ರಾಜ್ಯ ಸರ್ಕಾರ ತನ್ನ ಪಾಲಿನ ಬರ ಪರಿಹಾರ ನೀಡಲಿ: ಈಶ್ವರಪ್ಪ

By Kannadaprabha NewsFirst Published Nov 10, 2023, 6:04 AM IST
Highlights

ಹೈಕಮಾಂಡ್ ಸೂಚನೆ ಹೊರತಾಗಿಯೂ ನಾನೇ ಐದು ವರ್ಷ ಮುಖ್ಯಮಂತ್ರಿ ಎಂಬ ಬಹಿರಂಗ ಹೇಳಿಕೆ ನೀಡಿದ್ದು, ಇದೀಗ ಯಾರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಯೋಚಿಸಬೇಕಿದೆ. ಕಾಂಗ್ರೆಸ್ ಸರ್ಕಾರ ಅವರ ಗುಂಪುಗಾರಿಕೆಯಿಂದಲೇ ಬಿದ್ದು ಹೋಗಲಿದೆ ಎಂದು ಭವಿಷ್ಯ ನುಡಿದ ಕೆ.ಎಸ್‌.ಈಶ್ವರಪ್ಪ 

ಹಾಸನ(ನ.10): ಕಾಂಗ್ರೆಸ್ ಪಕ್ಷಕ್ಕೆ ತನ್ನ ಕುರ್ಚಿ ಬಿಟ್ಟರೆ ರೈತರ ಸಂಕಷ್ಟವಾಗಲಿ, ಆತ್ಮಹತ್ಯೆಯಾಗಲಿ ಮುಖ್ಯವಲ್ಲ. ಸಂಕಷ್ಟದಲ್ಲಿರುವ ರೈತರಿಗೆ ಬರ ಪರಿಹಾರ ನೀಡಿಲ್ಲ. ಅದಕ್ಕೆ ಕೇಂದ್ರ ಸರ್ಕಾರ ಕಾರಣ ಎಂದು ಕೇಂದ್ರದತ್ತ ಬೆರಳು ಮಾಡುವ ಬದಲು ರಾಜ್ಯ ಸರ್ಕಾರ ಮೊದಲು ತನ್ನ ಪಾಲಿನ ಪರಿಹಾರ ಬಿಡುಗಡೆ ಮಾಡಲಿ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ.

ಕುಟುಂಬ ಸಮೇತರಾಗಿ ಗುರುವಾರ ಹಾಸನಾಂಬೆ ದರ್ಶನ ಪಡೆದ ನಂತರ ಮಾಧ್ಯಮದೊಂದಿಗೆ ಮಾತನಾಡಿ ಹೈಕಮಾಂಡ್ ಸೂಚನೆ ಹೊರತಾಗಿಯೂ ನಾನೇ ಐದು ವರ್ಷ ಮುಖ್ಯಮಂತ್ರಿ ಎಂಬ ಬಹಿರಂಗ ಹೇಳಿಕೆ ನೀಡಿದ್ದು, ಇದೀಗ ಯಾರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಯೋಚಿಸಬೇಕಿದೆ. ಕಾಂಗ್ರೆಸ್ ಸರ್ಕಾರ ಅವರ ಗುಂಪುಗಾರಿಕೆಯಿಂದಲೇ ಬಿದ್ದು ಹೋಗಲಿದೆ ಎಂದು ಭವಿಷ್ಯ ನುಡಿದರು.

ಸರ್ಕಾರ ರೈತರ ಹಿತ ಕಾಪಾಡದೆ ಮೋಜು-ಮಸ್ತಿಯಲ್ಲಿ ಮುಳುಗಿದೆ: ಈಶ್ವರಪ್ಪ

ಮುಖ್ಯಮಂತ್ರಿಗಳು ಬರಗಾಲಕ್ಕೆ ಪ್ರತಿ ಜಿಲ್ಲೆಗೂ ೩೨೮ ಕೋಟಿ ರು. ಕೊಟ್ಟಿದ್ದೇನೆ ಎಂದು ಹೇಳಿದ್ದು, ಜಿಲ್ಲೆಗಳ ಪ್ರವಾಸ ಮಾಡಿದಾಗ ಈವರೆಗೆ ಯಾವುದೇ ಜಿಲ್ಲಾಧಿಕಾರಿಗೆ ಹಣ ನೀಡಿಲ್ಲ ಎಂಬುದು ಬೆಳಕಿಗೆ ಬಂದಿದೆ. ಆದರೆ, ಮುಖ್ಯಮಂತ್ರಿಗಳು ಕೇವಲ ಮಾಧ್ಯಮದ ಮುಂದೆ ಹೇಳಿಕೆ ನೀಡಿ ಜನರಿಗೆ ವಂಚಿಸುವ ಕೆಲಸ ಮಾಡಿದ್ದಾರೆ. ತಮ್ಮ ಎಲ್ಲಾ ವೈಫಲ್ಯಗಳನ್ನು ಮುಚ್ಚಿಹಾಕಲು ಎಲ್ಲದಕ್ಕೂ ಕೇಂದ್ರದ ಮೇಲೆ ಬೊಟ್ಟು ತೋರಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಕಡೆ ಮುಖ ಮಾಡಿಲ್ಲ: 

ಒಬ್ಬನೇ ಒಬ್ಬ ಬಿಜೆಪಿ ಶಾಸಕ ಕಾಂಗ್ರೆಸ್ ಕಡೆ ಮುಖ ಮಾಡಿಲ್ಲ, ಅದೆಲ್ಲ ಸುಳ್ಳು. ಕಾಂಗ್ರೆಸ್ ಗೆ ಬರಗಾಲ ಅನಾವೃಷ್ಟಿ, ಅತಿವೃಷ್ಟಿ, ರೈತ ಆತ್ಮಹತ್ಯೆ ಮಾಡಿಕೊಂಡರೂ ಅವರಿಗೆ ಸಂಬಂಧ ಇಲ್ಲ. ಅವರಿಗೆ ಕುರ್ಚಿ ಮುಖ್ಯ. ಚುನಾವಣೆ ನಡೆದ ಮರುದಿನವೇ ಮುಖ್ಯಮಂತ್ರಿ ಕುರ್ಚಿಗಾಗಿ ನಡೆದ ಕಸರತ್ತು ಎಲ್ಲರಿಗೂ ಗೊತ್ತಿದೆ. ಇಂಥ ನೀಚ ರಾಜಕೀಯವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ದೂರಿದರು.

click me!