ಅತಿರೇಕದ ವರ್ತನೆ ಬಿಡಿ ಅಭಿವೃದ್ಧಿ ಕೆಲಸ ಮಾಡಿ: ಸಚಿವ ಶಿವರಾಜ ತಂಗಡಗಿ ಎಚ್ಚರಿಕೆ

By Kannadaprabha NewsFirst Published Dec 22, 2023, 12:33 PM IST
Highlights

ಕನಕಗಿರಿ ಕ್ಷೇತ್ರದಲ್ಲಿ ಸರ್ಕಾರಿ ಅಧಿಕಾರಿಗಳು ಅತಿರೇಕದಿಂದ ವರ್ತಿಸುವುದನ್ನು ಬಿಡಬೇಕು. ಜನರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಕ್ಷೇತ್ರದ ಪರಿವರ್ತನೆಗೆ ಅಭಿವೃದ್ಧಿ ಕೆಲಸ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. 

ಕಾರಟಗಿ (ಡಿ.22): ಕನಕಗಿರಿ ಕ್ಷೇತ್ರದಲ್ಲಿ ಸರ್ಕಾರಿ ಅಧಿಕಾರಿಗಳು ಅತಿರೇಕದಿಂದ ವರ್ತಿಸುವುದನ್ನು ಬಿಡಬೇಕು. ಜನರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಕ್ಷೇತ್ರದ ಪರಿವರ್ತನೆಗೆ ಅಭಿವೃದ್ಧಿ ಕೆಲಸ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ತಾಲೂಕಿನ ಸಿದ್ದಾಪುರ ಹೋಬಳಿ ಬೆನ್ನೂರು ಗ್ರಾಮದಲ್ಲಿ ಬುಧವಾರ ಅಭಯಹಸ್ತ ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದರು.

ಹದ್ದು ಮೀರಿ ಮಾತನಾಡುವುದನ್ನು ಅಧಿಕಾರಿಗಳು ಬಿಡಬೇಕು. ಜನರ ಸಮಸ್ಯೆ ಕೇಳಿ. ಪಿಡಿಒಗಳು ಪಂಚಾಯಿತಿಯಲ್ಲಿ ಕುಳಿತು ಕೆಲಸ ಮಾಡುವುದನ್ನು ಮೊದಲು ಕಲಿಯಿರಿ. ಪಿಡಿಒ, ತಹಸೀಲ್ದಾರ್ ಕಚೇರಿಗಳ ದೂರುಗಳೇ ಹೆಚ್ಚಾಗಿವೆ. ಜನರನ್ನು ಅಲೆದಾಡಿಸುವುದನ್ನು ನಿಲ್ಲಿಸಬೇಕು. ಬಂದ ಜನರಿಂದ ಸೌಜನ್ಯದಿಂದ ಅಹವಾಲು ಕೇಳಿ. ಇನ್ನುಂದೆ ಪಂಚಾಯಿತಗಳಲ್ಲಿ ಫಾರಂ ೯, ೧೧ಗಾಗಿ, ಕಂದಾಯ ಅಧಿಕಾರಿಗಳು ಪೋತಿ ವಿರಾಸಾತ್, ತಂದೆಯ ಆಸ್ತಿಯನ್ನು ಅವರ ಮಕ್ಕಳಿಗೆ ಮಾಡಿಕೊಡಲು ತಡ ಮಾಡಿದರೆ ಅಂಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ. ಇದು ಕೊನೆ ಎಚ್ಚರಿಕೆ ಎಂದು ಖಡಕ್ಕಾಗಿ ಎಚ್ಚರಿಸಿದರು.

ಸಕ್ರೆಬೈಲು ಆನೆ ಶಿಬಿರದ ಬಳಿ ಬೋಟಿಂಗ್‌: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಬೆನ್ನೂರು ಹಳ್ಳಕ್ಕೆ ಬ್ರಿಜ್ ಕಂ ಬ್ಯಾರೇಜ್ ಕ್ರಿಯಾ ಯೋಜನೆ ತಯಾರಿಸುವಂತೆ ಸೂಚಿಸಿದ ಸಚಿವರು, ಕೆಕೆಆರ್‌ಡಿಬಿಯಿಂದ ಶಾಲೆಗಳಿಗೆ ₹೩.೮೬ ಕೊಟಿ ವೆಚ್ಚದ ಕಲಿಕಾ ಸಾಮಗ್ರಿ, ಇನ್ನಿತರ ಉಪಕರಣ ಖರೀದಿಸಲು ಅನುದಾನ ನೀಡಲಾಗಿದೆ ಎಂದರು. ಬಿಇಓ ಕಚೇರಿ: ಕಾರಟಗಿ, ಕನಕಗಿರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ತೆರೆಯಲಿವೆ. ಹೊಸ ಬಿಇಒಗಳು ಬರುತ್ತಾರೆ ಎಂದು ಸಚಿವರು ಸಭೆಯಲ್ಲಿ ಪ್ರಕಟಿಸಿದರು. ಯಾವ ಊರಿನಲ್ಲಿ ಶಾಲೆ ಗಂಟೆ ಸದ್ದು ಆಗುತ್ತೋ ಆ ಊರು ಅಭಿವೃದ್ಧಿ ಸಾಧ್ಯ ಎಂದು ಅಂಬೇಡ್ಕರ್ ಹೇಳಿದ್ದಾರೆ. ಊರಿನ ಅಭಿವೃದ್ಧಿಗೆ ಶಿಕ್ಷಣಕ್ಕೆ ಜಾಸ್ತಿ ಒತ್ತು ನೀಡಬೇಕು. ಕೆಕೆಆರ್‌ಡಿಬಿಯಿಂದ ಅಕ್ಷರ ಆವಿಷ್ಕಾರ ಅಭಿವೃದ್ಧಿ ಯೋಜನೆಯಡಿ ಶಿಕ್ಷಣ, ಕುಡಿಯುವ ನೀರಿನ ಸರಬರಾಜು ಇನ್ನಿತರ ಮೂಲಸೌಕರ್ಯಗಳಿಗೆ ವಿಶೇಷವಾಗಿ ಅಭಿವೃದ್ಧಿ ಮಾಡುವೆ ಎಂದರು.  

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಆರ್ಟಿಕಲ್ ೩೭೧ ಜೆ ಸಾಕಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದರು. ಬೆನ್ನೂರು, ಈಳಗಿನೂರು, ಉಳೇನೂರು, ಶಾಲಿಗನೂರು, ಕಕ್ಕರಗೋಳ, ನಂದಿಹಳ್ಳಿ, ಜಮಪುರ ಗ್ರಾಮದಲ್ಲಿನ ಸಮಸ್ಯೆ ಇರುವ ಶಾಲೆ, ಪೌಢಶಾಲೆಗಳ ಸಮಸ್ಯೆಗಳು ಕೂಡಲೇ ಇತ್ಯರ್ಥಪಡಿಸಿ ಮಕ್ಕಳ ಓದಿಗೆ ಅನುಕೂಲ ಮಾಡುವಂತೆ ಸೂಚಿಸಿದರು. ಉಳೇನೂರಿಗೆ ಕಾಲೇಜು ಮಂಜೂರು ಮಾಡಿಸುವೆ. ರಾಜ್ಯದ ಗಮನ ಸೆಳೆದ ನಂದಿಹಳ್ಳಿ ಉಳೇನೂರು ಸಿದ್ದಾಪುರ ಮುಖ್ಯ ರಸ್ತೆ ಅಭಿವೃದ್ಧಿ ₹೫ ಕೋಟಿ ಪ್ರಸ್ತಾವನೆ ಸಲ್ಲಿಸಿದೆ. ಮುಂದಿನ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸುವೆ ಭರವಸೆ ಸಚಿವರು ನೀಡಿದರು.

ಸಚಿವ ತಂಗಡಗಿ ಈಳಿಗನೂರು ಕ್ಯಾಂಪ್, ಈಳಿಗನೂರು, ಜಮಾಪುರ, ಉಳೇನೂರು, ಬೆನ್ನೂರು, ಶಾಲಿಗನೂರು, ಕಕ್ಕರಗೋಳ, ನಂದಿಹಳ್ಳಿಯಲ್ಲಿ ಜನಸಂಪರ್ಕ ಸಭೆ ನಡೆಸಿದರು. ತಹಸೀಲ್ದಾರ್ ಎಂ.ಕುಮಾರಸ್ವಾಮಿ, ತಾಪಂ ಇಒ ಲಕ್ಷ್ಮೀದೇವಿ, ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ರೆಡ್ಡಿ, ಮಾಜಿ ಉಪಾಧ್ಯಕ್ಷ ಬಿ.ಬಸವರಾಜಪ್ಪ, ಬ್ಲಾಕ್ ಅಧ್ಯಕ್ಷ ಶರಣೆಗೌಡ ಬೂದುಗುಂಪಾ ಇದ್ದರು.

ಖರ್ಗೆರನ್ನು ಸಿಎಂ ಮಾಡಲಿಲ್ಲ, ಇನ್ನು ಪಿಎಂ ಮಾಡ್ತಾರಾ?: ಕೇಂದ್ರ ಸಚಿವ ನಾರಾಯಣಸ್ವಾಮಿ

ಪಿಡಿಒಗೆ ತರಾಟೆ: ಉಳೇನೂರು ಪಂಚಾಯಿತಿ ಪಿಡಿಒ ನಾಗರಾಜ ಅವರನ್ನು ತೀವ್ರ ತರಾಟೆ ತೆಗೆದುಕೊಂಡ ಸಚಿವರು, ನೀನು ಪಿಡಿಓ ಆಗಿ ಕೆಲಸ ಮಾಡ್ತೀಯಾ ಇಲ್ಲೋ ರಾಜಕೀಯ ಮಾಡ್ತೀಯಾ ಎಂದು ನೆರೆದಿದ್ದ ಜನರ ನಡುವೆ ತರಾಟೆಗೈದರು. ನೀನು ಸರಿಯಾಗಿ ಕಚೇರಿಗೆ ಬರೋಲ್ಲ, ಕೆಲಸ ಮಾಡಲ್ಲ ಎಂದು ಅನೇಕ ದೂರುಗಳು ಇವೆ. ಪಿಡಿಓ ಆಗಿದ್ದು ನಾಲಾಯಕ್ ಎಂದರು.

click me!