'ಜಲಮೂಲಗಳ ಜತನದಿಂದ ಕಾಪಾಡುವುದು ಮುಖ್ಯ'

By Kannadaprabha NewsFirst Published Sep 23, 2019, 12:41 PM IST
Highlights

ಜಲಮೂಲಗಳನ್ನು ಜತನದಿಂದ ಕಾಯ್ದುಕೊಳ್ಳುವುದು ಮುಖ್ಯ ಎಂದು ಪರಿಸರ ತಜ್ಞ ಶಿವಾನಂದ ಕಳವೆ ಹೇಳಿದರು.

ಸಾಗರ [ಸೆ.23]:  ಕೆರೆಗಳು ಊರಿನ ಜಲಮೂಲವಾಗಿದ್ದು ಅದನ್ನು ಜತನದಿಂದ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಪರಿಸರ ತಜ್ಞ ಶಿವಾನಂದ ಕಳವೆ ಹೇಳಿದರು.

ತಾಲೂಕಿನ ಹೊನ್ನೆಸರದಲ್ಲಿ ವಿರೂಪಾಕ್ಷ ಕೆರೆ ಸಮಿತಿ ಮತ್ತು ಭೀಮನಕೋಣೆ ಕವಿಕಾವ್ಯ ಟ್ರಸ್ಟ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿರೂಪಾಕ್ಷ ಕೆರೆಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆರೆ ನಮ್ಮ ಜೀವನಾಡಿ. ನೆಮ್ಮದಿಯ ಜೀವನಕ್ಕೆ ಮೂಲ ಎಂದರು.

ಊರಿನಲ್ಲಿರುವ ಕೆರೆಗಳನ್ನು ನೋಡಿದರೆ ಆ ಊರಿನ ಸ್ಥಿತಿಗತಿ ಅರ್ಥವಾಗುತ್ತದೆ. ಯಾವ ಊರಿನ ಕೆರೆಯಲ್ಲಿ ನೀರು ಸಮೃದ್ಧವಾಗಿ ತುಂಬಿಕೊಂಡಿರುತ್ತದೆಯೋ, ಆ ಊರಿನ ಜನರು ಬೇಸಾಯ ಮಾಡಿಕೊಂಡು ಸಮೃದ್ಧವಾಗಿದ್ದಾರೆಂದು ತಿಳಿದುಕೊಳ್ಳಬಹುದು. ಯಾವ ಊರಿನಲ್ಲಿ ನೀರಿಗಾಗಿ ಮನೆಮುಂದೆ ಡ್ರಮ್‌ ಇರಿಸಲಾಗಿದೆಯೋ ಆ ಊರಿನಲ್ಲಿ ನೀರಿನ ಸಮಸ್ಯೆ ಇದೆ ಎನ್ನುವುದನ್ನು ಮೇಲ್ನೋಟಕ್ಕೆ ಅರ್ಥ ಮಾಡಿಕೊಳ್ಳಬಹುದು ಎಂದರು.

ನಾವು ಕೆರೆಯನ್ನು ಸಂರಕ್ಷಣೆ ಮಾಡಿದರೆ ಕೆರೆಗೇನೂ ಲಾಭವಿಲ್ಲ. ಬದಲಾಗಿ ನಮ್ಮ ಸಮೃದ್ಧ ಜೀವನಕ್ಕೆ ಅದು ಸಾಕ್ಷಿಯಾಗಲಿದೆ. ಈ ಗ್ರಾಮದ ಜನರು ತಮ್ಮೂರಿನ ಕೆರೆಯನ್ನು ಸಂರಕ್ಷಣೆ ಮಾಡಿಕೊಳ್ಳುವಲ್ಲಿ ತೋರಿಸುತ್ತಿರುವ ಆಸಕ್ತಿ ಇತರೆ ಗ್ರಾಮಗಳ ಜನರಿಗೆ ಮಾದರಿಯಾಗಬೇಕು ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಂತರ್ಜಲ ಶೋಧಕ ಮತ್ತು ಔಷಧ ಸಸ್ಯಗಳ ಬೆಳೆಗಾರ ಎಂ.ವಿ.ಪ್ರಕಾಶ್‌ ಮಂಚಾಲೆ ಮಾತನಾಡಿ, ಗ್ರಾಮಗಳಲ್ಲಿ ಕೃಷಿಗೆ ಹೆಚ್ಚಿನ ಅವಕಾಶವಿರುತ್ತದೆ. ಪ್ರತಿ ಮನೆಯ ಅಕ್ಕಪಕ್ಕದ ಜಾಗದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸುವತ್ತ ಹೆಚ್ಚಿನ ಗಮನ ಹರಿಸಬೇಕು. ಔಷಧೀಯ ಸಸ್ಯಗಳನ್ನು ಬೆಳೆಸುವುದರಿಂದ ಪರಿಸರ ಉತ್ತಮವಾಗಿರುತ್ತದೆ. ಬದಲಾದ ಇವತ್ತಿನ ಸಂದರ್ಭದಲ್ಲಿ ಔಷಧೀಯ ಸಸ್ಯಗಳ ಬಗ್ಗೆ ಜನರಿಗೆ ಅರಿವು ಕಡಿಮೆಯಾಗುತ್ತಿದೆ. ಇದರ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.

click me!