ವಕೀಲರು ಲಾಭ ನಿರೀಕ್ಷಿಸದೇ ನೊಂದವರಿಗೆ ನ್ಯಾಯ ಕೊಡಿಸಲಿ: ನ್ಯಾ.ಕೃಷ್ಣಾ ದೀಕ್ಷಿತ್

By Kannadaprabha NewsFirst Published Dec 11, 2022, 7:50 AM IST
Highlights

ನ್ಯಾಯಾಲಯ ಅಂಗಡಿಗಳಲ್ಲ, ಅದೊಂದು ನ್ಯಾಯದಾನದ ದೇಗುಲ. ಹಾಗಾಗಿಯೇ ವಕೀಲರು ಲಾಭಾಂಶ ನಿರೀಕ್ಷೆ ಮಾಡದೇ ನೊಂದವರ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದು ಹೈಕೋರ್ಚ್‌ ನ್ಯಾಯಾಧೀಶ ಜಸ್ಟಿಸ್‌ ಕೃಷ್ಣಾ ಎಸ್‌. ದೀಕ್ಷಿತ್‌ ಅಭಿಪ್ರಾಯಪಟ್ಟರು.

ಶಿವಮೊಗ್ಗ (ಡಿ.11) : ನ್ಯಾಯಾಲಯ ಅಂಗಡಿಗಳಲ್ಲ, ಅದೊಂದು ನ್ಯಾಯದಾನದ ದೇಗುಲ. ಹಾಗಾಗಿಯೇ ವಕೀಲರು ಲಾಭಾಂಶ ನಿರೀಕ್ಷೆ ಮಾಡದೇ ನೊಂದವರ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದು ಹೈಕೋರ್ಚ್‌ ನ್ಯಾಯಾಧೀಶ ಜಸ್ಟಿಸ್‌ ಕೃಷ್ಣಾ ಎಸ್‌. ದೀಕ್ಷಿತ್‌ ಅಭಿಪ್ರಾಯಪಟ್ಟರು.

ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತಮಹೋತ್ಸವ ಉಪನ್ಯಾಸ ಸರಣಿಯ ಆರನೇ ಮಾಲಿಕೆ ಹಾಗೂ ಸಿ.ಭೀಮಸೇನ ರಾವ್‌ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನ್ಯಾಯಾಲಯದಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಸುವಂತೆ ಧರಣಿ

ನ್ಯಾಯಾಲಯ ವ್ಯವಹಾರ ಅಂಗಡಿ ಎಂಬ ಮನೋಭಾವ ಬೆಳೆಸಿಕೊಳ್ಳದೇ, ನೊಂದು ಬಂದವರಿಗೆ ನ್ಯಾಯದಾನ ಮಾಡುವ ದೇಗುಲ ಎನ್ನುವಂತೆ ಕಾಣಬೇಕು. ಜೊತೆಗೆ ವಕೀಲರಾಗುವವರಲ್ಲಿ ಲಾಭಾಂಶದ ಹಂಬಲ ಸಲ್ಲದು. ವಕೀಲರ ಪಾತ್ರವೂ ಕೂಡ ದೇಶದ ಸಮಗ್ರತೆಗೆ ಮಹತ್ವದ ಪಾತ್ರ ವಹಿಸುತ್ತದೆ. ವಕೀಲರು ಸಂವಿಧಾನ ರಕ್ಷಣೆ ಮಾಡುವ ನಿಟ್ಟಿನತ್ತ ಗಮನಹರಿಸಬೇಕು ಎಂದರು.

ಕೋರ್ಚ್‌ನಲ್ಲಿ ನ್ಯಾಯಾಧೀಶರಿಗಿಂತ ವಕೀಲರ ಜವಾಬ್ದಾರಿಯೇ ಹೆಚ್ಚು. ಕಾನೂನು ವಿದ್ಯಾರ್ಥಿಗಳು ಪದವಿ ನಂತರ ಅಧ್ಯಯನಶೀಲತೆ ಮುಂದುವರಿಸಬೇಕು. ವಕೀಲರೆಂದರೆ ಕೆಲವು ತತ್ವಗಳ ಮೇಲೆ ನಿರ್ಮಾಣವಾಗಿದೆ ಎಂದು ಸಮಾಜ ನಂಬಿದೆ. ಅಂತಹ ನಂಬಿಕೆಗಳಿಗೆ ಘಾಸಿ ಆಗದಂತೆ ವಕೀಲರಾದವರು ನಡೆದುಕೊಳ್ಳಬೇಕಿದೆ. ಅವಸರದಲ್ಲಿ ನೀಡಿದ ನ್ಯಾಯ ಸಮಾಧಿ ಮಾಡಿದಂತೆ ಎಂಬ ಸಮಂಜಸವು ಬರುತ್ತದೆ. ಸಂವಿಧಾನದ ರೂಪುರೇಷ ಉಳಿಸಿಕೊಳ್ಳುವಲ್ಲಿ ನ್ಯಾಯಾಧೀಶರು, ವಕೀಲರು, ಕಕ್ಷಿದಾರರು ಮುಖ್ಯ ಕಾರಣ. ವಕೀಲಿ ವೃತ್ತಿ ಸಂವಿಧಾನದಲ್ಲಿಯೇ ಉಲ್ಲೇಖವಾಗಿರುವ ವೃತ್ತಿ. ಅಂತಹ ವೃತ್ತಿಯ ಬಗ್ಗೆ ಕೀಳರಿಮೆ ಬೇಡ ಎಂದು ತಿಳಿಸಿದರು.

ಅಮೃತ ಮಹೋತ್ಸವದ ವಿಶೇಷ ಉಪನ್ಯಾಸದಲ್ಲಿ ಮಾನವ ಹಕ್ಕುಗಳ ಕುರಿತು ಮಾಜಿ ಅಡ್ವೋಕೇಟ್‌ ಜನರಲ್‌ ಅಶೋಕ ಹಾರನಹಳ್ಳಿ ಮಾತನಾಡಿ, 25 ವರ್ಷ ಪೂರೈಸಿರುವ ಮಾನವ ಹಕ್ಕುಗಳು ನಮ್ಮ ಸಂವಿಧಾನದಲ್ಲಿ ಪ್ರಬಲವಾಗಿ ಅಡಕವಾಗಿದೆ. ಪ್ರತಿಯೊಂದು ಪ್ರಾಣಿ, ಪಕ್ಷಿ, ಮನುಷ್ಯರಿಗೆ ಬದುಕುವ ಹಕ್ಕಿದೆ. ಅದರೇ ಮನುಷ್ಯನಿಗೆ ವಿಶೇಷವಾಗಿ ಹುಟ್ಟಿನಿಂದಲೇ ಆಲೋಚಿಸುವ, ಹಕ್ಕುಗಳನ್ನು ಮಂಡನೆ ಮಾಡುವ ಶಕ್ತಿಯಿದೆ. ಭಾರತ ಮುಕ್ತವಾಗಿ ಹೆಣ್ಣು ಮತ್ತು ಗಂಡಿಗೆ ಸಮಾನವಾದ ಹಕ್ಕು ನೀಡಿದೆ. ಇಂದಿನ ದಿನಗಳಲ್ಲಿ ಶಿಕ್ಷೆಯ ಮನಃಪರಿವರ್ತನೆ ಉದ್ದೇಶಗಳು ಸಾಕಾರಗೊಳ್ಳುತ್ತಿಲ್ಲ. ಶಿಕ್ಷೆ ಎಂದು ಕಳಿಸಿದ ಜೈಲು ವ್ಯಾಪಾರ ಕೇಂದ್ರವಾಗಿ ಮಾರ್ಪಾಡಾಗಿರುವುದು ವಿಷಾದನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್‌. ನಾರಾಯಣ ರಾವ್‌ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿಗಳಾದ ಎಸ್‌.ಎನ್‌. ನಾಗರಾಜ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್‌ ಪ್ರಾಸ್ತಾವಿಕ ಮಾತನಾಡಿದರು. ಖಜಾಂಚಿಗಳಾದ ಡಿ.ಜಿ.ರಮೇಶ್‌, ಪ್ರಾಂಶುಪಾಲರಾದ ಡಾ.ಜಗದೀಶ್‌ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಕಾನೂನು ಪದವಿ ಪಡೆದ ಅರವತ್ತಕ್ಕು ಹೆಚ್ಚು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.

ಸುಮ್ಮನೆ ಕೈ ಕಟ್ಟಿ ಕೂರಕ್ಕಾಗಲ್ಲ..! ನೋಟ್‌ ಬ್ಯಾನ್‌ ವಿಚಾರವಾಗಿ ಕೇಂದ್ರದ ವಿರುದ್ಧ ಸುಪ್ರೀಂ ಕಿಡಿ

ಗೊತ್ತಿದ್ದು ಅಥವಾ ಗೊತ್ತಿಲ್ಲದೆಯೋ ಮಾಡಿದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸಬೇಕು ಎಂಬುದು ಅರ್ಥ ಮಾಡಿಕೊಂಡು, ತಪ್ಪಿಸ್ಥ ತನ್ನ ತಪ್ಪನ್ನು ತಿದ್ದಿಕೊಂಡು ಮನಪರಿವರ್ತನೆ ಮಾಡಿಕೊಳ್ಳಬೇಕು. ಆದರೆ, ಇಂದಿನ ದಿನಗಳಲ್ಲಿ ದುಡ್ಡು ಕೊಟ್ಟರೆ ಜೈಲಿನಲ್ಲಿಯೇ ಎಲ್ಲ ಸೌಲಭ್ಯಗಳು ಸಿಗುವಂತಾಗಿದೆ. ತಪ್ಪಿಸ್ಥರಿಗೆ ಶಿಕ್ಷೆ ನೀಡಬೆಕಾದ ಜೈಲುಗಳು ವ್ಯಾಪಾರಿ ಕೇಂದ್ರವಾಗಿದೆ

- ಅಶೋಕ ಹಾರನಹಳ್ಳಿ, ಅಧ್ಯಕ್ಷ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ

click me!