
ಮಂಡ್ಯ (ಫೆ.02): ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗಾರಿಕಾ ಸಚಿವರಾಗಿದ್ದ ಮುರುಗೇಶ್ ನಿರಾಣಿ ಒಡೆತನದ ಕಂಪನಿಯಿಂದ ಮಂಡ್ಯ ಜಿಲ್ಲೆಯ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್ಎಸ್ಕೆ) ಲೀಸ್ಗೆ ಪಡೆದಿತ್ತು. ಆದರೆ, ಸರ್ಕಾರದ ಒಪ್ಪಂದ ಹಾಗೂ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ ಪಿಎಸ್ಎಸ್ಕೆಯ ಸಿಬ್ಬಂದಿಯನ್ನು ಏಕಾಏಕಿ ಕಿತ್ತೆಸೆಯಲಾಗಿದ್ದು, ಎಲ್ಲ ನೌಕರರು ಕಾರ್ಖಾನೆ ಮುಂದೆ ಪ್ರತಿಭಟನೆ ಆರಂಭಿಸಿದ್ದಾರೆ.
ಹೌದು, ಸರ್ಕಾರದ ಷರತ್ತು, ಹೈ ಕೋರ್ಟ್ ಆದೇಶವನ್ನೂ ಧಿಕ್ಕರಿಸಿ ನಿರಾಣಿ ಶುಗರ್ಸ್ ಸಂಸ್ಥೆಯಿಂದ ಏಕಾಏಕಿ ನೌಕರರನ್ನ ಕೆಲಸದಿಂದ ಕಿತ್ತೆಸೆಯಲಾಗಿದೆ. ನಿರಾಣಿ ಶುಗರ್ಸ್ ದಬ್ಬಾಳಿಕೆಗೆ ಸ್ಥಳೀಯ ಮಂಡ್ಯ ಸೇರಿದಂತೆ ರಾಜ್ಯದ ಕನ್ನಡಿಗ ನೌಕರರು ಕಂಗಾಲು ಆಗಿದ್ದಾರೆ. ಮಾಜಿ ಸಚಿವ ಮುರುಗೇಶ್ ನಿರಾಣಿ ಒಡೆತನದ ಕಂಪನಿಯಿಂದ ನೌಕರಿ, ವೇತನ ಇಲ್ಲದೆ ಬಡ ನೌಕರರ ಕುಟುಂಬ ಬೀದಿಗೆ ಬಿದ್ದಿದೆ. ನೌಕರರ ಪರ ಕೋರ್ಟ್ ಆದೇಶವಿದ್ದರೂ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಕಾರ್ಖಾನೆ ಆವರಣದಲ್ಲೇ ನೌಕರರಿಂದ ಹೋರಾಟ ಆರಂಭಿಸಲಾಗಿದೆ. ಕೆಲಸದಿಂದ ವಜಾ ಮಾಡಲಾದ ಎಲ್ಲ ಬಡ ನೌಕರರು ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಬಳಿ ನ್ಯಾಯಕ್ಕಾಗಿ ಆಗ್ರಹಿಸಿ ಹೋರಾಟ ಮಾಡುತ್ತಿದ್ದಾರೆ.
ಕಳೆದ 5 ವರ್ಷದ ಹಿಂದೆ ಮುರುಗೇಶ್ ನಿರಾಣಿ ಅವರೇ ಕೈಗಾರಿಕಾ ಸಚಿವರಾಗಿದ್ದ ವೇಳೆ ನಷ್ಟದಲ್ಲಿದ್ದ ಹಾಗೂ ಮುಚ್ಚುವ ಸ್ಥಿತಿಯಲ್ಲಿದ್ದ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಶುಗರ್ಸ್ ಸಂಸ್ಥೆಯಿಂದ ಲೀಸ್ಗೆ ಪಡೆದಿತ್ತು. ಈ ಹಿಂದೆ ಸಹಕಾರಿ ಸ್ವಾಮ್ಯದಲ್ಲೇ PSSK ಕಾರ್ಖಾನೆಯು ನಡೆಯುತ್ತಿತ್ತು. ಇದನ್ನು ಖಾಸಗಿ ಸಂಸ್ಥೆಯಾದ ನಿರಾಣಿ ಶುಗರ್ಸ್ಗೆ ಲೀಸ್ಗೆ ಕೊಡುವಾಗ ಈಗಾಘಲೇ ಕಾರ್ಯ ನಿರ್ವಹಿಸುತ್ತಿರುವ ಎಲ್ಲ PSSK ನೌಕರರನ್ನ ಯಥಾವತ್ತಾಗಿ ಮುಂದುವರೆಸುವಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಇದನ್ನೂ ಓದಿ: ಬಡವರು, ಮಧ್ಯಮ ವರ್ಗ, ರೈತರಿಗೆ ಅನುಕೂಲಕರ ಬಜೆಟ್: ಜೋಶಿ
ಸರ್ಕಾರ ಹಾಗೂ ನಿರಾಣಿ ಶುಗರ್ಸ್ ಒಪ್ಪಂದದಂತೆ ನೌಕರರನ್ನು ಮುಂದುವರೆಸದೇ ಕಿರುಕುಳ ನೀಡಲಾಗಿದೆ. ಇದೀಗ ನಿರಾಣಿ ಶುಗರ್ಸ್ ಸಂಸ್ಥೆಯಿಂದ 45 ನೌಕರರನ್ನ ಏಕಾಏಕಿ ಕೆಲಸದಿಂದ ತೆಗೆದು ಹಾಖಲಾಗುತ್ತಿದೆ. ಸ್ಥಳೀಯ ಮಂಡ್ಯ ಜಿಲ್ಲೆಯ ಹಾಗೂ ರಾಜ್ಯದ ಇತರೆ ಜಿಲ್ಲೆಗಳ ನೌಕರರನ್ನು ತೆಗೆದುಹಾಕಿ ಕಾರ್ಖಾನೆ ಕೆಲಸಕ್ಕೆ ಹೊರ ರಾಜ್ಯದವರಿಗೆ ಹೆಚ್ಚು ಮಣೆ ಹಾಕಲಾಗುತ್ತಿದೆ. ಸ್ಥಳೀಯ ಶಾಸಕರು, ಅಧಿಕಾರಿಗಳು, ಹೋರಾಟಗಾರರ ಮಾತಿಗೂ ಮನ್ನಣೆ ಕೊಡುತ್ತಿಲ್ಲ. ಹೀಗಾಗಿ, ನಿರಾಣಿ ಶುಗರ್ಸ್ ಆಡಳಿತ ಮಂಡಳಿ ವಿರುದ್ಧ ನೊಂದ ನೌಕರರು, ರೈತ ಮುಖಂಡರಿಂದ ಆಕ್ರೋಶ ವ್ಯಕ್ತವಾಗಿದೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೂಚನೆಗೂ ಕಿಮ್ಮತ್ತು ನೀಡದೇ ಕಾರ್ಖಾನೆಯಿಂದ ಕಾರ್ಮಿಕರನ್ನು ಕಿತ್ತೆಸೆಯಲಾಗಿದೆ.