ಕೊಡಗು: ರಸ್ತೆ, ಕಟ್ಟಡಗಳಿಗೆ ನುಗ್ಗಿದ ಕಾವೇರಿ ಪ್ರವಾಹದ ನೀರು, ಜನಜೀವನ ಅಸ್ತವ್ಯಸ್ತ..!

By Girish GoudarFirst Published Jul 27, 2024, 7:14 PM IST
Highlights

ಹಿಂದೆ ಪ್ರವಾಹ ಸೃಷ್ಟಿಯಾಯಿತ್ತೆಂದರೆ ಬೋಟ್ ಕೊಡಲಾಗುತ್ತಿತ್ತು. ಆದರೀಗ ಯಾರೂ ಇದರ ಬಗ್ಗೆ ಗಮನ ಹರಿಸುವುದಿಲ್ಲ. ಹೀಗಾಗಿ ನಾವು ವಿಧಿಯಿಲ್ಲದೆ ಅನಿವಾರ್ಯತೆಯಿಂದ ಇದೇ ನೀರಿನಲ್ಲಿಯೇ ಬಂದು ಹೋಗುತ್ತಿದ್ದೇವೆ. ಇಷ್ಟು ಎತ್ತರಕ್ಕೆ ಹರಿಯುತ್ತಿರುವ ನೀರಿನಲ್ಲಿ ಹೋಗುವುದಕ್ಕೆ ಭಯ ಎನಿಸುತ್ತದೆ. ಆದರೆ ಅನಿವಾರ್ಯತೆ ಇರುವಾಗ ಏನು ಮಾಡುವುದು ಎಂದು ಆತಂಕ ಹಾಗೂ ಅಸಹಾಯಕತೆ ವ್ಯಕ್ತಪಡಿಸಿದ ವೃದ್ಧ 

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು(ಜು.27):  ಕಳೆದ ಎರಡು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಬಿಟ್ಟು ಬಿಡದೆ ಸುರಿದ ಮಳೆಗೆ ಕಾವೇರಿ ನದಿ ಪ್ರವಾಹದ ರೂಪ ತಾಳಿದ್ದು ಎಲ್ಲೆಂದರಲ್ಲಿ ಉಕ್ಕಿ ಹರಿಯುತ್ತಿದೆ. ಮಡಿಕೇರಿ ತಾಲ್ಲೂಕಿನ ಕೊಟ್ಟಮುಡಿಯಿಂದ ಮೂರ್ನಾಡಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗೆ ಕಾವೇರಿ ಪ್ರವಾಹದ ನೀರು ನುಗ್ಗಿದೆ. ಹೆದ್ದಾರಿ ಮೇಲೆ ನಾಲ್ಕು ಅಡಿಯಷ್ಟು ನೀರು ಹರಿಯುತ್ತಿದ್ದು ಕಾವೇರಿ ಪ್ರತಾಪಕ್ಕೆ ಜನರು ನಲುಗಿ ಹೋಗಿದ್ದಾರೆ.  ಯಾವುದೇ ವಾಹನವೂ ಈ ರಸ್ತೆಯಲ್ಲಿ ಹೋಗಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಇದ್ದು ಜನರು ಅಗತ್ಯ ವಸ್ತುಗಳನ್ನು ಕೊಂಡೊಯ್ಯಲು ಪರದಾಡಬೇಕಾಗಿದೆ. ಕೆಲವರಂತು ವಿಧಿಯಿಲ್ಲದೆ ಪ್ರವಾಹದ ನೀರಿನಲ್ಲಿಯೇ ನಡೆದು ಹೋಗಿ ಅಗತ್ಯ ವಸ್ತುಗಳನ್ನು ಕೊಂಡೊಯ್ಯುತ್ತಿದ್ದಾರೆ. 

Latest Videos

ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಕಾವೇರಿ ಪ್ರವಾಹದ ನೀರಿನಲ್ಲಿಯೇ ನಡೆದು ಹೋಗುತ್ತಿದ್ದ ವೃದ್ಧರೊಬ್ಬರು ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿ, ಹಿಂದೆ ಪ್ರವಾಹ ಸೃಷ್ಟಿಯಾಯಿತ್ತೆಂದರೆ ಬೋಟ್ ಕೊಡಲಾಗುತ್ತಿತ್ತು. ಆದರೀಗ ಯಾರೂ ಇದರ ಬಗ್ಗೆ ಗಮನ ಹರಿಸುವುದಿಲ್ಲ. ಹೀಗಾಗಿ ನಾವು ವಿಧಿಯಿಲ್ಲದೆ ಅನಿವಾರ್ಯತೆಯಿಂದ ಇದೇ ನೀರಿನಲ್ಲಿಯೇ ಬಂದು ಹೋಗುತ್ತಿದ್ದೇವೆ. ಇಷ್ಟು ಎತ್ತರಕ್ಕೆ ಹರಿಯುತ್ತಿರುವ ನೀರಿನಲ್ಲಿ ಹೋಗುವುದಕ್ಕೆ ಭಯ ಎನಿಸುತ್ತದೆ. ಆದರೆ ಅನಿವಾರ್ಯತೆ ಇರುವಾಗ ಏನು ಮಾಡುವುದು ಎಂದು ಆತಂಕ ಹಾಗೂ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಶಿರೂರು ದುರ್ಘಟನೆ ನಡೆದು 12 ದಿನವಾದ್ರೂ ಸಿಗದ ಜಗನ್ನಾಥ್ ಮೃತದೇಹ, ಈಗಲೂ ತಂದೆಗಾಗಿ ಕಾಯುತ್ತಿರೋ ಪುತ್ರಿಯರು..!

ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೆ ಸುರಿದ ಧಾರಾಕಾರ ಮಳೆ ಭಾರೀ ಅವಾಂತರವನ್ನೇ ಸೃಷ್ಟಿಸಿದೆ. ಮಡಿಕೇರಿ ತಾಲ್ಲೂಕಿನ ಕೊಟ್ಟಮುಡಿಯಲ್ಲಿ ಕಾವೇರಿ ನದಿ ಪ್ರವಾಹ ರೂಪ ತಳೆದು ಉಕ್ಕಿ ಹರಿದಿದೆ. ಕೊಟ್ಟಮುಡಿಯಲ್ಲಿ ಇರುವ ಪಿಯು ಕಾಫಿ ಕ್ಯೂರಿಂಗ್ ವ ನುಗ್ಗಿದೆ. ಕ್ಯೂರಿಂಗ್ ವರ್ಕ್ಸ್ನ ಆವರಣ ಮತ್ತು ಕಟ್ಟಡದೊಳಕ್ಕೆಲ್ಲಾ ನುಗ್ಗಿದ್ದು ಕ್ಯೂರಿಂಗ್ ವರ್ಕ್ಸ್ ಒಳಗೆ ಇದ್ದ ಹತ್ತಾರು ಕಾಫಿ ಚೀಲಗಳು ಪ್ರವಾಹ ನೀರಿನಲ್ಲಿ ಮುಳುಗಿ ಹಾಳಾಗಿವೆ. ಈ ವರ್ಷ ಕಾಫಿಗೆ ಉತ್ತಮ ಬೆಲೆ ಬಂದಿತ್ತು. ಹೀಗಾಗಿಯೇ ಕ್ಯೂರಿಂಗ್ ವರ್ಕ್ಸ್ನಲ್ಲಿ ಚೀಲಗಳಿಗೆ ತುಂಬಿ ಇರಿಸಿದ್ದ ಕಾಫಿಯನ್ನು ಹಂತ ಹಂತವಾಗಿ ಮಾರಾಟ ಮಾಡಲು ಇರಿಸಲಾಗಿತ್ತು.  ಆದರೆ ಕಾಫಿ ನೆನೆದು ಎಲ್ಲಾ ಹಾಳಾಗಿ ಹೋಗಿದೆ. ಇಡೀ ಆವರಣದಲ್ಲಿ ಎರಡರಿಂದ ಎರಡುವರೆ ಅಡಿಯಷ್ಟು ಪ್ರವಾಹದ ನೀರಿದ್ದು ನಾಲ್ಕೈದು ವಾಹನಗಳು ಜಲಾವೃತವಾಗಿವೆ. ಜೊತೆಗೆ ಕಾಫಿ ಕ್ಯೂರಿಂಗ್ ನಲ್ಲಿ ಕೆಲಸ ಮಾಡುವ ಕಾರ್ಮಿಕರ ಕುಟುಂಬದ ಮನೆಗಳು ಜಲಾವೃತವಾಗಿದ್ದು ಅವರೆಲ್ಲರೂ ಅಲ್ಲಿಯೇ ಜಲದಿಗ್ಭಂಧನಕ್ಕೆ ಒಳಗಾಗಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆ ಸಾಕಷ್ಟು ಅವಾಂತರಗಳ್ನೇ ಸೃಷ್ಟಿಸಿದೆ. ಸದ್ಯ ಶನಿವಾರ ಮಧ್ಯಾಹ್ನದ ಬಳಿಕ ಮಳೆಯ ಆರ್ಭಟ ಒಂದಿಷ್ಟು ತಗ್ಗಿದ್ದು ಕಾವೇರಿ ನದಿಯ ಪ್ರವಾಹದ ಪ್ರತಾವೂ ತಗ್ಗಬಹುದು ಎನ್ನುವ ನಿರೀಕ್ಷೆಯಲ್ಲಿ ಜನರಿದ್ದಾರೆ. ಒಂದು ವೇಳೆ ಮಳೆ ಮತ್ತೆ ಏನಾದರೂ ಅಬ್ಬರಿಸಲು ಆರಂಭಿಸಿದರೆ ಜಿಲ್ಲೆಯಲ್ಲಿ ಸಾಕಷ್ಟು ಅನಾಹುತಗಳಾಗುವ ಹೆಚ್ಚಿನ ಸಾಧ್ಯತೆಗಳಿವೆ. 

ಇನ್ನು ಮಡಿಕೇರಿ ತಾಲ್ಲೂಕಿನ ಮಾದಾಪುರದ ಬಳಿ ಸಣ್ಣಪ್ರಮಾಣದಲ್ಲಿ ಭೂಕುಸಿತವಾಗಿದ್ದು ಸೋಮವಾರಪೇಟೆ ಮತ್ತು ಮಡಿಕೇರಿ ನಡುವೆ ಓಡಾಡುವ ಜನರು ಆತಂಕದಲ್ಲಿಯೇ ಓಡಾಡುತ್ತಿದ್ದಾರೆ. ಮಗದೊಂದೆಡೆ ಹಲವಾರು ಕಡೆಗಳಲ್ಲಿ ಮರ, ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಿದ್ದು ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಆದರೆ ಅರಣ್ಯ ಇಲಾಖೆ ಹಾಗೂ ಕೆಇಬಿ ಸಿಬ್ಬಂದಿಯ ನಿರಂತರ ಹಾಗು ತುರ್ತು ಸೇವೆಯಿಂದಾಗಿ ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತೆ ಆಗಿದೆ.

click me!