ಬೆಂ.ಗ್ರಾಮಾಂತರ: ಡಿಕೆಶಿಗಾಗಿ ದರ್ಗಾದಲ್ಲಿ ವಿಶೇಷ ಪೂಜೆ

By Kannadaprabha NewsFirst Published Sep 4, 2019, 12:33 PM IST
Highlights

ಡಿ. ಕೆ. ಶಿವಕುಮಾರ್ ಶೀಘ್ರ ಆರೋಪ ಮುಕ್ತರಾಗಲಿ ಅಂತ ರಾಜ್ಯದ ಹಲವೆಡೆ ಅವರ ಬೆಂಬಲಿಗರು ಪೂಜೆ ನಡೆಸುತ್ತಿದ್ದಾರೆ, ಬೆಂಗಳೂರು ಗ್ರಾಮಾಂತರದ ರಾಮನಗರದಲ್ಲಿ ಡಿಕೆಶಿ ಬೆಂಬಲಿಗರು ಅವರು ದರ್ಗಾದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆರೋಪ ಮುಕ್ತರಾಗಿ ಶೀಘ್ರ ಹೊರಗೆ ಬರುವಂತಾಗಲಿ ಎಂದು ಪ್ರಾರ್ಥಿಸಿದ್ದಾರೆ.

ಬೆಂ. ಗ್ರಾಮಾಂತರ(ಸೆ.04): ಜಾರಿ ನಿರ್ದೇ​ಶ​ನಾ​ಲಯ (ಇ​ಡಿ) ವಿಚಾ​ರ​ಣೆಗೆ ಒಳ​ಪ​ಟ್ಟಿ​ರುವ ಮಾಜಿ ಸಚಿವ ಡಿ.ಕೆ.​ಶಿ​ವ​ಕು​ಮಾರ್‌ ಆರೋಪಮುಕ್ತ​ರಾಗಿ ಬರ​ಲೆಂದು ಪ್ರಾರ್ಥಿಸಿ ಜಿಲ್ಲಾ ಅಲ್ಪ​ಸಂಖ್ಯಾತ ಕಾಂಗ್ರೆಸ್‌ ಘಟ​ಕದ ಪದಾ​ಧಿ​ಕಾ​ರಿ​ಗಳು ರಾಮನಗರ ಪೀರನ್‌ ಷಾ ವಲಿ ದರ್ಗಾ​ದಲ್ಲಿ ವಿಶೇಷ ಪೂಜೆ ಸಲ್ಲಿ​ಸಿ​ದರು.

ದರ್ಗಾ​ದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿ​ಸಿದ ನಂತರ ಮಾತ​ನಾ​ಡಿದ ಅಲ್ಪ​ಸಂಖ್ಯಾತ ಕಾಂಗ್ರೆಸ್‌ ಘಟಕ ಜಿಲ್ಲಾ​ಧ್ಯಕ್ಷ ನಿಜಾಂ ಮುದ್ದೀನ್‌ ಷರೀಫ್‌, ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ತುಳಿಯುವ ಹುನ್ನಾರದಿಂದಲೇ ಅವರ ಕಣ್ಣಲ್ಲಿ ನೀರು ತರಿಸಿದ್ದಾರೆ. ತಪ್ಪು ಮಾಡಿದವರು ಎಂದೂ ಕಣ್ಣೀರು ಹಾಕುವುದಿಲ್ಲ. ಅವರಿಗೆ ಎದುರಾಗಿರುವ ಕಷ್ಟದಿಂದ ಪಾರಾಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಗುತ್ತಿದ್ದು, ಅವರು ಆರೋಪಮುಕ್ತರಾಗಿ ಬರಲಿದ್ದಾರೆ ಎಂಬ ವಿಶ್ವಾಸ ಕಾರ್ಯಕರ್ತರಾದ ನಮ್ಮೆಲ್ಲರಲ್ಲಿ ಇದೆ ಎಂದರು.

ದ್ವೇಷದ ರಾಜಕಾರಣ:

ಕಾಂಗ್ರೆಸ್‌ ನಾಯ​ಕರ ವಿರುದ್ಧ ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ. ಮಾಜಿ ಸಚಿ​ವ​ರಾದ ಚಿದಂಬರ್‌ ಮತ್ತು ಡಿಕೆ ​ಶಿ​ವ​ ಕು​ಮಾರ್‌ ಅವರ ಪ್ರಕ​ರ​ಣ​ಗಳು ಇದಕ್ಕೆ ಸಾಕ್ಷಿಯಾಗಿವೆ. ಹಿಂದೂ ಸಂಪ್ರದಾಯದ ದೊಡ್ಡ ಹಬ್ಬ ಗೌರಿಗಣೇಶ ಹಬ್ಬದಲ್ಲಿ ತನ್ನ ಕುಟುಂಬದ ಜೊತೆ ಪೂಜೆ ಸಲ್ಲಿಸಲು ಸಹ ಅವಕಾಶ ಮಾಡಿಕೊಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದ್ವೇಷದಿಂದ ಕಿರುಕುಳ:

ಅಲ್ಪ​ಸಂಖ್ಯಾತ ಮುಖಂಡ ಸಮದ್‌ ಮಾತ​ನಾಡಿ, ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರು ಗುಜರಾತ್‌ನ ಕಾಂಗ್ರೆಸ್‌ ಶಾಸಕರಿಗೆ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ರಕ್ಷಣೆ ಕೊಟ್ಟಿದ್ದು ಅಮಿತ್‌ ಶಾ ಅವ​ರಿಗೆ ಸಿಟ್ಟು ತರಿಸಿತ್ತು. ಈ ದ್ವೇಷದಿಂದ ಶಿವಕುಮಾರ್‌ ಅವರಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಿರುಕುಳ ನಿಲ್ಲಿಸಿ:

ಕೇಂದ್ರ ಸರ್ಕಾರ ರಾಜಕೀಯ ದುರುದ್ದೇಶದಿಂದ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ವಿರುದ್ಧ ದ್ವೇಷ ಸಾಧಿಸುತ್ತಿದೆ. ಅದಕ್ಕಾಗಿಯೇ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಂಡು ಅವರಿಗೆ ಕಿರುಕುಳ ನೀಡುತ್ತಿದೆ. ಶಿವಕುಮಾರ್‌ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಜರುಗಿಸಬಹುದು. ಆದರೆ, ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ. ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದ​ರು.

101 ಕಾಯಿ ಒಡೆದು ಡಿಕೆಶಿಗಾಗಿ ವಿಶೇಷ ಪೂಜೆ

ಈ ಸಂದರ್ಭದಲ್ಲಿ ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಅಕ್ಕುಲ್ಲಾ ಷರೀಫ್‌, ನಗರ ಘಟಕದ ಅಧ್ಯಕ್ಷ ಇಮ್ರಾನ್‌ ಖಾನ್‌, ಉಪಾಧ್ಯಕ್ಷ ಹುಮಾಯುನ್‌, ಎಪಿಎಂಸಿ ಮಾಜಿ ನಿರ್ದೇಶಕ ಖಲೀಂ ಅಹಮದ್‌, ಮುಖಂಡರಾದ ಮಜ್ಹರ್‌ ಖಾನ್‌, ಅಸ್ಮತ್‌, ಪೀರ್‌ ಖಾನ್‌ ಮತ್ತಿತರರು ಹಾಜ​ರಿದ್ದರು.

click me!