ಹಫ್ತಾ ನೀಡದ್ದಕ್ಕೆ ಹಲ್ಲೆ ಮಾಡಿದ ಪೇದೆ ಅಮಾನತು

By Kannadaprabha NewsFirst Published Feb 15, 2020, 10:04 AM IST
Highlights

ಹಫ್ತಾ ನೀಡಲು ನಿರಾಕರಿಸಿದ ಹೊಟೇಲ್‌ ಕ್ಯಾಷಿಯರ್‌ನ್ನು ತಳ್ಳಾಡಿ ಹಲ್ಲೆ ಮಾಡಿದ ಆರೋಪದಲ್ಲಿ ಪುಟ್ಟೇನಹಳ್ಳಿ ಠಾಣೆ ಕಾನ್‌ಸ್ಟೇಬಲ್‌ ಸಂಜೀವ್‌ ಆರ್‌.ವಾಲೀಕರ್‌ ಎಂಬುವವರನ್ನು ಅಮಾನತು ಮಾಡಲಾಗಿದೆ.

ಬೆಂಗಳೂರು(ಫೆ.15): ಹಫ್ತಾ ನೀಡಲು ನಿರಾಕರಿಸಿದ ಹೊಟೇಲ್‌ ಕ್ಯಾಷಿಯರ್‌ನ್ನು ತಳ್ಳಾಡಿ ಹಲ್ಲೆ ಮಾಡಿದ ಆರೋಪದಲ್ಲಿ ಪುಟ್ಟೇನಹಳ್ಳಿ ಠಾಣೆ ಕಾನ್‌ಸ್ಟೇಬಲ್‌ ಸಂಜೀವ್‌ ಆರ್‌.ವಾಲೀಕರ್‌ ಎಂಬುವವರನ್ನು ಅಮಾನತು ಮಾಡಲಾಗಿದೆ.

ಪುಟ್ಟೇನಹಳ್ಳಿಯಲ್ಲಿರುವ ಹೊಟೇಲ್‌ವೊಂದಕ್ಕೆ ಫೆ.10ರಂದು ರಾತ್ರಿ 8.30ರ ಸುಮಾರಿಗೆ ತೆರಳಿದ್ದ ಕಾನ್‌ಸ್ಟೇಬಲ್‌ ಹಫ್ತಾ ಕೇಳಿದ್ದಾರೆ. ಆದರೆ, ಕ್ಯಾಷಿಯರ್‌ ಅಭಿಷೇಕ್‌ ಎಂಬುವರು ಹಣ ನೀಡಲು ನಿರಾಕರಿಸಿದ್ದಾರೆ. ಇದರಿಂದ ಕುಪಿತಗೊಂಡ ಕಾನ್‌ಸ್ಟೇಬಲ್‌ ಅಲ್ಲಿಂದ ಹೊರಟು ಹೋಗಿದ್ದರು. ರಾತ್ರಿ 10.30ರ ಸುಮಾರಿಗೆ ಮತ್ತೆ ವಾಪಸ್‌ ಬಂದು ರಾತ್ರಿ ತಡವಾಗಿದ್ದು, ಹೊಟೇಲ್‌ ಮುಚ್ಚಿಲ್ಲ ಎಂದು ಹೇಳಿ ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ನೂ ನಿಂತಿಲ್ಲ ವರದಕ್ಷಿಣೆ ಭೂತ: ಗೃಹಿಣಿ ಆತ್ಮಹತ್ಯೆ

ಈ ಸಂಬಂಧ ಹೊಟೇಲ್‌ನಲ್ಲಿರುವ ಸಿಸಿ ಕ್ಯಾಮರಾ ಸಹಿತ ಹಿರಿಯ ಅಧಿಕಾರಿಗಳಿಗೆ ಅಭಿಷೇಕ್‌ ದೂರು ನೀಡಿದ್ದರು. ದೂರು ಆಧರಿಸಿ ಪರಿಶೀಲನೆ ನಡೆಸಿ ವಿಚಾರಣೆ ನಡೆಸಿದಾಗ, ಹಲ್ಲೆ ನಡೆಸಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್‌ ಸೆಪಟ್‌ ಆದೇಶಿಸಿದ್ದಾರೆ.

click me!