದ ಅವರು ಆಟೋ ರಿಕ್ಷಾ, ನೇಕಾರರಿಗೆ, ಕ್ಷೌರಿಕರಿಗೆ ಪರಿಹಾರ ನೀಡುತ್ತೇವೆ ಎಂದು ಹೇಳಿದರು ಅದನ್ನು ಕೊಡಲಿಲ್ಲ ಎಂದು ದೂರಿದರು.

ಜನ ಎಚ್ಚರಿಕೆ ಗಂಟೆ ಬಾರಿಸಲು ಶಿರಾದಲ್ಲಿ ಸಿದ್ಧರಾಗಿದ್ದಾರೆ. ಕೆ.ಆರ್‌ ಪೇಟೆಯಲ್ಲಿ ಹಣ ಕೊಟ್ಟು ಗೆದ್ದಿದ್ದಾರೆ. ಇಲ್ಲೂ ಹಣ ಕೊಟ್ಟು ಗೆಲ್ಲಲ್ಲು ಪ್ರಯತ್ನಿಸುತ್ತಿದ್ದಾರೆ. ಇದೇ ಕೆ.ಆರ್‌ ಪೇಟೆ ಪ್ರಯೋಗ ಎಂದ ಅವರು ಪೊಲೀಸ್‌ ಹಾಗೂ ಅಧಿಕಾರಿಗಳ ಮೂಲಕ ಹಣ ಹಂಚಿಸಿದ್ದಾರೆ ಎಂದರು.

click me!