ಚಿಕ್ಕಮಗಳೂರು: ಮಾಜಿ ಯೋಧನ ಜತೆ ಮಲೆನಾಡಿಗರ ತಿರಂಗಾ ಸಂಭ್ರಮ..!

By Girish GoudarFirst Published Aug 13, 2022, 11:39 AM IST
Highlights

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ ವಿಭಿನ್ನವಾಗಿ ಹರ್ ಘರ್ ತಿರಂಗಾ ಅಭಿಯಾನ ಆಚರಣೆ

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಆ.13): ದೇಶದ ಪ್ರತಿಯೊಬ್ಬರು ಮನೆ-ಅಂಗಡಿ-ಆಟೋ-ಬೈಕ್‍ಗಳ ಮೇಲೆ ಭಾರತದ ಬಾವುಟ ರಾರಾಜಿಸುತ್ತಿದೆ. ಆದರೆ, ಮಲೆನಾಡಿಗರು 3 ವರ್ಷದಲ್ಲಿ 36000 ಕಿಮಿ ಸೈಕಲ್ ತುಳಿದು ದೇಶದ ಜನರಲ್ಲಿ ಜಾಗೃತಿ ಮೂಡಿಸುತ್ತಿರೋ ಗುಜರಾತ್ ಮೂಲದ ಮಾಜಿ ಯೋಧನ ಜೊತೆ ಹರ್ ಘರ್ ತಿರಂಗಾ ಅಭಿಯಾನ ಆಚರಿಸಿ ಅವರ ಕೈನಲ್ಲೇ ಮನೆ ಮೇಲೆ ಬಾವುಟ ಕಟ್ಟಿಸಿ ಮತ್ತಷ್ಟು ಸಂಭ್ರಮಿಸಿದ್ದಾರೆ.

ಹರ್ ಘರ್ ತಿರಂಗಾ ಅಭಿಯಾನ ಆಚರಣೆ 

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗಾರದಲ್ಲಿ ಜನರು ಹರ್ ಘರ್ ತಿರಂಗಾ ಅಭಿಯಾನವನ್ನು ವಿಭಿನ್ನವಾಗಿ  ಆಚರಣೆ ಮಾಡಿದ್ದಾರೆ. 3 ವರ್ಷದಲ್ಲಿ 36000 ಕಿ.ಮೀ. ಸೈಕಲ್ ತುಳಿದ ಮಾಜಿ ಯೋಧನ ಜೊತೆ ಹರ್ ಘರ್ ತಿರಂಗಾ ಅಭಿಯಾನವನ್ನು ಮಲೆನಾಡಿನ ಜನರು ಆಚರಿಸಿದ್ದಾರೆ.  ಇಡೀ ದೇಶವೇ ಹರ್ ಘರ್ ತಿರಂಗಾ ಅಭಿಯಾನದ ಮೂಲಕ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸುಮಧುರ ಘಳಿಗೆಯ ಆಚರಣೆ ಖುಷಿಯಲ್ಲಿದ್ದಾರೆ. 

ಮಳೆಯಿಂದ ಹಾನಿಯಾದ ಸ್ಥಳಗಳಿಗೆ ಸಚಿವೆ ಶೋಭಾ ಭೇಟಿ: ಸಂತ್ರಸ್ಥ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಣೆ

ದೇಶವಾಸಿ ಪ್ರತಿಯೊಬ್ಬರು ಮನೆ-ಅಂಗಡಿ-ಆಟೋ-ಬೈಕ್‍ಗಳ ಮೇಲೆ ಭಾರತದ ಬಾವುಟ ರಾರಾಜಿಸುತ್ತಿದೆ. ಆದರೆ, ಮಲೆನಾಡಿಗರು 3 ವರ್ಷದಲ್ಲಿ 36 ಸಾವಿರ ಸೈಕಲ್ ತುಳಿದು ದೇಶದ ಜನರಲ್ಲಿ ಜಾಗೃತಿ ಮೂಡಿಸುತ್ತಿರೋ ಗುಜರಾತ್ ಮೂಲದ ಮಾಜಿ ಯೋಧನ ಜೊತೆ ಹರ್ ಘರ್ ತಿರಂಗಾ ಅಭಿಯಾನ ಆಚರಿಸಿ ಅವರ ಕೈನಲ್ಲೇ ಮನೆ ಮೇಲೆ ಬಾವುಟ ಕಟ್ಟಿಸಿ ಮತ್ತಷ್ಟು ಸಂಭ್ರಮಿಸಿದ್ದಾರೆ. ಗುಜರಾತ್ ಮೂಲದ ಬಿಎಸ್‌ಎಫ್‌ನ ಮಾಜಿ ಯೋಧ ಬ್ರಿಜೇಶ್ ಶರ್ಮಾ ಕಳೆದ ಮೂರು ವರ್ಷಗಳಿಂದ ಸೈಕಲ್ ಜಾಥಾ ಮಾಡುತ್ತಿದ್ದು, ಈವರೆಗೆ 36 ಸಾವಿರ ಕಿ.ಮೀ. ಸೈಕಲ್ ತುಳಿದಿದ್ದಾರೆ. ಹೀಗೆ ಬಂದವರು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರಕ್ಕೂ ಭೇಟಿ ನೀಡಿದ್ದರು. ಈ ವೇಳೆ, ಕೊಟ್ಟಿಗೆಹಾರದ ಸಂಜಯ್ ಕೊಟ್ಟಿಗೆಹಾರ ಎಂಬುವರು ಈ ಮಾಜಿ ಯೋಧನಿಗೆ ತಮ್ಮ ಮನೆಯಲ್ಲಿ ತಂಗಲು ಅವಕಾಶ ನೀಡಿ, ಇಂದು ಬೆಳಗ್ಗೆ ಹರ್ ಘರ್ ತಿರಂಗಾ ಅಭಿಯಾನದ ಹಿನ್ನೆಲೆ ಅವರ ಕೈನಲ್ಲೇ ತಮ್ಮ ಮನೆ ಮೇಲೆ ಬಾವುಟ ಕಟ್ಟಿಸಿ ಆನಂದಿಸಿದ್ದಾರೆ. 

ಪ್ಲಾಸ್ಟಿಕ್ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಲು ಸೈಕಲ್ ಜಾಥಾ 

ಮಾಜಿ ಯೋಧ ಬ್ರಿಜೇಶ್ ಶರ್ಮಾ, ಮೂರು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ದಿನದಂದು ಸೈಕಲ್ ಜಾಥಾ ಆರಂಭಿಸಿದರು. ಇಂದಿಗೂ ಸೈಕಲ್ ಜಾಥಾ‌ ನಿಂತಿಲ್ಲ. ಮೂರು ವರ್ಷಗಳಿಂದ ಅವರು ಸೈಕಲ್ ತುಳಿಯುತ್ತಿದ್ದಾರೆ. ಸಿಂಗಲ್ ಯೂಸ್ ಪ್ಲಾಸ್ಟಿಕ್‍ನಿಂದ ಏನೇನು ತೊಂದರೆಯಾಗಲಿದೆ ಎಂಬುದನ್ನ ಸಭೆ-ಸಮಾರಂಭ, ಶಾಲಾ-ಕಾಲೇಜಿಗೆ ಹೋಗಿ ಮಕ್ಕಳು ಹಾಗೂ ದೊಡ್ಡವರಿಗೂ ಮನವರಿಕೆ ಮಾಡುತ್ತಿದ್ದಾರೆ. ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆಯನ್ನ ಸಂಪೂರ್ಣವಾಗಿ ಬಿಡಬೇಕೆಂದು ಮನವಿ ಮಾಡುತ್ತಿದ್ದಾರೆ. ಸ್ವಚ್ಛ ಭಾರತ್ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಜೊತೆಗೆ, ರೈತ ಈ ದೇಶದ ಬೆನ್ನೆಲುಬು ಎಂದು ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಹೊಲಗದ್ದೆ-ತೋಟಗಳಲ್ಲಿ ಮಣ್ಣಿನ ಸವಕಳಿಯನ್ನ ಹೇಗೆ ತಡೆಯುವುದು ಎಂದು ರೈತರಿಗೂ ಮಾಹಿತಿ ನೀಡುತ್ತಿದ್ದಾರೆ. ಈ ರೀತಿ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಮೂರು ವರ್ಷಗಳಿಂದ ಸೈಕಲ್ ತುಳಿಯುತ್ತಿರೋ ಮಾಜಿ ಯೋಧನ ದೇಶಪ್ರೇಮಕ್ಕೆ ಕೊಟ್ಟಿಗೆಹಾರದ ಜನ ಕೂಡ ಫುಲ್ ಫಿದಾ ಆಗಿ ಅವರನ್ನ ಕೊಟ್ಟಿಗೆಹಾರದಲ್ಲೇ ಉಳಿಸಿಕೊಂಡು, ಸ್ನೇಹಿತನಂತೆ ಸಂತೈಸಿ ಬೀಳ್ಕೊಟ್ಟಿದ್ದಾರೆ.
 

click me!