ಹಿಂದೂ ಪರವಿದ್ದವರ ಬಣ್ಣ ಬಯಲು, ಈ ನೆಲದ ಕಾನೂನು ಮೋಸಗಾರರನ್ನು ಬಿಡೋದಿಲ್ಲ, ಶರಣಪ್ರಕಾಶ ಪಾಟೀಲ್‌

Published : Sep 21, 2023, 09:55 PM IST
ಹಿಂದೂ ಪರವಿದ್ದವರ ಬಣ್ಣ ಬಯಲು, ಈ ನೆಲದ ಕಾನೂನು ಮೋಸಗಾರರನ್ನು ಬಿಡೋದಿಲ್ಲ, ಶರಣಪ್ರಕಾಶ ಪಾಟೀಲ್‌

ಸಾರಾಂಶ

ಬಿಜೆಪಿ, ಸಂಘ ಪರಿವಾರದ ಹೆಸರಲ್ಲಿ ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದವರಿಗೆ ಉತ್ತರಿಸುವ ಕಾಲ ಬಂದಿದೆ,  ಚೈತ್ರಾ ವಂಚನೆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್‌

ಕಲಬುರಗಿ(ಸೆ.21):  ಹಿಂದಿನ ಬಿಜೆಪಿ ಆಡಳಿತಾವಧಿಯಲ್ಲಿ ಬಿಜೆಪಿಯನ್ನ ಬೆಂಬಲಿಸುತ್ತ ಹಿಂದುಪರ ಉಪನ್ಯಾಸ ನೀಡುತ್ತ, ಘೋಷಣೆ ಕೂಗುತ್ತ ತಾವು ಹೋದ ಕಡೆ ಎಲ್ಲ ವಾತಾವರಣ ಹದಗೆಡಿಸುವಲ್ಲಿ ಮುಂಚೂಣಿಯಲ್ಲಿದ್ದವರ ಬಣ್ಣ ಒಂದೊಂದಾಗಿ ಬಯಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ಹೇಳಿದರು.

ಈ ಸಂಬಂಧ ಸುದ್ದಿಗಾರರೊಂದಿಗೆ ಹಿಂದೂ ಪರ ಸಂಘಟನೆಯ ಚೈತ್ರಾ ಕುಂದಾಪುರ ವಂಚನೆ ಪ್ರಕರಣ, ಬಂಧನ ವಿಚಾರವಾಗಿ ಮಾತನಾಡುತ್ತ, ಚೈತ್ರಾ ಸೇರಿದಂತೆ ಹಿಂದೂ ಪರ  ವಾಗ್ಮಿಗಳು ಎಂದು ಹೆಸರು ಪಡೆದು ಅನೇಕ ಕಡೆ ಪ್ರಚೋದನಕಾರಿ ಭಾಷಣ ಮಾಡುತ್ತ ತಾವು ಹೋದಲ್ಲೆಲ್ಲಾ ವಾತಾವರಣ ಹದಗೆಡಿಸುತ್ತಿದ್ದರು. ಇದೀಗ ಹಲವು ವಂಚನೆ ಪ್ರಕರಣಗಳ ಬಲೆಗೆ ಚೈತ್ರಾ ಸಿಲುಕಿದ್ದಾರೆ. ಇಂತಹವರ ಮುಖವಾಡ ಕಳಚುತ್ತಿದೆ ಎಂದರು.

ರಾಜ್ಯದ 10 ಹಳೇ ಐಟಿಐ ಕಾಲೇಜುಗಳಿಗೆ ಹೊಸ ಕಟ್ಟಡ ಭಾಗ್ಯ: ಸಚಿವ ಶರಣಪ್ರಕಾಶ ಪಾಟೀಲ್‌

ಬಿಜೆಪಿ, ಸಂಘ ಪರಿವಾರ ಹೆಸರಲ್ಲಿ ಹಿಂದೆ ಚೈತ್ರಾ ಸೇರಿದಂತೆ ಅನೇಕರು ರಾಜ್ಯಾದ್ಯಂತ ಸಂಚರಿಸಿ ಏನೇನೆಲ್ಲಾ ಮಾಡಿದ್ದಾರೆ, ಮಾತನಾಡಿದ್ದಾರೆ ಎಂಬುದು ಗುಟ್ಟೇನಲ್ಲ. ಅದಕ್ಕೆಲ್ಲ ಉತ್ತರಿಸುವ ಕಾಲ ಇದೀಗ ಬಂದಿದೆ. ಯಾರದ್ದೋ ಹೆಸರು ಹೇಳಿ ಏನೆಲ್ಲವನ್ನು ಮಾಡಬಹುದು ಎಂದು ಹೊರಟವರಿಗೆ ಈಗ ಕಾನೂನು ಕುಣಿಕೆ ಎದುರಾಗಿದೆ. ಈ ನೆಲದ ಕಾನೂನು ಮೋಸಗಾರರನ್ನು ಬಿಡೋದಿಲ್ಲ ಎಂದರು.

ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ:

ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ಹಣಕಾಸು ವ್ಯವಸ್ಥೆ ಸರಿಯಾಗಿಲ್ಲ ಎಂಬ ಆರೋಪಗಳನ್ನು ತಳ್ಳಿ ಹಾಕಿದ ಅವರು, ಸಿಎಂ ಸಿದ್ದರಾಮಯ್ಯನವರು ಉತ್ತಮ ಆರ್ಥಿಕ ತಜ್ಞರಾಗಿದ್ದಾರೆ. ಪಂಚ ಗ್ಯಾರಂಟಿಗಳಿಂದಾಗಿ ಬಡವರು, ಸಾಮಾನ್ಯರ ಕೈಗೆ ಹಣ ನೀಡಿದ್ದಾರೆಂದರು.

ಬರ ಕುರಿತು ಮಾತುಕತೆಗೆ ಪ್ರಧಾನಿ ಸಮಯ ನೀಡುತ್ತಿಲ್ಲ: ಸಿಎಂ ಸಿದ್ದರಾಮಯ್ಯ

ಪಂಚ ಗ್ಯಾರಂಟಿಯಿಂದಾಗಿ ಮುಂದಿನ ನಾಲ್ಕು ವರ್ಷಗಳಲ್ಲಿ ರಾಜ್ಯದ ಜಿಡಿಪಿ ಬೆಳವಣಿಗೆ ಕಾಣಲಿದೆ. ಇದೊಂದು ರೀತಿಯಲ್ಲಿ ಅಭಿವೃದ್ಧಿಯ ಹೊಸ ಶಕೆಗೆ ಮುನ್ನುಡಿ ಬರೆದಿದೆ. ಹೊಸ ಸರ್ಕಾರ ಬಂದಿದೆ. ಶಾಸಕರ ನಿರೀಕ್ಷೆಗಳು ತುಂಬಾ ಇವೆ. ಆದಾಗ್ಯೂ ಎಲ್ಲರ ನಿರೀಕ್ಷೆಗಳಿಗೆ ಸಿಎಂ, ಡಿಸಿಎಂ , ಸಚಿವರು ಎಲ್ಲರೂ ಸ್ಪಂದಿಸುತ್ತಿದ್ದಾರೆ. ಸೋರಿಕೆಗೆ ಅವಕಾಶವಿಲ್ಲದಂತೆ ಕಟ್ಟುನಿಟ್ಟು ಆಡಳಿತ ಸಾಗಿದೆ. ಅಭಿವೃದ್ಧಿಗೆ ಹಣದ ಕೊರತೆ ಇಲ್ಲ ಎಂದರು.

ಮಹಿಳಾ ಮೀಸಲಾತಿ ಬಿಲ್‌ಗೆ ಸ್ವಾಗತ

ಕೇಂದ್ರ ಸಂಸತ್‌ನಲ್ಲಿ ಪಾಸ್‌ ಮಾಡಿರುವ ಮಹಿಳಾ ಮೀಸಲಾತಿ ಬಿಲ್‌ಗೆ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್‌ ಸ್ವಾಗತಿಸಿದರು. ಯುಪಿಎ ಸರ್ಕಾರದ ಕೂಸು ಇದು. ಸೋನಿಯಾ ಗಾಂಧಿಯವರ ಮಹತ್ವಾಕಾಂಕ್ಷಿ ಯೋಜನೆ ಇದಾಗಿತ್ತು. 2010 ರಲ್ಲಿ ರಾಜ್ಯಸಭೆಯಲ್ಲಿ ಈ ಬಿಲ್‌ ಪಾಸಾಗಿತ್ತಾದರೂ ಬಹುತ ಇಲ್ಲದ ಕಾರಣ ಲೋಕಸಭೆಯಲ್ಲಿ ಪಾಸಾಗಿರಲಿಲ್ಲ. ತುಂಬ ದಿನಗಳಿಂದ ಈ ಬಿಲ್‌ ನೆನೆಗುದಿಗೆ ಬಿದ್ದಿತ್ತು. ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಈ ಸರ್ಕಾರ ಕೊನೆ ಗಳಿಗೆಯಲ್ಲಾದರೂ ಮಹಿಳಾ ಮೀಸಲಾತಿ ಬಿಲ್‌ ಲೋಕಸಭೆಯಲ್ಲಿ ಪಾಸ್‌ ಮಾಡಿದ್ದಾರೆ. ಇದನ್ನು ನಾವು ಸ್ವಾಗತಿಸುತ್ತೇವೆ. ಏಕೆಂದರೆ ಮೂಲತಃ ಇದು ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಕೂಸು ಎಂದು ಡಾ. ಪಾಟೀಲ್‌ ಹೇಳಿದರು.

PREV
Read more Articles on
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ