
ರಾಯಚೂರು: ಮಂತ್ರಾಲಯಕ್ಕೆ ಭೇಟಿ ನೀಡುವ ಕರ್ನಾಟಕದ ಭಕ್ತರಿಗೆ ವಸತಿ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಸುಸಜ್ಜಿತ ಕರ್ನಾಟಕ ಛತ್ರವನ್ನು (ವಸತಿ ಗೃಹ) ನಿರ್ಮಿಸಲಾಗಿದೆ. ರಾಯರ ದರ್ಶನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಇಲ್ಲಿ ಒಟ್ಟು 50 ಕೋಣೆಗಳ (ರೂಂ) ವ್ಯವಸ್ಥೆ ಇದೆ. ಆದರೆ, ಪ್ರಸ್ತುತ ಈ ವಸತಿ ಗೃಹದಲ್ಲಿ ತೀವ್ರ ಸ್ವರೂಪದ ನೀರಿನ ಅಭಾವ ತಲೆದೋರಿದೆ. ಛತ್ರದ ಆವರಣದಲ್ಲಿರುವ 50 ರೂಂಗಳಿಗೆ ನೀರು ಸರಬರಾಜು ಮಾಡಲು ಎರಡು ಬೋರ್ವೆಲ್ಗಳನ್ನು ಅವಲಂಬಿಸಲಾಗಿತ್ತು. ಆದರೆ, ಸಮರ್ಪಕ ನಿರ್ವಹಣೆಯಿಲ್ಲದೆ ಇದರಲ್ಲಿ ಒಂದು ಬೋರ್ವೆಲ್ ಸಂಪೂರ್ಣವಾಗಿ ಕೆಟ್ಟು ನಿಂತಿದೆ. ಇನ್ನುಳಿದ ಮತ್ತೊಂದು ಬೋರ್ವೆಲ್ನಲ್ಲಿ ಬೇಸಿಗೆಯ ಭೀಕರ ತಾಪ ಹಾಗೂ ಅಂತರ್ಜಲ ಕುಸಿತದಿಂದಾಗಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಆ ಬೋರ್ವೆಲ್ನಿಂದ ಆಗೊಮ್ಮೆ ಈಗೊಮ್ಮೆ ಅಲ್ಪಸ್ವಲ್ಪ ನೀರು ಬರುತ್ತಿದೆಯಾದರೂ, ಅದು ಇಡೀ ವಸತಿ ಗೃಹದ ಅಗತ್ಯವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.
ಬೋರ್ವೆಲ್ ರಿಪೇರಿ ಹಾಗೂ ಅದಕ್ಕೆ ಮರುಪೂರಣ (ರಿಚಾರ್ಜ್) ವ್ಯವಸ್ಥೆ ಮಾಡುವಲ್ಲಿ ಸಂಬಂಧಪಟ್ಟ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ. ಅಧಿಕಾರಿಗಳ ಈ ದಿವ್ಯ ನಿರ್ಲಕ್ಷ್ಯ ಮತ್ತು ಮೈಗಳ್ಳತನದಿಂದಾಗಿ ಬೋರ್ವೆಲ್ ದುರಸ್ತಿ ಕಾರ್ಯ ನನೆಗುದಿಗೆ ಬಿದ್ದಿದೆ. ಇದರ ನೇರ ಪರಿಣಾಮವನ್ನು ರಾಯರ ದರ್ಶನಕ್ಕೆ ಸಾಲು ಸಾಲಾಗಿ ಬರುತ್ತಿರುವ ಭಕ್ತರು ಎದುರಿಸುವಂತಾಗಿದೆ. ದೂರದ ಊರುಗಳಿಂದ ನೆಮ್ಮದಿಯ ದರ್ಶನಕ್ಕಾಗಿ ಬರುವ ಭಕ್ತರು, ಕರ್ನಾಟಕ ಛತ್ರದಲ್ಲಿ ಕೋಣೆಗಳು ಸಿಗದೇ ತೀವ್ರ ಪರದಾಡುವಂತಾಗಿದೆ. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಭಕ್ತರು ವಸತಿ ಸೌಕರ್ಯವಿಲ್ಲದೆ ನಿರಾಶರಾಗಿ ವಾಪಸ್ ಹೋಗುತ್ತಿದ್ದಾರೆ.
ನೀರಿನ ತೀವ್ರ ಅಭಾವವಿರುವ ಕಾರಣ 50 ಕೋಣೆಗಳಿಗೂ ಸದ್ಯ ಬೀಗ ಹಾಕಲಾಗಿದ್ದು, ಭಕ್ತರಿಗೆ ಕೋಣೆಗಳನ್ನು ನೀಡಲಾಗುತ್ತಿಲ್ಲ. ಈ ಕುರಿತು ವಸತಿ ಗೃಹದ ಸಿಬ್ಬಂದಿಯು ಪ್ರವೇಶ ದ್ವಾರದಲ್ಲಿ, ನೀರಿನ ಅಭಾವವಿರುವುದರಿಂದ ರೂಂಗಳನ್ನು ನೀಡಲಾಗುವುದಿಲ್ಲ. ದಯವಿಟ್ಟು ಭಕ್ತಾದಿಗಳು ಸಹಕರಿಸಬೇಕು ಎಂದು ಸಾರ್ವಜನಿಕ ಪ್ರಕಟಣೆಯ ನೋಟಿಸ್ ಬೋರ್ಡ್ ಹಾಕಿದ್ದಾರೆ. ಸಿಬ್ಬಂದಿಯ ಈ ಧೋರಣೆ ಮತ್ತು ವ್ಯವಸ್ಥೆಯ ವೈಫಲ್ಯಕ್ಕೆ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಕರ್ನಾಟಕದಿಂದ ಧಾವಿಸುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಅಧೀನದಲ್ಲಿರುವ ವಸತಿ ಗೃಹವೇ ನಿರ್ವಹಣೆಯಿಲ್ಲದೆ ಮುಚ್ಚಿರುವುದು ದುರದೃಷ್ಟಕರ. ಆದ್ದರಿಂದ, ಧಾರ್ಮಿಕ ದತ್ತಿ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು, ಕೆಟ್ಟುಹೋಗಿರುವ ಬೋರ್ವೆಲ್ಗಳನ್ನು ಸಮರೋಪಾದಿಯಲ್ಲಿ ರಿಪೇರಿ ಮಾಡಿಸಬೇಕು. ವಸತಿ ಗೃಹಕ್ಕೆ ಶಾಶ್ವತ ನೀರಿನ ಸೌಕರ್ಯ