ಯಲಚೇನಹಳ್ಳಿ- ಅಂಜನಾಪುರ ಮೆಟ್ರೋ ರೈಲು ಸೇವೆಗೆ ಸಿದ್ಧತೆ

By Kannadaprabha NewsFirst Published Oct 1, 2020, 10:00 AM IST
Highlights

ಆರ್‌.ವಿ.ರಸ್ತೆ- ಯಲಚೇನಹಳ್ಳಿ ಮೆಟ್ರೋ ಸೇವೆ ಇರಲ್ಲ| ಶೀಘ್ರವೇ ವಾಣಿಜ್ಯ ಕಾರ್ಯಾಚರಣೆ ಕೈಗೊಳ್ಳುವ ಉದ್ದೇಶದಿಂದ ಬಿಎಂಆರ್‌ಸಿಎಲ್‌ ಪೂರ್ವ ಸಿದ್ಧತಾ ಕಾರ್ಯ| ಅ.2ರಂದು ಎಂದಿನಂತೆ ಹಸಿರು ಮಾರ್ಗದಲ್ಲಿ ಬೆಳಗ್ಗೆ 7ರಿಂದ ನಾಗಸಂದ್ರ-ಯಲಚೇನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ರೈಲು ಸೇವೆ| 

ಬೆಂಗಳೂರು(ಅ.01): ಯಲಚೇನಹಳ್ಳಿ-ಅಂಜನಾಪುರ ಮೆಟ್ರೋ ರೈಲು ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆಗೆ ಪೂರ್ವ ಸಿದ್ಧತೆ ಕೈಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ಗುರುವಾರ (ಅ.1) ಆರ್‌.ವಿ.ರಸ್ತೆ- ಯಲಚೇನಹಳ್ಳಿ ಮೆಟ್ರೋ ನಿಲ್ದಾಣದ ನಡುವಿನ ಮೆಟ್ರೋ ರೈಲು ಸಂಚಾರ ಸ್ಥಗಿತಗೊಳ್ಳಲಿದೆ.

ಕಳೆದ ಒಂದು ತಿಂಗಳಿನಿಂದ ಯಲಚೇನಹಳ್ಳಿ- ಅಂಜನಾಪುರ ಮೆಟ್ರೋ ಮಾರ್ಗದಲ್ಲಿ ಪ್ರಾಯೋಗಿಕವಾಗಿ ರೈಲು ಸಂಚರಿಸುತ್ತಿದೆ. ಈ ಮಾರ್ಗದಲ್ಲಿ ಶೀಘ್ರವೇ ವಾಣಿಜ್ಯ ಕಾರ್ಯಾಚರಣೆ ಕೈಗೊಳ್ಳುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್‌) ಪೂರ್ವ ಸಿದ್ಧತಾ ಕಾರ್ಯ ನಡೆಸುತ್ತಿದೆ. ಆದ್ದರಿಂದ ಅ.1ರಂದು ನಾಗಸಂದ್ರ- ಆರ್‌.ವಿ.ರಸ್ತೆ(ಹಸಿರು ಮಾರ್ಗ) ಮೆಟ್ರೋ ನಿಲ್ದಾಣದ ವರೆಗೆ ಮಾತ್ರ ಮೆಟ್ರೋ ರೈಲು ಸಂಚರಿಸಲಿದೆ. ಉಳಿದಂತೆ ಆರ್‌.ವಿ.ರಸ್ತೆ- ಯಲಚೇನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸಂಚರಿಸುವುದಿಲ್ಲ.

ಮೆಟ್ರೋ ಸುರಂಗ ಕಾಮಗಾರಿ ವೇಳೆ 10 ಅಡಿ ಮಣ್ಣು ಕುಸಿತ

ನಾಗಸಂದ್ರ-ಆರ್‌.ವಿ.ರಸ್ತೆ ಮಾರ್ಗದಲ್ಲಿ ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಮೆಟ್ರೋ ಸಂಚಾರ ಇರಲಿದೆ. ಪ್ರಯಾಣಿಕರು ಅದನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಅ.2ರಂದು ಎಂದಿನಂತೆ ಹಸಿರು ಮಾರ್ಗದಲ್ಲಿ ಬೆಳಗ್ಗೆ 7ರಿಂದ ನಾಗಸಂದ್ರ-ಯಲಚೇನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ರೈಲು ಸೇವೆ ಇರಲಿದೆ.

ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಮತ್ತು ಮೈಸೂರು ರಸ್ತೆ ನಿಲ್ದಾಣಗಳ ನಡುವೆ ಮೆಟ್ರೋ ಸೇವೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎಂದಿನಂತೆ ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ವಾಣಿಜ್ಯ ಕಾರ್ಯಾಚರಣೆ ನಡೆಯಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.
 

click me!