ರೈತ ವಿರೋಧಿ ಕೃಷಿ ಕಾಯ್ದೆ ವಾಪಾಸ್‌ ಪಡೆಯಲು ಮೀನಾಮೇಷ: ಕೋಡಿಹಳ್ಳಿ ಚಂದ್ರಶೇಖರ್‌

By Kannadaprabha NewsFirst Published Dec 21, 2023, 2:00 AM IST
Highlights

ಬಿಜೆಪಿ ಸರ್ಕಾರ ರೈತರಿಗೆ ಮಾರಕ ಕಾಯ್ದೆಗಳನ್ನು ಜಾರಿಗೆ ತಂದು ಕೃಷಿ ಭೂಮಿಯನ್ನು ಕಾರ್ಪೋರೆಟ್‌ ಕಂಪನಿಗೆ ಮಾರಾಟ ಮಾಡಲು ಹೊರಟ್ಟಿದ್ದಾರೆ. ಈ ರೈತ ವಿರೋಧಿ ಕಾಯ್ದೆಯನ್ನು ಕಾಂಗ್ರೆಸ್‌ನವರು ವಾಪಸ್ಸು ಪಡೆಯುವ ಭರವಸೆ ನೀಡಿದ್ದರು. ಆದರೆ, ಈಗ ಅಧಿಕಾರ ಸಿಗುತ್ತಿದ್ದಂತೆ ಕಾಯ್ದೆಗಳನ್ನು ಹಿಂಪಡೆಯಲು ಪಡೆಯಲು ಮೀನಾಮೇಷ ಎಣಿಸುತ್ತಿದ್ದಾರೆ: ಕೋಡಿಹಳ್ಳಿ ಚಂದ್ರಶೇಖರ್‌ 

ಶಿವಮೊಗ್ಗ(ಡಿ.21): ಚುನಾವಣೆ ಪೂರ್ವದಲ್ಲಿ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯುವ ಭರವಸೆ ನೀಡಿದ್ದ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಕೃಷಿ ಕಾಯ್ದೆಗಳನ್ನಪ್ವಾಪಸ್‌ ಪಡೆದಿಲ್ಲ. ಈಗಲೂ ಮೀನಾಮೇಷ ಎಣಿಸುತ್ತಿದೆ. ಕೃಷಿಕಾಯ್ದೆಗಳ ವಿಚಾರದಲ್ಲಿ ಬಿಜೆಪಿಯವರಿಗೂ ಯಾವುದೇ ವ್ಯತ್ಯಾಸ ಇಲ್ಲ ಎಂದು ರೈತ ಸಂಘದ (ಕೋಡಿಹಳ್ಳಿ ಬಣ) ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹರಿಹಾಯ್ದರು.

ಇಲ್ಲಿನ ಪ್ರೆಸ್‌ಟ್ರಸ್ಟ್‌ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಿಜೆಪಿ ಸರ್ಕಾರ ರೈತರಿಗೆ ಮಾರಕ ಕಾಯ್ದೆಗಳನ್ನು ಜಾರಿಗೆ ತಂದು ಕೃಷಿ ಭೂಮಿಯನ್ನು ಕಾರ್ಪೋರೆಟ್‌ ಕಂಪನಿಗೆ ಮಾರಾಟ ಮಾಡಲು ಹೊರಟ್ಟಿದ್ದಾರೆ. ಈ ರೈತ ವಿರೋಧಿ ಕಾಯ್ದೆಯನ್ನು ಕಾಂಗ್ರೆಸ್‌ನವರು ವಾಪಸ್ಸು ಪಡೆಯುವ ಭರವಸೆ ನೀಡಿದ್ದರು. ಆದರೆ, ಈಗ ಅಧಿಕಾರ ಸಿಗುತ್ತಿದ್ದಂತೆ ಕಾಯ್ದೆಗಳನ್ನು ಹಿಂಪಡೆಯಲು ಪಡೆಯಲು ಮೀನಮೇಷ ಎಣಿಸುತ್ತಿದ್ದಾರೆ. ಜನರಿಗಾಗಿ 5 ಗ್ಯಾರಂಟಿ ನೀಡಿದ ಕಾಂಗ್ರೆಸ್‌ ಸರ್ಕಾರ ರೈತರಿಗೆ ಒಂದೇ ಒಂದು ಕಾರ್ಯಕ್ರಮ ತರಲಿಲ್ಲ ಎಂದು ಆರೋಪಿಸಿದರು.

ಅಂಗನವಾಡಿ ಕೇಂದ್ರಗಳಿಗಿಲ್ಲ ಸ್ವಂತ ಸೂರು..!

ಕೃಷಿ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಬಾರದೆಂಬ ನಿಯಮ ಇದೆ. ಆದರೆ, ರೈತರಲ್ಲದವರು ಈಗ ಇದನ್ನು ಖರೀದಿ ಮಾಡುತ್ತಿ ದ್ದಾರೆ. ಹಣವಂತರು ಈ ಭೂಮಿ ಖರೀದಿಸಿದರೆ ಕೃಷಿ ಉಳಿಯಲು ಸಾಧ್ಯವಿಲ್ಲ. ಕೃಷಿ ಭೂಮಿ, ಕೃಷಿ ಮಾರುಕಟ್ಟೆ ಮತ್ತು ಹೈನುಗಾರಿಕೆ ಈಗ ಅಪಾಯಕಾರಿ ಸ್ಥಿತಿಯಲ್ಲಿವೆ. ಬರಗಾಲದ ತುರ್ತು ಕಾರ್ಯಕ್ರಮಗಳನ್ನು ಇನ್ನೂ ಜಾರಿ ಮಾಡಿಲ್ಲ. ಕಬ್ಬಿಗೆ ಎಫ್‍ಆರ್‍ಪಿ ಜೊತೆ ಎಸ್‍ಎಪಿ ನೀಡಬೇಕು. ರಾಜ್ಯದ ಕಬ್ಬಿನ ಇಳುವವರಿಗೆ ಒಂದೊಂದು ಕಾರ್ಖಾನೆಯಲ್ಲಿ ಒಂದೊಂದು ಧಾರಣೆ ನಿಲ್ಲಿಸಬೇಕು. ಕಬ್ಬಿನ ಸರಾಸರಿ ಇಳುವರಿ 10 ಇದಕ್ಕಿಂತ ಕಡಿಮೆ ಇಳುವರಿ ಕಾರ್ಖಾನೆಗಳ ಪರವಾನಿಗೆ ರದ್ದುಗೊಳಿಸಬೇಕು. ಸರ್ಕಾರವೇ ಉತ್ತರ ಹಾಗೂ ದಕ್ಷಿಣ ಕಾರ್ಖಾನೆಗಳಿಗೆ ಕಬ್ಬಿನ ಇಳುವರಿಗೆ ಸಂಬಂಧ ವಿಜ್ಞಾನಿಗಳು ರೈತರು ಸೇರಿ ಪ್ರತಿವರ್ಷ ಪರಿಶೀಲಿಸಬೇಕು. ಸಕ್ಕರೆ ಇಳುವರಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಶಾಸನ ಬದ್ಧವಾಗಿ ಜಾರಿಯಾಗಬೇಕು. ಸೆಪ್ಟೆಂಬರ್ 22ರ ವಿದ್ಯುತ್ ಕಾಯ್ದೆ ವಾಪಸ್ಸು ಪಡೆಯಬೇಕು. ವಿದೇಶಿದಿಂದ ಬರುವ ತೆಂಗಿನ ಉತ್ಪನ್ನಕ್ಕೆ ಆಮದು ಸುಂಕ ಹೆಚ್ಚಿಸಬೇಕು. ಇಲ್ಲವಾದರೆ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 25000 ರು. ನೀಡಬೇಕು ಎಂದು ಒತ್ತಾಯಿಸಿದರು.

ಕೊರೊನಾ ಬೆನ್ನಲ್ಲೇ ಶಿವಮೊಗ್ಗದಲ್ಲಿ ಮೊದಲ ಮಂಗನ ಕಾಯಿಲೆ ಪತ್ತೆ: ಜನರಲ್ಲಿ ಆತಂಕ

ನವೆಂಬರ್ 1ರಿಂದ ಹಾಲಿನ ದರ 2 ರುಪಾಯಿ ಕಡಿತ ಮಾಡಿ ಪಶು ಆಹಾರದ ಬೆಲೆಯನ್ನು ಕೆಜಿಗೆ 2 ರುಪಾಯಿ ಹೆಚ್ಚು ಮಾಡಿ ರೈತರಿಂದ ಒಟ್ಟು 4 ರುಪಾಯಿ ಬಲವಂತವಾಗಿ ಕಿತ್ತುಕೊಳ್ಳುವ ನೀತಿಯನ್ನು ಜಾರಿಗೆ ತಂದಿದೆ. ತಕ್ಷಣವೇ ಇದನ್ನು ರದ್ದು ಮಾಡಬೇಕು ಮತ್ತು ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಪ್ರತಿ ಲೀಟರ್ ಹಾಲಿಗೆ 7 ರುಪಾಯಿ ನೀಡುವ ಘೋಷಣೆಯನ್ನು ಮಾಡಿತ್ತು. ಇದನ್ನು ತಕ್ಷಣ ಜಾರಿ ಮಾಡಬೇಕು. ಮಹಾದಾಯಿ ಹಾಗೂ ಮೇಕೆದಾಟು ಕಾರ್ಯವನ್ನು ಶೀಘ್ರವೇ ಕೈಗೊಳ್ಳಬೇಕು. ಬಗರ್ ಹುಕುಂ ಸಾಗುವಳಿ ತಕ್ಷಣವೇ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಈ ಸರ್ಕಾರ ಜನರಿಗೆ ಮತ್ತು ರೈತರಿಗೆ ಏನು ಮಾಡಿದೆ? ಜನರ ಆದಾಯ ಹೆಚ್ಚಿಸುವ, ಆರ್ಥಿಕಾಭಿವೃದ್ಧಿಗೆ ನೆರವಾಗುವ ಕೆಲಸ ಮಾಡಿಲ್ಲ. ಇಲ್ಲಿನ ಹಣದಲ್ಲಿ ತೆಲಂಗಾಣದ ಚುನಾವಣೆ ಮಾಡಿದ್ದಾರೆ. ಸಚಿವರು ರೈತರ ಪರ ಮಾತನಾಡುತ್ತಾರೆಯೇ ವಿನಾ ಕೆಲಸ ಮಾಡುತ್ತಿಲ್ಲ. ಸಿದರಾಮಯ್ಯ ಅವರ ಜನಪರ ಕಾಳಜಿ, ರೈತಪರ ಕಾಳಜಿಯನ್ನು ಈಗ ಪ್ರಶ್ನಿಸುವಂತಾಗಿದೆ ಎಂದರು, ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮುಖಂಡ ಭಕ್ತರಹಳ್ಳಿ ಬೈರೇಗೌಡ್ರು, ವೀರಭದ್ರಸ್ವಾಮಿ, ಸತೀಶ್ ಹಾಜರಿದ್ದರು. 

click me!