
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು : ಸಿಎಂ ಸಿದ್ದರಾಮಯ್ಯನವರ ನಂತರ ಪಕ್ಷದ ನಾಯಕತ್ವ ಡಿ ಕೆ ಶಿವಕುಮಾರ್ ಅವರದು, ಅದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಅದರ ಅರ್ಥ ತಕ್ಷಣ ಅದು ಆಗಬೇಕು ಅಂತನೂ ಅಲ್ಲ, ಆದ್ದರಿಂದ ನಾವು ಕಾದು ನೋಡೋಣ ಎಂದು ಸಿಎಂ ಕಾನೂನು ಸಲಹೆಗಾರ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ. ಮಡಿಕೇರಿಯಲ್ಲಿ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ ಅವರು 2028 ರ ಚುನಾವಣೆಗೆ ನಾವು ತಯಾರಾಗಬೇಕಾಗಿದೆ. ಇದನ್ನು ಬಣ ರಾಜಕೀಯ ಎನ್ನುವುದಕ್ಕೆ ಆಗಲ್ಲ, ಬಣ ರಾಜಕೀಯವನ್ನು ಮೊದಲು ಒಂದಿಬ್ಬರು ಮಾಡಿದ್ದಾರೆ, ಇಲ್ಲ ಎಂದೇನು ಇಲ್ಲ. ಆದರೆ ವರಿಷ್ಟರಲ್ಲಿ ಶಾಸಕಾಂಗ ಪಕ್ಷದಲ್ಲಿ ನಾಯಕತ್ವ ನಿರ್ಧಾರ ಆಗಬೇಕಲ್ವಾ ಎಂದಿದ್ದಾರೆ.
ಡಿ. ಕೆ. ಶಿವಕುಮಾರ್ ಅವರ ಪರವಾಗಿರುವ ಶಾಸಕರು, ಸಚಿವರು ದೆಹಲಿಯಲ್ಲಿ ಪರೇಡ್ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಮಾಧ್ಯಮಗಳಿಂದ ಅಷ್ಟೇ ಯಾರೆಲ್ಲಾ ದೆಹಲಿಯಲ್ಲಿ ಇದ್ದಾರೆ ಅಂತ ಗೊತ್ತಾಯಿತು. ಆದರೆ ಯಾರೇ ಹೋಗಿದ್ದರೂ ಅವರು ನಮ್ಮ ಪಕ್ಷದ ವರಿಷ್ಟರನ್ನು ಭೇಟಿಯಾಗಲು ಹೋಗಿದ್ದಾರೆ. ಅದರಲ್ಲಿ ತಪ್ಪನ್ನು ಗುರುತಿಸಲು ಆಗಲ್ಲ, ಅದನ್ನು ಬಣ ರಾಜಕೀಯ ಅಂತನೂ ಹೇಳುವುದಕ್ಕೆ ಆಗಲ್ಲ. ಯಾವ ಉದ್ದೇಶಕ್ಕೆ ಹೋಗಿದ್ದಾರೆ ಗೊತ್ತಿಲ್ಲ, ನಾನು ಕೂಡ ಕಳೆದ ವಾರ ದೆಹಲಿಗೆ ಹೋಗಿದ್ದೆ. ವರಿಷ್ಟರನ್ನು ಭೇಟಿಯಾಗಲು ಪ್ರಯತ್ನಿಸಿದೆ, ಅವರು ಸಮಯ ಕೊಡದಿದ್ದರಿಂದ ನಾನು ವಾಪಸ್ ಬಂದೆ. ನಮ್ಮ ಹೈಕಮಾಂಡನ್ನು ಭೇಟಿಯಾಗುವುದು ಸಾಧಾರಣ ಪ್ರಕ್ರಿಯೆ, ಅದಕ್ಕೆ ವಿಶೇಷ ಅರ್ಥ ಕೊಡುವುದು ಸರಿಯಲ್ಲ ಎಂದು ಮಡಿಕೇರಿಯಲ್ಲಿ ಎ ಎಸ್ ಪೊನ್ನಣ್ಣ ಹೇಳಿದ್ದಾರೆ.
ಸಿದ್ದರಾಮಯ್ಯನವರು ಆಡಿದ ಮಾತಿಗೆ ತಪ್ಪಲ್ಲ ಎಂದು ಡಿ ಕೆ ಸುರೇಶ್ ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಡಿ ಕೆ ಸುರೇಶ್ ಅವರ ಮಾತಿನಲ್ಲಿ ತಪ್ಪಿಲ್ಲ, ಅಂದರೆ ಸಿದ್ದರಾಮಯ್ಯನವರ ಆಡಳಿತದ ಬಗ್ಗೆ ಹೇಳಿದ್ದಾರೆ ಎಂದು ಹೇಳುವ ಮೂಲಕ ಪೊನ್ನಣ್ಣ ಡಿ ಕೆ ಸುರೇಶ್ ಅವರ ಮಾತಿಗೆ ಬೇರೆಯದ್ದೇ ಅರ್ಥ ಕಲ್ಪಿಸಿದರು. ಖರ್ಗೆ ಸಾಹೇಬರು ಬೆಂಗಳೂರಿನಲ್ಲೇ ಇದ್ದಾರೆ. ಅವರನ್ನು ಇಲ್ಲಿಯೇ ಭೇಟಿ ಯಾಗಬಹುದು ಅಲ್ವಾ? ಸಿಎಂ ಇಂದು ಕೂಡ ಖರ್ಗೆ ಸಾಹೇಬರನ್ನು ಭೇಟಿ ಆಗಲಿದ್ದಾರೆ. ಡಿಸಿಎಂ ಅವರು ಕೂಡ ಭೇಟಿ ಆಗಬಹುದೇನೋ. ಈ ಚರ್ಚೆ ನಡೆಯುತ್ತಿರುತ್ತದೆ ಇದನ್ನು ಬಣ ರಾಜಕೀಯ ಎಂದರೆ ಒಪ್ಪಲ್ಲ ಎಂದರು.
ಸಿಎಂ ಅಧಿಕಾರ ಹಸ್ತಾಂತರಿಸುತ್ತಾರಾ ಅಥವಾ ಐದು ವರ್ಷ ಮುಂದುವರಿಯುತ್ತಾರಾ ಎನ್ನುವ ಪ್ರಶ್ನೆ ಪ್ರತಿಕ್ರಿಯಿಸಿದ ಅವರು ಅಂತಹ ಚರ್ಚೆ ನನಗೆ ಗೊತ್ತಿಲ್ಲ ಅದರಲ್ಲಿ ಭಾಗವಹಿಸಿಯೂ ಇಲ್ಲ. ಈಗ ಮಾನ್ಯ ಸಿದ್ದರಾಮಯ್ಯ ಅವರು ಸಿಎಂ ಆಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಶಾಸಕಾಂಗ ಪಕ್ಷದ ನಾಯಕರಾಗಿ ಇದ್ದಾರೆ. ಇದು ಸಂವಿಧಾನಿಕವಾಗಿ ನಡೆದಿರುವ ಪ್ರಕ್ರಿಯೆ. ಹೀಗಾಗಿ ಈ ಚರ್ಚೆ ಈಗ ಅಪ್ರಸ್ತುತ. ಐದು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿಯವರು ಪೂರೈಸುತ್ತಾರೆ. ಅದರಲ್ಲಿ ಎರಡು ಮಾತಿಲ್ಲ ಎಂದು ಪೊನ್ನಣ್ಣ ಹೇಳಿದರು.