ಕಾಣೆಯಾಗಿದ್ದ 1.5 ವರ್ಷದ ಮಗು, ಇಡೀ ರಾತ್ರಿ ಕತ್ತಲು, ಮಳೆಗೆ ಹಳ್ಳದಲ್ಲೇ ಕೂತಿದ್ದ ಕಂದನ ಪೊಲೀಸರು ಪತ್ತೆ ಹಚ್ಚಿದ್ದು ಹೇಗೆ ಗೊತ್ತಾ?

Kannadaprabha News   | Kannada Prabha
Published : May 09, 2026, 07:04 AM IST
Rescue of 1 5 Year Old Child Trapped in Ditches Overnight at kottigehar chikkamagaluru

ಸಾರಾಂಶ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಎಸ್ಟೇಟೊಂದರಲ್ಲಿ ಕಾಣೆಯಾಗಿದ್ದ ಒಂದೂವರೆ ವರ್ಷದ ಮಗುವನ್ನು ಪೊಲೀಸರು 12 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಸುರಕ್ಷಿತವಾಗಿ ಪತ್ತೆಹಚ್ಚಿದ್ದಾರೆ. ಡ್ರೋನ್‌ ಹಾಗೂ ಶ್ವಾನ ದಳ ಬಳಸಿ ನಡೆಸಿದ ಶೋಧದಲ್ಲಿ, ಮಗು ಮನೆಯ ಸಮೀಪದ ಹಳ್ಳದಲ್ಲಿ ಪತ್ತೆಯಾಗಿದೆ.

  • ಚಿಕ್ಕಮಗಳೂರಿನ ಎಸ್ಟೇಟಲ್ಲಿ ಕಾಣೆ ಆಗಿದ್ದ ಮಗು
  • ಮಗುವಿಗಾಗಿ 12 ಗಂಟೆ ಹುಡುಕಾಟಿದ ಪೊಲೀಸರು

ಕೊಟ್ಟಿಗೆಹಾರ (ಚಿಕ್ಕಮಗಳೂರು): ಸತತ 12 ಗಂಟೆ ಕಾಲ ಏಕಾಂಗಿಯಾಗಿ ಕಡು ಕತ್ತಲೆ, ಮಳೆಯಲ್ಲಿ ಇಡೀ ರಾತ್ರಿ ಕಳೆದ ಒಂದೂವರೆ ವರ್ಷದ ಮಗುವನ್ನು ಪೊಲೀಸರು ಸುರಕ್ಷಿತವಾಗಿ ಪತ್ತೆ ಮಾಡಿ ಸಂರಕ್ಷಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಠಾಣೆ ವ್ಯಾಪ್ತಿ ನಡೆದಿದೆ.

ಮಧ್ಯಪ್ರದೇಶದ ಭೋಪಾಲ್ ಮೂಲದ ಗೋನು ಹಾಗೂ ಸೋನಾ ದಂಪತಿ ಮೂರು ದಿನಗಳ ಹಿಂದೆ ಕೆಲಸಕ್ಕಾಗಿ ಕೆಳಗೂರು ಟೀ ಎಸ್ಟೇಟ್‌ಗೆ ಬಂದಿದ್ದರು. ಇವರ ಮಗ ಒಂದೂವರೆ ವರ್ಷದ ಶಿವಂ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಕಾಣೆಯಾಗಿದ್ದನು. ಹುಡುಕಾಟ ನಡೆಸಿದ ಫೋಷಕರು ಬಾಳೂರು ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರು. ಪೊಲೀಸರು, ಎಸ್ಟೇಟ್‌ ಸಿಬ್ಬಂದಿ, ಪೋಷಕರು ಗುರುವಾರ ತಡ ರಾತ್ರಿ ವರೆಗೆ ಹುಡುಕಾಟ ನಡೆಸಿದ್ದರು. ಆದರೂ ಮಗು ಪತ್ತೆಯಾಗಿರಲಿಲ್ಲ.

ಶುಕ್ರವಾರ ಬೆಳಗ್ಗೆ ಡಾಗ್‌ ಸ್ಕ್ವಾಡ್‌ ಹಾಗೂ ಥರ್ಮಲ್‌ ಡ್ರೋನ್‌ ಬಳಸಿ ಕಾರ್ಯಾಚರಣೆ ಮುಂದುವರಿಸಲಾಯಿತು. ಈ ವೇಳೆ ಮನೆಯಿಂದ ಸುಮಾರು 350 ಮೀಟರ್‌ ದೂರದಲ್ಲಿ ಇರುವ ಹಳ್ಳದಲ್ಲಿ ಮಗು ಪತ್ತೆಯಾಗಿದೆ. ಮಗುವನ್ನು ಫೋಷಕರಿಗೆ ನೀಡಲಾಗಿದೆ. ಮೂಡಿಗೆರೆ ಪೊಲೀಸ್ ವೃತ್ತ ನಿರೀಕ್ಷಕ ರಾಜಶೇಖರ್ ನೇತೃತ್ವದಲ್ಲಿ ತೀವ್ರ ಶೋಧ ನಡೆಸಿ, ಸುಮಾರು 12 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಕಾಣೆಯಾಗಿದ್ದ ಶಿವಂನನ್ನು ಪೊಲೀಸರು ಸುರಕ್ಷಿತವಾಗಿ ಪತ್ತೆ ಹಚ್ಚಿ ಕುಟುಂಬದವರಿಗೆ ಒಪ್ಪಿಸಿದ್ದಾರೆ.

ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಮೂಡಿಗೆರೆ ಪೊಲೀಸ್ ವೃತ್ತ ನಿರೀಕ್ಷಕ ರಾಜಶೇಖರ್, ದೂರು ಬಂದ ತಕ್ಷಣ ಹುಡುಕಾಟ ಆರಂಭಿಸಲಾಯಿತು. ಆದರೂ ಮಗು ಪತ್ತೆಯಾಗಿರಲಿಲ್ಲ. ಶುಕ್ರವಾರ ಬೆಳಗ್ಗೆ ಕಾರ್ಯಾಚರಣೆ ಮುಂದುವರಿಸಲಾಯಿತು. ಫೋಷಕರು ವಾಸವಿದ್ದ, ಮನೆಯಿಂದ ಕೇವಲ 350 ಮೀ. ದೂರದ ಸುಮಾರು 9 ಅಡಿ ಹಳ್ಳದಲ್ಲಿ ಮಗು ಪತ್ತೆಯಾಗಿದೆ. ರಾತ್ರಿ ಇಡೀ ಮಗು ಏಕಾಂಗಿಯಾಗಿ ಹಳ್ಳದಲ್ಲಿತ್ತು. ಸುಮಾರು 150ಕ್ಕೂ ಅಧಿಕ ಸಿಬ್ಬಂದಿ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು ಎಂದು ಹೇಳಿದರು.

PREV
Read more Articles on
click me!

Recommended Stories

ಪ್ರಧಾನಿ ಮೋದಿ ಆಗಮನ: ನಾಳೆ ನಗರದಲ್ಲಿ ವಾಹನ ಸಂಚಾರ ಮಾರ್ಗ ಬದಲು
ಬಂಗಾಳದಲ್ಲಿ SIR ಗೆ ಸೋತ ಮೇಡಂ; ರಾಜ್ಯದಲ್ಲಿ 'ಕೈ' ಅಲರ್ಟ್!