ನಿಲ್ದಾಣದ ಉಳಿವಿಗಾಗಿ ಬಾಗಲಕೋಟೆಯಿಂದ ಲೋಕಾಪುರದವರೆಗೆ ಪ್ಯಾಸೆಂಜರ್‌ ರೈಲು ಆರಂಭಿಸಿ

Published : Aug 31, 2026, 08:31 AM IST
Sulikeri

ಸಾರಾಂಶ

Bagalkote To Kudachi: ಚರಂತಿಮಠದ ಪ್ರಭು ಸ್ವಾಮೀಜಿಗಳು ಸೂಳಿಕೇರಿ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ಬಾಗಲಕೋಟೆ-ಕುಡಚಿ ರೈಲು ಮಾರ್ಗದ ನಿರ್ಮಾಣದಷ್ಟೇ ಸಂರಕ್ಷಣೆಯೂ ಮುಖ್ಯ ಎಂದು ಒತ್ತಿ ಹೇಳಿದರು.

ಬಾಗಲಕೋಟೆ: ರೈಲ್ವೆ ಮಾರ್ಗ ನಿರ್ಮಾಣ ಎಷ್ಟು ಮುಖ್ಯವೋ ಸಂರಕ್ಷಣೆಯು ಅಷ್ಟೇ ಮುಖ್ಯವಾಗಿದೆ ಎಂದು ಚರಂತಿಮಠದ ಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಕೈಗೊಂಡ ಕುಡಚಿ ಮಾರ್ಗಕ್ಕೆ ಸಂಬಂಧಿಸಿದ ಸೂಳಿಕೇರಿ ರೈಲು ನಿಲ್ದಾಣ ಸ್ತಿತಿಗತಿ ವೀಕ್ಷಿಸಲು ರೇಲ್ವೆ ಹೋರಾಟ ಸಮಿತಿಯ ಅಧ್ಯಕ್ಷರಾದ ಕುತುಬುದ್ದೀನ ಖಾಜಿ ಹಾಗೂ ಸೂಳಿಕೇರಿ ಗ್ರಾಮಸ್ಥರೊಂದಿಗೆ ತೆರಳಿ ರೈಲು ನಿಲ್ದಾಣ ವೀಕ್ಷಿಸಿ ಮಾತನಾಡಿದರು.

ಶತಮಾನಗಳಿಂದ ಬಾಗಲಕೋಟೆ ಕುಡಚಿ ರೈಲು ಮಾರ್ಗ ನಿರ್ಮಾಣ ಆಗಬೇಕೆಂದು ಬಾಗಲಕೋಟೆಯ ಜಿಲ್ಲೆಯ ಜನ ಬಯಸಿದ್ದರು. ಸಾಕಷ್ಟು ಹೋರಾಟಗಳನ್ನು ನಡೆಸಿ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ದಶಕಗಳಿಂದ ಕಾಮಗಾರಿ ನಡೆದಿದ್ದು ಕಾಲಮಿತಿಯಲ್ಲಿ ಪೂರ್ಣಗೊಳ್ಳದಿರುವುದು ದುರದೃಷ್ಟಕರವಾಗಿದೆ ಎಂದರು.

ಯೋಜನಾ ವೆಚ್ಚ

ಕುಡಚಿ ರೈಲು ಮಾರ್ಗ ನಿರ್ಮಾಣ ಇನ್ನೂ ವಿಳಂಬವಾದಲ್ಲಿ ಯೋಜನಾ ವೆಚ್ಚ ಹೆಚ್ಚಾಗಲಿದೆ. ನಿರ್ಮಾಣಗೊಂಡಂತಹ ಕಟ್ಟಡಗಳು ಶಿಥಿಲಗೊಳ್ಳುತ್ತವೆ. ಈಗಾಗಲೇ ಲೋಕಾಪುರವರೆಗೆ ಕಾಮಗಾರಿ ಮುಗಿದು ಮಾರ್ಗವು ಸುರಕ್ಷಿತವಾಗಿದ್ದು, ಪ್ರಯಾಣಿಕರ ರೈಲು ಪ್ರಾರಂಭಿಸುವ ಅವಶ್ಯಕತೆ ಇದೆ ಎಂದರು.

ಲೋಕಾಪುರದಿಂದ ಕುಡಚಿವರೆಗೂ ನಡೆದ ರೇಲ್ವೆ ಕಾಮಗಾರಿ ತೀವ್ರಗತಿಯಲ್ಲಿ ಪ್ರಾರಂಭಿಸುವ ಅವಶ್ಯಕತೆ ಇದ್ದು, ಸಂಸದರು, ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು ಹೆಚ್ಚಿನ ಕಾಳಜಿ ವಹಿಸಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಕುತಬುದ್ದೀನ ಖಾಜಿ ಮಾತನಾಡಿ, ಸೂಳಿಕೇರಿ ರೈಲು ನಿಲ್ದಾಣಕ್ಕೆ ಕಚ್ಚಾ ರಸ್ತೆ ಇದ್ದು, ಡಾಂಬರೀಕರಣಗೊಳಿಸುವ ಅವಶ್ಯಕತೆ ಇದ್ದು, ಸ್ಥಳಿಯ ಶಾಸಕರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಲೋಕಾಪುರದವರೆಗೆ ಪ್ಯಾಸೆಂಜರ್‌ ರೈಲು

ಲೋಕಾಪುರದವರೆಗೆ ಪ್ಯಾಸೆಂಜರ್‌ ರೈಲು ಪ್ರಾರಂಭವಾದರೆ ಮಾತ್ರ ನಿರ್ಮಾಣಗೊಂಡ ಕಟ್ಟಡಗಳು ಸುರಕ್ಷಿತವಾಗಿರಲು ಸಾಧ್ಯ. ಪ್ಯಾಸೆಂಜರ್‌ ರೈಲು ಪ್ರಾರಂಭಿಸಲು ರೈಲ್ವೆ ಇಲಾಖೆಗೆ ಸಾಕಷ್ಟು ಅವಕಾಶಗಳಿದ್ದು, ಮುಧೋಳ, ಮಹಾಲಿಂಗಪುರ, ರಬಕವಿ, ಬನಹಟ್ಟಿ, ತೇರದಾಳ ಹಾಗೂ ಜಮಖಂಡಿ ಸೇರಿದಂತೆ ಅನೇಕ ನಗರಗಳಿಗೆ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಂತಾಗುವುದು. ಅತೀ ಶೀಘ್ರದಲ್ಲಿ ಪ್ರಾಯಾಣಿಕರ ರೈಲು ಪ್ರಾರಂಭಿಸಲು ರೈಲ್ವೆ ಇಲಾಖೆ ಸಂಸದರು, ಮಂತ್ರಿಗಳು ಪ್ರಯತ್ನಿಸಬೇಕು. ಅಲ್ಲದೆ ಕುಡಚಿ ವರೆಗೂ ಕಾಮಗಾರಿ ತೀವ್ರಗೊಳಿಸಿ 2027ರೊಳಗಾಗಿ ಪೂರ್ಣಗೊಳಿಸಲು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸೂಳಿಕೇರಿ ಗ್ರಾಮದ ಹಿರಿಯರಾದ ಸಂಗಪ್ಪ ಉಳ್ಳಾಗಡ್ಡಿ ಯಂಕಣ್ಣ ದನಕಾಯ ಗದಿಗೆಪ್ಪ ಹನಮರ ರಾಯನಗೌಡ ಕಿತ್ತಲಿ ಜಯಶ್ರೀ ಗುಳಬಾಳ ಮಂಜುಳಾ ಭೂಸಾರಿ ಮೈನುದ್ದೀನ ಖಾಜಿ ಸುರೇಶ ಕೊಳ್ಳಿ ರಂಗಪ್ಪ ಮುಚಖಂಡಿ ಪರಸಪ್ಪ ಮಾದರ ಮಲ್ಲಪ್ಪ ಗಾಣಿಗೇರ ಸೇರಿದಂತೆ ಅನೇಕ ಗುರು ಹಿರಿಯರು ಉಪಸ್ತಿತರಿದ್ದರು.

PREV
Read more Articles on
click me!

Recommended Stories

ಕಾರವಾರದಲ್ಲಿ ನಡುಕ ಹುಟ್ಟಿಸಿತ್ತು ದೈತ್ಯ ಕಾಳಿಂಗ ಸರ್ಪ.. ರೋಚಕವಾಗಿ ಸೆರೆ ಹಿಡಿದ ತಜ್ಞರು..
Bengaluru: 5 ಫ್ಲೈಓವರ್‌ಗಳಿಗೆ ಹೊಸ ನಿಯಮ; ಇನ್ಮುಂದೆ ಈ ವಾಹನಗಳಿಗೆ ಸಂಚಾರ ನಿಷೇಧ!