ಮಂಗಳೂರು: ಭೂ ವಿವಾದದ ಸೇಡು, ಅಪ್ಪನಿಗೂ ಶೆಟ್ಟಿಗೂ 2 ಕೋಟಿ ಜಾಗದ ವ್ಯಾಜ್ಯ, ಕಾರು ಹರಿಸಿ ಹತ್ಯೆಗೆ ಯತ್ನಿಸಿದ ಮಗ!

Published : Mar 18, 2026, 08:19 PM IST
Mangaluru murder attempt news

ಸಾರಾಂಶ

ಮಂಗಳೂರಿನಲ್ಲಿ ಭೂ ವ್ಯವಹಾರಕ್ಕೆ ಸಂಬಂಧಿಸಿದ ಹಣಕಾಸು ವಿವಾದದ ಹಿನ್ನೆಲೆಯಲ್ಲಿ, ಮೊಹಮ್ಮದ್ ಶರೀಫ್ ಎಂಬಾತ ಮೋಹನ್ ದಾಸ್ ಶೆಟ್ಟಿ ಎಂಬುವವರ ಮೇಲೆ ಕಾರು ಹರಿಸಿ ಕೊಲೆ ಮಾಡಲು ಯತ್ನಿಸಿದ್ದಾನೆ. ಈ ಆಘಾತಕಾರಿ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕದ್ರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮಂಗಳೂರು: ಭೂ ವ್ಯವಹಾರಕ್ಕೆ ಸಂಬಂಧಿಸಿದ ಹಣಕಾಸು ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಕಾರು ಹರಿಸಿ ಕೊಲೆ ಮಾಡಲು ಯತ್ನಿಸಿದ ಗಂಭೀರ ಪ್ರಕರಣ ಮಂಗಳೂರಿನಲ್ಲಿ ನಡೆದಿದೆ. ಕಾರು ಹತ್ತಿಸಿ ಹತ್ಯೆ ಮಾಡಲು ಯತ್ನಿಸಿದ ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಕದ್ರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ನಗರದ ಫಲ್ನೀರ್ ನಿವಾಸಿ ಮೊಹಮ್ಮದ್ ಶರೀಫ್ (26) ಎಂದು ಗುರುತಿಸಲಾಗಿದೆ. ಗಾಯಗೊಂಡ ವ್ಯಕ್ತಿ ಮಲ್ಲಿಕಟ್ಟೆ ನಿವಾಸಿ ಮೋಹನ್ ದಾಸ್ ಶೆಟ್ಟಿ (56) ಎಂಬುವವರಾಗಿದ್ದಾರೆ.

ಘಟನೆ ಹಿನ್ನೆಲೆ:

ಪ್ರಕರಣ ಸಂಬಂಧ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿರುವ ಮೋಹನ್ ದಾಸ್ ಶೆಟ್ಟಿ ಅವರು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇದು ಭೂವ್ಯಾಜ್ಯಕ್ಕೆ ಸಂಬಂಧಿಸಿದ ವೈಷಮ್ಯ ಎಂಬುದು ಬಹಿರಂಗವಾಗಿದೆ. ಮೋಹನ್ ದಾಸ್ ಶೆಟ್ಟಿ ಮತ್ತು ಆರೋಪಿ ಮೊಹಮ್ಮದ್ ಶರೀಫ್ ಹಾಗೂ ಆತನ ತಂದೆ ಮೊಹಮ್ಮದ್ ಇಕ್ಬಾಲ್ ಅವರ ನಡುವೆ ಭೂ ವ್ಯವಹಾರಕ್ಕೆ ಸಂಬಂಧಿಸಿದ ಹಣಕಾಸಿನ ವ್ಯಾಜ್ಯ ಇತ್ತು. ಸುರತ್ಕಲ್‌ನ ಕಾನ ಮತ್ತು ವಾವಂಜೂರಿನ ಪ್ರದೇಶಗಳಲ್ಲಿ ಸುಮಾರು ₹2 ಕೋಟಿ ಮೌಲ್ಯದ ಆಸ್ತಿ ಹೂಡಿಕೆ ಮಾಡಿದ್ದ ಶರೀಫ್, ಆದರೆ ಮೋಹನ್ ದಾಸ್ ಶೆಟ್ಟಿ ಅವರು ಆರೋಪಿಗೆ ಮೋಸ ಮಾಡಿದ್ದಾರೆ ಎಂದು ಶಂಕಿಸಿ ಅಸಮಾಧಾನಗೊಂಡಿದ್ದನು.

ಮೊಬೈಲ್ ಫೋನ್ ಕಸಿದುಕೊಂಡು ಕಾರು ಗುದ್ದಿಸಿ ಹತ್ಯೆಗೆ ಯತ್ನ

ಹತ್ಯೆ ಯತ್ನ ಘಟನೆಯ ದಿನ ಬೆಳಿಗ್ಗೆ ಆರ್ಯ ಸಮಾಜ ರಸ್ತೆಯ ಸಮೀಪ ಮಾತುಕತೆ ನಡೆಸಲು ಇಬ್ಬರೂ ಭೇಟಿಯಾಗಿದ್ದರು. ಈ ವೇಳೆ ಆರೋಪಿಯು ದೂರುದಾರ ಮೋಹನ್ ದಾಸ್ ಶೆಟ್ಟಿ ಅವರ ಮೊಬೈಲ್ ಫೋನ್ ಕಸಿದುಕೊಂಡಿದ್ದಾನೆ. ನಂತರ, ಶೆಟ್ಟಿ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ, ಕೋಪಗೊಂಡ ಆರೋಪಿಯು ತನ್ನ ಎಸ್‌ಯುವಿ ಕಾರನ್ನು ಅತಿವೇಗದಲ್ಲಿ ಚಲಾಯಿಸಿಕೊಂಡು ಬಂದು ಹಿಂಬದಿಯಿಂದ ಬೈಕ್‌ಗೆ ಡಿಕ್ಕಿ ಹೊಡೆದು ಕೊಲೆ ಮಾಡಲು ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಕಾರು ಬಂದು ಗುದ್ದಿದ ಪರಿಣಾಮ ರಸ್ತೆಗೆ ಬಿದ್ದ ಮೋಹನ್ ದಾಸ್ ಶೆಟ್ಟಿ ತೀವ್ರ ಗಾಯಗೊಂಡಿದ್ದಾರೆ.

ಪ್ರಕರಣ ಸಂಬಂಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಸೆಕ್ಷನ್ 109, 281, 352, 351 ಮತ್ತು 304(2) ಅಡಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಈ ಘಟನೆ ಭೂ ವ್ಯವಹಾರಗಳಲ್ಲಿನ ವಿವಾದಗಳು ಎಷ್ಟು ಗಂಭೀರ ಸ್ವರೂಪ ಪಡೆಯಬಹುದು ಎಂಬುದಕ್ಕೆ ಉದಾಹರಣೆಯಾಗಿದ್ದು, ಇಂತಹ ವ್ಯಾಜ್ಯಗಳನ್ನು ಕಾನೂನುಬದ್ಧವಾಗಿ ಪರಿಹರಿಸಿಕೊಳ್ಳಬೇಕು ಎಂದು ಪೊಲೀಸರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

PREV
Read more Articles on
click me!

Recommended Stories

ರಸ್ತೆಯಲ್ಲಿ ಗಲಾಟೆ : ಡ್ರೈವರ್‌ಗೆ ಹೊಡೆಯುವುದನ್ನು ತಡೆಯಲು ಹೋದ ತಾಯಿಯನ್ನೇ ಕೆಳಗೆ ತಳ್ಳಿದ ಮಗ
ಯುಗಾದಿ ಹೊಸತೊಡಕಿಗೆ ಮಾಂಸ ಪ್ರಿಯರಿಗೆ ಗುಡ್‌ನ್ಯೂಸ್‌, ಮಾಂಸ-ಮೀನು ಬೆಲೆಯಲ್ಲಿ ಭಾರೀ ಇಳಿಕೆ!