ಕೊರೋನಾದಿಂದ ಕ್ಷೇತ್ರದ ಜನರನ್ನ ರಕ್ಷಿಸಲು ಮಹತ್ತರ ಕಾರ್ಯಕ್ಕೆ ಚಾಲನೆ ಕೊಟ್ಟ ಈಶ್ವರಪ್ಪ

By Suvarna NewsFirst Published Jul 29, 2020, 7:31 PM IST
Highlights

 ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಸಚಿವ ಈಶ್ವರಪ್ಪ, ತಮ್ಮ ಕ್ಷೇತ್ರದ ಜನರನ್ನು ಕೊರೋನಾದಿಂದ ರಕ್ಷಿಸಲು ಮುಂದಾಗಿದ್ದಾರೆ. ಈಶ್ವರಪ್ಪನವರ ಈ ಕಾರ್ಯ ಬಹುಶಃ ದೇಶದಲ್ಲಿಯೇ ಪ್ರಥಮ ಪ್ರಯತ್ನವಾಗಿದೆ.

ಶಿವಮೊಗ್ಗ, (ಜು.29): ಕರೋನಾ ನಿಯಂತ್ರಣಕ್ಕೆ ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಶಿವಮೊಗ್ಗ ನಗರದಲ್ಲಿ 4ಲಕ್ಷ ಮಂದಿಗೆ ಆಯುರ್ವೇದಿಕ್ ರೋಗ ನಿರೋಧಕ ಶಕ್ತಿವರ್ಧಕ ಕಿಟ್ ವಿತರಣೆ ಮಾಡುತ್ತಿರುವುದು ಬಹುಶಃ ದೇಶದಲ್ಲಿಯೇ ಪ್ರಥಮ ಪ್ರಯತ್ನವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು

ಅವರು ಬುಧವಾರ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕೊರೋನಾ ನಿಯಂತ್ರಣಕ್ಕೆ ಆಯುರ್ವೇದಿಕ್ ರೋಗ ನಿರೋಧಕ ಶಕ್ತಿವರ್ಧಕ ಕಿಟ್ ವಿತರಣಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಡಾ.ಗಿರಿಧರ ಕಜೆ ಅವರ ಮಾರ್ಗದರ್ಶನದಲ್ಲಿ ಕಿಟ್ ಸಿದ್ಧಪಡಿಸಲಾಗಿದ್ದು, ಪ್ರಥಮ ಹಂತದಲ್ಲಿ 1ಲಕ್ಷ ಕಿಟ್‍ಗಳು ವಿತರಣೆಗೆ ಸಿದ್ಧವಾಗಿದೆ. ಇನ್ನೂ ಎರಡು ಹಂತಗಳಲ್ಲಿ ಶಿವಮೊಗ್ಗ ನಗರದ ಪ್ರತಿಯೊಬ್ಬರಿಗೂ ಕಿಟ್ ಹಂಚಲಾಗುವುದು. ಇದಕ್ಕಾಗಿ ವಾರ್ಡ್‍ವಾರು ಸಿದ್ಧತೆಗಳನ್ನು ಮಾಡಲಾಗಿದ್ದು, ಕಿಟ್‍ಗಳನ್ನು ವಿತರಿಸುವ ಸ್ವಯಂಸೇವಕರು 10ಕ್ಕಿಂತ ಹೆಚ್ಚು ಮಂದಿ ಗುಂಪಾಗಿ ಹೋಗಬಾರದು. ಮಾಸ್ಕ್ ಕಡ್ಡಾಯವಾಗಿ ಧರಿಸಿರಬೇಕು. ಸ್ವಯಂಸೇವಾ ಸಂಘಗಳು ಹಾಗೂ ದಾನಿಗಳ ನೆರವಿನಿಂದ ಇಂತಹ ಬೃಹತ್ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಶಿವಮೊಗ್ಗದಲ್ಲಿ 4 ಲಕ್ಷ ಜನರಿಗೆ ಉಚಿತ ಆಯುರ್ವೇದ ಕಿಟ್‌

ಡಾ.ಗಿರಿಧರ ಕಜೆ ಅವರು ಕರೋನಾ ಸೋಂಕಿಗೆ ಈಗಾಗಲೇ ಆಯುರ್ವೇದಿಕ್ ಔಷಧ ಸಿದ್ಧಪಡಿಸಿದ್ದು, ಸರ್ಕಾರದ ಹಂತದಲ್ಲಿ ಆದಷ್ಟು ಬೇಗನೆ ಮಾರುಕಟ್ಟೆಗೆ ಬಿಡುಗಡೆ ಮಾಡಲು ಅನುಮತಿಯನ್ನು ನಿರೀಕ್ಷಿಸಲಾಗಿದೆ. ಕರೋನಾ ನಿಯಂತ್ರಣಕ್ಕೆ ಆಯುರ್ವೇದ ದಿವ್ಯೌಷಧಿಯಾಗಿದೆ. ಕರೋನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು, ಇದಕ್ಕೆ ಸಾರ್ವಜನಿಕರು ಪೂರಕವಾಗಿ ಸ್ಪಂದಿಸುವ ಅಗತ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ.ಗಿರಿಧರ ಕಜೆ, ಔಷಧೀಯ ಸಸ್ಯಗಳ ಮೂಲಕ ಹಲವಾರು ರೋಗಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಿದೆ. ಭಾರತೀಯ ಪರಂಪರೆಯ ಆಹಾರ ಪದ್ಧತಿ ಸಹಜವಾಗಿಯೇ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿದೆ. ಕರೋನಾ ಸೋಂಕಿನಿಂದ ಸಾವಿಗೀಡಾಗುವ ಪ್ರಮಾಣ ಅತ್ಯಲ್ಪವಾಗಿದ್ದು, ಇದಕ್ಕೆ ಗಾಬರಿಗೊಳ್ಳುವ ಅಗತ್ಯವಿಲ್ಲ. ಆದರೆ ರೋಗವನ್ನು ಕಡೆಗಣಿಸದೆ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು, ಮನೆ ಮದ್ದಿನ ಮೂಲಕ ನಿಯಂತ್ರಿಸಬಹುದಾಗಿದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡರೆ ಇದಕ್ಕೆ ಭಯಪಡುವ ಅಗತ್ಯವಿಲ್ಲ ಎಂದರು.

ಶಾಸಕರಾದ ಆಯನೂರು ಮಂಜುನಾಥ, ಪ್ರಸನ್ನ ಕುಮಾರ್, ಆರ್ಯವೈಶ್ಯ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಮೇಯರ್ ಸುವರ್ಣಾ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ, ಪಟ್ಟಾಭಿರಾಮ್ ಮತ್ತಿತರರು ಉಪಸ್ಥಿತರಿದ್ದರು.

click me!