ಕೊಪ್ಪಳ ಗವಿಮಠದ ಅಕ್ಷರ ದಾಸೋಹಕ್ಕೂ ತಟ್ಟಿದ ಸಿಲಿಂಡರ್ ಸಮಸ್ಯೆ, ಏಜೆನ್ಸಿ ಬಳಿ ದೌಡಾಯಿಸಿದ ಅಧಿಕಾರಿಗಳು, ಬರಿಗೈಲಿ ವಾಪಸ್!

Published : Mar 17, 2026, 12:43 PM IST
Koppal Gavisiddeshwara Math Face Gas Cylinder Shortage for Mid day Meals

ಸಾರಾಂಶ

ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಕೊಪ್ಪಳದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ ಉಂಟಾಗಿದ್ದು, ಐತಿಹಾಸಿಕ ಗವಿಮಠದ ಅಕ್ಷರ ದಾಸೋಹ ಕೇಂದ್ರಕ್ಕೆ ಗ್ಯಾಸ್ ಸಮಸ್ಯೆ ತಟ್ಟಿದೆ. ಸಾವಿರಾರು ಮಕ್ಕಳಿಗೆ ಬಿಸಿಯೂಟ ತಯಾರಿಸಲು ಅಧಿಕಾರಿಗಳು ಗ್ಯಾಸ್ ಏಜೆನ್ಸಿ ಮುಂದೆ ಬೇಡಿದ್ರೂ, ಸ್ಟಾಕ್ ಇಲ್ಲದ ಕಾರಣ ಸಿಲಿಂಡರ್ ಸಿಕ್ಕಿಲ್ಲ.

ಕೊಪ್ಪಳ (ಮಾ.17) ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ನೇರವಾಗಿ ರಾಜ್ಯದ ಜನರ ಅಡುಗೆ ಮನೆಯ ಮೇಲೆ ಪರಿಣಾಮ ಬೀರಿದೆ. ಅಡುಗೆ ಅನಿಲ (LPG) ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ ಸಾಮಾನ್ಯ ಜನರು ಹಾಗೂ ಹೋಟೆಲ್‌ಗಳು ಸಂಕಷ್ಟಕ್ಕೆ ಸಿಲುಕಿದ್ದು, ಈಗ ಕೊಪ್ಪಳದ ಐತಿಹಾಸಿಕ ಗವಿಮಠದ ಅಕ್ಷರ ದಾಸೋಹಕ್ಕೂ ಗ್ಯಾಸ್ ಸಮಸ್ಯೆ ತಟ್ಟಿದೆ.

ಗ್ಯಾಸ್ ಖಾಲಿ ಮಕ್ಕಳ ಬಿಸಿಯೂಟಕ್ಕೆ ತೊಂದರೆ

ಸಾವಿರಾರು ಮಕ್ಕಳಿಗೆ ನಿತ್ಯ ಅನ್ನದಾಸೋಹ ನಡೆಸುವ ಅಕ್ಷರ ದಾಸೋಹ ಕೇಂದ್ರಕ್ಕೆ ಕಳೆದ ಮೂರ್ನಾಲ್ಕು ದಿನಗಳಿಂದ ಸಿಲಿಂಡರ್ ಕೊರತೆ ಎದುರಾಗಿದೆ. ಕಮರ್ಷಿಯಲ್ ಸಿಲಿಂಡರ್‌ಗಳ ಪೂರೈಕೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಗ್ಯಾಸ್ ಇಲ್ಲದೆ ಬಿಸಿಯೂಟ ನಿಂತುಹೋಗುವ ಭೀತಿ ಎದುರಾಗಿದೆ.

ಏಜೆನ್ಸಿ ಮುಂದೆ ನಿಂತ ಅಧಿಕಾರಿಗಳು

ಸಿಲಿಂಡರ್ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರು ಹಾಗೂ ಸಿಬ್ಬಂದಿ ಇಂದು ನೇರವಾಗಿ ಗ್ಯಾಸ್ ಏಜೆನ್ಸಿಗೆ ಬಂದಿದ್ದಾರೆ. ಕೊಪ್ಪಳದ ಹೊಸಪೇಟೆ ರಸ್ತೆಯಲ್ಲಿರುವ ಭಾರತ್ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ, ಹೇಗಾದರೂ ಮಾಡಿ ದಾಸೋಹಕ್ಕೆ ಸಿಲಿಂಡರ್ ಒದಗಿಸುವಂತೆ ಮನವಿ ಮಾಡಿದರು.

ಬರಿಗೈಲಿ ವಾಪಸ್ ಕಳಿಸಿದ ಏಜೆನ್ಸಿ ಮಾಲೀಕ!

ಅಧಿಕಾರಿಗಳು ಏಜೆನ್ಸಿ ಮುಂದೆ ಗ್ಯಾಸ್‌ಗೆ ಬೇಡಿದರೂ ಕೂಡ ತಕ್ಷಣಕ್ಕೆ ಸಿಲಿಂಡರ್ ನೀಡಲು ಮಾಲೀಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 'ಸದ್ಯಕ್ಕೆ ಸ್ಟಾಕ್ ಇಲ್ಲ, ಸಂಜೆ ನಾಲ್ಕು ಗಂಟೆಗೆ ಬನ್ನಿ ನೋಡೋಣ' ಎಂದು ಹೇಳಿ ಅಧಿಕಾರಿಗಳನ್ನು ವಾಪಸ್ ಕಳಿಸಿದ್ದಾರೆ. ಇದರಿಂದಾಗಿ ದಾಸೋಹದ ಸಿಬ್ಬಂದಿ ವಾಪಸ್ ಹೋಗಿದ್ದರಿಂದ ಸಿಲಿಂಡರ್ ಇಲ್ಲದೆ ಇಂದಿನ ಅಡುಗೆ ನಿರ್ವಹಣೆ ಹೇಗೆ ಎಂಬ ಪ್ರಶ್ನೆ ಎದುರಾಗಿದೆ.

ಸಾಮಾನ್ಯ ಜನರಿಗೂ ತಪ್ಪದ ಪರದಾಟ

ಅಕ್ಷರ ದಾಸೋಹ ಮಾತ್ರವಲ್ಲದೆ, ಜಿಲ್ಲೆಯಾದ್ಯಂತ ಎಲ್‌ಪಿಜಿ ಸಿಗದೆ ಹೋಟೆಲ್ ಮಾಲೀಕರು ಮತ್ತು ಸಾಮಾನ್ಯ ಜನರು ಪರದಾಡುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಸಂಘರ್ಷವು ಅಡುಗೆ ಅನಿಲದ ಸಪ್ಲೈ ಚೈನ್ ಕಡಿದುಹಾಕಿದ್ದು ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.

PREV
Read more Articles on
click me!

Recommended Stories

ಅತಿಹೆಚ್ಚು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವನಿಂದಲೇ, ಸಂಚಾರಿ ನಿಯಮಗಳ ಜಾಗೃತಿ ಮೂಡಿಸುವ ಶಿಕ್ಷೆ ಕೊಟ್ಟ ಕೋರ್ಟ್!
ಗೋವಾ ರಸ್ತೆ ಅಪಘಾತದಲ್ಲಿ ಕಾರವಾರ ವೈದ್ಯಕೀಯ ವಿದ್ಯಾರ್ಥಿ ಪ್ರೀತಂ ಸಾವು; ಮತ್ತೋರ್ವ ಗಂಭೀರ