ಕಳಪೆ ಬೀಜದವರ ಕಥೆ ಮುಗಿಸುತ್ತೇವೆ: ಕೃಷಿ ಸಚಿವ ಬಿ.ಸಿ. ಪಾಟೀಲ್‌

By Kannadaprabha NewsFirst Published Jun 20, 2020, 7:53 AM IST
Highlights

ಕೊಪ್ಪಳದ ಕೃಷಿ ಚಿತ್ರಣ ಬದಲಿಸುವೆ|ರಾಜ್ಯದಲ್ಲಿ ಇಲ್ಲಿ ವರೆಗೆ 15 ಕೋಟಿ ಮೊತ್ತದ ಕಳಪೆ ಬೀಜ ಪತ್ತೆ: ಬಿ.ಸಿ. ಪಾಟೀಲ್‌| ಯಾವುದೇ ಒತ್ತಡ ತಂತ್ರಕ್ಕೂ ಮಣಿಯಲ್ಲ , ವಿಶ್ವನಾಥ್‌ಗೆ ಸದ್ಯದಲ್ಲೇ ಸ್ಥಾನಮಾನ ಸಿಗಲಿದೆ| ಇಲ್ಲಿವರೆಗೆ 15 ಕೋಟಿ ಮೊತ್ತದ ಕಳಪೆ ಬೀಜವನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ| 
 

ಕೊಪ್ಪಳ(ಜೂ.20): ಜಿಲ್ಲೆಯ ಕೃಷಿ ಚಿತ್ರಣನ್ನು ಸಮಗ್ರವಾಗಿ ಬದಲಿಸಿ ರಾಷ್ಟಕ್ಕೆ ಮಾದರಿಯಾಗುವಂತೆ ರೂಪಿಸುವ ಮೂಲಕ ಜಿಲ್ಲೆಯ ಚಿತ್ರಣವನ್ನೇ ಬದಲಿಸುತ್ತೇವೆ ಎಂದು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್‌ ಹೇಳಿದ್ದಾರೆ. 

ಜಿಲ್ಲಾಡಳಿತ, ಸಹಕಾರ ಇಲಾಖೆ ಹಾಗೂ ಜಿಲ್ಲೆಯ ಸಹಕಾರ ಸಂಘಗಳಿಂದ ಶುಕ್ರವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ನಡೆದ ಆಶಾ ಕಾರ್ಯಕರ್ತೆಯರಿಗೆ ಪೋ›ತ್ಸಾಹಧನ ಚೆಕ್‌ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲೆಯನ್ನು ಕೃಷಿಯಲ್ಲಿ ಭಾರತದಲ್ಲಿಯೇ ಮಾದರಿಯನ್ನಾಗಿ ರೂಪಿಸಲು ಶ್ರಮೀಸುತ್ತೇವೆ. ರಾಜ್ಯದ ಕೃಷಿ ಸಚಿವನಾದ ಮೇಲೆ ಹೂ, ಹಣ್ಣು, ತರಕಾರಿಗಾಗಿ 165 ಕೋಟಿ ಬಿಡುಗಡೆ ಮಾಡಿದ್ದು, ಮೆಕ್ಕೆಜೋಳ ಬೆಳೆದ 10 ಲಕ್ಷ ರೈತರಿಗೆ ಐದು ಸಾವಿರ ರುಪಾ​ಯಿ​ಯಂತೆ ಸುಮಾರು 500 ಕೋಟಿ ಪೋ›ತ್ಸಾಹ ಧನವನ್ನಾಗಿ ಸರ್ಕಾರದಿಂದ ಮಂಜೂರು ಮಾಡಿದ್ದೇವೆ. ಅಲ್ಲದೆ ಇತ್ತೀಚೆಗೆ ಕೊಪ್ಪಳದಲ್ಲಿ ಅಕಾಲಿಕ ಮಳೆಯಿಂದಾಗಿ ಹಾನಿಗೊಳಗಾದ ರೈತರಿಗೂ ಪರಿಹಾರ ಒದಗಿಸುವ ಕಾರ್ಯ ಮಾಡಲಾಗಿದೆ ಎಂದರು.

'ಯಡಿಯೂರಪ್ಪ ಮೋಸ ಮಾಡುವ ಜಾಯಮಾನದವರಲ್ಲ'

ಕೊರೋನಾದಂತ ಕ್ಲಿಷ್ಟಕರ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಮನೆ, ಕುಟುಂಬ ಎಲ್ಲವನ್ನು ಬಿಟ್ಟು ಗ್ರಾಮೀಣ ಮಟ್ಟದಲ್ಲಿ ಪ್ರತಿ ಮನೆ-ಮನೆಗೆ ಭೇಟಿ ನೀಡಿ ಕೋವಿಡ್‌ ಲಕ್ಷಣವಿರುವ ವ್ಯಕ್ತಿಗಳನ್ನು ಗುರುತಿಸಿ, ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವ ಕಾರ್ಯ ಮಾಡುತ್ತಿದ್ದಾರೆ. ಅವರ ಧೈರ್ಯ ಮೆಚ್ಚಲೇಬೇಕು ಎಂದು ಸಚಿವರು ಹೇಳಿದರು.

ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ ಮಾತನಾಡಿ, ಆಶಾಕಾರ್ಯಕರ್ತೆಯರ ಕರ್ತವ್ಯ ಪ್ರಜ್ಞೆ ನಿಜಕ್ಕೂ ಶ್ಲಾಘನೀಯ. ಆಶಾ ಕಾರ್ಯಕರ್ತೆಯರಿಗೆ ಶೂನ್ಯ ಬಡ್ಡಿ ದರದಲ್ಲಿ . 50 ಸಾವಿರ ಸಾಲವನ್ನು ನೀಡಲಾಗುತ್ತಿದೆ. ಸ್ವ-ಸಹಾಯ ಗುಂಪುಗಳು, ಸ್ತ್ರೀ ಶಕ್ತಿ ಗುಂಪುಗಳು, ರೈತರು, ಬಡವರು ಮತ್ತಿತರರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಅಫೆಕ್ಸ್‌ ಬ್ಯಾಂಕ್‌ಗೆ 1,750 ಕೋಟಿ ಹಣವನ್ನು ನೀಡಲಾಗಿದ್ದು, ವಿವಿಧ ಭಾಗದ ಡಿಸಿಸಿ ಬ್ಯಾಂಕ್‌ಗಳ ಮೂಲಕ ಇದು ವರೆಗೂ 1400 ಕೋಟಿಯಷ್ಟುಹಣವನ್ನು ಸಾಲವಾಗಿ ನೀಡಲಾಗಿದೆ. ಕೇಂದ್ರ ಸರ್ಕಾರದ ಆದೇಶದಂತೆ ಸಾಲ ಮರುಪಾವತಿಗೆ 3 ತಿಂಗಳ ಕಾಲಾವಧಿಯನ್ನು ವಿಸ್ತರಿಸಿದ್ದು, ಆಗಸ್ಟ್‌ ವರೆಗೆ ಸಾಲ ಮರುಪಾವತಿ ಮಾಡಲು ಅವಕಾಶವಿದೆ. ಕೋವಿಡ್‌ ವಾರಿಯ​ರ್ಸ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ನರ್ಸ್‌ಗಳಿಗೆ ಪೋ›ತ್ಸಾಹ ಧನದ ರೂಪದಲ್ಲಿ ಆರ್ಥಿಕ ಸಹಾಯ ಮಾಡುವ ಯೋಜನೆಯಿದ್ದು, ಮುಂದಿನ ದಿನಗಳಲ್ಲಿ ಆಶಾ ಕಾರ್ಯಕರ್ತೆಯರಿಗೂ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದರು.

ಕೊಪ್ಪಳದಲ್ಲಿ ಮತ್ತೆ ಕೊರೋನಾ ಅಬ್ಬರ: ಜಿಂದಾಲ್‌ ನೌಕರ ಸೋಂಕು ದೃಢ

ಸಂಸದ ಸಂಗಣ್ಣ ಕರಡಿ ಮಾತನಾಡಿ, ಆಶಾ ಕಾರ್ಯಕರ್ತೆಯರು ಈಗಾಗಲೇ ಆತ್ಮ ವಿಶ್ವಾಸದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೋ›ತ್ಸಾಹ ಧನವನ್ನು ನೀಡುವುದರ ಮೂಲಕ ಅವರ ಆತ್ಮ ಬಲವನ್ನು ಇನ್ನಷ್ಟುಹೆಚ್ಚಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಇನ್ನೊಬ್ಬರ ಬಳಿ ಮಾತನಾಡಲು ನಾವೆಲ್ಲ ಹಿಂಜರಿಯುತ್ತಿದ್ದೇವೆ. ಈ ವೇಳೆ ಅವರ ಕಾರ್ಯ ಮೆಚ್ಚುವಂತಹದ್ದು ಎಂದರು.

ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಕೊಪ್ಪಳ ಜಿಲ್ಲೆಗೆ ಹೆಚ್ಚಿನ ಸಂಖ್ಯೆ ಡಿಸಿಸಿ ಬ್ಯಾಂಕ್‌ಗಳ ಅಗತ್ಯವಿದ್ದು, ರಾಯಚೂರಿನಲ್ಲಿರುವ ಆರ್‌ಡಿಸಿಸಿ ಬ್ಯಾಂಕ್‌ನ್ನು ವಿಭಜಿಸಿ ಕೊಪ್ಪಳದಲ್ಲಿ ಹೊಸದಾಗಿ ಕೇಂದ್ರ ಸಹಕಾರಿ ಬ್ಯಾಂಕ್‌ ರಚಿಸಲು ಕ್ರಮ ಕೈಗೊಳ್ಳಬೇಕು ಎಂದು ಸಹಕಾರ ಸಚಿವರಲ್ಲಿ ಮನವಿ ಮಾಡಿದರು.

ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್‌ ಭಯ್ಯಾಪೂರ ಮಾತನಾಡಿ, ಆಶಾಗಳು ಉತ್ತಮ ಕಾರ್ಯ ಮಾಡುತ್ತಿದ್ದು, ಪ್ರಸ್ತುತ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಷ್ಟುದಿನ ತಾವು ಮಾಡಿದ್ದ ಕಾರ್ಯಗಿಂತ ಇನ್ನೂ ಹೆಚ್ಚಿಗೆ ಶ್ರಮಿಸಬೇಕಾಗಿದೆ ಎಂದು ಹೇಳಿದರು.

ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್‌ ಮಾತನಾಡಿ, ಕೊಪ್ಪಳ ಜಿಲ್ಲಾ ಕೇಂದ್ರದ ಮಧ್ಯವರ್ತಿ ಸಹಕಾರಿ ಬ್ಯಾಂಕ್‌ ವಿಭಜಿಸಿ ಕೊಪ್ಪಳ ಜಿಲ್ಲೆಗೆ ಕೇಂದ್ರ ಸಹಕಾರಿ ಬ್ಯಾಂಕ್‌ ರಚನೆ ಮಾಡಬೇಕೆಂದು ಜಿಲ್ಲೆಯ ಎಲ್ಲ ಸಹಕಾರಿ ಸಂಘಗಳ ಪರವಾಗಿ ಸಹಕಾರ ಸಚಿವರಿಗೆ ಮನವಿ ಮಾಡಿದರು.

ಈ ವೇಳೆ ಕೊರೋನಾ ನಿರ್ಮೂಲನೆಗೆ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸರ್ಕಾರದಿಂದ ಪೋ›ತ್ಸಾಹ ಧನ ನೀಡಿ ಸತ್ಕರಿಸಲಾಯಿತು. ಡಿಎಚ್‌ಒ ಡಾ. ಲಿಂಗರಾಜ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಮುಂಗಾರು ಹಂಗಾಮಿನ ಫಸಲ್‌ ಭೀಮಾ ಯೋಜನೆಯ ಕುರಿತು ವಿವರಗಳನ್ನು ಒಳಗೊಂಡ ಕರಪತ್ರವನ್ನು ಬಿಡುಗಡೆ ಮಾಡಲಾಯಿತು.

ಸರ್ವೋದಯ ಬೈಯರ್‌ ಕಂಪನಿ ವತಿಯಿಂದ 5 ಜನ ರೈತರಿಗೆ ಸಾಂಕೇತಿಕವಾಗಿ ಉಚಿತ ಬೀಜ ವಿತರಣೆ ಮಾಡಲಾಯಿತು. ಬಸವರಾಜ ಪಿ. ಸ್ವಾಗತಿಸಿದರು. ಕಲಬುರಗಿ ವಿಭಾಗದ ಜಂಟಿ ನಿಬಂಧಕ ಗೋಪಾಲ ಚವ್ಹಾಣ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಗಡಿಯಲ್ಲಿ ಹುತಾತ್ಮರಾದ ಯೋಧರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು, ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ್‌, ಜಿಪಂ ಸಿಇಒ ರಘುನಂದನ್‌ ಮೂರ್ತಿ, ಉಪ ವಿಭಾಗಾಧಿಕಾರಿ ನಾರಯಣರೆಡ್ಡಿ ಕನಕರೆಡ್ಡಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಬಾನಾ ಎಂ. ಶೇಖ್‌ ಸೇರಿ ಜಿಲ್ಲೆಯ ಎಲ್ಲ ತಾಲೂಕುಗಳ ಆಶಾ ಕಾರ್ಯಕರ್ತೆಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಕಳಪೆ ಬೀಜದವರ ಕಥೆ ಮುಗಿಸುತ್ತೇವೆ

ಕಳಪೆ ಬೀಜ ಉತ್ಪಾದಕರು, ಮಾರಾಟಗಾರರ ವಿರುದ್ಧ ಮತ್ತೆ ಗುಡುಗಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್‌, ಕಳಪೆ ಬೀಜ ಮಾರಾಟ ಮಾಡಿದವರ ಒತ್ತಡ ತಂತ್ರಗಳಿಗೆ ನಾವು ಮಣಿಯುವುದಿಲ್ಲ. ಕಳಪೆ ಬೀಜ ಮಾರಾಟ ಮಾಡುವವರ ಕಥೆ ಮುಗಿಸುತ್ತೇವೆ ಎಂದು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಕಳಪೆ ಬೀಜ ಮಾರಾಟವನ್ನು ನಾವೇ ಪತ್ತೆ ಮಾಡುತ್ತಿದ್ದೇವೆ. ಹಿಂದೆ ಇಷ್ಟುಪ್ರಮಾಣದಲ್ಲಿ ಕಳಪೆ ಬೀಜ ಪತ್ತೆಯಾಗಿರಲಿಲ್ಲ. ಇದರ ಕುರಿತು ಹಿಂದಿನವರು ಯಾರೂ ಕಾಳಜಿ ವಹಿಸಿದ್ದಿಲ್ಲ. ನಾನು ಕೃಷಿ ಸಚಿವನಾದ ಬಳಿಕ ಇದೊಂದು ಡ್ರೈವ್‌ ಸ್ಟಾರ್ಟ್‌ ಮಾಡಿದ್ದೇನೆ. ಇಲ್ಲಿವರೆಗೆ 15 ಕೋಟಿ ಮೊತ್ತದ ಕಳಪೆ ಬೀಜವನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದರು.

ರಾಯಚೂರು, ಬೀದರ್‌, ಹಾವೇರಿಯಲ್ಲಿ ಕಳಪೆ ಬೀಜ ಹಿಡಿದಿದ್ದೇವೆ. ಬಿತ್ತನೆ ಸಮಯವಾದ ಈ ವೇಳೆ ಕಳಪೆ ಬೀಜ ಪೂರೈಕೆ ಆಗಬಾರದು. ಅದರಂತೆ ಕಳಪೆ ಗೊಬ್ಬರ, ಅವಧಿ ಮೀರಿದ ಔಷಧವನ್ನು ಸೀಜ್‌ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಇದರ ದೊಡ್ಡ ಜಾಲವನ್ನು ನಾವು ಬೇಧಿಸಿದ್ದೇವೆ. ಇನ್ನೂ ಬೇಧಿಸುವುದು ಬಹಳಷ್ಟಿದೆ. ಹೀಗೆ ಪತ್ತೆಯಾದವರ ಮೇಲೆ ಸೀಡ್ಸ್‌ ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲಿಸಿದ್ದೇವೆ. ಹಲವರನ್ನು ಬಂಧಿಸಲಾಗಿದ್ದು, ನ್ಯಾಯಾಲಯದಲ್ಲಿ ಪ್ರಕರಣಗಳು ವಿಚಾರಣೆಯಲ್ಲಿವೆ. ವಶಪಡಿಸಿಕೊಳ್ಳಲಾದ ಬೀಜವನ್ನು ಪ್ರಯೋಗಾಲಯಕ್ಕೆ ಕಳುಹಿಸಿ ತಪಾಸಣೆ ಮಾಡಿಸುತ್ತಿದ್ದೇವೆ. ಈ ವಿಚಾರದಲ್ಲಿ ನಮ್ಮ ಮೇಲೆ ಒತ್ತಡ ಬಂದಿದೆ. ನಾವು ಯಾವುದೇ ಒತ್ತಡ ತಂತ್ರಕ್ಕೂ ಮಣಿಯದೆ ಕಳಪೆ ಬೀಜದವರ ಕಥೆ ಮುಗಿಸುತ್ತೇವೆ. ಅಂಥವರನ್ನು ಮುಕ್ತಾಯ ಮಾಡುವುದು, ರೈತರಿಗೆ ಒಳ್ಳೆಯದು ಮಾಡುವುದು ನಮ್ಮ ಕರ್ತವ್ಯ. ಒತ್ತಡಕ್ಕೆ ಮಣಿದರೆ ತಾಯಿಯೇ ಮಗುವಿಗೆ ವಿಷ ಕುಡಿಸಿದಂತೆ ಎಂದರು.

ಕಡಲೆ ಮತ್ತು ತೊಗರಿ ಬೆಳೆ ಬೆಂಬಲ ಬೆಲೆ ರೈತರಿಗೆ ಇನ್ನೂ ಸಿಗಬೇಕಿದೆ. ಕ್ವಿಂಟಲ್‌ಗೆ 5800 ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. 300 ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕಿದೆ. ಒಟ್ಟಾರೆ ರಾಜ್ಯವು 9 ಕೋಟಿ ಬಿಡುಗಡೆ ಮಾಡಬೇಕಿದೆ. ಸಹಕಾರಿ ಸಚಿವರ ಜತೆಗೆ ಈ ಕುರಿತು ಚರ್ಚಿಸಿದ್ದು, ಅವರು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ ಎಂದರು.

ವಿಧಾನಪರಿಷತ್‌ಗೆ ಎಚ್‌. ವಿಶ್ವಾನಾಥ್‌ ಅವರಿಗೆ ಅವಕಾಶ ತಪ್ಪಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೂವರಿಗೂ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದರೆ, ಇಬ್ಬರಿಗೆ ದೊರೆತಿದೆ. ಇನ್ನೂ ನಾಲ್ಕೈದು ಸ್ಥಾನಗಳು ಕಾಲಿ ಇವೆ. ವಿಶ್ವನಾಥ ಅವರಿಗೂ ಅವಕಾಶ ನೀಡುವಂತೆ ಒತ್ತಾಯ ಇದೆ. ನಾಮ ನಿರ್ದೇಶನದ ಮೂಲಕವೂ ಸ್ಥಾನ ನೀಡಬಹುದು. ಸದ್ಯದಲ್ಲೆ ಅವರಿಗೂ ಅವಕಾಶ ಸಿಗಲಿದೆ ಎಂದು ಹೇಳಿದರು.
 

click me!