ಕೊಪ್ಪಳ: ನಡುರಾತ್ರಿ ಕೆಟ್ಟುನಿಂತ ಬಸ್; ಪ್ರಯಾಣಿಕರ ಪರದಾಟ!

By Kannadaprabha NewsFirst Published May 28, 2023, 10:12 AM IST
Highlights

ಕೆಕೆಆರ್‌ಟಿಸಿ ಸೇರಿದ ಚಿತ್ತಾಪೂರ-ದಾವಣಗೆರೆ ಬಸ್‌ ಪಟ್ಟಣದ ಎಸ್‌ಬಿಐ ಎಟಿಎಂ ಬಳಿ ಶುಕ್ರವಾರ ಮಧ್ಯರಾತ್ರಿ ಕೆಟ್ಟು ನಿಂತ ಪರಿಣಾಮ ಶನಿವಾರ ಬೆಳಗಾದರೂ ಯಾವ ಬಸ್‌ ಬಾರದ ಕಾರಣ ಪ್ರಯಾಣಿಕರು ಪರದಾಡಿದರು.

ಕನಕಗಿರಿ (ಮೇ.28) : ಕೆಕೆಆರ್‌ಟಿಸಿ ಸೇರಿದ ಚಿತ್ತಾಪೂರ-ದಾವಣಗೆರೆ ಬಸ್‌ ಪಟ್ಟಣದ ಎಸ್‌ಬಿಐ ಎಟಿಎಂ ಬಳಿ ಶುಕ್ರವಾರ ಮಧ್ಯರಾತ್ರಿ ಕೆಟ್ಟು ನಿಂತ ಪರಿಣಾಮ ಶನಿವಾರ ಬೆಳಗಾದರೂ ಯಾವ ಬಸ್‌ ಬಾರದ ಕಾರಣ ಪ್ರಯಾಣಿಕರು ಪರದಾಡಿದರು.

ಕಲಬುರ್ಗಿ ಜಿಲ್ಲೆಯ ಚಿತ್ತಾಪುರದಿಂದ ಪ್ರತಿನಿತ್ಯ ಪಟ್ಟಣದ ಮಾರ್ಗವಾಗಿ ಸಂಚರಿಸುವ ಚಿತ್ತಾಪುರ-ದಾವಣಗೆರೆ ಬಸ್‌ ಎಂದಿನಂತೆ ಶುಕ್ರವಾರ ಸಂಜೆ 7.30ರ ಸುಮಾರಿಗೆ 70ಕ್ಕೂ ಹೆಚ್ಚು ಪ್ರಯಾಣಿಕರನ್ನು ತುಂಬಿಕೊಂಡು ಚಿತ್ತಾಪುರದಿಂದ ಹೊರಟಿದೆ. ಪಟ್ಟಣದ ಬಸ್‌ ನಿಲ್ದಾಣ ಇನ್ನೂ 100 ಮೀ ದೂರವಿರುವಾಗಲೇ ಶನಿವಾರ ಬೆಳಗಿನ ಜಾವ 2.30ರ ಸುಮಾರಿಗೆ ಕತ್ತಲಿರುವ ಕಡೆಗೆ ಬಸ್‌ ಕೆಟ್ಟು ನಿಂತ ಪರಿಣಾಮ ಪ್ರಯಾಣಿಕರೇ ಬೆಳಕಿದ್ದ ಇಲ್ಲಿನ ವಾಲ್ಮೀಕಿ ವೃತ್ತದವರೆಗೂ ಬಸ್‌ ತಳ್ಳಿದ್ದಾರೆ. ಬೆಳಗಿನವರೆಗೂ ಬಸ್‌ ಸಂಪರ್ಕ ಇಲ್ಲದಿರುವುದನ್ನು ಎಚ್ಚೆತ್ತುಕೊಂಡಿರುವ ಬಸ್‌ ಚಾಲಕ ಲಾರಿ ಹತ್ತಿ ಗಂಗಾವತಿ ಡಿಪೋಕ್ಕೆ ಬೇರೊಂದು ಬಸ್‌ ತರಲು ಹೋಗಿದ್ದಾರೆ. ಆದರೆ,ಅಧಿಕಾರಿಗಳ ಸಂಪರ್ಕಕ್ಕೆ ಸಿಗದ ಕಾರಣ ಬೆಳಗ್ಗೆ 6.30ರವರೆಗೂ ಬಸ್‌ ವ್ಯವಸ್ಥೆ ಆಗಲಿಲ್ಲ.

ಹುಲಿಗೆಮ್ಮ ದೇಗುಲ ಹುಂಡಿಗೆ ಸಿದ್ದು ಅಭಿಮಾನಿ ವಿಶೇಷ ಕಾಣಿಕೆ; : 35 ದಿನದಲ್ಲಿ ಒಂದು ಕೋಟಿ ರೂ ಸಂಗ್ರಹ!

ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿಕೊಂಡು ಬಂದಿದ್ದ ಬಸ್‌ನಲ್ಲಿ ರಿಸರ್ವೇಷನ್‌ ಸಹಿತ ಸಾಮಾನ್ಯ ಪ್ರಯಾಣಿಕರಿದ್ದರು. ಮದುವೆ, ವೈಯಕ್ತಿಕ ಕೆಲಸ, ವಾರದ ರಜೆಗೆ ಊರಿಗೆ ತೆರಳುವವರು ಇದ್ದರು. ಮಹಿಳೆಯರು,ಚಿಕ್ಕಮಕ್ಕಳು, ಬಸ್ಸಿನಲ್ಲಿದ್ದು 4 ತಾಸು ಪರದಾಡಿದರು.ಪ್ರಯಾಣಿಕರು ಅಧಿಕಾರಿಗಳ ನಿರ್ಲಕ್ಷತನವನ್ನು ಖಂಡಿಸಿ ಹಿಡಿಶಾಪ ಹಾಕಿದರು. ಚಿತ್ತಾಪೂರದ ಡಿಪೋ ವ್ಯವಸ್ಥಾಪಕ ಹಲವು ಬಾರಿ ಕರೆ ಮಾಡಿದರೂ ಪ್ರಯೋಜನವಾಗಲಿಲ್ಲ.ಕೊನೆಗೂ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ನಿರ್ಲಕ್ಷದ ಕುರಿತು ಕಂಟ್ರೋಲ್‌ ರೂಮ್‌ಗೂ ಕರೆ ಮಾಡಿ ಮೌಖಿಕ ದೂರು ಸಲ್ಲಿಸಿದರು.

ಬೆಳಗ್ಗೆ 9 ಗಂಟೆಗೆ ದಾವಣಗೆರೆ ತಲುಪಬೇಕಾದ ಬಸ್‌ 6.30 ಆದರೂ ಇಲ್ಲಿಯೇ ಇದೆ.ಬಸ್ಸಿನಲ್ಲಿ ಕೂರಲು ಜಾಗವಿಲ್ಲದೇ ಕೆಳಗೆ ಕೂತು ಬಂದಿದ್ದೇವೆ.ಮಕ್ಕಳೊಂದಿಗೆ ಬಂದವರ ಸ್ಥಿತಿ ಹೇಳತೀರದು. ಸುಸ್ಥಿತಿಯಲ್ಲಿರಬೇಕಾದ ಬಸ್‌ ಕಳುಹಿಸಬೇಕಿರುವುದನ್ನು ಬಿಟ್ಟು,ರಿಪೇರಿ ಇರುವ ಬಸ್‌ ಕಳುಹಿಸಿದ್ದಾರೆ.ಬಸ್‌ ಕೆಟ್ಟಮೇಲೆ ಕರೆ ಮಾಡಿದರೂ ಬಸ್‌ ವ್ಯವಸ್ಥೆಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕೆನ್ನುವ ಆಗ್ರಹ ಪ್ರಯಾಣಿಕರಿಂದ ಕೇಳಿ ಬಂದಿತು.

ಕುಷ್ಟಗಿ: ಮತದಾನಕ್ಕೆ ಬಂದಿರುವ ಗುಳೇ ಕಾರ್ಮಿಕರು ಬಸ್ಸಿಗಾಗಿ ಪರದಾಟ..!

click me!