ತುಮಕೂರು: ಕೊರಟಗೆರೆ ಕೆರೆಗಳ ಮೇಲೆ ಭೂಮಾಫಿಯ ಕಣ್ಣು..!

By Kannadaprabha NewsFirst Published May 11, 2024, 10:59 AM IST
Highlights

ಕೊರಟಗೆರೆ ತಾಲೂಕಿನ ಸಣ್ಣ ನೀರಾವರಿ, ಕಂದಾಯ ಇಲಾಖೆ ಮತ್ತು ೨೫ ಗ್ರಾಪಂ ಸೇರಿ ಒಟ್ಟು ೨೦೮ ಕೆರೆಗಳಿವೆ. ತೀತಾ ಜಲಾಶಯ, ಮಾವತ್ತೂರು ಕೆರೆ ಮತ್ತು ಜೆಟ್ಟಿ ಅಗ್ರಹಾರ ಕೆರೆಗಳು ಬಿಟ್ಟರೇ ಉಳಿದ ೨೦೩ ಕೆರೆಗಳಲ್ಲಿ ನೀರಿಲ್ಲದೇ ಸಂಪೂರ್ಣ ಖಾಲಿಯಾಗಿವೆ. ಅಂತರ್ಜಲ ಮಟ್ಟವು ಪಾತಾಳಕ್ಕೆ ಕುಸಿದಿದ್ದು, ರೈತರು ಅಡಿಕೆ, ತೆಂಗು ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ.

ಎಚ್.ಎನ್.ನಾಗರಾಜು ಹೊಳವನಹಳ್ಳಿ

ಕೊರಟಗೆರೆ(ಮೇ.11):  ಬಯಲುಸೀಮೆ ಪ್ರದೇಶವಾದ ಕೊರಟಗೆರೆ ಕ್ಷೇತ್ರಕ್ಕೆ ನೀರಾವರಿ ಯೋಜನೆಗಳು ಗಗನ ಕುಸುಮ ಎನ್ನುವಂತಾಗಿದೆ. ಎತ್ತಿನಹೊಳೆ ಮತ್ತು ಹೇಮಾವತಿ ಯೋಜನೆಯ ಕಾಮಗಾರಿ ಮುಗಿಯುತ್ತಿಲ್ಲ. ೨೦೬ ಕೆರೆಗಳಿಗೆ ಪುನಶ್ಚೇತನ ಮತ್ತು ಅಭಿವೃದ್ಧಿ ಇಲ್ಲದೇ ಸಾವಿರಾರು ಎಕರೆ ಕೆರೆಗಳ ಜಮೀನು ಭೂ ಮಾಫಿಯಾಗೆ ಬಲಿಯಾಗಿವೆ.

Latest Videos

ಕೊರಟಗೆರೆ ತಾಲೂಕಿನ ಸಣ್ಣ ನೀರಾವರಿ, ಕಂದಾಯ ಇಲಾಖೆ ಮತ್ತು ೨೫ ಗ್ರಾಪಂ ಸೇರಿ ಒಟ್ಟು ೨೦೮ ಕೆರೆಗಳಿವೆ. ತೀತಾ ಜಲಾಶಯ, ಮಾವತ್ತೂರು ಕೆರೆ ಮತ್ತು ಜೆಟ್ಟಿ ಅಗ್ರಹಾರ ಕೆರೆಗಳು ಬಿಟ್ಟರೇ ಉಳಿದ ೨೦೩ ಕೆರೆಗಳಲ್ಲಿ ನೀರಿಲ್ಲದೇ ಸಂಪೂರ್ಣ ಖಾಲಿಯಾಗಿವೆ. ಅಂತರ್ಜಲ ಮಟ್ಟವು ಪಾತಾಳಕ್ಕೆ ಕುಸಿದಿದ್ದು, ರೈತರು ಅಡಿಕೆ, ತೆಂಗು ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ.

ತುಮಕೂರು: ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ!

ಕೆರೆ-ಕಟ್ಟೆಗಳು ಸಂಪೂರ್ಣ ಶಿಥಿಲವಾಗಿ ಬಿರುಕು ಬಿಟ್ಟಿವೆ. ಕೆರೆಗಳ ತುಂಬೆಲ್ಲ ಜಾಲಿಗಿಡ ಮತ್ತು ಬೇಲಿಗಳು ಬೆಳೆದು ಕೆರೆಯೇ ಮಾಯವಾಗಿವೆ. ಕೆರೆಗಳ ಎಡಬಲ ನಾಲೆಗಳು ಒತ್ತುವರಿಯಾಗಿ ಕಾಲುವೆಗಳೇ ಕಾಣೆಯಾಗಿವೆ. ಕೆರೆಗಳ ಪುನಶ್ಚೇತನ ಮತ್ತು ಅಭಿವೃದ್ಧಿ ಮಾಡಬೇಕಾದ ಸರ್ಕಾರಿ ಇಲಾಖೆಗಳ ಅಧಿಕಾರಿ ವರ್ಗ ಮಳೆ ಬಂದಾಗ ತುರ್ತು ಪರಿಹಾರ ಕೆಲಸಗಳಿಗೆ ಮಾತ್ರ ಬರ್ತಾರೇ. ಮತ್ತೇ ವರ್ಷ ಪೂರ್ತಿ ಬರುವುದಿಲ್ಲ.

ಅನುಷ್ಠಾನವಾಗದ ನರೇಗಾ ಯೋಜನೆ:

೪೦ ಹೇಕ್ಟೆರ್ ವಿಸ್ತೀರ್ಣಕ್ಕಿಂತ ಕಡಿಮೆ ಇರುವ ೨೪ ಗ್ರಾಪಂಯ ೮೨ ಕೆರೆಗಳು ಸಹ ಅಭಿವೃದ್ಧಿ ಇಲ್ಲದೇ ದುಸ್ಥಿತಿಗೆ ತಲುಪಿವೆ. ನರೇಗಾ ಯೋಜನೆಯಡಿ ಕೆರೆಯ ಅಭಿವೃದ್ಧಿಗೆ ಲಭ್ಯವಿರುವ ಅನುದಾನ ಬಳಸಿಕೊಳ್ಳುವಲ್ಲಿ ತಾಪಂ ಇಒ, ಪಿಡಿಒ ವಿಫಲರಾಗಿದ್ದಾರೆ. ಗ್ರಾಪಂ ಅಧ್ಯಕ್ಷ, ಸದಸ್ಯರೇ ತಮ್ಮ ಅನುಕೂಲಕ್ಕೆ ತಕ್ಕಂತೆ ಮಣ್ಣಿನ ಕೆಲಸ ಮಾಡಿಸಿಕೊಂಡು ಹಣ ಬಿಡುಗಡೆ ಮಾಡಿಸಿಕೊಳ್ತಾರೇ. ಜಿಪಂ ಸಿಇಒ ನೇತೃತ್ವವಹಿಸಿ ಅನುದಾನ ಮೀಸಲಿಟ್ಟು ಕಾಮಗಾರಿ ನಡೆಸಿದರೆ ಮಾತ್ರ ಅಭಿವೃದ್ಧಿಯಾಗುತ್ತದೆ,

39 ಕೆರೆಗೆ ಎತ್ತಿನಹೊಳೆ ಯೋಜನೆಯ ನೀರು

26 ಸಾವಿರ ಕೋಟಿ ರು. ಮೌಲ್ಯದ ಎತ್ತಿನಹೊಳೆ ಯೋಜನೆಯು ಬಯಲು ಸೀಮೆ ರೈತರಿಗೆ ವರದಾನವು ಹೌದು. ಈ ಕಾಮಗಾರಿ ಮುಗಿಯುವ ಮುನ್ನವೇ ೩೯ ಕೆರೆಗಳ ಪುನಶ್ಚೇತನ ಮತ್ತು ಅಭಿವೃದ್ದಿ ಅಗತ್ಯ. ಕೆರೆಯಲ್ಲಿನ ಏರಿ, ತೂಬು, ಕಾಲುವೆ, ಜಂಗಲ್ ಸ್ವಚ್ಚ ಮಾಡದೇ ನೀರು ಬಿಟ್ಟರೂ ಪ್ರಯೋಜನ ಇಲ್ಲ. ಎತ್ತಿನಹೊಳೆ ಯೋಜನಾ ಅಧಿಕಾರಿ ವರ್ಗ ಕೊರಟಗೆರೆಯಲ್ಲಿ ಗುರುತಿಸಿರುವ ೩೯ ಕೆರೆಗಳ ಅಭಿವೃದ್ದಿಗೆ ಪ್ರಥಮ ಆದ್ಯತೆ ನೀಡಬೇಕಿದೆ.

ಕೆರೆಗಳ ಮೇಲೆ ಭೂಗಳ್ಳರ ಕಣ್ಣು

ಕೊರಟಗೆರೆ ಕ್ಷೇತ್ರದ ಸಣ್ಣ ನೀರಾವರಿ, ಕಂದಾಯ ಮತ್ತು ಗ್ರಾಪಂಯ ೨೦೬ ಕೆರೆಗಳ ಮೇಲೆ ತುಮಕೂರು ಮತ್ತು ನೆಲಮಂಗಲದ ಭೂಗಳ್ಳರ ಕಣ್ಣುಬಿದ್ದಿದೆ. ಅಕ್ರಮವಾಗಿ ತಡರಾತ್ರಿ ಟಿಪ್ಪರ್ ಲಾರಿಗಳ ಮೂಲಕ ಕೊರಟಗೆರೆ ಬೈಪಾಸ್ ಮತ್ತು ತುಮಕೂರು ನಗರಕ್ಕೆ ಪ್ರತಿನಿತ್ಯ ಸಾವಿರಾರು ಲೋಡ್‌ ಮಣ್ಣು ರವಾನೆ ಆಗಲಿದೆ. ಪರಿಶೀಲನೆ ನಡೆಸಬೇಕಾದ ಗಣಿ ಮತ್ತು ಭೂವಿಜ್ಞಾನ ಇಲಾಖೆಯೇ ಮೌನಕ್ಕೆ ಶರಣಾಗಿ ಪರೋಕ್ಷವಾಗಿ ಭೂಮಾಫಿಗೆ ಶರಣಾಗಿದೆ.

ತುಮಕೂರು ರೈತರಿಗೆ ಇಲ್ಲಿದೆ ಗುಡ್ ನ್ಯೂಸ್ !

ಎಸ್ಟೇಟ್ ಮಾಲೀಕರ ಹಾವಳಿಯಿಂದ ಕೆರೆಕಟ್ಟೆಗಳ ಭೂಮಿ ಅರ್ಧದಷ್ಟು ಮಾಯವಾಗಿದೆ. ಕೆರೆಗಳ ಅಭಿವೃದ್ಧಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿಶೇಷ ಅನುದಾನದ ಅಗತ್ಯವಿದೆ. ಎತ್ತಿನಹೊಳೆ ಯೋಜನೆಯ ನೀರು ಹರಿಯುವ ಮುನ್ನವೇ ಕೆರೆಗಳ ಪುನಶ್ಚೇತನ ಅತ್ಯವಶ್ಯಕ. ಜಿಪಂ ಸಿಇಒ ಕೆರೆಗಳ ಅಭಿವೃದ್ದಿಗೆ ನರೇಗಾ ಯೋಜನೆಯಡಿ ವಿಶೇಷವಾದ ಯೋಜನೆ ರೂಪಿಸುವ ಅವಶ್ಯಕತೆ ಇದೆ ಎಂದು ಕೊರಟಗೆರೆ ರೈತಸಂಘದ ಅಧ್ಯಕ್ಷ ಸಿದ್ದರಾಜು ತಿಳಿಸಿದ್ದಾರೆ.  

ಬರಗಾಲದಿಂದ ಅಂತರ್ಜಲ ಮಟ್ಟ ಕುಸಿತ ಕಂಡಿದೆ. ಕೆರೆಗಳ ಒತ್ತುವರಿ ಒತ್ತುವರಿ ತೆರವಿಗೆ ಕ್ರಮ ಆಗಿವೆ. ಮೇವು ಮತ್ತು ನೀರಿಗೆ ವಿಶೇಷ ಆಧ್ಯತೆ ನೀಡಲಾಗಿದೆ. ಕೆರೆಗಳ ಅಭಿವೃದ್ದಿ ಅಮೃತ್ ಮತ್ತು ನರೇಗಾ ಯೋಜನೆ ಸಹಕಾರಿ. ಸರ್ಕಾರದ ಪರವಾನಗಿ ಪಡೆಯದೇ ಮಣ್ಣ ತೆರೆದರೆ ಕ್ರಮ ಕೈಗೊಳ್ಳಲಾಗುವುದು. ಕೊರಟಗೆರೆಯಲ್ಲಿ ಈಗಾಗಲೇ ೧೦ ಕೆರೆಗಳ ಅಳತೆ ಮಾಡಿ ಒತ್ತುವರಿ ತೆರವು ಮಾಡಲಾಗಿದೆ ಎಂದು ಕೊರಟಗೆರೆ ತಹಶೀಲ್ದಾರ್ ಮಂಜುನಾಥ.ಕೆ. ಹೇಳಿದ್ದಾರೆ. 

click me!