ಜಿಟಿಪಿಟಿ ಮ್ಯಾಂಡೌಸ್‌ ಮಳೆಗೆ ಜನಜೀವನ ಅಸ್ತವ್ಯಸ್ತ

By Kannadaprabha NewsFirst Published Dec 14, 2022, 5:08 AM IST
Highlights

ತಾಲೂಕಿನಾದ್ಯಂತ ಕಳೆದ 3 ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮ್ಯಾಂಡಮ್‌ ಮಳೆಯಿಂದಾಗಿ ಜನಸಾಮಾನ್ಯರ ಬದುಕು ಅಸ್ತವ್ಯಸ್ತವಾಗಿದೆ. ಕೃಷಿ ಚಟುವಟಿಕೆ ಹಾಗೂ ಕೂಲಿಕಾರ್ಮಿಕರಿಗೆ ಸಾಕಷ್ಟುತೊಂದರೆಯಾಗಿದ್ದು, ದಿನನಿತ್ಯ ಸುರಿಯುತ್ತಿರುವ ಮಳೆಗೆ ಜನ ಬೇಸತ್ತಿದ್ದಾರೆ. ಪ್ರಾಕೃತಿಕವಾಗಿ ಅನುಕೂಲವಾಗಬೇಕಿದ್ದ ಮಳೆ ಇಂದು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ.

 ಮಧುಗಿರಿ (ಡಿ.14): ತಾಲೂಕಿನಾದ್ಯಂತ ಕಳೆದ 3 ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮ್ಯಾಂಡೌಸ್‌ ಮಳೆಯಿಂದಾಗಿ ಜನಸಾಮಾನ್ಯರ ಬದುಕು ಅಸ್ತವ್ಯಸ್ತವಾಗಿದೆ. ಕೃಷಿ ಚಟುವಟಿಕೆ ಹಾಗೂ ಕೂಲಿಕಾರ್ಮಿಕರಿಗೆ ಸಾಕಷ್ಟುತೊಂದರೆಯಾಗಿದ್ದು, ದಿನನಿತ್ಯ ಸುರಿಯುತ್ತಿರುವ ಮಳೆಗೆ ಜನ ಬೇಸತ್ತಿದ್ದಾರೆ. ಪ್ರಾಕೃತಿಕವಾಗಿ ಅನುಕೂಲವಾಗಬೇಕಿದ್ದ ಮಳೆ ಇಂದು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ.

ಕಳೆದ 15 ವರ್ಷಗಳಿಂದ ಮಳೆ (Rain)  ಬಾರದೇ ಅನಾವೃಷ್ಠಿಗೆ ತುತ್ತಾಗಿದ್ದ ಮಧುಗಿರಿ ತಾಲೂಕು ಪ್ರಸ್ತುತ ಒಂದೇ ಸಮನೆ ಸುರಿಯುತ್ತಿರುವ ಮಳೆಗೆ ತಾಲೂಕಿನ ಎಲ್ಲ ಕೆರೆ,ಕಟ್ಟೆಗಳು ತುಂಬಿ ತುಳುಕುತ್ತಿವೆ. ಎಲ್ಲಿ ನೋಡಿದರೂ ಅಲ್ಲಿ ನೀರು (Water)  ಕಣ್ಣಿಗೆ ರಾಚುತ್ತಿದೆ. ಕೃಷಿಯನ್ನೇ ನಂಬಿ ಜೀವನ ನೀರ್ವಹಿಸುವ ರೈತಾಪಿ ವರ್ಗ ಹೊಲ ಗದ್ದೆಗಳಲ್ಲಿ ಬೆಳದಿದ್ದ ಬೆಳೆಗಳು ಸಂಪೂರ್ಣ ನೀರಿಗೆ ಆಹುತಿಯಾಗಿ ಬಹುತೇಕ ಎಲ್ಲ ಬೆಳೆಗಳು ಕೊಚ್ಚಿ ಹೋಗಿ ನೆಲ ಕಚ್ಚಿ ಸರ್ವನಾಶವಾಗಿವೆ. ಒಂದು ಕಾಲಕ್ಕೆ ಮುಗಿಲು ನೋಡುತ್ತಿದ್ದ ರೈತರು ಇಂದು ಎಡಬಿಡದೆ ಸುರಿಯುತ್ತಿರುವ ಮಳೆಗೆ ಹೈರಾಣಾಗಿದ್ದಾರೆ.

ಕಳೆದ 3 ದಿನಗಳಿಂದ ಸುರಿಯುತ್ತಿರುವ ಮ್ಯಾಂಡೌಸ್‌ ಜಿಟಿಪಿಟಿ ಮಳೆಗೆ ಜನರು ಹೊರಗೆ ಬರಲಾರದೆ ಚಳಿಗೆ ಮನೆ ಸೇರಿದ್ದಾರೆ. ಮಕ್ಕಳು ಮತ್ತು ವೃದ್ಧರ ಆರೋಗ್ಯದಲ್ಲಿ ಏರುಪೇರಾಗಿ ವೈದ್ಯರ ಬಳಿ ಚಿಕಿತ್ಸೆಗೆ ಎಡತಾಕುತ್ತಿದ್ದಾರೆ. ಶಾಲಾ ಕಾಲೇಜುಗಳಿಗೆ ಹೋಗುತ್ತಿದ್ದ ಮಕ್ಕಳು ಮಳೆಯಿಂದಾಗಿ ಅನಿವಾರ್ಯವಾಗಿ ತರಗತಿಗೆ ಹಾಜರಾಗುತ್ತಿರುವ ಸಂಖ್ಯೆ ಕಡಿಮೆಯಾಗುತ್ತಿದೆ. ಜಿಟಿಪಿಟಿ ಮಳೆಗೆ ಮಣ್ಣಿನ ಮಾಳಿಗೆ ಮನೆಗಳು ,ಗುಡಿಸಲು ನಿವಾಸಿಗಳು ಅಪಾಯದ ಅಂಚಿನಲ್ಲಿವೆ. ಈ ಮಳೆಯಿಂದಾಗಿ ಪಟ್ಟಣದ ಬಹುತೇಕ ಎಲ್ಲ ರಸ್ತೆಗಳು ಕೊರೆದು ಗುಂಡಿಗಳಾಗಿ ಮಾರ್ಪಟ್ಟಿವೆ. ಮಳೆ ಬಂದರೆ ಕೆಸರು ಗದ್ದೆಯಾಗುವ ರಸ್ತೆಗಳು, ಮಳೆ ನಿಂತ ಮೇಲೆ ಧೂಳಿನ ರಸ್ತೆಗಳಾಗಿ ಮಾರ್ಪಾಡಾಗುವ ರಸ್ತೆಗಳಿಂದ ಜನರ ಆರೋಗ್ಯದ ಮೇಲೆ ವ್ಯತಿರಕ್ತ ಪರಿಣಾಮ ಬೀರಲಿದೆ. ಇದರಿಂದ ನಾಗರಿಕರು ರೋಸಿ ಹೋಗಿದ್ದಾರೆ. ಅಲ್ಲದೆ ದ್ವಿಚಕ್ರ ವಾಹನ ಸವಾರರು ,ವಾಹನಗಳು ರಸ್ತೆಯಲ್ಲಿ ಓಡಾಡಲಾಗದೇ ಸುಗಮ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಮಧುಗಿರಿ ಪಟ್ಟಣದ ಬಹುತೇಕ ಎಲ್ಲ ರಸ್ತೆಗಳು ಕೆಟ್ಟು ನಿಂತಿವೆ. ಆದರೂ ಸಂಬಂಧಪಟ್ಟಪುರಸಭೆ ಅಧಿಕಾರಿಗಳಾಗಾಲಿ ಅಥವಾ

ಜನಪ್ರತಿನಿಧಿಗಳಾಗಾಲಿ ಇತ್ತ ಗಮನ ಹರಿಸಿ ರಸ್ತೆ ರಿಪೇರಿ ಮಾಡಿಸದೇ ಕೈ ಚಲ್ಲಿದ್ದಾರೆ ಎಂದು ನಾಗರಿಕರು ಪುರಸಭೆ ಕಾರ್ಯ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಧುಗಿರಿ ಪುರಸಭೆಗೆ ನಗರೋತ್ಥಾನ ಯೋಜನೆಯಡಿ ಪಟ್ಟಣದ ಎಲ್ಲ ರಸ್ತೆಗಳನ್ನು ಡಾಂಬರೀಕರಣ ಮಾಡಲು 8 ಕೋಟಿ ಹಣ ಬಂದಿದ್ದು ಅತಿ ಶೀಘ್ರದಲ್ಲೇ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಶಾಸಕ ಎಂ.ವಿ.ವೀರಭದ್ರಯ್ಯ ಇತ್ತೀಚೆಗೆ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದ್ದರು. ಬಹುತೇಕ ಯುಜಿಡಿ ಕಾಮಗಾರಿ ಕೂಡ ಮುಗಿದಿದ್ದು, ಪುರಸಭೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಧುಗಿರಿ ಪಟ್ಟಣದ ರಸ್ತೆಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದು ಪಟ್ಟಣದ ನಾಗರಿಕರು ಒತ್ತಾಸೆ.

ಮಾಂಡೌಸ್‌ ಚಂಡಮಾರುತ: ರಾಜ್ಯ-ರಾಜಧಾನಿಯಲ್ಲಿ ಇನ್ನು ಮೂರು ದಿನ ಮಳೆ

ಮ್ಯಾಂಡೌಸ್‌ ಮಳೆಯಿಂದಾಗಿ ದಿನಪತ್ರಿಕೆ, ಹಾಲು ಹಾಗೂ ಜನತೆಗೆ ಬೇಕಾದ ಅಗತ್ಯ ವಸ್ತುಗಳ ಪೂರೈಕೆಗೆ ತೊಂದರೆ ಉಂಟಾಗಿದೆ. ಬೆಳ್ಳಗೆಯಿಂದ ಸಂಜೆವರೆಗೂ ಒಂದೇ ಸಮನೆ ಬೀಳುತ್ತಿರುವ ಮಳೆಗೆ ಜನತೆ ಹೊರಗೆ ಬರಲಾಗದೇ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೂ ಮೂಕ ಪ್ರಾಣಿಗಳ ವೇದನ ಹೇಳತೀರದಾಗಿದೆ.

13ಕೆಎಂಡಿಜಿ1,,,ಮಧುಗಿರಿ ಪಟ್ಟಣದಲ್ಲಿ ರಸ್ತೆಗಳು ಸಂಪೂರ್ಣ ಕೆಟ್ಟು ನಿಂತಿರುವುದು.

ಮಲೆನಾಡು ಗಡ ಗಡ

ಚಿಕ್ಕಮಗಳೂರು : ಚಿಕ್ಕಮಗಳೂರು  ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನದಿಂದ ಬಿಟ್ಟುಬಿಟ್ಟು ಸಾಧಾರಣವಾಗಿ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಕಾಫಿ ಕೊಯ್ಲು ಸೇರಿದಂತೆ ಪ್ರಮುಖ ಕೃಷಿ ಚಟುವಟಿಕೆಗಳಿಗೆ ತೊಡಕಾಗಿದೆ. ಕಾಫಿಗಿಡಗಳಲ್ಲಿನ ಹಣ್ಣುಗಳು ಉದುರುತ್ತಿವೆ. ಭತ್ತ, ಅಡಿಕೆ ಬೆಳೆಗಾರರಲ್ಲೂ ಮಳೆ ಆತಂಕ ಮೂಡಿಸಿದೆ.

ಕಾಫಿಯನ್ನ ಕೊಯ್ಯುದ್ದಕ್ಕೂ ಆಗ್ತಿಲ್ಲ : 

ಮಲೆನಾಡಿನ ಭಾಗವಾದ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ ,ಕೊಪ್ಪ, ಕಳಸದಲ್ಲಿ ಚಂಡಮಾರುತದ ಎಫೆಕ್ಟ್ ನಿಂದ ಜನರು ತತ್ತರಿಸಿ ಹೋಗುತ್ತಿದ್ದಾರೆ. ಕಳೆದ 2 ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆ ಕಾಫಿ ಬೆಳೆಗಾರರಲ್ಲಿ ನಡುಕ ಹುಟ್ಟಿಸಿದೆ. ವರ್ಷವಿಡೀ ದುಡಿದು, ಆರೈಕೆ ಮಾಡಿ ಇನ್ನೇನು ಫಸಲು ಕೈಸೇರುವ ಹೊತ್ತಿನಲ್ಲಿ ಸುರಿಯುತ್ತಿರುವ ಮಳೆ ಎಲ್ಲ ವರ್ಗದ ಕೃಷಿಕರನ್ನು ಕಂಗಾಲು ಮಾಡಿದೆ. ಗಿಡದಿಂದ ಕೊಯ್ದು ತಂದು ಕಣದಲ್ಲಿ ಒಣಗಲು ಹರಡಿದ ಕಾಫಿ ಕೊಳೆಯುತ್ತಿದೆ. ತೋಟದಲ್ಲಿ ಗಿಡಗಳಿಂದ ಹಣ್ಣು ಉದುರುತ್ತಿದೆ. ಕಾಫಿ ಕಾಯಿನ್ನೇ ನೇರವಾಗಿ ಮಾರಾಟ ಮಾಡುವ ಅನಿವಾರ್ಯತೆಗೆ ಬೆಳೆಗಾರರು ಸಿಲುಕಿದ್ದಾರೆ.

ಉಳ್ಳಾಲ: ಮ್ಯಾಂಡಸ್‌ ಚಂಡಮಾರುತ, ಪ್ರಕ್ಷುಬ್ಧ ಸಮುದ್ರಕ್ಕೆ ಇಳಿದ ವ್ಯಕ್ತಿ ನೀರುಪಾಲು

click me!