ಅಕಾಲಿಕ ಮಳೆಗೆ ಕಲ್ಲಣಬೆ ಮಾರುಕಟ್ಟೆಗೆ, ಕೆಜಿಗೆ 600..!

By Kannadaprabha NewsFirst Published Apr 29, 2020, 9:10 AM IST
Highlights

ಈ ಬಾರಿ ಮಳೆಗಾಲ ಪೂರ್ವ ಮಳೆಗಳು ಮೊನ್ನಯಷ್ಟೇ ಆರಂಭವಾಗಿದೆ. ಆದರೂ ಅಣಬೆ ಅಕಾಲಿಕವಾಗಿ ಎದ್ದು ಬಂದಿದೆ ಎನ್ನುವುದು ಯಾರಿಗೂ ಅರ್ಥವಾಗುತ್ತಿಲ್ಲ. ಅಣಬೆ ಅಡೆತಡೆಗಳ ಭೇದಿಸಿಕೊಂಡು ಅಣಬೆ ಪ್ರಿಯರ ಅಡುಗೆ ಮನೆಯೊಳಗೆ ಪ್ರವೇಶ ಪಡೆದಿದೆ.

ಕಾರ್ಕಳ(ಏ.29): ಪಶ್ಚಿಮಘಟ್ಟತಪ್ಪಲು ಗ್ರಾಮಗಳಲ್ಲಿ ಕಲ್ಲಣಬೆ ನೆಲವೊಡೆದು ಮೇಲೆದ್ದು ಕಾರ್ಕಳ ಮಾರುಕಟ್ಟೆಗೆ ಸೋಮವಾರ ದಿಢೀರ್‌ ಲಗ್ಗೆ ಇಟ್ಟಿದೆ. ಸಾಮಾನ್ಯವಾಗಿ ಅಣಬೆ ಹುಟ್ಟುವುದೇ ಜೂನ್‌ ತಿಂಗಳ ಬಳಿಕ. ಇದು ವಾಡಿಕೆ. ಮಳೆಗಾಲ ಆರಂಭದಲ್ಲಿ ನಾಲ್ಕಾರು ಸಿಡಿಲು ಗೌಜಿಗೆ ನೆಲ ಅದುರಿ ಈ ಅಪೂರ್ವ ತರಕಾರಿ ಹುಟ್ಟಿಕೊಳ್ಳುತ್ತದೆ.

ಈ ಬಾರಿ ಮಳೆಗಾಲ ಪೂರ್ವ ಮಳೆಗಳು ಮೊನ್ನಯಷ್ಟೇ ಆರಂಭವಾಗಿದೆ. ಆದರೂ ಅಣಬೆ ಅಕಾಲಿಕವಾಗಿ ಎದ್ದು ಬಂದಿದೆ ಎನ್ನುವುದು ಯಾರಿಗೂ ಅರ್ಥವಾಗುತ್ತಿಲ್ಲ. ಅಣಬೆ ಅಡೆತಡೆಗಳ ಭೇದಿಸಿಕೊಂಡು ಅಣಬೆ ಪ್ರಿಯರ ಅಡುಗೆ ಮನೆಯೊಳಗೆ ಪ್ರವೇಶ ಪಡೆದಿದೆ.

 

ಎಲ್ಲ ಬಗೆಯ ಹಣ್ಣು, ತರಕಾರಿ, ಹೂವು ರೈತರು ಬೆಳೆದ ನಾನ ವಿಧ ವಸ್ತುಗಳ ಮೂರು ಕಾಸಿಗೂ ಮಾರಾಟವಾಗದೆ ಕೊಳೆಯುತ್ತಿದ್ದರೆ ಅಣಬೆ ಮಾತ್ರ ತನ್ನ ಹಿಂದಿನ ದರ ಗಿಂತಲೂ ಮಿರಿಯೇ ತನ್ನ ಮೌಲ್ಯ ಗತ್ತುಗಾರಿಕೆ ಇನ್ನೂ ಉಳಿಸಿಕೊಂಡಿದೆ. ಒಂದು ಕೆಜಿ ಅಣಬೆಗೆ 600 ರು. ಗೆ ಮಾರಾಟವಾಗುತ್ತಿದೆ.

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಕಳದ ಅಣಬೆಗೆ ಬ್ರಾಂಡ್‌ ಮಾರ್ಕೆಟ್‌ ಆಗಿದೆ. ಇತ್ತೀಚೆಗೆ ಅಣಬೆಯ ರುಚಿ ಕಂಡ ಇತರರೂ ವಿಶೇಷ ಆಸಕ್ತಿ ತೋರುತ್ತಿದ್ದು ಅಣಬೆಯ ಮಾರುಕಟ್ಟೆವಿಸ್ತರಿಸಿಕೊಂಡಿದೆ. ಅಣಬೆ ಕಾರ್ಕಳ ನಗರದಲ್ಲಿ ವಿಶೇಷ ಬೇಡಿಕೆ ಮತ್ತು ಪ್ರತಿಷ್ಠಿಯ ಖಾದ್ಯ. ಬೆಂಗಳೂರು ಮುಂಬಯಿ ಹಾಗೂ ವಿದೇಶಿಗಳಿಗೂ ಅಣಬೆ ರವಾ​ನೆ​ಯಾ​ಗು​ತ್ತದೆ.

 

ಮೇ ಮಧ್ಯಬಾಗದಿಂದ ಜುಲೈ ಮ​ಧ್ಯಭಾಗದವರೆಗೆ ಮಾತ್ರ ಈ ಅಣಬೆ ದೊರೆಯುತ್ತದೆ. ವಿಶೇಷ ಪರಿಣತಿ ಹೊಂದಿರುವ ಕಾಡಂಚಿನ ಕೆಲನಿವಾಸಿಗಳು ಸದ್ಯದ ಲಾಕ್‌ ಡೌನ್‌ ನಿರ್ಬಂಧದ ಲಾಭ ಪಡೆದು ತಮ್ಮೆಲ್ಲಾ ಶ್ರಮ ಮತ್ತು ಸಮಯವನ್ನು ಅಣಬೆ ಸಂಗ್ರಹಕ್ಕೆ ಬಳಸಿ ತಮ್ಮ ದೈನಂದಿನ ಜೀವನಕ್ಕೆ ಆರ್ಥಿಕ ಬಲ ಪಡೆದುಕೊ​ಳ್ಳು​ತ್ತಿ​ದ್ದಾರೆ.

ಮುಖ್ಯವಾಗಿ ಕಲ್ಲಣಬೆ ಹಾಡಿಯಲ್ಲಿ, ಬಂಜರು ಭೂಮಿಯಲ್ಲ ಕಲ್ಲು ಮಣ್ಣಿನೊಳಗೆ ಹೂತಿರುವುದರಿಂದ ಇದ್ದಕ್ಕೆ ಕಲ್ಲಣಬೆ ಎಂದು ಹೆಸರು ಬಂದಿದೆ. ಅಣಬೆ ತೆಗೆಯುವುದು ಬಲು ಕ್ಲಿಷ್ಟಕಾಯಕ. ಅಣಬೆಯ ಬಗ್ಗೆ ತಿಳಿದಿರಬೇಕು. ಏಕೆಂದರೆ ಅಪಾಯಕಾರಿ ಅಣಬೆಗಳು ಇರುತ್ತದೆ.

 

ಕಲ್ಲ ಅಣಬೆಯಲ್ಲಿ ಅನೇಕ ವಿಧ ಇರುವ ಜತೆ ಉಪಯುಕ್ತ ಹಾಗೂ ನಿರುಪಯುಕ್ತ ಅಣಬೆಗಳು ಇವೆ. ಆದರಲ್ಲೂ ಕಲ್ಲಣಬೆ ವಿಶಿಷ್ಟಅಣಬೆ. ಮಳೆ ಹಾಗೂ ಸಿಡಿಲಿನ ಪ್ರಮಾಣ ಕಡಿಮೆಯಾದಲ್ಲಿ ಅಣಬೆಗಳು ಬೆಳೆಯುವುದಿಲ್ಲ

 

ಮಾಳ ಹೊಸ್ಮಾರು ಈದು ಭಾಗಗಳಲ್ಲಿ ಈ ಕಲ್ಲಣಬೆ ಹೆಚ್ಚಾಗಿ ದೊರಕುತ್ತಿದ್ದು ಇದಕ್ಕೆ ಭಾರಿ ಬೇಡಿಕೆ ಇದೆ. ಕಳೆದ ಮೂರ ನಾಲ್ಕು ದಿನಗಳ ಹಿಂದೆ ಮಳೆ ಹಾಗೂ ಸಿಡಿಲಿನ ಆರ್ಭಟಕ್ಕೆ ಈ ಕಲ್ಲಣಬೆ ಹುಟ್ಟಿಕೊಂಡಿದೆ. ಕಾಡಂಚಿನ ನಿವಾಸಿಗಳು ಅಣಬೆಗಳನ್ನು ಹೆಕ್ಕಿ ಸಂಗ್ರಹಿಸುತ್ತಿದ್ದಾರೆ. ಆದರೆ ಲಾಕ್‌ ಡೌನ್‌ ಪರಿಣಾಮ ನಗರಕ್ಕೆ ತಂದು ಮಾರುಕಟ್ಟೆಗೆ ನೀಡಲು ಸಾಧ್ಯವಾಗುತ್ತಿಲ್ಲ. ಕೆಲ ಮಂದಿ ಅಣಬೆಗಳು ಹೊತ್ತುಕೊಂಡು ಕಾಲು ನಡಿಗೆ ಮೂಲಕ ಪೇಟೆಗೆ ಬಂದು ನೀಡುತ್ತಿ​ದ್ದಾರೆ. ಕೆಜಿಗೆ 600 ರು. ಗಳಿಗೆ ಮಾರಾಟ ವಾಗುತ್ತಿದೆ. ಈಗಾಗಲೇ ಹಲವರು ಪೋನ್‌ ಕರೆ ಮಾಡಿ ಅಣಬೆಯನ್ನು ಕಾದಿರಿಸುವಂತೆ ಮುಂಗಡವಾಗಿ ಬುಕ್ಕಿಂಗ್‌ ಮಾಡಿದ್ದಾರೆ ಎಂದು ಅಣಬೆ ವ್ಯಾಪಾರಿ ವಿವೇಕಾನಂದ ಶೆಣೈ ತಿಳಿಸಿದ್ದಾರೆ.

click me!