ಬಾಗಲಕೋಟೆ ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರೋ ಮಲಪ್ರಭಾ ಮತ್ತು ಘಟಪ್ರಭಾ ನದಿಗಳು. ಮಾಚಕನೂರು ಹೊಳೆ ಬಸವೇಶ್ವರ ಜಲಾವೃತ. ಘಟಪ್ರಭಾ ನದಿ ಸೆಳೆತಕ್ಕೆ ಓರ್ವ ಯುವಕ ಬಲಿ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ (ಸೆ.13): ಮಹಾರಾಷ್ಟ್ರ ಹಾಗೂ ಬೆಳಗಾಂವ ಭಾಗದಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಮಲಪ್ರಭಾ ಮತ್ತು ಘಟಪ್ರಭಾ ನದಿಗಳು ಉಕ್ಕಿ ಹರಿಯುತ್ತಿದ್ದು, ಮಾಚಕನೂರು ಹೊಳೆಬಸವೇಶ್ವರ ದೇಗುಲ ಸಹಿತ ಹೊಲಗದ್ದೆಗಳು ಜಲಾವೃತವಾಗಿದ್ದರೆ, ಇತ್ತ ನೀರಿನ ಸೆಳೆತಕ್ಕೆ ಓರ್ವ ಯುವಕ ಬಲಿಯಾಗಿದ್ದಾನೆ. ಬಾಗಲಕೋಟೆ ಜಿಲ್ಲೆಯಲ್ಲಿ ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ ಎಂಬಂತೆ ಮಳೆ ಕಡಿಮೆಯಾದರೂ ಸಹ ಪ್ರವಾಹ ಭೀತಿ ಹೆಚ್ಚಾಗುತ್ತಲೇ ಇದೆ. ನವಿಲುತೀರ್ಥ ಹಾಗೂ ಹಿಡಕಲ್ ಜಲಾಶಯ ದಿಂದ ನೀರು ಬಿಡುಗಡೆ ಮಾಡಿದ್ದರಿಂದ ಬಾದಾಮಿ ಹಾಗೂ ಮುಧೋಳ ತಾಲೂಕಿನಲ್ಲಿ ಪ್ರವಾಹದ ಭೀತಿ ಉಂಟಾಗಿದೆ. ಹೊಲಗದ್ದೆಗಳು ಜಲಾವೃತವಾಗಿ, ಅಪಾರ ಬೆಳೆಹಾನಿ ಅನುಭವಿಸುವಂತಾಗಿದೆ. ಜಿಲ್ಲೆಯಲ್ಲಿ ಹರಿದು ಹೋಗಿರೋ ಘಟಪ್ರಭಾ ನದಿಗೆ ಅಂದಾಜು 60 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಆಗಿದ್ದರಿಂದ,ಮುಧೋಳ ತಾಲೂಕಿನ ಮಾಚಕನೂರು ಗ್ರಾಮದಲ್ಲಿರುವ ಹೊಳೆಬಸವೇಶ್ವರ ದೇವಾಲಯ ಜಲಾವೃತಗೊಂಡಿದೆ. ಪ್ರತಿ ವರ್ಷ ಸ್ವಲ್ಪ ಪ್ರಮಾಣದಲ್ಲಿ ನೀರು ಬಂದರೆ ಸಾಕು,ಈ ಗ್ರಾಮದಲ್ಲಿರುವ ಹೊಳೆ ಬಸವೇಶ್ವರ ದೇವಾಲಯ ಮುಳಗಡೆ ಆಗುತ್ತದೆ. ಇದರಿಂದ ಭಕ್ತರು,ಪೂಜೆ, ಪುನಸ್ಕಾರ ಮಾಡಲು ತೊಂದರೆ ಪಡುವಂತಾಗಿದೆ. ಇದರ ಜೊತೆಗೆ ಜಿಲ್ಲೆಯ ಮಿರ್ಜಿ, ಜಾಲಬೇರ, ಢವಳೇಶ್ವರ ಸೇರಿ ಕೆಲವಡೆ ಚಿಕ್ಕ ಸೇತುವೆಗಳ ಮೇಲೆ ನೀರು ಬಂದು ಸಂಚಾರ ಸ್ಥಗಿತಗೊಂಡಿದೆ. ಅಪಾರ ಪ್ರಮಾಣದಲ್ಲಿ ನೀರು ಬಂದ ಪರಣಾಮ,ಅಕ್ಕಪಕ್ಕದ ಹೊಲಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಸಹ ನಾಶವಾಗಿದೆ. ಇದರ ಜೊತೆಗೆ ರಬಕವಿ,ಬನಹಟ್ಟಿ ಹಾಗೂ ಮುಧೋಳ ತಾಲೂಕಿನ ಕೆಲ ಪ್ರದೇಶದಲ್ಲಿ ನೀರು ನುಗ್ಗಿ ತೊಂದರೆ ಉಂಟಾಗಿದೆ.
ಉಕ್ಕಿ ಹರಿಯುತ್ತಿರೋ ಮಲಪ್ರಭಾ ನದಿ
ಇನ್ನು ಜಿಲ್ಲೆಯ ಮಲಪ್ರಭಾ ನದಿಗೂ ಹೆಚ್ಚುವರಿ ನೀರು ಬಿಡುಗಡೆ ಮಾಡಿರುವುದರಿಂದ,ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದ ಬಳಿರುವ ಚಿಕ್ಕ ಸೇತುವೆ ಜಲಾವೃತಗೊಂಡಿದೆ. ಸಧ್ಯ ಮಲಪ್ರಭಾ ನದಿಗೆ ನವಿಲುತೀರ್ಥ ಜಲಾಶಯದಿಂದ 12,500 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಆತಂಕ ಶುರುವಾಗಿದೆ. ಮಲಪ್ರಭಾ ನದಿ ಅಕ್ಕ ಪಕ್ಕದ ಹೊಲಗದ್ದೆಗಳಿಗೆ ನೀರು ನುಗ್ಗಿದ ಪರಿಣಾಮ ಬೆಳೆದ ಫಸಲು ನೀರು ಪಾಲಾಗಿದೆ. ಈ ಮಧ್ಯೆ ನದಿಯ ಇಕ್ಕೆಲಗಳಲ್ಲಿ ಬೆಳೆದಂತಹ ಕಬ್ಬು, ಜೋಳ ಸೇರಿದಂತೆ ವಿವಿಧ ಬೆಳೆಗಳು ಜಲಾವೃತಗೊಂಡಿವೆ. ಇನ್ನು ಜನ ಜಾನುವಾರ ಸಹಿತ ಸುರಕ್ಷಿತ ತಾಣಗಳಿಗೆ ತೆರಳುವಂತೆ ನದಿ ತೀರದ ಗ್ರಾಮಗಳಿಗೆ ತೆರಳುವಂತೆ ಸ್ಚಕ್ಷೇತ್ರದ ಜನತೆಯಲ್ಲಿ ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಇನ್ನು ಸಿದ್ದರಾಮಯ್ಯ ಅವರ ಸೂಚನೆ ಬೆನ್ನಲ್ಲೆ ತಹಶೀಲ್ದಾರ ಜೆ.ಬಿ ಮಜ್ಜಗಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಜನರಿಗೆ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದ್ದಾರೆ. ಮಳೆ ನಿಂತರೂ ಮರದ ಹನಿ ನಿಲ್ಲಲ್ಲ ಎಂಬಂತೆ ಮಳೆ ಕಡಿಮೆಯಾಗಿದ್ದರೂ,ಸಹ ಪ್ರವಾಹದ ಭೀತಿ ಮಾತ್ರ ನಿಲ್ಲುತ್ತಿಲ್ಲ.
ಒತ್ತುವರಿ ತೆರವಿಗೆ ನಿರ್ಲಕ್ಷ್ಯದಿಂದಲೇ ಬೆಂಗಳೂರಲ್ಲಿ ಪ್ರವಾಹ ಸೃಷ್ಟಿ: ಹೈಕೋರ್ಟ್
ಪ್ರವಾಹದ ಸೆಳೆತಕ್ಕೆ ಓರ್ವ ಯುವಕ ಬಲಿ, ಮುಗಿಲು ಮುಟ್ಟಿದ ಆಕ್ರಂದನ
ಘಟಪ್ರಭಾ ನದಿಯ ಪ್ರವಾಹದ ಸೆಳೆತಕ್ಕೆ ಓರ್ವ ಯುವಕ ಬಲಿಯಾಗಿದ್ದಾನೆ. ಜಿಲ್ಲೆಯ ಮುಧೋಳ ತಾಲೂಕಿನ ಒಂಟಗೋಡಿ ಗ್ರಾಮದ ವಿಜಯ್ ಪಾಟೀಲ ಎಂಬ ಯುವಕ ನದಿಯಲ್ಲಿನ ಪಂಪಸೆಟ್ ತರಲು ಹೋಗಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ. ಇನ್ನು ವಿಜಯ್ ಶವ ಪತ್ತೆಯಾಗಿದ್ದು, ಮಗನ ಶವ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನು ಬೆಳಗಾವಿ ಪಶ್ಚಿಮ ಘಟದಲ್ಲಿ ಮಳೆಯಾಗಿ,ಜಲಾಶಯ ತುಂಬಿ ಹರಿಯುತ್ತಿರುವ ಪರಿಣಾಮ ಬಾದಾಮಿ ಹಾಗೂ ಮುಧೋಳ ತಾಲೂಕಿನಲ್ಲಿರುವ ಕೆಲ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿ,ತೊಂದರೆ ಪಡುವಂತಾಗಿದ್ದು, ಅಪಾರ ಪ್ರಮಾಣದ ಬೆಳೆಹಾನಿಯಿಂದ ರೈತರಲ್ಲಿ ಇನ್ನಷ್ಟು ಆತಂಕ ಎದುರಾಗಿದೆ. ಈ ಬಗ್ಗೆ ಸರ್ಕಾರ ಸೂಕ್ತ ಪರಿಹಾರ ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Karnataka Rains: ಅನ್ನದಾತರ ಬದುಕು ಕಸಿದ ರಣಭೀಕರ ಮಳೆ..!
ವಿಪರೀತ ಮಳೆಯಿಂದ ಕೊಳೆತು ಹೋದ ಬೆಳೆಗಳು
ಇನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿ, ಕೆರಕಲಮಟ್ಟಿ, ನೀರಬೂದಿಹಾಳ ಸೇರಿದಂತೆ ಹಲವೆಡೆ ಹೊಲದಲ್ಲಿ ಬೆಳೆದ ಬೆಳೆಗಳೆಲ್ಲಾ ವಿಪರೀತ ಮಳೆಯಿಂದಾಗಿ ಜಲಾವೃತವಾಗಿದ್ದು, ನೀರು ಸರಿದ ಮೇಲೆ ಇದೀಗ ಬೆಳೆಯೆಲ್ಲಾ ಕೊಳೆತು ನಾರುವಂತಾಗಿದೆ. ಇದರಿಂದ ಹೊಲದಲ್ಲಿ ರೈತರು ಕಣ್ಣೀರಿಡುವಂತಹ ಪರಿಸ್ಥಿತಿ ಒದಗಿ ಬಂದಿದೆ. ಜೋಳ, ಸೂರ್ಯಕಾಂತಿ, ಸಜ್ಜೆ ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗಿದ್ದು, ಸರ್ಕಾರ ಈ ಸಂಭಂಧ ಶೀಘ್ರ ಪರಿಹಾರ ನೀಡುವಂತೆ ರೈತರು ಮನವಿ ಮಾಡಿದ್ದಾರೆ.